

ಶ್ರೀನಿವಾಸಪುರ : ಈಗಾಗಲೇ ದೇಶದಲ್ಲಿನ ೨ ಕೋಟಿ ಕುಟುಂಬಗಳು ಎಲ್ಐಸಿಯ ಪಾಲಿಸಿದಾರರಾಗಿದ್ದು, ಎಲ್ಐಸಿ ಸಂಸ್ಥೆಯು ವಿವಿಧ ಯೋಜನೆಗಳ ಮೂಲಕ ತನ್ನದೇ ಆದ ಪಾಲಿಸಿಗಳ ಮೂಲಕ ದೇಶದ ನಾಗರಿಕರಿಗೆ ಜೀವನ ಭದ್ರತೆ ಒದಗಿಸುತ್ತಿದೆ ಎಂದು ಎಲ್ಐಸಿ ಶಾಖಾ ವ್ಯವಸ್ಥಾಪಕಿ ವಿಜಯ ಕುಮಾರಿ ಹೇಳಿದರು.
ಪಟ್ಟಣದ ಎಲ್ಐಸಿ ಕಚೇರಿಯಲ್ಲಿ ಸೋಮವಾರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಎಲ್ಐಸಿ ಕಂಪನಿಯು ಜನರ ಆರ್ಥಿಕ, ಶೈಕ್ಷಣಿಕ ಹಾಗೂ ಭವಿಷ್ಯ ಭದ್ರತೆಗೆ ಅಗತ್ಯವಿರುವ ಎಲ್ಲಾ ರೀತಿಯ ಪಾಲಿಸಿಗಳ ಮೂಲಕ ಸೌಲಭ್ಯಗಳನ್ನು ನೀಡುತ್ತಿದೆ. ಈ ವರ್ಷ ೫೦ ಪ್ರತಿನಿಧಿಗಳು ಉತ್ತಮ ಸಾಧನೆಗಾಗಿ ಸನ್ಮಾನಕ್ಕೆ ಅರ್ಹತೆ ಪಡೆದಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.
ಎಲ್ಐಸಿಯ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ವಿ. ಕುಲಕರ್ಣಿ ಮಾತನಾಡಿ, ನಮಗೆ ಸ್ವಾತಂತ್ರ್ಯ ತಂದುಕೊಡಲು ಅನೇಕ ಮಹನೀಯರು ತಮ್ಮ ಪ್ರಾಣವನ್ನು ಫಣವಿಟ್ಟು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಅವರು ತಂದುಕೊಟ್ಟ ಸ್ವಾತಂತ್ರ್ಯವನ್ನು ನಾವು ಎಲ್ಲ ರೀತಿಯಿಂದಲೂ ಕಾಪಾಡಬೇಕು ಎಂದು ಹೇಳಿದರು. ಜೊತೆಗೆ, ದೇಶದ ಆರ್ಥಿಕ ಸ್ಥಿರತೆ ಮತ್ತು ಜನಸಾಮಾನ್ಯರ ಭವಿಷ್ಯ ಭದ್ರತೆಯಲ್ಲಿ ಎಲ್ಐಸಿ ಸಂಸ್ಥೆಯು ಮಹತ್ವದ ಪಾತ್ರ ವಹಿಸಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಎಲ್ಐಸಿ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

















































