

ಕುಂದಾಪುರ:25.09.2025 ರಂದು ನಗರದ ಸೈoಟ್ ಮೇರಿಸ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರಸೂಸಲು “Talent Fiesta-2K25″ಎನ್ನುವ ಹೆಸರಿನಿಂದ ವೇದಿಕೆ ಸಜ್ಜುಗೊಳಿಸಲಾಯಿತು. ಈ ಸಮಯದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ವಿದ್ಯಾ ಸಂಸ್ಥೆಗಳ ಸಂಚಾಲಕರು ಹಾಗೂ ಚರ್ಚಿನ ಧರ್ಮ ಗುರುಗಳು ಆಗಿರುವ ಅ| ವಂ| ಫಾದರ್ ಪಾವ್ಲ್ ರೇಗೊರವರು ಪ್ರತಿಭೆಗೆ ಪೂರಕವಾಗಿ ಅರಳಿದ ಕಮಲದ ಹೂವಿನ ದಳಗಳ ಮಧ್ಯೆ ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಭೆ ಎಲ್ಲರಲ್ಲೂ ಇದೆ. ಸರಿಯಾದ ವೇದಿಕೆ ಸಿಕ್ಕಾಗ ಬಳಸಿಕೊಳ್ಳಬೇಕು ಎನ್ನುತ್ತಾ ವಿದ್ಯಾರ್ಥಿಗಳೆಲ್ಲರೂ ಅವರವರ ಆಸಕ್ತಿಗೆ ಅನುಗುಣವಾಗಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಹೇಳಿ ವಿಜೇತ ಪ್ರಥಮ ತಂಡಕ್ಕೆ ಬಹುಮಾನ ವಿತರಿಸಿ ವಿದ್ಯಾರ್ಥಿಗಳನ್ನು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲರು, ಶಿಕ್ಷಣ ಪ್ರೇಮಿ, ಉತ್ತಮ ವಾಗ್ಮಿ ಗೌರವಾನ್ವಿತ ಡಾ ಚೇತನ್ ಶೆಟ್ಟಿ ಕೋವಾಡಿಯವರು ಉಪಸ್ಥಿತರಿದ್ದು, ನಾಲ್ಕು ತಂಡಗಳ ಗುಂಪು ಚಟುವಟಿಕೆಗಳ ಸ್ಪರ್ಧೆಯಲ್ಲಿ ನಿಷ್ಪಕ್ಷಪಾತ ನಿರ್ಣಯವನ್ನು ನೀಡಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಸಂಸ್ಥೆಯ ಬಗ್ಗೆ ಅಪಾರ ಅಭಿಮಾನ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಸಂಸ್ಥೆಯ ಬಗ್ಗೆ ಗುರಿಹಿರಿಯರ ಬಗ್ಗೆ ಗೌರವ, ವಿಧೇಯತೆ ಬೆಳೆಸಿಕೊಳ್ಳಬೇಕು. ಶಿಕ್ಷಣ ಜೊತೆಗೆ ಸರ್ವತೋಮುಖ ಅಭಿವೃದ್ಧಿ ಬೆಳೆಸಿಕೊಳ್ಳಬೇಕು ಎನ್ನುತ್ತಾ ಅನೇಕ ಅರ್ಥಗರ್ಭಿತ ಮಾತುಗಳನ್ನಾಡಿದರು.
ಸಮಾರಂಭದಲ್ಲಿ ಗೌರವ ಉಪಸ್ಥಿತರು ಹಾಗೂ ನಿಷ್ಪಕ್ಷಪಾತವಾದ ತೀರ್ಪನ್ನು ನೀಡಿ ಸಹಕರಿಸಿದ, ಸೈoಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ 38 ವರುಷಗಳವರೆಗೆ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರರಾಗಿ ಸೇವೆ ಸಲ್ಲಿಸಿದ ಗೌರವಾನ್ವಿತ ಶ್ರೀಮತಿ ಡೋರತಿ ಸುವಾರಿಸ್ ರವರು ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ವಿದ್ಯಾರ್ಥಿಗಳ ಪ್ರತಿಭೆಗೆ ಉತ್ತೇಜನ ನೀಡಿ, ಸಂಸ್ಥೆಯ ಉತ್ತರೋತ್ತರ ಏಳ್ಗೆಗೆ ವಿದ್ಯಾರ್ಥಿಗಳೆಲ್ಲರೂ ಶ್ರಮಿಸಬೇಕೆನ್ನುತ್ತಾ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೇಷ್ಮಾ ಫೆರ್ನಾಂಡಿಸ್ ರವರು, ಕಾರ್ಯಕ್ರಮ ಸಂಯೋಜಕರಾದ ಉಪನ್ಯಾಸಕಿ ಬಿನು ಜಯಚಂದ್ರನ್ ರವರು ಉಪಸ್ಥಿರಿದ್ದು ಸಂಯೋಜಕರು ಸ್ವಾಗತಿಸಿದರು.ಪ್ರಾಂಶುಪಾಲರು ವಿದ್ಯಾರ್ಥಿಗಳ ತಂಡಗಳಾದ ಅಲೋಕ್, ಆರಾಧನಾ, ಅನುಗ್ರಹ, ಆಶೀರ್ವಾದ ತಂಡಗಳನ್ನು ಪರಿಚಯಿಸಿ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರಶಂಸಿಸಿ,ಇವರಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ಸಮಾಧಾನಕರ ವಿಜೇತರ ಪಟ್ಟಿ ವಾಚಿಸಿದರು.
ವಿದ್ಯಾರ್ಥಿಗಳ ಪ್ರಾರ್ಥನೆ ಹಾಗೂ ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ, ಉಪನ್ಯಾಸಕ ನಾಗರಾಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಉಪನ್ಯಾಸಕಿ ಪ್ರೀತಿ ಕ್ರಾಸ್ತಾ ವಂದಿಸಿದರು.































