ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ಸಮಾವೇಶ ಸೆ18ರಂದು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ

ಕೋಲಾರ,ಸೆ.7: ಕಾರಣಾಂತರಗಳಿಂದ ಎರಡು ಬಾರಿ ಮುಂದೂಡಲಾಗಿದ್ದ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ಸಮಾವೇಶವನ್ನು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ್ 18ರಂದು ಆಯೋಜಿಸಲಾಗಿದ್ದು, ಸಮಾವೇಶದ ಯಶಸ್ವಿಗೆ ಪ್ರತಿಯೊಬ್ಬ ಜೆಡಿಎಸ್ ಕಾರ್ಯಕರ್ತರು ಮುಂದಾಗಬೇಕು ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮನವಿ ಮಾಡಿದರು.
ನಗರದ ಜೆಡಿಎಸ್ ಕಛೇರಿಯಲ್ಲಿ ಬುಧವಾರ ಸಮಾವೇಶದ ಯಶಸ್ಸಿಗೆ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದ ಅವರು, ಈ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಪಕ್ಷದ ರಾಜ್ಯ ಅಧ್ಯಕ್ಷ ಸಿ.ಎಂ ಇಬ್ರಾಹಿಂ, ಸೇರಿದಂತೆ ರಾಜ್ಯ ನಾಯಕರು ಭಾಗವಹಿಸಲಿದ್ದು, ರಾಜ್ಯದಲ್ಲಿ ಮಾದರಿಯಾಗುವ ರೀತಿಯಲ್ಲಿ ನಡೆಸಬೇಕಾಗಿದೆ ಪ್ರತಿ ತಾಲೂಕಿನಲ್ಲಿ ಪಕ್ಷದ ಕಾರ್ಯಕರ್ತರು ತಮ್ಮ ಗ್ರಾಮಗಳಲ್ಲಿ ವಾರ್ಡ್‍ಗಳಲ್ಲಿ ಜೆಡಿಎಸ್ ಪಕ್ಷದ ಅಧಿಕಾರ ಅವಧಿಯಲ್ಲಿನ ಯೋಜನೆಗಳನ್ನು ಜನತೆಗೆ ತಿಳಿಸಿ ಕೊಟ್ಟು ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆತರಬೇಕಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿ ಮೇಲೆ ಬಿಜೆಪಿ ಕಾಂಗ್ರೆಸ್ ಪಕ್ಷದ ಮೇಲೆ ಆರೋಪಗಳನ್ನು ಮಾಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದ್ದು.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ ಅದಕ್ಕೆ ಈ ಸಮಾವೇಶವೇ ದಿಕ್ಸೂಚಿಯಾಗಲಿದೆ ಅ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕಾಗಿದೆ ಎಂದರು.
ರಾಜ್ಯದಲ್ಲಿ ಕೋಮುವಾದಿ ಪಕ್ಷದಿಂದ ಜನತೆ ಸಾಕಷ್ಟು ನೋವು ಅನುಭವಿಸಿದ್ದಾರೆ.ಸಾಮಾನ್ಯರ ಜನ ಜೀವನ ದುಸ್ಸಾರವಾಗಿದೆ ಹಾಗಾಗಿ ಕಾರ್ಯಕರ್ತರು ಇಂದಿನಿಂದಲೇ ಚುನಾವಣೆಯ ಪೂರ್ವಭಾವಿಯಾಗಿ ಮತದಾರರನ್ನು ಬೂತ್ ಮಟ್ಟದಿಂದ ಸಂಘಟಿಸುವಂತಾಗಬೇಕು ಕುಮಾರಸ್ವಾಮಿ ಅಧಿಕಾರವದಿಯಲ್ಲಿನ ಸಾಧನೆಗಳನ್ನು ಜನತೆಗೆ ನೆನಪಿಸುವ ಮೂಲಕಾರಿವುಮೂಡಿಸಬೇಕು ಪ್ರತಿ ಗಾಮ ಮತ್ತು ವಾಡು9ವಾರು ಕಾರ್ಯಕರ್ತರು ಮತ್ತು ಮತದಾರರನ್ನು ಸಂಘಟಿಸಿಕೊಂಡು ಕನಿಷ್ಠ 15-20 ಸಾವಿರ ಮಂದಿಯನ್ನು ಸಮಾವೇಶಕ್ಕೆ ಸಂಘಟಿಸಬೇಕೆಂದು ಸೂಚಿಸಲಾಗಿದೆ ಎಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಇತಿಹಾಸವಿದೆ. ಅಲ್ಪಸಂಖ್ಯಾತ ಸಮುದಾಯಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕೇವಲ ಓಟು ಬ್ಯಾಂಕ್ ಸೀಮಿತಗೊಳಿಸಿದ್ದು, ಅಲ್ಪಸಂಖ್ಯಾತ ಅಭಿವೃದ್ಧಿ ಜೆಡಿಎಸ್ ಪಕ್ಷದಿಂದ ಸಾಧ್ಯ ಎಂದು ಇಬ್ರಾಹಿಂ ಹಾದಿಯಾಗಿ ಎಲ್ಲರೂ ಪಕ್ಷಕ್ಕೆ ಬರತ್ತಾ ಇದ್ದು ನಮ್ಮದೇ ಪಕ್ಷದಲ್ಲಿ ಹಿಂದೆ ಕೇಂದ್ರ ಸಚಿವರಾಗಿ, ರಾಜ್ಯದಲ್ಲೂ ಅನೇಕ ಜವಾಬ್ದಾರಿಯುತ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅವರು ಮರಳಿ ಜೆಡಿಎಸ್ ಸೇರ್ಪಡೆಯಾಗಿರುವುದರಿಂದ ಹೆಚ್ಚಿನ ಶಕ್ತಿ ಬಂದಂತಾಗಿದೆ ಈಗಿರುವ ಅವಕಾಶವನ್ನು ಬಳಸಿಕೊಂಡು ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ನೌಕರ ನಾಗರಾಜ್ ಜೆಡಿಎಸ್ ಸೇರ್ಪಡೆಯಾದರು. ಮುಖಂಡರಾದ ಸಮೃದ್ಧಿ ಮಂಜುನಾಥ್, ಸಿಎಂಆರ್ ಶ್ರೀನಾಥ್, ಮಲ್ಲೇಶ್ ಬಾಬು, ಬಣಕನಹಳ್ಳಿ ನಟರಾಜ್, ಚಂದ್ರಶೇಖರಗೌಡ, ಅಲ್ಪಸಂಖ್ಯಾತ ಮುಖಂಡರಾದ ಸುಹೇಲ್ ದಿಲ್ ನವಾಜ್, ಯಾರಭ್, ಜಮೀರ್ ಆಹಮದ್, ಮುಸ್ತಫಾ, ಅಂಜುಮಾನ್ ಸಂಸ್ಥೆ ಜಮೀರ್ ಪಾಷ, ನಾರಾಯಣಸ್ವಾಮಿ, ಕೆಜಿಎಫ್ ದಯಾನಂದ್, ಜನಪನಹಳ್ಳಿ ಆನಂದ್, ವಡಗೂರು ರಾಕೇಶ್, ರಾಮು ಮುಂತಾದವರು ಇದ್ದರು.

ಆಹಾರ ಖಾತೆ ಸಚಿವ ಉಮೇಶ್ ಕತ್ತಿ ನಿಧನ/ಬೆಳಗಾವಿ ಜಿಲ್ಲೆಯ ಶಾಲಾ ಕಾಲೇಜುಗಳು,ಸರ್ಕಾರಿ ಕಚೇರಿಗಳಿಗೆ ರಜೆ

ಬೆಂಗಳೂರು: ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಅವರು ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿದ್ದ 61 ವರ್ಷದ ಉಮೇಶ್ ಕತ್ತಿ ಅವರು ಮಂಗಳವಾರ ರಾತ್ರಿ 10.30ರ ಸುಮಾರಿಗೆ ಬಾತ್ ರೂಮ್ ಗೆ ತೆರಳಿದ್ದಾಗ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಅವರ ಕುಟುಂಬದವರು ತಕ್ಷಣ ಅವರನ್ನು ಸರ್ಕಾರಿ ಕಾರಿನಲ್ಲಿಯೇ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ನಿಗಾ ಘಟಕದಲ್ಲಿ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು ಬುಧವಾರ ಬೆಳಗ್ಗೆ ಬೆಳಗಾವಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ತಿಳಿದು ಬಂದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ 1961ರ ಮಾರ್ಚ್‌ 14ರಂದು ಜನಿಸಿದ್ದ ಉಮೇಶ್‌ ಕತ್ತಿ ಅವರು ಪತ್ನಿ ಶೀಲಾ, ಮಗ ನಿಖಿಲ್‌, ಮಗಳು ಸ್ನೇಹಾ ಅವರನ್ನು ಅಗಲಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಒಲವು ಹೊಂದಿದ್ದ ಉಮೇಶ್ ಕತ್ತಿ ಆಗಾಗ ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಲ್ಲಿರುತ್ತಿದ್ದರು. ಅಲ್ಲದೆ ತಾವು ಒಂದಲ್ಲ ಒಂದು ದಿನ ನಾನು ಮುಖ್ಯಮಂತ್ರಿಯಾಗುವುದಾಗಿ ಹಲವು ಬಾರಿ ಹೇಳಿದ್ದರು.

5 ಪಕ್ಷ, ಎಂಟು ಬಾರಿ ಶಾಸಕ : ಬೆಳಗಾವಿಯ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ 8 ಬಾರಿ ಶಾಸಕರಾಗಿದ್ದ ಉಮೇಶ್ ಕತ್ತಿ, ವಿಭಿನ್ನವಾದ ರಾಜಕೀಯ ಪಥದಲ್ಲಿ ಸಾಗಿ ಸುದ್ದಿ ಮಾಡಿದ್ದರು.

2008ರಲ್ಲಿ ಮತ್ತೆ ಜೆಡಿಎಸ್​ಗೆ ಬಂದು ಹುಕ್ಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ಆದರೆ ಚುನಾವಣೆ ಬಳಿಕ ನಡೆದ ಆಪರೇಷನ್ ಕಮಲದ ಭಾಗವಾಗಿ ಕತ್ತಿ ಬಿಜೆಪಿ ಸೇರಿದರು.

. ಈಗ ಹಾಲಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಹಾಗೂ ಅರಣ್ಯ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದರು.

ರಾಜ್ಯದ ಉತ್ತರ ಭಾಗದ ಪ್ರಮುಖ ರಾಜಕೀಯ ಕೊಂಡಿ, ಆಹಾರ ಮತ್ತು ಅರಣ್ಯ ಸಚಿವ ಉಮೇಶ್ ಕತ್ತಿ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗೆ ಸರ್ಕಾರ ರಜೆ ಘೋಷಿಸಿದೆ.ಸಚಿವರ ನಿಧಾನಕ್ಕೆ ಸಂತಾಪ ಸೂಚಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆಯಲ್ಲಿ ಬುಧವಾರ ಬೆಳಗಾವಿ ಜಿಲ್ಲೆಯಾದ್ಯಂತ ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಿದರು.

೭೫ ವರ್ಷ ಸ್ವಾಧೀನದಲ್ಲಿದ್ದರೂ ದಾಖಲೆ ಸಿಗದೇ ರೈತನ ಪರದಾಟ ಮನೆಗೆ ಹೋಗಿ ಸಾಗುವಳಿ ಚೀಟಿ ಕೊಟ್ಟ ತಹಸೀಲ್ದಾರ್ ನಾಗರಾಜ್

ಕೋಲಾರ : – ಸುಮಾರು ೭೫ ವರ್ಷಗಳಿಂದ ಸ್ವಾಧೀನದಲ್ಲಿದ್ದರೂ ಸಾಗುವಳಿ ಚೀಟಿ ಸಿಗದೇ ಪರಿತಪಿಸುತ್ತಿದ್ದ ರೈತನ ಮನೆಗೆ ಖುದ್ದು ತಹಸೀಲ್ದಾರ್‌ ನಾಗರಾಜ್‌ ಭೇಟಿ ನೀಡಿ ಸ್ಥಳದಲ್ಲೇ ಅವರಿಗೆ ಭೂ ಮಂಜೂರಾತಿ ಪತ್ರ ವಿತರಿಸುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ . ತಾಲ್ಲೂಕಿನ ಸುಗಟೂರು ಹೋಬಳಿ ತಲಗುಂದ ಪುರಹಳ್ಳಿ ಗ್ರಾಮದ ನಿವಾಸಿ ಕಡು ಬಡ ಕುಟುಂಬದ ವೆಂಕಟರಾಮಪ್ಪ ಅವರು ಗ್ರಾಮದ ಸರ್ವೇ ನಂ .೩೪ ರ ಜಮೀನಿನಲ್ಲಿ ಸುಮಾರು ೭೫ ವರ್ಷಗಳಿಂದ ಸ್ವಾಧೀನದಲ್ಲಿದ್ದು , ಕಳೆದ ೨೦೦೩ ರಲ್ಲೇ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರೆನ್ನಲಾಗಿದೆ . ಸಾಗುವಳಿ ಚೀಟಿಗಾಗಿ ಎಷ್ಟೇ ಅಲೆದಾಡಿದರೂ ಪ್ರಯೋಜನವಾಗದಿದ್ದಾಗ ಮನನೊಂದ ವೆಂಕಟರಾಮಪ್ಪ ಸಾಗುವಳಿ ಚೀಟಿ ಸಿಗುತ್ತದೆ ಎಂಬ ವಿಶ್ವಾಸವನ್ನೇ ಕಳೆದುಕೊಂಡು ಸದರಿ ಜಮೀನಿನಲ್ಲಿ ಕೃಷಿಮಾಡಿಕೊಂಡಿದ್ದರು . ಈ ಸಂಬಂಧ ಸಾಗುವಳಿ ನೀಡುವಲ್ಲಿ ತಾಲ್ಲೂಕು ಕಚೇರಿಯಿಂದ ವಿಳಂಬವಾಗಿರುವ ಕುರಿತು ಮಾಹಿತಿ ಸಿಕ್ಕ ಕೂಡಲೇ ಕಾರ್ಯೋನ್ಮುಖರಾದ ತಹಸೀಲ್ದಾರ್‌ ನಾಗರಾಜ್ ತಾವೇ ಸ್ವತಃ ಕಡತ ತೆಗೆಸಿ ಸಾಗುವಳಿ ಚೀಟಿ ಸಿದ್ಧಪಡಿಸಿಕೊಂಡು ಖುದ್ದು ಪುರಹಳ್ಳಿ ಗ್ರಾಮಕ್ಕೆ ತೆರಳಿ ರೈತ ವೆಂಕಟರಾಮಪ್ಪ ಅವರ ಮನೆಯಲ್ಲೇ ಸಾಗುವಳಿ ಚೀಟಿ ನೀಡುವ ಮೂಲಕ ಮಾನವೀಯತೆ ಮೆರೆದರು .
ಎಷ್ಟೇ ಅಲೆದಾಡಿದರೂ ಜಮೀನಿನ ಸಾಗುವಳಿ ಚೀಟಿ ಸಿಗದೇ ನೋಂದಿದ್ದ ಕುಟುಂಬ ಸಂತೋಷದಲ್ಲಿ ತೇಲುವಂತಾಗಿದ್ದು , ಅವರ ಕುಟುಂಬದವರು ಹಾಗೂ ಗ್ರಾಮಸ್ಥರು ತಹಸೀಲ್ದಾರ್‌ ಅವರ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು .

ದೊಡ್ಡಹಸಾಳ ಶಾಲೆ ಗೋಡೆ ಕುಸಿತ ಬೀಳುವ ಹಂತದಲ್ಲಿ ೪ ಕೊಠಡಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಕ್ಕಳೊಂದಿಗೆ ಬಿಸಿಯೂಟ ಸವಿದ ತಹಸೀಲ್ದಾರ್‌ ನಾಗರಾಜ್

ಕೋಲಾರ : – ತಾಲೂಕಿನ ದೊಡ್ಡಹಸಾಳ ಗ್ರಾಮದ ಸರ್ಕಾರಿ ಶಾಲೆ ಗೋಡೆ ಕುಸಿತದ ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಸೀಲ್ದಾರ್‌ ನಾಗರಾಜ್ ಮಕ್ಕಳೊಂದಿಗೆ ಹೊರ ಆವರಣದಲ್ಲಿ ಕುಳಿತು ಬಿಸಿಯೂಟ ಸವಿದರು . ಇತ್ತೀಚೆಗೆ ಸುರಿದ ಮಳೆಗೆ ಕೋಲಾರ ತಾಲೂಕಿನ ದೊಡ್ಡಹಸಾಳ ಗ್ರಾಮದ ಸರ್ಕಾರಿ ಶಾಲೆ ಗೋಡೆ ಕುಸಿದಿದ್ದು , ಆ ಸಂದರ್ಭದಲ್ಲಿ ಶಾಲೆಯಲ್ಲಿ ಮಕ್ಕಳಿಲ್ಲದ ಕಾರಣ ಯಾವುದೇ ಎದುರಾಗಿರಲಿಲ್ಲ . ಆದರ ಗೋಡೆ ಸಂಪೂರ್ಣ ಕುಸಿದಿರುವ ಕುರಿತು ಗ್ರಾಮಸ್ಥರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ತಹಶಿಲ್ದಾರ್ ವಿ.ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಲಾ ಮಕ್ಕಳೊಂದಿಗೆ ಬಿಸಿ ಊಟ ಸವಿದರು . ದೊಡ್ಡಹಸಾಳ ಗ್ರಾಮದ ನಮ್ಮೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಗೋಡೆ ಕುಸಿದು ಬಿದ್ದ ಬಗ್ಗೆ ಹಾಗೂ ಶಾಲೆಯ ನಾಲ್ಕು ಕೊಠಡಿಗಳು ಬೀಳುವ ಹಂತದಲ್ಲಿ ಇವೆ ಎಂದು ಗ್ರಾಮದ ಲೋಕೇಶ್‌ಗೌಡ ಎಂಬುವವರು ಕರೆ ಮಾಡಿ ಮಾಹಿತಿ ನೀಡಿದ ಹಿನ್ನೆಲೆ ತಹಶಿಲ್ದಾರ್ ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿದ್ದರು . ಇದೇ ವೇಳೆ ಮಕ್ಕಳ ಆರೋಗ್ಯ ಹಾಜರಾತಿ , ಕಲಿಕೆ , ಮಧ್ಯಾಹ್ನದ ಊಟದ ಬಗ್ಗೆ ಪರಿಶೀಲನೆ ನಡೆಸಿದರು . ನಂತರ ತಹಶಿಲ್ದಾರ್ ನಾಗರಾಜ್ ಅವರು ಆಹಾರದ ಗುಣಮಟ್ಟ ನೋಡಲು ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದು ಒಳ್ಳೆಯ ತಾಜಾ ತರಕಾರಿ , ಸ್ವಚ್ಛವಾಗಿ ಅಡಿಗೆ ಮಾಡುವಂತೆ ಬಿಸಿ ಊಟ ತಯಾರಿಕರಿಗೆ ತಿಳಿಸಿದರು .
ಈ ವೇಳೆ ಮಾತನಾಡಿದ ತಹಶಿಲ್ದಾರ್ ವಿ ನಾಗರಾಜ್ , ತಾನು ಕೂಡ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಇಂದು ವಿದ್ಯಾರ್ಥಿಗಳ ಮುಂದೆ ಅಧಿಕಾರಿಯಾಗಿ ಬಂದಿದ್ದೇನೆ . ವಿದ್ಯಾರ್ಥಿಗಳು ಕೂಡಾ ಒಳ್ಳೆಯ ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟದ ಅಧಿಕಾರಿಗಳಾಗಬೇಕು . ಸರ್ಕಾರ ನಿಮ್ಮಗೆ ಎಲ್ಲಾ ವ್ಯವಸ್ಥೆ ಕಲ್ಪಿಸುತ್ತದೆ ಎಂದರು . ದೊಡ್ಡಹಸಾಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೬೨ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಕಳೆದ ಇಪ್ಪತ್ತು ದಿನಗಳ ಹಿಂದೆ ಗೋಡೆ ಕುಸಿದು ಬಿದ್ದಿದೆ ಹಾಗೂ ಇದರ ಜೊತೆಗೆ ನಾಲ್ಕು ಕೊಠಡಿಗಳನ್ನು ಕೂಡಲೇ ದುರಸ್ತಿ ಮಾಡಿಕೊಡುವಂತೆ ಶಾಲಾ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಮಾನವಿ ಮಾಡಿದ್ದಾರೆ ಎಂದು ತಿಳಿಸಿದರು . ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಪಂ ಸಿಇಓ ಅವರ ಗಮನಕ್ಕೆ ತಂದು ಅತಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇನೆ . ಗೋಡೆ ಕುಸಿತ ಹಾಗೂ ಕೊಠಡಿಗಳ ದುರಸ್ತಿ ಬಗ್ಗೆ ಶಾಲಾ ಆಡಳಿತ ಮಂಡಳಿ ಅವರು ಘಟನೆ ಬಗ್ಗೆ ಮಾಹಿತಿಯೊಂದಿಗೆ ಅರ್ಜಿ ನೀಡುವಂತೆ ಹೇಳಲಾಗಿದೆ ಎಂದರು .
ಶಿಥಿಲಗೊಂಡ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸದಂತೆ ಸೂಚಿಸಿ ಸುರಕ್ಷತೆ ಕುರಿತು ಎಚ್ಚರವಹಿಸಿ ಎಂದು ತಿಳಿಸಿದರು . ಈ ಸಂಧರ್ಭದಲ್ಲಿ ಗ್ರಾಮದ ಮುಖಂಡ ಲೋಕೇಶ್ ಗೌಡ , ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಶಾಲಾ ಶಿಕ್ಷಕರು ಹಾಜರಿದ್ದರು .

ಭಿಕ್ಷುಕ/ಸ್ವೀಪರ್ ನ ಖಾತೆಯಲ್ಲಿ ಇದ್ದದು ಎಷ್ಟು ಹಣ ಗೊತ್ತೆ ಬರೋಬ್ಬರಿ 70 ಲಕ್ಷ ಸತ್ತ ನಂತರ ಬಯಲಾಯ್ತು

ಉತ್ತರಪ್ರದೇಶದಲ್ಲಿ ಆಸ್ಪತ್ರೆಯ ಸ್ವೀಪರ್/ ಭಿಕ್ಷುಕನ ಖಾತೆಯಲ್ಲಿ  ಬರೋಬ್ಬರಿ 70 ಲಕ್ಷ  ದೊರೆತ ಘಟನೆ   ನಡೆದಿದೆ. ಆ  ವ್ಯಕ್ತಿಯನ್ನು ಧೀರಜ್ ಎಂದು ಗುರುತಿಸಲಾಗಿದೆ. ಪ್ರಯಾಗರಾಜ್‍ನಲ್ಲಿರುವ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಆಸ್ಪತ್ರೆಯ ಕುಷ್ಠರೋಗ ವಿಭಾಗದಲ್ಲಿ ಕಸ ಗುಡಿಸುವ ಕೆಲಸ ಮಡುತ್ತಿದ್ದ ಧೀರಜ್ ಕ್ಷಯರೋಗದಿಂದ ಬಳಲುತ್ತಿದ್ದ ಈತ ಭಾನುವಾರ ನಸುಕಿನ ವೇಳೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು  ತಿಳಿದು  ಬಂದಿದೆ.

    ಧೀರಜ್ ಮರಣದ ಬಳಿಕ ಆತನ ಬ್ಯಾಂಕ್ ಖಾತೆಯಲ್ಲಿ ಸುಮಾರು 70 ಲಕ್ಷಕ್ಕೂ ಅಧಿಕ ಹಣ ಇರುವುದು ಬೆಳಕಿಗೆ ಬಂದಿದೆ. ಧೀರಜ್‍ನ ತಂದೆಯೂ ಇದೇ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿದ್ದು, ಅವರ ಮರಣದ ನಂತರ ಧೀರಜ್‍ಗೆ ಈ ಕೆಲಸ ಸಿಕ್ಕಿತ್ತು ಎನ್ನಲಾಗಿದೆ.

         ತಂದೆ ಹಾಗೂ ಮಗ ಇಬ್ಬರೂ ತಮ್ಮ ಸಂಬಳ ಬರುವ ಬ್ಯಾಂಕ್ ಖಾತೆಯಿಂದ ಯಾವುದೇ ಹಣವನ್ನು ಡ್ರಾ ಮಾಡುತ್ತಿರಲಿಲ್ಲ. ಇದಕ್ಕೆ  ಬಲವಾದ ಕಾರಣವೂ  ಇತ್ತು ಎನ್ನಲಾಗಿದೆ.  ತಂದೆಯಂತೆ ಧೀರಜ್ ಕೂಡ ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಂದ ಹಣ ಕೇಳುತ್ತಾ, ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದನು.

ಧೀರಜ್ ತನ್ನ ಬ್ಯಾಂಕ್ ಖಾತೆಯಿಂದ ಒಂದು ಬಾರಿಯೂ ಹಣ ಡ್ರಾ ಮಾಡಿರಲಿಲ್ಲವಂತೆ, ತನ್ನ 80 ವರ್ಷದ ತಾಯಿಗೆ ಬರುವ ಪಿಂಚಣಿಯಿಂದ ಜೀವನ ನಡೆಸುತ್ತಿದ್ದರಂತೆ ಅಲ್ಲದೆ ಹೆಚ್ಚಿನ ಹಣದ ಅಗತ್ಯವಿದ್ದರೆ ಸ್ನೇಹಿತರು ಹಾಗೂ ಹೊರಗಡೆ ಭಿಕ್ಷೆ ಬೇಡುತ್ತಿದ್ದನು. ಹೀಗಾಗಿ ಧೀರಜ್ ಖಾತೆಯಲ್ಲಿ ಸುಮಾರು 70 ಲಕ್ಷಕ್ಕೂ ಅಧಿಕ ಹಣ ಉಳಿದುಕೊಂಡಿದೆ .

      ಧೀರಜ್ ಇನ್ನೂ ಮದುವೆಯಾಗಿರಲಿಲ್ಲ  ಯಾಕೆಂದರೆ ಒಂದು ವೇಳೆ ಮದುವೆಯಾದರೆ ಆ ಹೆಣ್ಣು ಹಣಕ್ಕೆ ಮರುಳಾಗುತ್ತಾಳೆ ಇಲ್ಲವೇ  ತನ್ನ ಹಣದೊಂದಿಗೆ ಎಸ್ಕೇಪ್ ಆಗಬಹುದು ಎಂದು ಧೀರಜ್ ಅಂದುಕೊಂಡಿದ್ದಾನೆ. ಹೀಗಾಗಿ ಅವನು ಇನ್ನೂ ಮದುವೆ ಯೋಚನೆ ಮಾಡಿರಲಿಲ್ಲ. ಅಲ್ಲದೆ ಆತ ಪ್ರತೀ ವರ್ಷನೂ ತೆರಿಗೆ ಕಟ್ಟುತ್ತಿದ್ದಾನೆ ಎಂದು ಸ್ನೇಹಿತನ ಮೂಲಕ ತಿಳಿದು ಬಂದಿದೆ.

ಕುಂದಾಪುರ:ಆರ್. ಎನ್. ಶೆಟ್ಟಿ‌ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ ದಿನಾಚರಣೆ

ಮೊಬೈಲ್, ಟಿ.ವಿ ಯಂಥ ಯಾವುದೇ ತಾಂತ್ರಿಕ ಉಪಕರಣಗಳಿಲ್ಲದ ಪ್ರಾಚೀನ ಕಾಲದಿಂದಲೂ ಗುರುವೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಶಕ್ತಿಯಾಗಿದ್ದರು. ಇಂದಿಗೂ ವಿದ್ಯಾರ್ಥಿ- ಶಿಕ್ಷಕ ಸಂಬಂಧ ನಾಜೂಕತೆಯಿಂದ ಕೂಡಿದ್ದಾಗಿದೆ. ಪ್ರತಿಯೊಂದು ವಿಷಯವನ್ನು ಕೂಲಂಕಷವಾಗಿ ಗಮನಿಸುವ ವಿದ್ಯಾರ್ಥಿಗಳಿಗೆ ಶಿಕ್ಷಕರೂ ಎಲ್ಲ ಆಯಾಮಗಳಿಂದಲೂ ಆದರ್ಶರಾಗಿರಬೇಕು’ಎಂದು ಆರ್‌. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ ದಿನಾಚರಣೆಯ ಪ್ರಯಕ್ತ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಸಂಖ್ಯಾಶಾಸ್ತ್ರ ಪಾಧ್ಯಾಪಕರಾದ ಪ್ರೊ.ಬಾಲಕೃಷ್ಣ ಭಟ್ ರವರು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಶಿಕ್ಷಕರು ತರಗತಿಯ ಒಳಗೂ- ಹೊರಗೂ ವಿದ್ಯಾರ್ಥಿಗಳ ಜೀವನವನ್ನು ಉತ್ತಮವಾಗಿ ರೂಪಿಸುವ ವಿಧಾನಗಳನ್ನು ತಿಳಿದುಕೊಳ್ಳುತ್ತಿರಬೇಕು ಎಂದು ಅಭಿಪ್ರಾಯ ಪಟ್ಟರು.ಮುಖ್ಯ ಅತಿಥಿಯವರಾದ ಶ್ರೀ ಬಾಲಕೃಷ್ಣ ಭಟ್ ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರಿಮತಿ ಅರುಣಾ ಐತಾಳ್ ಧನ್ಯವಾದ ಸಲ್ಲಿಸಿದರು‌. ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ‌‌‌ ನಾಗರತ್ನಾ ರವರು ಕಾರ್ಯಕ್ರಮ ನಿರೂಪಿಸಿದರು.



ಯಲ್ದೂರು ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪೀಪಲ್ ಫಾರ್ ಇಂಡಿಯಾ ಸಂಸ್ಥೆಯಿಂದ ಉಚಿತ ನೋಟ್‍ಬುಕ್ ವಿತರಣೆ.

ಶ್ರೀನಿವಾಸಪುರ: ಶಿಕ್ಷಣ ತಜ್ಞ ಡಾ|| ಸರ್ವೇಪಲ್ಲಿ ರಾಧಕೃಷ್ಣನ್ ರವರು ಅನ್ನಕ್ಕೆ ಕಷ್ಟವಿದ್ದ ಕಾಲಘಟ್ಟದಲ್ಲಿ ವ್ಯಾಸಂಗ ಪಡೆದು ಅಧ್ಯಾಪಕರಾಗಿ ಸೇವೆ ಸಲ್ಲಿಸಿ ರಾಷ್ಟ್ರಪತಿ ಹುದ್ದೆ ಅಲಂಕರಿಸಿದರು. ಅವರ ಬೆಳವಣಿಗೆಯ ಹಿಂದೆ ಗುರುಗಳ ಶ್ರಮ ಇರುತ್ತದೆ ಎಂದು ಅರಿತು ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಮಾಡಿರುವುದು ಸಂತಸ ತಂದಿದೆ ಎಂದು ಡಾ|| ರಾಧಕೃಷ್ಣನ್ ರವರ ಮೊಮ್ಮಗ ಡಾ|| ಸುಬ್ರಮಣ್ಯಂಶರ್ಮ ಹೇಳಿದರು.
ತಾಲೂಕಿನ ಯಲ್ದೂರು ನ್ಯಾಷನಲ್ ಹೈಸ್ಕೂಲ್‍ನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಪೀಪಲ್ ಫಾರ್ ಇಂಡಿಯಾ ಸಂಸ್ಥೆಯವರು ಶಾಲಾ ಮಕ್ಕಳಿಗೆ ಉಚಿತ ನೋಟ್‍ಬುಕ್ ವಿತರಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ತಾತ ರಾಧಕೃಷ್ಣನ್‍ರವರು ಹುಟ್ಟಿದ ಹಬ್ಬ ಪ್ರಪಂಚ ವ್ಯಾಪ್ತಿಯಲ್ಲಿ ಶಿಕ್ಷಕರ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತಿದೆ. ಯಾವುದೇ ವ್ಯಕ್ತಿಯಾದರೂ ಜೀವಿತಾವಧಿಯಲ್ಲಿ ಮಾಡಿದ ಉತ್ತಮ ಸೇವೆ ಸಾಧನೆಯಿಂದ ಇಂತಹ ಸ್ಮರಣಿಯ ಕಾರ್ಯಕ್ರಮಗಳು ಮಾಡಲು ಸಾಧ್ಯವಾಗುತ್ತದೆ. ಅವರ ವ್ಯಾಸಂಗದ ದಿನಗಳಲ್ಲಿ ಪಡೆದ ಕಷ್ಟಗಳ ಬಗ್ಗೆ ನಮ್ಮ ಹಿರಿಯರು ತಿಳಿ ಹೇಳಿದ್ದಾರೆ. ಆದರೂ ಯಾವುದಕ್ಕೂ ಎದೆಗುಂದದೆ ಶ್ರದ್ದೆಯಿಂದ ದೇಶದ ಸೇವೆ ಮಾಡಲು ಪಣ ತೊಟ್ಟಿದ್ದ ರಾಧಕೃಷ್ಣನ್ ಕುಟುಂಬದಲ್ಲಿ ಹುಟ್ಟಿರುವುದು ನಮ್ಮ ಸೌಭಾಗ್ಯ ನಾವು ಮಾಡುವ ಉತ್ತಮ ಕೆಲಸಗಳ ಮೇಲೆ ಸಮಾಜದ ಅನುಭೂತಿ ಸಿಗುತ್ತದೆ. ಗುರುಗಳು ಯಾವುದೇ ಪ್ರತಿಫಲ ಆಪೇಕ್ಷೆ ಇಲ್ಲದೆ ಸೇವೆ ಮಾಡುತ್ತಾರೆ ಆದ್ದರಿಂದ ವಿದ್ಯಾರ್ಥಿಗಳು ಮೊದಲು ತಂದೆ-ತಾಯಿಯನ್ನು ಸಂಸ್ಕಾರದಿಂದ ಗೌರವಿಸಬೇಕು ನಂತರ ಶಿಕ್ಷಕರನ್ನು ಗೌರವದಿಂದ ಕಾಣಬೇಕು ಎಲ್ಲಿ ಶಾಲೆ ಮತ್ತು ಅಧ್ಯಾಪಕರು ಇರುತ್ತಾರೋ ಅಲ್ಲಿ ರಾಧಕೃಷ್ಣನ್ ಇರುತ್ತಾರೆ. ಅವರು ಇರುವ ಕಡೆ ಅವರ ಮನೆತನದವರು ನಾವು ಇರುತ್ತೇವೆ ಶಿಕ್ಷಣಕ್ಕಾಗಿ ಯಾವ ನೆರವು ಬೇಕಾದರೂ ನೀಡುತ್ತೇವೆ ಎಂದು ತಿಳಿಸಿ ಭವಿಷ್ಯದ ಭಾರತಕ್ಕೆ ನೀವು ಕನಸಿನ ವಿದ್ಯಾರ್ಥಿಗಳು ಆದ್ದರಿಂದ ಎಲ್ಲರೂ ಸತ್ಪಜೆಗಳಾಗಿ ಬೆಳೆಯಬೇಕು ಎಂದು ಅಶಿಸಿದರು.
ಡಾ|| ವೈ.ವಿ. ವೆಂಕಟಾಚಲ ಮಾತನಾಡಿ ನಮ್ಮ ಗುಣಲಕ್ಷಣಗಳು ವಂಶಪರಂಪರ್ಯವಾಗಿ ಬರುತ್ತದೆ ಅದೇ ರೀತಿ ಡಾ|| ಸರ್ವೇಪಲ್ಲಿ ರಾಧಕೃಷ್ಣನ್ ವಂಶದ ಕುಡಿ ಡಾ|| ಸುವ್ರಮಣ್ಯಂಶರ್ಮ ರವರಲ್ಲಿ ಕಾಣಬಹುದು ಅವರ ತಾತನ ತತ್ವ ಸಿದ್ದಾಂತಗಳಂತೆ ಶಿಕ್ಷಣ ಮತ್ತು ಶಿಕ್ಷಕರಿಗೆ ಗೌರವ ನೀಡುವ ನಿಟ್ಟಿನಲ್ಲಿ ಗಡಿಯಲ್ಲಿರುವ ನಮ್ಮ ತಾಲೂಕಿಗೆ ಬಂದಿರುವುದು ಅವರಿಗೆ ಶಿಕ್ಷಣದ ಬಗ್ಗೆ ಇರುವ ಕಾಳಜಿ ತೋರುತ್ತದೆ, ಜಿಲ್ಲೆಯಲ್ಲಿ ಜಲ್ವಂತ ಸಮಸ್ಯೆಗಳ ಬಗ್ಗೆಯೂ ಯಾವುದೇ ಕೀಳರಿಮೆ ಇಲ್ಲದೆ ಉತ್ತಮ ವ್ಯಾಸಂಗ ಮಾಡುತ್ತಿದ್ದಾರೆ. ಶ್ರದ್ದೆಯಿಂದ ಶಿಕ್ಷಣ ಪಡೆದರೆ ಜೀವನದಲ್ಲಿ ಎಲ್ಲರಿಗೂ ಎಲ್ಲ ಅವಕಾಶಗಳು ಲಭಿಸುತ್ತದೆ. ಕೇವಲ ಕುಟುಂಬದ ಹಿನ್ನಲೆಯೇ ಮುಖ್ಯವಲ್ಲ ಶ್ರದ್ದೆಯಿಂದ ವ್ಯಾಸಂಗ ಮಾಡಿದರೆ ನಾವು ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಬದುಕಬಹುದು ಎಂದು ಹೇಳಿದರು.
ಮಾಜಿ ಸಂಸದ ಡಾ|| ವೆಂಕಟೇಶ್ ಮಾತನಾಡಿ ಮನುಷ್ಯ ಜನ್ಮ ತಾಳಿದರೆ ಪ್ರತಿಯೊಬ್ಬರಿಗೂ ಯಾವುದೋ ಒಂದು ಗುರಿ ಮುಟ್ಟಬೇಕಾದರೆ ಉತ್ತಮ ಕೆಲಸದಿಂದ, ಜ್ಞಾನದಿಂದ, ನಂಬಿಕೆಯಿಂದ ಹಾಗೂ ಶ್ರದ್ದೆಯಿಂದ ಗುರಿ ಸಾಧಿಸಲು ಸಾದ್ಯವಿದೆ. ಈ ಎಲ್ಲದ್ದಕ್ಕೂ ಮೂಲ ತಂದೆ-ತಾಯಿ ಮತ್ತು ಶಿಕ್ಷಕರ ಪ್ರೇರಣೆ ಮುಖ್ಯವಾಗಿರುತ್ತದೆ ಆದ್ದರಿಂದ ತಂದೆ-ತಾಯಿ ಮತ್ತು ಗುರುಗಳನ್ನು ನಿರಂತರವಾಗಿ ಶ್ರದ್ದಾಭಕ್ತಿಯಿಂದ ಗೌರವಿಸಬೇಕು.
ಈ ಸಂಧರ್ಭದಲ್ಲಿ ಪೀಪಲ್ ಪಾರ್ ಇಂಡಿಯಾ ಸಂಸ್ಥೆಯ ಪ್ರಶಾಂತ್‍ಸುಬ್ರಮಣಿ, ಆಮ್ ಆದ್ಮಿ ಪಕ್ಷದ ಬಾಬುರೆಡ್ಡಿ, ನಿವೃತ್ತ ಮುಖ್ಯ ಶಿಕ್ಷಕ ಕೆ.ಪಿ. ಕೃಷ್ಣಪ್ಪ, ನ್ಯಾಷನಲ್ ಹೈಸ್ಕೂಲಿನ ಮುಖ್ಯ ಶಿಕ್ಷಕ ಮೋಕ್ಷಲಿಂಗರಾಧ್ಯ, ಶಿಕ್ಷಕರಾದ ರಮೇಶ್‍ಬಾಬು, ಆನಂದ್, ಇ.ಸಿ.ಓ ಹನುಮೇಗೌಡ ಇತರರು ಇದ್ದರು.

ಗೋಕುಲ ಮಿತ್ರಬಳಗದಿಂದ ಕೆ.ಎಸ್.ಗಣೇಶ್ ಹುಟ್ಟುಹಬ್ಬ ಆಚರಣೆ: ಕಮಲಾ ಮಹಡಿ ಶಾಲಾ ಮಕ್ಕಳಿಗೆ ಸೇವಾದಳ ಸಮವಸ್ತ್ರ ವಿತರಣೆ

ಕೋಲಾರ:- ಒಳ್ಳೆ ವ್ಯಕ್ತಿತ್ವ, ಗುಣ, ಸ್ವಂತ ಸಾಮಥ್ರ್ಯ ಹಾಗೂ ದುಡಿಮೆಯಿಂದ ಬೆಳವಣಿಗೆ ಕಂಡಿರುವ ಗಣೇಶ್ ಅವರಿಗೆ ದೇವರು ಉತ್ತಮ ಆರೋಗ್ಯ,ಐಶ್ವರ್ಯ,ಉನ್ನತಿ ನೀಡಲಿ ಎಂದು ಗೋಕುಲ ಮಿತ್ರಬಳಗದ ಸದಸ್ಯರು ಹಾರೈಸಿದರು.
ನಗರದ ಕಮಲಾಮಹಡಿ ಶಾಲೆಯಲ್ಲಿ ಗೋಕುಲ ಮಿತ್ರ ಬಳಗ ಹಮ್ಮಿಕೊಂಡಿದ್ದ ಕೋಲಾರ ಕಾರ್ಯನಿರತ ಪತ್ರಕರ್ತರ ವಿವಿದ್ಧೋದ್ದೇಶ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಅವರ ಹುಟ್ಟುಹಬ್ಬದ ಆಚರಣೆ ಹಿನ್ನಲೆಯಲ್ಲಿ ಕಮಲಾಮಹಡಿ ಶಾಲಾ ಮಕ್ಕಳಿಗೆ ಸೇವಾದಳ ಸಮವಸ್ತ್ರ ವಿತರಿಸಿ ಬಳಗದ ಹಲವಾರು ಮುಖಂಡರು ಶುಭ ಕೋರಿದರು.
ಮುಖಂಡರಾದ ಕೆ.ಜಯದೇವ್,ಮುನಿವೆಂಕಟಯಾದವ್,ಶಾಲೆಯ ಮುಖ್ಯಶಿಕ್ಷಕ ರಾಮಪ್ಪ, ಶಿಕ್ಷಕ ಮುನಿರಾಜು, ಚಲಪತಿ,ಸೇವಾದಳ ಕಾರ್ಯದರ್ಶಿ ಸುಧಾಕರ್,ಪಿಡಿಒ ನಾಗರಾಜ್ ಮತ್ತಿತರರು ಮಾತನಾಡಿ, ಯಾವುದೇ ವ್ಯಕ್ತಿ ಆತ್ಮವಿಮರ್ಶೆ ಮೂಲಕ ಗಟ್ಟಿತನವನ್ನು ಕಾಪಾಡಿಕೊಂಡು ಇತರರಿಗೆ ಆದರ್ಶ ವ್ಯಕ್ತಿಗಳಾಗುತ್ತಾರೆ, ಅಂತಹವರ ಸಾಲಿನಲ್ಲಿ ಅತಿ ಹೆಚ್ಚು ಸ್ನೇಹಿತರನ್ನು ಹೊಂದಿರುವ ಗಣೇಶ್ ಒಬ್ಬರು ಎಂದು ತಿಳಿಸಿದರು.
ಪತ್ರಿಕಾರಂಗದಲ್ಲಿ ಇವರ ಛಾಪು ಅಜರಾಮರ, ಅವರು ವೃತ್ತಿಯಲ್ಲಿ ಇಟ್ಟಿರುವ ವಿಶ್ವಾಸವನ್ನು ಕಾಪಾಡಿಕೊಂಡು ಹೋಗಬೇಕು. ತಂದೆ ತಾಯಿಯ ಆಶೀರ್ವಾದ ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದು. ಇದಕ್ಕೆ ತಾಜಾ ಉದಾಹರಣೆ ಇವರೇ ಎಂದು ಹೇಳಿದರು.
ಕೇಕ್ ಕತ್ತರಿಸುವ ಮೂಲಕ ಜನ್ಮದಿನವನ್ನು ಆಚರಿಸಿ ಭಾರತ ಸೇವಾದಳ ಜಿಲ್ಲಾ ಘಟಕ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ತಮ್ಮ ಮೇಲಿನ ಅಭಿಮಾನದ ಕುರಿತು ಧನ್ಯವಾದ ಸಲ್ಲಿಸಿ, ಈ ಸ್ನೇಹ ಹಾಗೆಯೇ ಮುಂದುವರೆಯಲಿ ಎಂದು ಆಶಿಸಿದರು.

ಕೋರ್ಟ್ ಆನಂದ್‍ಗೆ ಆತ್ಮೀಯ ಸನ್ಮಾನ


ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ನಿವೃತ್ತರಾದ ಕೋಟೆಯ ಸ್ನೇಹ ಜೀವಿ ಆನಂದ್ ಅವರನ್ನು ಗೋಕುಲ ಮಿತ್ರ ಬಳಗದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿದ್ಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಕೋ.ನಾಮಂಜುನಾಥ್, ಗೋಕುಲ ಮಿತ್ರ ಬಳಗ ಸದಸ್ಯರಾದ ಮಣಿ,ಜ್ಯೂಸ್ ನಾರಾಯನಸ್ವಾಮಿ, ಯಲ್ಲಪ್ಪ, ಮಲ್ಲಿಕಾ ಪ್ರಕಾಶ್,ಚಾನ್ ಪಾಷಾ, ಬಜರಂಗದಳ ಬಾಲಾಜಿ,ವೆಂಕಟೇಶ್‍ಬಾಬಾ, ಹಾರೋಹಳ್ಳಿ ದೇವುಡು ರವಿ, ಆಸೀಫ್, ಶಂಕರ್, ರಾಜು, ಸರ್ವೋದಯ, ಬುಜ್ಜಿ, ಗೋಪಾಲ್‍ಕೃಷ್ಣ, ಗಂಗಮ್ಮನಪಾಳ್ಯ ರಾಮಯ್ಯ, ವರದೇನಹಳ್ಳಿ ವೆಂಕಟೇಶ್, ಮಂಚನಬಲೆ ಶ್ರೀನಿವಾಸ್,ಕಿಲಾರಿಪೇಟೆ ಕೃಷ್ಣಮೂರ್ತಿ, ಕ್ಯಾಪ್ಟನ್ ಮಂಜು, ನಾನಿ,ಶಿಕ್ಷಕ ಶ್ರೀರಾಮ್,ಫಲ್ಗುಣ,ಸ್ವಾಮಿ,ಗಿರಿ,ವಿನಯ್,ದಿಲೀಪ್‍ಕುಮಾರ್,ಲೋಕೇಶ್,ಡೆಕೋರೇಷನ್ ಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.

ತೀವ್ರ ದೂರದ್ರಷ್ಟಿ ದೋಷದಿಂದ ಬಳಲುತಿದ್ದು ಶಿಕ್ಷಕಿಯಾದ ರೋಚಕ ಕತೆ

ನಮಸ್ಕಾರ ಬಂಧುಗಳೇ,
ನಾನು ಶಿಕ್ಷಕಿಯಾಗಬೇಕೆಂದು ನಮ್ಮ ಅಮ್ಮ ಆಸೆಪಟ್ಟಿದ್ರು. ಹಾಗಾಗಿ ಓದು-ಬರಹ ಕಲಿಯಲು ಕಷ್ಟ ಎನಿಸಿದರೂ ಸಹ ಅಮ್ಮನ ಒಂದೇ ಒಂದು ಆಸೆ ಈಡೇರಿಸುವ ಜವಾಬ್ದಾರಿ ನನ್ನ ಮೇಲಿತ್ತು. ಮುಕ್ಕಾಲು ಭಾಗ ಅಂಧತ್ವವನ್ನು ಹೊತ್ತು ಹುಟ್ಟಿದ ನನಗೆ ಸಾಮಾನ್ಯ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಶಾಲೆಗೆ ನನ್ನನ್ನು ದಾಖಲಿಸಿದರು. ನನ್ನ ಕಲಿಕೆಯೇ ಅಲ್ಲಿ ಆಗುತ್ತಿರಲಿಲ್ಲ. ಕಾರಣ ಕಪ್ಪುಹಲಗೆಯ ಅಕ್ಷರಗಳು ನನಗೆ ಕಾಣುತ್ತಿರಲಿಲ್ಲ. ಅಕ್ಕ ಪಕ್ಕದ ವಿದ್ಯಾರ್ಥಿಗಳು ಸಹಾಯ ಮಾಡುತ್ತಿರಲಿಲ್ಲ. ಬದಲಾಗಿ ಆಡಿಕೊಳ್ಳುತ್ತಿದ್ದರು, ಛೇಡಿಸುತ್ತಿದ್ದರು. ಶಿಕ್ಷಕರು ನಮ್ಮ ತಂದೆ ತಾಯಿಗಳಿಗೆ ಸಲಹೆ ಕೊಟ್ಟರು:-“ದಯವಿಟ್ಟು ನಿಮ್ಮ ಮಗುವನ್ನು ಅಂಧ ಮಕ್ಕಳ ಶಾಲೆಗೆ ಸೇರಿಸಿ. ನಿಮ್ಮ ಮಗಳ ಭವಿಷ್ಯ ಉತ್ತಮವಾಗುತ್ತದೆ” .
ನಮ್ಮ ತಂದೆ ತಾಯಿ ಅಂದು ತೆಗೆದುಕೊಂಡ ನಿರ್ಧಾರ ನನ್ನ ಜೀವನದ ದಿಕ್ಕೇ ಬದಲಾಯಿಸಿತು. ಅವರು ಹೀಗೆ ಉತ್ತರಿಸಿದರು:-“ನೋಡಿ ಸರ್, ನಮ್ಮ ಮಗಳು ಹೇಗಾದರೂ ಇರಲಿ, ನಮ್ಮ ಕಣ್ಣ ಮುಂದೆ ಬೆಳೆಯ ಬೇಕು. ಅವಳನ್ನು ನೋಡಿ ನಾವು ಖುಷಿಪಡಬೇಕು. ಅವಳಿಂದ ನಮಗೆ ಯಾವ ನಿರೀಕ್ಷೆಯೂ ಮಾಡಲ್ಲ. ಅವಳು ನಮಗೆ ಸಾಕಬೇಕೆಂದು ನಾವು ಬಯಸುವುದಿಲ್ಲ. ನಾವು ಬದುಕಿರುವವರೆಗೂ ಕೊನೆಯವರೆಗೂ ನಾವು ಅವಳನ್ನು ನೋಡಿಕೊಳ್ಳುತ್ತೇವೆ. ಕಷ್ಟನೋ ಸುಖನೋ ನಮ್ಮ ಮಗು ನಮ್ಮ ಜೊತೆಯೇ ಇರಲಿ” ಎಂದು ಉತ್ತರಿಸಿ ಮನೆಯ ಕಡೆ ಹೆಜ್ಜೆ ಹಾಕಿದರು. ಅಕ್ಕ ಪಕ್ಕದ ಮನೆಯವರ ಚುಚ್ಚು ಮಾತುಗಳಿಗೂ ಆಹಾರವಾದರು. “ಅಯ್ಯೋ ಪಾಪ, ಈ ಮಗು ನಾ ಅವರ ತಂದೆ ತಾಯಿ ಸಾಯೋವರೆಗೂ ಸಾಕಬೇಕಲ್ಲ!” ಎಂದು ಜನರೆಲ್ಲ ಆಡಿಕೊಂಡು ನಗುತ್ತಿದ್ದರು.
ಇದನ್ನೆಲ್ಲ ಮೌನವಾಗಿ ಗಮನಿಸುತ್ತಿದ್ದ ನನಗೂ ನಾನೇಕೆ ನನ್ನ ಅಪ್ಪ ಅಮ್ಮನಿಗೆ ಹೊರೆಯಾಗಿರಬೇಕು ನಾನೂ ಸಹ ಓದಬೇಕು ಏನಾದರೂ ಮಾಡಬೇಕು ಎಂಬ ಆಲೋಚನೆ ಉಂಟಾಯಿತು. ತರಗತಿಯಲ್ಲಿ ಶಿಕ್ಷಕರು ಸರತಿಯ ಸಾಲಿನಲ್ಲಿ ಎಲ್ಲರನ್ನೂ ಓದಿಸುತ್ತಿದ್ದರು.ನನ್ನ ಸರದಿ ಬಂದಾಗ ನಿನ್ನ ಕೈಲಾಗಲ್ಲಮ್ಮ ಕಷ್ಟ ಆಗುತ್ತೆ ಕುಳಿತುಕೋ ಎಂದು ಕೂರಿಸಿಬಿಡುತ್ತಿದ್ದರು. ಅದಕ್ಕೆ ಕಾರಣ ಶಿಕ್ಷಕರಿಗೆ ನನ್ನ ಮೇಲಿರುವ ಕಾಳಜಿಯೋ ಅನುಕಂಪವೋ ತಿಳಿಯದು. ನಂತರದ ದಿನಗಳಲ್ಲಿ ಸ್ವತಃ ನಾನೇ ಹಿರಿಯ ವಿದ್ಯಾರ್ಥಿಗಳ ಬಳಿ ಹೇಳಿಸಿಕೊಂಡು ಕಲಿಯತೊಡಗಿದೆ. ಕಾರಣ ಅಪ್ಪ ಅಮ್ಮ ಅಷ್ಟೇನೂ ಓದಿಲ್ಲ. ಅಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಿ ದರ್ಜೆಯ ನೌಕರರು(ಈಗ ನಿವೃತ್ತರು)
ಅಮ್ಮ ಗೃಹಿಣಿ, ನಾನೇ ಮೊದಲ ಮಗು ಆಗಿದ್ರಿಂದ ಹೇಳಿಕೊಡುವವರಾರೂ ಇರಲಿಲ್ಲ. ಹಿರಿಯ ವಿದ್ಯಾರ್ಥಿಗಳ ಸಹಾಯದಿಂದ ಕಲಿತ ನಾನು ಸರದಿಯ ಸಾಲಿನಲ್ಲಿ ನನ್ನ ಸರದಿ ಬಂದಾಗ ನಾನೇ ಎದ್ದು ನಿಂತೆ ಎಂದಿನಂತೆ ನನ್ನ ಶಿಕ್ಷಕರು ಕೂರಲು ಹೇಳಿದರು . ಆಗ ನಾನು ಹೇಳಿದೆ”ಸರ್. ನಾನೂ ಓದುತ್ತೇನೆ, ತಪ್ಪಿದ್ದರೆ ತಿಳಿಸಿ ಸರಿ ಇದ್ದರೆ ಓದಲು ಅವಕಾಶ ಕೊಡಿ” ಎಂದೆ. ಅಂದೇ ನನಗೆನಿಸಿದ್ದು,”ಅನುಕಂಪ ಬೇಡ,ಅವಕಾಶ ಕೊಡಿ” ಎಂದು. ಗುರುಗಳು ಓದಲು ತಿಳಿಸಿದರು. ಕನ್ನಡ ಪಾಠ ಓದಿದೆ. ನಂತರ ಇತರೆ ವಿಷಯಗಳನ್ನು ಓದಲು ಹೇಳಿದರು ಅವುಗಳನ್ನೂ ಓದಿದೆ. ಆಗ ಶಿಕ್ಷಕರೆಲ್ಲ ಒಟ್ಟಿಗೆ ಒಂದೆಡೆ ಸೇರಿ ಇವಳೂ ಸಹ ಓದಬಲ್ಲಳು. ಪ್ರೋತ್ಸಾಹದ ಅಗತ್ಯವಿದೆ ಎಂದರಿತ ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕರು ೬ ನೇ ತರಗತಿಯಿಂದ ಪ್ರೋತ್ಸಾಹಿಸಲು ಪ್ರಾರಂಭಿಸಿದರು. ಆಟಕ್ಕೆಂದು ಹೋದರೆ ಸಹಪಾಠಿಗಳಿಂದ ಹೀಯಾಳಿಕೆಗೊಳಗಾಗಬೇಕಿತ್ತು. ಕುರುಡಿ ಎಂದು ಆಡಿಕೊಳ್ಳುತ್ತಿದ್ದರು. ಭಯದಿಂದಲೇ ಶಾಲೆಯ ಆಟದ ಮೈದಾನದಲ್ಲಿರಬೇಕಿತ್ತು. ಶಾಲೆ ಬಿಟ್ಟ ನಂತರ ಮನೆ ಕಡೆ ಹೋಗ್ತಾ ಇದ್ರೆ ಕಲ್ಲಲ್ಲೆಲ್ಲ ಹೊಡೆಯೋರು. ೭ನೇ ತರಗತಿಯಲ್ಲಿ ಅನುತ್ತೀರ್ಣವಾಗಲು ಕಾರಣ ಗಣಿತದ ಲೆಕ್ಕಗಳು ಕಪ್ಪು ಹಲಗೆಯ ಮೇಲೆ ಕಾಣದಿರುವುದು. ನಂತರ ಕಷ್ಟಪಟ್ಟು ಅಭ್ಯಾಸ ಮಾಡಿ ಪರೀಕ್ಷೆ ೭ನೇ ತರಗತಿ ಪಾಸಾದೆ. ಪ್ರೌಢ ಶಾಲೆಯಲ್ಲಿ ಆಟದ ಅವಧಿ ಬಂದಾಗ ಶಿಕ್ಷಕರ ಬಳಿ ಹೋಗಿ ಗಣಿತದ ಲೆಕ್ಕಗಳು,ವಿಜ್ಙಾನದ ಚಿತ್ರಗಳು, ಸಮಾಜ ವಿಜ್ಙಾನದ ಭೂಪಟಗಳನ್ನು ಅಭ್ಯಾಸ ಮಾಡುತ್ತಿದ್ದೆ. ಪ್ರೌಢಶಾಲೆಯಲ್ಲಿ ನಾನು ಮೊದಲ ಬೆಂಚಿನ ಮೊದಲ ವಿದ್ಯಾರ್ಥಿನಿ. ಹಾಗಿದ್ದರೂ ಸಹ ಕಪ್ಪು ಹಲಗೆಯ ಅಕ್ಷರಗಳು ಕಾಣುತ್ತಿರಲಿಲ್ಲ. ನಮ್ಮ ಶಿಕ್ಷಕರು ಈ ವಿಚಾರದಲ್ಲಿ ಬಹಳ ಸಹಕಾರ ಕೊಟ್ಟರು. ಅವರು ಹೇಳಿಕೊಂಡೇ ಪಾಠಗಳ ನೋಟ್ಸ್ ಅನ್ನು ಕಪ್ಪು ಹಲಗೆಯ ಮೇಲೆ ಬರೆಯುತ್ತಿದ್ದರು. ನಾನೂ ಸಹ ಅದನ್ನು ಆಲಿಸುವುದರ ಮೂಲಕ ವೇಗವಾಗಿ ಬರೆದುಕೊಳ್ಳುತ್ತಿದ್ದೆ. ಶಾಲೆಯಲ್ಲಿ ನಡೆಯುವ ಯಾವುದೇ ಸಂಗತಿಗಳನ್ನು ಮನೆಯಲ್ಲಿ ಅಪ್ಪ ಅಮ್ಮನಿಗೆ ಹೇಳುತ್ತಿರಲಿಲ್ಲ. ಎಲ್ಲಿ ನನಗೆ ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿಬಿಡುವರೋ ಎಂಬ ಭಯ ಕಾಡುತ್ತಿತ್ತು. ಆಟಕ್ಕೆ ಹೋಗದೆ ಕೇವಲ ಪಾಠಗಳ ಅಭ್ಯಾಸವನ್ನೇ ಮಾಡುತ್ತಿದ್ದೆ. ಜನಪದ ಗೀತೆ, ಭಾವಗೀತೆ, ಪ್ರಬಂಧ ರಚನೆ, ಏಕಪಾತ್ರಾಭಿನಯ ಹೀಗೆ ಎಲ್ಲ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದೆ. ನನ್ನ ಶಿಕ್ಷಕರೂ ಸಹ ಪ್ರೋತ್ಸಾಹಿಸುತ್ತಿದ್ದರು. ನನ್ನ ಪೋಷಕರು ಶಾಲೆ ದೂರ ಇದ್ದರೆ ಓಡಾಟ ಕಷ್ಟ ಎಂದು ಮನೆಯ ಹತ್ತಿರವೇ ಇದ್ದ ಅನುದಾನಿತ ಶಾಲೆಗಳಲ್ಲಿ ಓದಿಸಿದರು. ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣಳಾದೆ. ಕಾಲೇಜು ಶಿಕ್ಷಣಕ್ಕಾಗಿ ಸರ್ಕಾರಿ ಬಾಲಕಿಯರ ಪ ಪೂ ಕಾಲೇಜಿಗೆ ಸೇರಿಸಿದರು. ವಿಜ್ಙಾನ ವಿಭಾಗದಲ್ಲಿ ಅಧ್ಯಯನ ಮಾಡಬೇಕೆಂದು ನನಗೆ ಆಸೆ ಇತ್ತು. ಆದರೆ ಅಲ್ಲಿನ ಆಡಳಿತಾಧಿಕಾರಿಗಳು ಕೊಡಲು ನಿರಾಕರಿಸಿದರು. ಅವರು ಕೊಡುವ ಕಾರಣ ಹೀಗಿದೆ:”ನೋಡಮ್ಮ, ವಿಜ್ಙಾನ ವಿಭಾಗಕ್ಕೆ ಸೇರಿಸಿಕೊಳ್ಳೋದಕ್ಕೆ ನಮಗೇನೂ ತಕರಾರಿಲ್ಲ ನಿನಗೆ ಅರ್ಹತೆಯೂ ಇದೆ. ಆದರೆ ಮಾನವೀಯತೆ ದೃಷ್ಟಿಯಿಂದ ನಾವು ನಿನಗೆ ಕೊಡುವುದಿಲ್ಲ. ದೈಹಿಕವಾಗಿ ಸದೃಢರಾಗಿರುವವರೇ ಕಣ್ಣಿನಲ್ಲಿ ಆಸಿಡ್ ಎಲ್ಲ ಚೆಲ್ಲಿಕೊಂಡ ಉದಾಹರಣೆಗಳಿವೆ. ದಯವಿಟ್ಟು ಕ್ಷಮಿಸು. ನೀನು ಕಲಾವಿಭಾಗ ಆರಿಸಿಕೊಂಡು ಅಧ್ಯಯನ ಮಾಡುವುದೇ ಸರಿ” ಎಂದು ಹೇಳಿದರು. ಬೇರೆ ಬೇರೆ ಖಾಸಗಿ ಶಾಲೆಗಳಿಗೂ ಹೋಗಿ ಕೇಳಿದೆ. ಅಲ್ಲಿಯೂ ನನಗೆ ವಿಜ್ಙಾನ ವಿಭಾಗಕ್ಕೆ ಸೇರಲು ಅವಕಾಶ ಕೊಡಲಿಲ್ಲ. ಕಡೆಗೆ ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸಿ ಕಲಾ ವಿಭಾಗದಲ್ಲಿಯೇ ಅಭ್ಯಾಸ ಮಾಡಿದೆ. ಕಾಲೇಜು ಸ್ವಲ್ಪ ದೂರ ಹಾಗಾಗಿ ಮನೆಯ ಹತ್ತಿರವೇ ಇದ್ದ ನನ್ನ ಸಹಪಾಠಿಗಳ ಜೊತೆಯಲ್ಲಿಯೇ ಕಾಲೇಜಿಗೆ ಹೋಗುತ್ತಿದ್ದೆ. ಎಲ್ಲವೂ ಥಿಯರಿಯೇ ಇದ್ದಿದ್ದರಿಂದ ನನಗಲ್ಲಿ ಸಮಸ್ಯೆಯಾಗಲಿಲ್ಲ. ಆದರೆ ಇಂಗ್ಲಿಷ್ ವ್ಯಾಕರಣ ಹೇಳಿಸಿಕೊಳ್ಳಲು ನಮ್ಮ ಸಹಪಾಠಿಗಳ ಜೊತೆ ಇಂಗ್ಲಿಷ್ ಉಪನ್ಯಾಸಕರ ಮನೆಗೆ ಹೋಗಿ ಹೇಳಿಸಿಕೊಳ್ಳುತ್ತಿದ್ದೆವು. ಪ್ರೌಢಶಾಲಾ ಹಂತದಲ್ಲೂ ಶಿಕ್ಷಕರ ಮನೆಗೆ ಹೋಗಿ ಹೇಳಿಸಿಕೊಂಡ ಉದಾಹರಣೆಗಳಿವೆ. ಪಿಯುಸಿಯಲ್ಲಿ ನಿರಾತಂಕವಾಗಿ ಓದಿ ದ್ವಿತೀಯ ಪಿ.ಯು.ಸಿ.ಯನ್ನು ಉತ್ತಮ ಅಂಕಗಳೊಂದಿಗೆ ಉತ್ತೀರ್ಣವಾದ ನಂತರ ಮುಂದೇನು ಎಂಬ ಚಿಂತೆ ಉಂಟಾಯಿತು. ಆಗ ಅಲ್ಲಿದ್ದ ಒಬ್ಬರು ಉಪನ್ಯಾಸಕರು ಐಚ್ಚಕ ಕನ್ನಡ, ಇತಿಹಾಸ ಹಾಗೂ ಸಮಾಜಶಾಸ್ತ್ರ ವಿಷಯಗಳನ್ನಾರಿಸಿಕೊಂಡು ಬಿ ಎ ಅಭ್ಯಾಸ ಮಾಡಲು ಸಲಹೆ ಕೊಟ್ಟರು ಅದರಂತೆ ಪದವಿ ಕಾಲೇಜಿಗೆ ಸೇರಿದೆ ಅಲ್ಲಿ ನನಗೆ ಮೊದಲು ಪರಿಚಯವಾದವರು ಕನ್ನಡದ ಪ್ರೊಫೆಸರ್. ಎಂಟನೆಯ ತರಗತಿಯಿಂದಲೇ ಕವನ ಬರೆಯುವ ಹವ್ಯಾಸ ಇದ್ದ ನನಗೆ ನನ್ನ ಬರವಣಿಗೆಗೆ ಮತ್ತಷ್ಟು ಪ್ರೋತ್ಸಾಹ ಅಲ್ಲಿ ನನಗೆ ದೊರೆಯಿತು. ಪದವಿ ತರಗತಿಯನ್ನೂ ಸಹ ಪೂರ್ಣಗೊಳಿಸಿದ ನಂತರ ಬಿ ಎಡ್ ಗೆ ದಾಖಲಾತಿ ಪಡೆಯಲು ಪ್ರವೇಶ ಪರೀಕ್ಷೆ ಬರೆದೆ. ಮೊದಲ ಪ್ರಯತ್ನದಲ್ಲಿಯೇ ಆಯ್ಕೆಯೂ ಆಯಿತು ವಿವೇಕಾನಂದ ಬಿ ಎಡ್ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಸೀಟು ದೊರೆಯಿತು. ಇಷ್ಟೇ ಕೋನ ಮಿತಿಯಲ್ಲಿ ಪುಸ್ತಕ ಹಿಡಿಯಬೇಕು ಓದುಗಾರಿಕೆ ಕೌಶಲದಲ್ಲಿ ಎಂಬುದು ನಿಯಮ. ನನಗೆ ಅದು ಸಾಧ್ಯವಾಗುವುದಿಲ್ಲ ಕಣ್ಣಿಗೆ ತುಂಬಾ ಸಮೀಪ ಹಿಡಿದುಕೊಂಡರಷ್ಟೇ ಕಾಣುವುದು. ಸ್ವಲ್ಪ ಅಂತರವಿದ್ದರೂ ಕಾಣುವುದಿಲ್ಲ. ಕನ್ನಡ ಮೆಥೇಡ್ ಬೋಧಿಸುವ ಶಿಕ್ಷಕರ ಬಳಿ ನನ್ನ ಅಳಲನ್ನು ತೋಡಿಕೊಂಡೆ. ನಿನಗೆ ಆಸಕ್ತಿ ಇದ್ಯಲ್ಲ ಅದು ಮೆಚ್ಚುವಂಥದ್ದ ನಿನ್ನಂತಹ ಕೆಲವು ಪ್ರಕರಣಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಧೈರ್ಯವಾಗಿ ನಿನ್ನ ಅಧ್ಯಯನ ಮುಂದುವರೆಸು ಎಂದು ಹೇಳಿದರು. ನಾನು ಓದಿದ ಪ್ರೌಢಶಾಲೆಗೆ ನನಗೆ ಬೋಧನಾಭ್ಯಾಸಕ್ಕೆ ನಿಯೋಜಿಸಿದರು. ವಿಶಿಷ್ಟವಾದ ಕಲಿಕೋಪಕರಣಗಳನ್ನು ಬಳಸಿ ಪಾಠ ಮಾಡುವ ನನ್ನ ಕಾಯಕ ಹವ್ಯಾಸ ಅಲ್ಲಿಂದಲೇ ಪ್ರಾರಂಭವಾಯಿತು ಪರಿಸರ ಪಾಠಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ದಿನಪತ್ರಿಕೆಯಲ್ಲಿನ ಪರಿಸರಸಂಬಂಧಿ ಭಾವಚಿತ್ರಗಳನ್ನು ಕತ್ತರಿಸಿ ಡ್ರಾಯಿಂಗ್ ಚಾರ್ಟ್ ಗೆ ಅಂಟಿಸಿ ಮಾಹಿತಿಗಳನ್ನು ಕೆಳಗೆ ಬರೆದುಕೊಂಡು ಹೋಗಿದ್ದೆ. ಉಪನ್ಯಾಸಕರು ಅದನ್ನು ಮೆಚ್ಚಿಕೊಂಡೇ ಅವರೇ ಸನ್ನಿವೇಶಗಳನ್ನು ವಿವರಿಸಿದರು. ಬಿ ಎಡ್ ವ್ಯಾಸಂಗ ಮುಗಿದ ನಂತರ ಯಾವ ಖಾಸಗಿ ಶಾಲೆಯವರೂ ನನಗೆ ಬೋಧನೆಗೆ ಅವಕಾಶ ಕೊಟ್ಟಿಲ್ಲ. ಟ್ಯುಟೋರಿಯಲ್ ನಲ್ಲಿ ಕೆಲಸ ಮಾಡುತ್ತಿದ್ದೆ ಅಷ್ಟೆ. ನನ್ನ ಪರಿಸ್ಥಿತಿ ನೋಡಿ ಇವಳಿಂದೇನಾಗುತ್ತೆ ಎಂದು ಯಾವ ಖಾಸಗಿ ಶಾಲೆಯವರೂ ಸಹ ನನಗೆ ಬೋಧನೆಗೆ ಅವಕಾಶ ಕೊಡಲು ಸಿದ್ದವಿರಲಿಲ್ಲ .ಹೀಗಿರುವಾಗ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರೆ ಕೊಟ್ಟಿತು. ನಾನು ಸತತವಾಗಿ ಅಭ್ಯಾಸ ಮಾಡುತ್ತಿದ್ದೆ. ಮೊದಲ ಪ್ರಯತ್ನದಲ್ಲಿಯೇ ಆಯ್ಕೆಯೂ ಆದೆ. ನಾನು ಬರೆದ ಎಲ್ಲ ಪರೀಕ್ಷೆಗಳು ಸಾಮಾನ್ಯ ವಿದ್ಯಾರ್ಥಿಯಾಗಿಯೇ ಬರೆದದ್ದು. ನನ್ನ ಶಿಕ್ಷಕರ ಒತ್ತಾಯಕ್ಕೆ ಮಣಿದು ಅಂಗವಿಕಲರ ಪ್ರಮಾಣಪತ್ರವನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಲಗತ್ತಿಸಿದ್ದೆ‌. ಆಯ್ಕೆಯಾದ ನಂತರ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿರುವ ಆದರ್ಶ ವಿದ್ಯಾಲಯ ಆರ್ ಎಂ ಎಸ್ ಎ ಶಾಲೆಗೆ ಕನ್ನಡ ಭಾಷಾ ಶಿಕ್ಷಕಿಯಾಗಿ ವರಧಿ ಮಾಡಿಕೊಂಡೆ. ಪ್ರಾರಂಭದಲ್ಲಿ ನನಗೆ ಇಲ್ಲಿಯೂ ಕಷ್ಟವಾಯಿತು. ಇಲ್ಲೂ ಸಹ ಎಲ್ಲರ ಹೀಯಾಳಿಕೆ ಹೀಗಳಿಕೆಗೆ ಗುರಿಯಾಗಬೇಕಾಯಿತು. ವಿದ್ಯಾರ್ಥಿಗಳಾದಿಯಾಗಿ ಎಲ್ಲರ ಅಪಹಾಸ್ಯ ಬೈಗುಳಗಳಿಗೆ ಗುರಿಯಾಗಬೇಕಾಯಿತು. ನಾನು ಪಾಠ ಓದಲು ಪ್ರಾರಂಭಿಸಿದರೆ ಎಲ್ರೂ ನಗಾಡುವುದು ಕಿರುಚುವುದು ನಿತ್ಯದ ಚಟುವಟಿಕೆಯಾಗಿತ್ತು. ನನ್ನ ಕೆಲಸ ನನಗೆ ಎಷ್ಟೇ ಕಷ್ಟವಾದರೂ ನಾನೇ ಅದನ್ನು ಪೂರ್ಣಗೊಳಿಸಬೇಕಿತ್ತು. ಪಾಠ ಬೋಧನೆಯ ಜೊತೆಗೆ ತರಗತಿ ಶಿಕ್ಷಕಿ ಎನ್ನುವ ಜವಾಬ್ದಾರಿಯೂ ಹೆಗಲೇರಿತ್ತು. ಪಾಠ ಮಾಡುವುದೇ ದುಸ್ತರವಾಗಿದ್ದಾಗ ಹೆಚ್ಚುವರಿ ಕೆಲಸಗಳ ಭಾರ ಸಾಕಷ್ಟು ಒತ್ತಡ ಉಂಟು ಮಾಡುತ್ತಿತ್ತು. ಇಲ್ಲಿ ಕನ್ನಡ ಕಲಿಸುವುದು ಸವಾಲಿನ ಕೆಲಸ. ಕಾರಣ ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ತೆಲುಗು, ತಮಿಳು ಮಾತೃಭಾಷಿಕರು. ಆಂಗ್ಲ ಮಾಧ್ಯಮ ಶಾಲೆ. ಪಾಠ ಓದುವಾಗ ವಿದ್ಯಾರ್ಥಿಗಳ ನಗು. ಇದರಿಂದ ತಪ್ಪಿಸಿಕೊಳ್ಳಲು ಪಾಠಗಳೆಲ್ಲ ಕಂಠಪಾಠ ಮಾಡಿಕೊಂಡೆ. ಎಲ್ಲಿ ನಿಲಿಸಿದರೆ ಪುಟ ಮುಕ್ತಾಯವಾಗುತ್ತದೆ ಎಂಬುದನ್ನೂ ಸಹ ನೆನಪಿಟ್ಟುಕೊಳ್ಳಬೇಕಿತ್ತು. ಈ ಮಾರ್ಗ ಕಂಡುಕೊಂಡ ಮೇಲೆ ವಿದ್ಯಾರ್ಥಿಗಳ ಅಪಹಾಸ್ಯ ನಿಂತು ಹೋಯಿತು. ನಂತರದಲ್ಲಿ ವ್ಯಾಕರಣ ಬೋಧನೆಗೆ ಕಪ್ಪುಹಲಗೆಯ ಮೇಲೆ ಬರೆಯಲೇಬೇಕಿತ್ತು ಹಾಗಾಗಿ ನಾನು ಪ್ರತಿಯೊಂದು ವ್ಯಾಕರಣಾಂಶಗಳಿಗೂ ಮಾದರಿಗಳನ್ನು ತಯಾರಿಸಿಕೊಂಡೆ ಅದರ ಮೂಲಕ ಬೋಧನೆ ಮಾಡಲು ಪ್ರಾರಂಭಿಸಿದೆ. ಬೋಧನಾ ವಿಧಾನ ಉತ್ತಮ ಫಲಿತಾಂಶ ಉಂಟು ಮಾಡಿದರೆ ಅದನ್ನು ಮುಂದುವರೆಸುತ್ತಿದ್ದೆ ಇಲ್ಲವಾದಲ್ಲಿಬೇರೆ ವಿಧಾನ ಪ್ರಾಯೋಗಿಕವಾಗಿ ಪ್ರಾರಂಭಿಸುತ್ತಿದ್ದೆ. ಹೇಗೆ ನಾನು ಸಂದರ್ಶನ ಮಾದರಿ ವಿಧಾನ. ನಾಟಕ ಅಭಿನಯ ವಿಧಾನ ,ಮಾದರಿಯೊಂದಿಗೆ ಬೋಧನೆ, ಉಪನ್ಯಾಸ ವಿಧಾನ ,ಚರ್ಚಾ ವಿಧಾನ ಹೀಗೆಬೇರೆ ಬೇರೆ ವಿಧಾನಗಳ ಮೂಲಕ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಹೆಚ್ಚುವಂತೆ ಮಾಡುತ್ತೇನೆ. ಕಳೆದ ನಾಲ್ಕೂ ಎಸ್ ಎಸ್ ಎಲ್ ಸಿ ಬ್ಯಾಚ್ ಗಳಲ್ಲಿ ಎರಡು ಬ್ಯಾಚ್ ಕನ್ನಡದಲ್ಲಿ ಶೇಕಡ ೧೦೦ ಫಲಿತಾಂಶ ಬಂದಿರುತ್ತದೆ. ಉಳಿದೆರಡು ಬ್ಯಾಚ್ ೯೮.೫. ಶೇ ಫಲಿತಾಂಶ ಬಂದಿರುತ್ತದೆ. ಕಳೆದ ಬಾರಿ ೧೦೦ಕ್ಕೆ೧೦೦ ಮೂರು ವಿದ್ಯಾರ್ಥಿನಿಯರು ಪಡೆದಿರುತ್ತಾರೆ. ಅವರಿಗೆ ನನ್ನ ಸ್ವಂತ ಖಾತೆಯಿಂದ ೧೦೦೦ ರೂ ನಗದು ಹಾಗು ಪದಕವನ್ನಿತ್ತು ಮುಖ್ಯಶಿಕ್ಷಕರ ಮೂಲಕ ಗೌರವಿಸಲಾಯಿತು. ಮಕ್ಕಳಿಗೆ ಬೇರೆ ಬೇರೆ ಪುಸ್ತಕಗಳನ್ನು ಓದಿಸಿ ಬರೆಸುವ ಆಲೋಚನೆ ಇದೆ .. ಇದರಿಂದ ಓದುವ ಹವ್ಯಾಸ ಬೆಳೆಸಬಹುದು.
ನಮ್ಮ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹಾಕಲು ವೇದಿಕೆ ಕಲ್ಪಿಸುವ ಉದ್ದೇಶ ದಿಂದ ಮುಂದಿನ ತಿಂಗಳಿಂದ ಗೋಡೆ ಪತ್ರಿಕೆ ಹೊರ ತರುವುದ್ದೇಶವಿತ್ತು. ಅವುಗಳನ್ನು ಸಾಕಾರಗೊಳಿಸಬೇಕೆನ್ನುವಷ್ಟರಲ್ಲಿ ನನ್ನ ತವರು ಜಿಲ್ಲೆಯಾದ ಹಾಸನ ಜಿಲ್ಲೆಗೆ ವರ್ಗವಾಯಿತು. ೧೯ ಅಕ್ಟೋಬರ್ ೨೦೧೯ರಲ್ಲಿ ನಾನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣ ಬೆಳಗೊಳ ಹೋಬಳಿಗೆ ಸೇರಿದ ಜುಟ್ಟನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ವರಧಿ‌ಮಾಡಿಕೊಂಡೆ. ಇನ್ನೇನು ಮಕ್ಕಳೊಂದಿಗೆ ಬೆರೆಯಬೇಕು ಹೊಂದಿಕೊಳ್ಳಬೇಕು ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕೆನ್ನುವ ಯೋಜನೆಗಳನ್ನು ರೂಪಿಸುವಾಗಲೇ ಕೊರೋನ ಎಂಬ ಪೆಡಂಭೂತ ಅಡ್ಡಿಯಾಯಿತು. ದೇಶದಾದ್ಯಂತ ಲಾಕ್ ಡೌನ್. ಆ ಎರಡು ವರ್ಷಗಳು ಏನೂ ಮಾಡಲಾಗದ ಅಸಹಾಯಕತೆ. ಆನ್ ಲೈನ್ ತರಗತಿಗಳನ್ನು ಮಾಡೋಣ ಎಂದರೆ ಬೆರಳೆಣಿಕೆಯಷ್ಟು‌ ಮಂದಿ ಮಾತ್ರ ಸ್ಮಾರ್ಟ್ ಫೋನ್ ಹೊಂದಿದ್ದರು. ಮೊದಲೇ ಅಲ್ಲಿನ ಶಾಲೆಗೆ ಪ್ರಯಾಣಿಸುವುದೇ ನನಗೆ ಸವಾಲಿನ ಕೆಲಸ. ಅರಸೀಕೆರೆಯಿಂದ ಚನ್ನರಾಯಪಟ್ಟಣ, ಚನ್ನರಾಯಪಟ್ಟಣದಿಂದ ಹಿರೀಸಾವೆ, ಹಿರೀಸಾವೆಯಿಂದ ಜುಟ್ಟನಹಳ್ಳಿ ಹೀಗೆ ಮೂರು ವಾಹನಗಳನ್ನು ಬಳಸಿ ಅರಸೀಕೆರೆಯಿಂದ ನೂರು‌ ಕಿ ಮೀ ದೂರದಲಿರುವ ಶಾಲೆಗೆ ಹೋಗಿ ಅಧ್ಯಯನ ಅಧ್ಯಾಪನದಲಿ ತೊಡಗಿಸಿಕೊಳ್ಳಬೇಕಿತ್ತು. ನಾವು ಶಾಲೆ ತಲುಪಿ ಅಲ್ಲಿಂದ ಮಕ್ಕಳಿರುವ ಹಳ್ಳಿಗಳಿಗೇ ಹೋಗಿ ಬೋಧನೆ ಮಾಡತೊಡಗಿದೆವು. ಅಲ್ಲಿಗೆ ಲಾಕ್ ಡೌನಿದ್ದದ್ರಿಂದ ವಾಹನ ವ್ಯವಸ್ಥೆ ಇರಲಿಲ್ಲ. ದಿನಕೆ ಐನೂರರಿಂದ ಆರು ನೂರು ರೂಪಾಯಿಗಳು ಆಟೊ ಬಾಡಿಗೆ ಕೊಡಬೇಕಿತ್ತು. ಈಗಲೂ ಹಾಗೆಯೇ. ಬೆಳಗಿನ ಜಾವ ಆರು ಗಂಟೆ ಬಸ್ಸಿಗೆ ಹೊರಟರೆ ಮನೆ ತಲುಪುವುದು ಸಂಜೆ ಏಳೂವರೆ ಎಂಟು ಗಂಟೆಯೂ ಆಗಿ ಬಿಡುತ್ತದೆ. ಶಾಲೆಯಲ್ಲಿ ಬಿಡುವಿಲ್ಲದ ತರಗತಿಗಳು. ಹಾಗಾಗಿ ಶಾಲೆಯ ಇತರೆ ಕೆಲಸಗಳನ್ನೆಲ್ಲ ಮನೆಗೇ ಹೊತ್ತು ತಂದು ಮಾಡಿ ಕೊಳ್ಳುವೆ. ಶಾಲೆಯಲ್ಲಿ ನನಗೆ ಸಂಪೂರ್ಣ ಸಹಕಾರವಿದೆ ಆದರೂ‌ ಪ್ರಯಾಣವೇ ನನ್ನ ಪಾಲಿಗೆ ಸವಾಲಿನ ಸಂಗತಿ. ಪ್ರತಿ ದಿನ ಇನ್ನೂರು ಕಿ ಮೀ ಪ್ರಯಾಣದ ಕಾರಣ ಆರು ಗಂಟೆಗಳು ಪ್ರಯಾಣದಲ್ಲಿಯೇ ಕಳೆದು ಹೋಗುತ್ತದೆ. ಶಾಲೆಯಿಂದ ಅರಸೀಕೆರೆಗೆ ಬಂದ ನಂತರ ಸಂಗೀತ ಹಾಗೂ ವೀಣೆ ತರಗತಿಗೆ ಹೋಗಿ ಮನೆಗೆ ಬರುವುದು ರಾತ್ರಿ ಎಂಟು ಗಂಟೆ. ಮನೆಗೆ ಬಂದ ನಂತರ ಶುಭ್ರವಾಗಿ ಊಟ ಮುಗಿಸಿ ಸಂಗೀತ ಅಭ್ಯಾಸ, ವೀಣೆ ಅಭ್ಯಾಸ, ಮಾರನೆಯ ದಿನ ತೆಗೆದುಕೊಳ್ಳುವ ತರಗತಿಗಳ ಸಿದ್ದತೆ , ಕವನ, ಲೇಖನ ಬರೆವಣಿಗೆ ನಂತರ ಸರಿಯಾಗಿ ಹನ್ನೆರಡು ಗಂಟೆಗೆ ಡೈರಿ ಬರೆದು ಮಲಗಿದರೆ ಪುನಃ ಏಳುವುದು ಬೆಳಗಿನ ಜಾವ ಮೂರು ಗಂಟೆಗೆ. ಹೀಗೆ ಬೆಳಗಿನ ಜಾವ ಮೂರು ಗಂಟೆಗೆ ಎದ್ದರೆ ಮಲಗುವುದು ರಾತ್ರಿ ಹನ್ನೆರಡು ಗಂಟೆಗೆ. ನನಗೆ ದಿನದ ಇಪ್ಪತ್ನಾಲ್ಕು ಗಂಟೆಗಳೂ ಸಹ ಸಾಲದಾಗಿದೆ. ಒತ್ತಡದ ನಡುವೆ ಒಂದಿಷ್ಟು ಉಲ್ಲಾಸ ಉತ್ಸಾಹ ತಂದು ಕೊಡುವುದು ನನಗೆ ಸಂಗೀತ ಹಾಗೂ ಸಾಹಿತ್ಯ. ಹಾಗಾಗಿ ಸಪ್ತಸ್ವರ ನಾದ ಮಂದಿರದ ನನ್ನ‌ಪೂಜ್ಯ ಗುರುಗಳಾದ ವಿದೂಷಿ ಶ್ರೀ ಮತಿ ವೀಣಾ ಮೇಡಮ್ ಬಳಿ ಕಳೆದ ಮೂರು ವರ್ಷಗಳಿಂದ ಕರ್ನಾಟಕ ಶಾಸ್ತೀಯ ಸಂಗೀತ, ಸುಗಮ ಸಂಗೀತ ಹಾಗೂ ವೀಣೆಯನ್ನು ಅಭ್ಯಸಿಸುತಿರುವೆ. ಸಾಹಿತ್ಯ ಸೃಷ್ಟಿಯೂ ಜೊತೆ ಜೊತೆಗೆ ಸಾಗುತ್ತಲಿದೆ. ಹೀಗೆ ವೃತ್ತಿಪ್ರವೃತ್ತಿ ಎಂದು ಹಲ್ವ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡರೂ ನನಗೆ ಅತಿ ಹೆಚ್ಚು ಖುಷಿ ಕೊಡುವ ಕ್ಷಣಗಳೆಂದರೆ ಅದು ನನ್ನ ವಿದ್ಯಾರ್ಥಿಗಳೊಂದಿಗೆ ಕಳೆಯುವ ಕ್ಷಣಗಳು. ಕಲಿತು ಕಲಿಸುವ ತತ್ವವನ್ನು ನನ್ನೊಳಗೆ ಅಳವಡಿಸಿಕೊಂಡಿರುವುದರಿಂದ ನಿರಂತರ ಕಲಿಕಾರ್ಥಿಯಾಗಿದ್ದೇನೆ.
ವೈದ್ಯೆಯಾಗಬೇಕೆಂಬ ಕನಸು ನನಸಾಗಲಿಲ್ಲವಾದರೂ ಇಂದು ನನ್ನ ವಿದ್ಯಾರ್ಥಿಗಳು ಸಾಕಷ್ಟು ಜನ ವೈದ್ಯಕೀಯ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡು‌ ನನ್ನ ಸಂಪರ್ಕದಲ್ಲಿರುವುದು ಹೆಮ್ಮೆಯ ಸಂಗತಿ.
ಹರ ಕೊಲ್ಲಲ್ ಗುರು ಕಾಯ್ವರೆಂಬ ನಾಣ್ಣುಡಿಯಂತೆ ನನ್ನ ಪಾಲಿಗೆ ನನ್ನನ್ನು ಅನವರತ ಪ್ರೋತ್ಸಾಹಿಸುವ ಪ್ರೇರೇಪಿಸುವ ಪ್ರತಿಯೊಬ್ಬರೂ ಕೂಡ ಗುರು ಸಮಾನರೇ

ಇವು ಕೇವಲ ವಿದ್ಯಾರ್ಥಿ ಜೀವನ ಹಾಗೂ ಶಿಕ್ಷಕಿಯಾಗಿ ನನ್ನ ಅನುಭವ

ಬೋಧನೆಗೆ ಯಾವ ಖಾಸಗೀ ಶಾಲೆಯೂ ಅವಕಾಶ ಕೊಡದಿದ್ದ ಸಂದರ್ಭದಲ್ಲಿ ಸರ್ಕಾರ ನನಗೆ ಇಂಥ ಸುವರ್ಣಾವಕಾಶ ಕೊಟ್ಟಿದೆ. ಶಿಕ್ಷಕಿ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಇದೆ. ಅಮ್ಮನ ಕನಸು ಸಾಕಾರಗೊಳಿಸಿದ ಖುಷಿ ಇದೆ ನನಗೆ.
ಧನ್ಯವಾದಗಳು ಮಾನ್ಯರೇ,ಗೌರವಾನ್ವಿತರೇ, ಬಂಧುಗಳೇ.

ಕು.ಹರ್ಷಿಯಾ ಭಾನು, ಕನ್ನಡ ಭಾಷಾ ಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ
ಜುಟ್ಟನಹಳ್ಳಿ, ಶ್ರವಣಬೆಳಗೊಳ ಹೋಬಳಿ, ಚನ್ನರಾಯಪಟ್ಟಣ ತಾಲೂಕು, ಹಾಸನ ಜಿಲ್ಲೆ
ಪಿನ್: ೫೭೩೧೨೪

For more details please contact madam Mob no. 70196 37706