

ಶ್ರೀನಿವಾಸಪುರ : ದೇಶದ ಸಮಗ್ರ ಅಭಿವೃದ್ಧಿಗೆ ಯುವ ಪೀಳಿಗೆಯ ಆರೋಗ್ಯ ಅತ್ಯಂತ ಅಗತ್ಯವಾಗಿದ್ದು, ಪೌಷ್ಟಿಕ ಆಹಾರದಿಂದಲೇ ಆರೋಗ್ಯವಂತ ಮಕ್ಕಳ ನಿರ್ಮಾಣ ಸಾಧ್ಯ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಟಿ.ಆರ್. ಸುಲೋಚನ ಹೇಳಿದರು.
ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಹೈಯರ್ ಪ್ರೈಮರಿ ಶಾಲೆಯಲ್ಲಿ ತಾಲೂಕು ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ 2025-26ನೇ ಸಾಲಿನ ತಾಲೂಕು ಮಟ್ಟದ ಅಡುಗೆ ಸಿಬ್ಬಂದಿಗಳಿಗಾಗಿ ಆಯೋಜಿಸಿದ್ದ ಅಡುಗೆ ತಯಾರಿಕಾ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುವ ಮಧ್ಯಾಹ್ನದ ಊಟವು ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ಆಹಾರವನ್ನು ಸ್ವಚ್ಛತೆ, ಗುಣಮಟ್ಟ ಮತ್ತು ಪೌಷ್ಟಿಕತೆಯ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ತಯಾರಿಸಬೇಕು ಎಂದು ಅವರು ಸೂಚಿಸಿದರು.
ಅಡುಗೆ ಮಾಡುವುದು ಒಂದು ಕಲೆ. ಆ ಕಲೆಯ ಮೂಲಕ ವಿದ್ಯಾರ್ಥಿಗಳಿಗೆ ರುಚಿಕರ, ಆರೋಗ್ಯಕರ ಮತ್ತು ಸ್ವಚ್ಛ ಆಹಾರ ಒದಗಿಸುವುದು ಅಡುಗೆ ಸಿಬ್ಬಂದಿಗಳ ಪ್ರಮುಖ ಜವಾಬ್ದಾರಿಯಾಗಿದೆ. ಈ ಸ್ಪರ್ಧೆಯು ಅವರ ನೈಪುಣ್ಯವನ್ನು ತೋರಿಸಲು ಉತ್ತಮ ವೇದಿಕೆಯಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಮಹ್ಮದ್ ಸಾದಿಕ್, ಅಕ್ಷರ ದಾಸೋಹ ಕಚೇರಿ ಸಿಬ್ಬಂದಿ ಬಿ.ಎಂ. ಮಂಜುನಾಥ್, ಸಿಆರ್ಪಿಗಳಾದ ನಜೀಮಾ ಬೇಗಂ, ಶಿವರಾಘವರೆಡ್ಡಿ, ಗೀತಾ, ಎಸ್ಡಿಎಂಸಿ ಅಧ್ಯಕ್ಷ ಹಿದಾಯತ್ ಉಲ್ಲಾ ಖಾನ್, ಎಪಿಜೆ ಅಬ್ದಲ್ ಕಲಾಂ ವೆಲ್ಫೇರ್ ಟ್ರಸ್ಟ್ ಕಾರ್ಯದರ್ಶಿ ಹೆಚ್. ಅಕ್ರಂ ಪಾಷ, ಶಿಕ್ಷಕರಾದ ರಿಹಾನ ಖಾನಂ, ನೂರ್ ಉನಿಸಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ಅಡುಗೆ ಸಿಬ್ಬಂದಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಅಡುಗೆ ಕೌಶಲ್ಯವನ್ನು ಪ್ರದರ್ಶಿಸಿದರು. ಕಾರ್ಯಕ್ರಮವು ಉತ್ಸಾಹಭರಿತ ವಾತಾವರಣದಲ್ಲಿ ನೆರವೇರಿತು.


















































































































































