

ಶ್ರೀನಿವಾಸಪುರ: ಸೀಗಹಳ್ಳಿ ಗ್ರಾಮದ ಸರ್ಕಾರಿ ಕಿರುಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ವಯೋನಿವೃತ್ತಿ ಹೊಂದಿದ ಶಾಲೆಯ ಮುಖ್ಯ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ಆರ್.ಧರ್ಮೇಶ್, ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದುದು. ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಹಿರಿದು. ಶಿಕ್ಷಕ ಸಮುದಾಯ ಮಕ್ಕಳಲ್ಲಿ ದೇವರನ್ನು ಕಾಣುವ ಪರಂಪರೆಯನ್ನು ಮುಂದುವರಿಸಿಕೊAಡು ಹೋಗಬೇಕು. ಅವರನ್ನು ತಮ್ಮ ಮಕ್ಕಳಂತೆಯೇ ಪ್ರೀತಿಸಬೇಕು ಎಂದು ಹೇಳಿದರು.
ಬದಲಾದ ಪರಿಸ್ಥಿತಿಯಲ್ಲಿ ನೈತಿಕ ಮೌಲ್ಯಗಳು ನೇಪಥ್ಯಕ್ಕೆ ಸರಿಯುತ್ತಿವೆ. ಅದು ಸಾಮಾಜಿಕ ವಿಘಟನೆಗೆ ಕಾರಣವಾಗುತ್ತಿದೆ. ಆದ್ದರಿಂದ ಎಳೆಯರನ್ನು ಸರಿದಾರಿಯಲ್ಲಿ ನಡೆಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಶಿಕ್ಷಕ ವೃತ್ತಿಯಲ್ಲಿ ಮಾರ್ಗದರ್ಶನ ಮಾಡಿದ ಇಲಾಖಾ ಅಧಿಕಾರಿಗಳು, ಸಹಕರಿಸಿದ ಸಹ ಶಿಕ್ಷಕರು ಹಾಗೂ ಪೋಷಕರಿಗೆ ಕೃತಜ್ಞನಾಗಿದ್ದೇನೆ. ನಿವೃತ್ತಿ ಬಳಿಕವೂ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕೈಲಾದ ನೆರವು ನೀಡುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮಾತನಾಡಿ, ಶಿಕ್ಷಕರಾಗಿ ಎಸ್.ಆರ್.ಧರ್ಮೇಶ್ ಅವರ ನಡೆ ಮಾದರಿಯಾಗಿದೆ. ಅವರ ದಾನಗುಣ ಹಾಗೂ ಸೇವಾ ಮನೋಭಾವ ಅನುಕರಣೀಯ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದರ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಇಸಿಒಗಳಾದ ನಂಜುಂಡಗೌಡ, ಶ್ರೀನಿವಾಸ್, ರಾಧಾ, ಸಿಆರ್ಪಿ ಮೀನಾ ಮತ್ತಿತರರು ಎಸ್.ಆರ್.ಧರ್ಮೇಶ್ ಅವರ ಶೈಕ್ಷಣಿಕ ಸೇವೆ ಕುರಿತು ಮಾತನಾಡಿದರು.
ಮುಖ್ಯ ಶಿಕ್ಷಕ ಶ್ರೀನಿವಾಸ್, ಶಿಕ್ಷಕರಾದ ಹರಿನಾಥ್, ಅನಿತಾ, ಭದ್ರೇಗೌಡ, ಗೋವಿಂದಪ್ಪ, ನೇತ್ರಾವತಿ, ನಾರಾಯಣಸ್ವಾಮಿ, ಸುಮನ್. ರಾಮಲಕ್ಷö್ಮಮ್ಮ, ಪಿಳ್ಳಪ್ಪ, ಮೌಲಾನಾ, ಅಮ್ಯೆಜಿ ಸುಲ್ತಾನ ಮತ್ತಿತರರು ಇದ್ದರು.









































