


ಶ್ರೀನಿವಾಸಪುರ : ಮಾವಿನನಾಡು ಎಂದೇ ಪ್ರಸಿದ್ಧಿಯಾಗಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಈ ಬಾರಿ ಇಸ್ರೇಲ್ ಮೂಲದ ಅಪರೂಪದ ‘ಮಾಯ’ ತಳಿಯ ಮಾವಿನ ಹಣ್ಣು ವಿಶೇಷ ಗಮನ ಸೆಳೆಯುತ್ತಿದೆ. ತಾಲ್ಲೂಕಿನ ಹೊಗಲಗೆರೆ ಗ್ರಾಮದಲ್ಲಿ ಬೆಳೆಯಲಾಗುತ್ತಿರುವ ಈ ಮಾವು ತನ್ನ ವಿಶಿಷ್ಟ ಸಿಹಿತನ, ಸುವಾಸನೆ ಮತ್ತು ರುಚಿಯಿಂದ ರೈತರು ಹಾಗೂ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.
ಶ್ರೀನಿವಾಸಪುರ ಮಾವು ಉತ್ಕೃಷ್ಟ ಕೇಂದ್ರದ ವತಿಯಿಂದ 2016ರಲ್ಲಿ ವಿವಿಧ ವಿದೇಶಿ ತಳಿಗಳ ಮಾವಿನ ಸಸಿಗಳನ್ನು ಪರೀಕ್ಷಾರ್ಥವಾಗಿ ನೆಡಲಾಗಿತ್ತು. ಅವುಗಳಲ್ಲಿ ‘ಮಾಯ’ ತಳಿ ಸ್ಥಳೀಯ ಹವಾಮಾನ ಮತ್ತು ಮಣ್ಣಿನ ಗುಣಲಕ್ಷಣಗಳಿಗೆ ಉತ್ತಮವಾಗಿ ಹೊಂದಿಕೊಂಡು ಯಶಸ್ವಿಯಾಗಿ ಬೆಳೆಯಿತು. ಸುಮಾರು 200 ಸಸಿಗಳು ಇದೀಗ ಫಲ ಕೊಡುವ ಹಂತ ತಲುಪಿದ್ದು, ಈ ಬಾರಿ ಉತ್ತಮ ಪ್ರಮಾಣದಲ್ಲಿ ಫಸಲು ನೀಡುತ್ತಿರುವುದು ವಿಶೇಷವಾಗಿದೆ.
ಮಾವು ಸಂಯೋಜಕಿ ಎಂ. ಲಾವಣ್ಯ ಮಾತನಾಡಿ, ಈ ತಳಿಯ ಮರಗಳು ಸುಮಾರು ಹತ್ತು ವರ್ಷಗಳ ಬಳಿಕ ಉತ್ತಮ ಪ್ರಮಾಣದಲ್ಲಿ ಹಣ್ಣು ನೀಡುತ್ತಿವೆ. ಹಣ್ಣಿನ ಸಿಹಿತನ, ರುಚಿ ಮತ್ತು ಸುವಾಸನೆ ಇತರೆ ತಳಿಗಳಿಗಿಂತ ಭಿನ್ನವಾಗಿದೆ. ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದ್ದಾರೆ.
‘ಮಾಯ’ ತಳಿಯ ಮಾವಿನ ಮತ್ತೊಂದು ವಿಶೇಷತೆ ಎಂದರೆ ಹೆಚ್ಚಿನ ಇಳುವರಿ ಸಾಮರ್ಥ್ಯ. ಸಾಂಪ್ರದಾಯಿಕ ಬಾದಾಮಿ ತಳಿಗಿಂತ ಉತ್ತಮ ಉತ್ಪಾದನೆ ನಿರೀಕ್ಷಿಸಬಹುದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಮಾರುಕಟ್ಟೆಯಲ್ಲಿ ಈ ಹಣ್ಣು ಕೆಜಿಗೆ ₹100ರಿಂದ ₹500ರವರೆಗೆ ಮಾರಾಟವಾಗಿತ್ತು. ಸುಮಾರು 200 ಕೆಜಿ ಉತ್ಪಾದನೆ ದಾಖಲಾಗಿದ್ದರೆ, ಈ ಬಾರಿ ಇನ್ನಷ್ಟು ಹೆಚ್ಚಿನ ಫಸಲು ಸಿಗುವ ನಿರೀಕ್ಷೆಯಿದೆ.
ಉತ್ತಮ ಮಾರುಕಟ್ಟೆ ದರ ದೊರೆಯುತ್ತಿರುವುದರಿಂದ ರೈತರು ಕೂಡ ಈ ಹೊಸ ತಳಿಯತ್ತ ಆಸಕ್ತಿ ತೋರಲಾರಂಭಿಸಿದ್ದಾರೆ. ಶ್ರೀನಿವಾಸಪುರ ಭಾಗದ ಹವಾಮಾನ ಈ ತಳಿಗೆ ಸೂಕ್ತವಾಗಿರುವುದರಿಂದ ಮುಂದಿನ ದಿನಗಳಲ್ಲಿ ವಾಣಿಜ್ಯ ಮಟ್ಟದಲ್ಲಿಯೂ ‘ಮಾಯ’ ಮಾವು ಮಹತ್ವದ ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲ್ ಮೂಲದ ಈ ತಳಿ ಸದ್ಯ ಕರ್ನಾಟಕದಲ್ಲಿ ಶ್ರೀನಿವಾಸಪುರದಲ್ಲಷ್ಟೇ ಯಶಸ್ವಿಯಾಗಿ ಬೆಳೆಯುತ್ತಿರುವುದು ವಿಶೇಷವಾಗಿದೆ. ರಾಜ್ಯದ ಇತರೆ ಭಾಗಗಳಲ್ಲಿ ಇನ್ನೂ ವ್ಯಾಪಕವಾಗಿ ಈ ತಳಿಯ ಬೆಳೆಗಾರಿಕೆ ಆರಂಭವಾಗಿಲ್ಲ.
ಹೊಸ ತಳಿಯ ಮಾವಿನ ಬಗ್ಗೆ ಸ್ಥಳೀಯ ರೈತರು, ವ್ಯಾಪಾರಿಗಳು ಮತ್ತು ಗ್ರಾಹಕರಲ್ಲಿ ಕುತೂಹಲ ಹೆಚ್ಚಾಗಿದ್ದು, ‘ಮಾಯ’ ಮಾವು ಮುಂದಿನ ವರ್ಷಗಳಲ್ಲಿ ಶ್ರೀನಿವಾಸಪುರದ ಮತ್ತೊಂದು ವಿಶೇಷ ಗುರುತಾಗಿ ಹೊರಹೊಮ್ಮುವ ನಿರೀಕ್ಷೆ ಮೂಡಿಸಿದೆ.

