

ಕೋಲಾರ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೋಲಾರ ನಗರದ ಮಹಿಳಾ ಸಮಾಜ ಕಾಲೇಜಿನ ವಿದ್ಯಾರ್ಥಿನಿ ಕು. ಎಂ. ಚಿರಂತನ ಅವರು 596 ಅಂಕಗಳನ್ನು ಗಳಿಸಿ ಕೋಲಾರ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 4ನೇ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ನಿರಂತರ ಪರಿಶ್ರಮ, ದೃಢ ನಿಷ್ಠೆ ಮತ್ತು ಶಿಸ್ತಿನ ಅಧ್ಯಯನದ ಫಲವಾಗಿ ಚಿರಂತನ ಅವರು ಈ ಉನ್ನತ ಸಾಧನೆ ಮಾಡಿದ್ದು, ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಅವರ ಸಾಧನೆಗೆ ತಂದೆ ಮಾರುತಿ ತಾಯಿ ಕೆಂಪಮ್ಮ ಮತ್ತು ಸದಸ್ಯರು, ಶಿಕ್ಷಕರು ಮತ್ತು ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕೋಲಾರದ ಸಿಎಂಆರ್ ಶ್ರೀನಾಥ್ ಅವರ ಗೃಹ ಕಚೇರಿಗೆ ಚಿರಂತನ ಮತ್ತು ಕುಟುಂಬ ಭೇಟಿ ನೀಡಿ ಫಲಿತಾಂಶವನ್ನು ತಿಳಿಸಿ ಸನ್ಮಾನ ಸ್ವೀಕರಿಸಿದರು. ಚಿರಂತನ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದಾಗ ಸನ್ಮಾನಿಸಿದ್ದನ್ನ ಶ್ರೀನಾಥ್ ಮರೆಸಿಕೊಂಡು ಯು ಪಿ ಎಸ್ ಸಿ ಸಾಧಕೀಯ ಆಗುವ ಹಾದಿಯಲ್ಲಿ ಮುಂದಿನ ವಿದ್ಯಾಭ್ಯಾಸದಲ್ಲಿಯೂ ಇದೇ ರೀತಿಯ ಸಾಧನೆ ಮುಂದುವರಿಸಿ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.
ಅದೇ ರೀತಿ, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಎಸ್. ಗಣೇಶ್ ಅವರು ವಿದ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸಿ, ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸುಗಳಿಸಿ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲಿ ಎಂದು ಆಶಿಸಿದರು.

