

ಕೋಲಾರ:- ತಾಲ್ಲೂಕಿನಾದ್ಯಂತ ರಸ್ತೆಬದಿಗಳಲ್ಲಿ ಅಕ್ರಮವಾಗಿ ಆಯುರ್ವೇದಿಕ್ ಚಿಕಿತ್ಸಾಲಯಗಳ ಹೆಸರಿನಲ್ಲಿ ಟೆಂಟ್ಗಳನ್ನು ಹಾಕಿಕೊಂಡು ಗಿಡಮೂಲಿಕೆ ಔಷಧಿ ನೀಡುವುದಾಗಿ ಜನರನ್ನು ವಂಚಿಸುತ್ತಿದ್ದ ನಾಲ್ಕು ಕ್ಯಾಂಪ್ಗಳ ಮೇಲೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ನೇತೃತ್ವದ ತಂಡ ಏಕಕಾಲದಲ್ಲಿ ದಾಳಿ ನಡೆಸಿ ತೆರವುಗೊಳಿಸಿತು.
ತಾಲ್ಲೂಕಿನ ಚಿಕ್ಕಹಸಾಳ ಗೇಟ್, ನಗರದ ಪವನ್ ಕಾಲೇಜು ಸಮೀಪ, ನರಸಾಪುರ ಕೈಗಾರಿಕಾ ವಲಯದ ಖಾಜಿಕಲ್ಲಹಳ್ಳಿ ಗೇಟ್, ತಾಲ್ಲೂಕಿನ ಕೆಂದಟ್ಟಿ ಸಮೀಪ ಟೆಂಟ್ಗಳನ್ನು ಹಾಕಿಕೊಂಡು ವಿವಿಧ ಕಾಯಿಲೆಗಳಿಗೆ ಗಿಡಮೂಲಿಕೆ, ಆಯುರ್ವೇದಿಕ್ ಔಷಧಿ ನೀಡುವುದಾಗಿ ಜನರನ್ನು ಯಾಮಾರಿಸಿ, ಸಾವಿರಾರು ರೂ ಹಣ ಪಡೆಯುತ್ತಿದ್ದ ಹಿನ್ನಲೆಯಲ್ಲಿ ಈ ದಾಳಿ ನಡೆಸಿ ತೆರವುಗೊಳಿಸಲಾಯಿತು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ದಾಳಿಯ ನೇತೃತ್ವ ವಹಿಸಿ ಮಾತನಾಡಿ, ಸದರಿ ಟೆಂಟ್ ಚಿಕಿತ್ಸಾಲಯದಲ್ಲಿ ಯಾವುದೇ ವಿದ್ಯಾರ್ಹತೆ ಇಲ್ಲದೇ, ಪರವಾನಗಿಯೂ ಇಲ್ಲದೇ, ಅನಧಿಕೃತವಾಗಿ ಅಮಾಯಕ ರೋಗಿಗಳಿಗೆ ಗಿಡಮೂಲಿಕೆ,ಆಯುರ್ವೇದಿಕ್ ಔಷಧಿ ನೀಡುವುದಾಗಿ ವಂಚಿಸಲಾಗುತ್ತಿತ್ತು ಎಂದು ತಿಳಿಸಿದರು.
ಮಕ್ಕಳಾಗಲು, ಸ್ತ್ರೀರೋಗಗಳಿಗೆ, ಕೀಲುನೋವು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಗಿಡಮೂಲಿಕೆಗಳಿಂದ ಚಿಕಿತ್ಸೆ ಎಂದು ಫಲಕ ಹಾಕಿಕೊಂಡು ಜನರನ್ನು ಯಾಮಾರಿಸುತ್ತಿದ್ದು, ಈ ಸಂದರ್ಭದಲ್ಲಿ ಜನತೆ ಚಿಕಿತ್ಸೆ ಪಡೆಯುವ ಮುನ್ನಾ ಅವರ ವಿದ್ಯಾರ್ಹತೆ,ಪರವಾನಗಿ ಕುರಿತು ಖಾತ್ರಿಪಡಿಸಿಕೊಳ್ಳಬೇಕು ಎಂದರು.
ಕರ್ನಾಟಕ ಖಾಸಗಿ ವೈದ್ಯಕೀಯ ನಿರ್ವಹಣೆ ಕಾಯಿದೆ ಕೆಪಿಎಂಇಎ ಕುರಿತು ಅನಧಿಕೃತ ಚಿಕಿತ್ಸಾಲಯ ತೆರೆದಿದ್ದವರಿಗೆ ಮತ್ತು ಅಲ್ಲಿ ನೆರದಿದ್ದ ಸಾರ್ವಜನಿಕರಿಗೂ ಅರಿವು ಮೂಡಿಸಲಾಯಿತು.
ಜಿಲ್ಲಾಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸೆ
ಜಿಲ್ಲಾ ಆಯುಷ್ ಅಧಿಕಾರಿ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ, ಆಯುರ್ವೇದ ಚಿಕಿತ್ಸೆ ನೀಡುವವರು ಕನಿಷ್ಟ ಸಂಬಂಧಿಸಿದ ವಿದ್ಯಾರ್ಹತೆ ಪಡೆದು ಚಿಕಿತ್ಸೆ ನೀಡಬೇಕು, ಇಲ್ಲಿ ಅನಧಿಕೃತ ಟೆಂಟ್ಗಳನ್ನು ಹಾಕಿರುವವರಿಗೆ ಯಾವುದೇ ವಿದ್ಯಾರ್ಹತೆ ಇಲ್ಲ, ಬರಿ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಾಗಿ ದೊಡ್ಡ ದೊಡ್ಡ ಪೋಸ್ಟರ್ಗಳನ್ನು ಹಾಕಿಕೊಂಡು ಗ್ರಾಮೀಣ ಜನರನ್ನು ವಂಚಿಸುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಜನತೆ ಆಯುರ್ವೇದ, ಹೋಮಿಯೋಪತಿ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಇಂತಹ ನಕಲಿ, ಅನಧಿಕೃತ ಸ್ಥಳಗಳಲ್ಲಿಚಿಕಿತ್ಸೆ ಪಡೆಯದಂತೆ ಸಲಹೆ ನೀಡಿದ ಅವರು, ಜಿಲ್ಲಾಸ್ಪತ್ರೆಯಲ್ಲಿ ಸುಸಜ್ಜಿತ ಆಯುರ್ವೇದಿಕ್, ಹೋಮಿಯೋಪತಿ ಚಿಕಿತ್ಸೆಯ ಸೌಲಭ್ಯಗಳಿವೆ, ನುರಿತ ವೈದ್ಯರಿದ್ದಾರೆ, ಉಚಿತ ಔಷಧಿಗಳನ್ನು ನೀಡಲಾಗುತ್ತದೆ, ಇದರ ಪ್ರಯೋಜನ ಪಡೆಯಿರಿ ಎಂದು ಕಿವಿಮಾತು ಹೇಳಿದರು.
ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ವಿವಿಧ ಕಾಯಿಲೆಗಳಿಗೆ ಸಾವಿರಾರು ರೂ ಶುಲ್ಕ ಪಡೆದಿರುವ ಕುರಿತು ರಸೀದಿಗಳು ಕಂಡು ಬಂದಿದ್ದು, ಇಂತಹ ಅನಧಿಕೃತ ಜಾಲಗಳಿಗೆ ಸಾರ್ವಜನಿಕರು ಬಲಿಯಾಗದಂತೆ ಎಚ್ಚರಿಕೆ ನೀಡಲಾಯಿತು.
ಜಿಲ್ಲೆಯ ಗಡಿಯಲ್ಲಿ ಅನಧಿಕೃತ,ನಕಲಿ ಕ್ಲಿನಿಕ್ಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪಗಳ ನಡುವೆ ರಸ್ತೆ ಬದಿಗಳಲ್ಲಿ ಟೆಂಟ್ಗಳನ್ನು ನಿರ್ಮಿಸಿಕೊಂಡು ಗಿಡಮೂಲಿಕೆಗಳಿಂದ ಚಿಕಿತ್ಸೆ ನೀಡುವುದಾಗಿ ಜನರನ್ನು ವಂಚಿಸುವ ಜಾಲವೂ ಸಕ್ರಿಯವಾಗಿದ್ದು, ಇದರ ತಡೆಗೆ ಇಲಾಖೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ದಾಳಿ ಸಂದರ್ಭದಲ್ಲಿ ಯುನಾನಿ ವೈದ್ಯೆ ಡಾ.ಗೀತಾ, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮಂಜುನಾಥ್, ಚಾಲಕ ಮುರಳಿ ಮತ್ತಿತರರು ತಂಡದಲ್ಲಿದ್ದರು.


ಚಿತ್ರಶೀರ್ಷಿಕೆ:(ಫೋಟೊ-9ಕೋಲಾರ2);ಕೋಲಾರ ತಾಲ್ಲೂಕಿನಾದ್ಯಂತ ರಸ್ತೆಬದಿಗಳಲ್ಲಿ ಅಕ್ರಮವಾಗಿ ಆಯುರ್ವೇದಿಕ್ ಚಿಕಿತ್ಸಾಲಯಗಳ ಹೆಸರಿನಲ್ಲಿ ಟೆಂಟ್ಗಳನ್ನು ಹಾಕಿಕೊಂಡು ಗಿಡಮೂಲಿಕೆ ಔಷಧಿ ನೀಡುವುದಾಗಿ ಜನರನ್ನು ವಂಚಿಸುತ್ತಿದ್ದ ನಾಲ್ಕು ಕ್ಯಾಂಪ್ಗಳ ಮೇಲೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ನೇತೃತ್ವದ ತಂಡ ಏಕಕಾಲದಲ್ಲಿ ದಾಳಿ ನಡೆಸಿ ತೆರವುಗೊಳಿಸಿತು.

