

ಉಡುಪಿ: ಕರಾವಳಿಯ ಯುವಜನರು ಹೆಚ್ಚು ಹೆಚ್ಚು ನಾಗರಿಕ ಸೇವೆಗಳಿಗೆ ಸೇರುವುದರಿಂದ ಸಮಾಜದ ಸಬಲೀಕರಣ ಸಾಧ್ಯವಿದೆ ಎಂದು ಕನ್ನಡ ಲೇಖಕ, ಚಿಂತಕ, ಸಾಹಿತಿ ಅರವಿಂದ ಚೊಕ್ಕಾಡಿ ಹೇಳಿದರು.
ಅವರು ಭಾನುವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಧರ್ಮಪ್ರಾಂತ್ಯ ವತಿಯಿಂದ ಆಸಕ್ತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ನಾಗರಿಕ ಸೇವೆಗಳ ಕುರಿತಾದ ತರಬೇತಿ ಕಾರ್ಯಾಗಾರದಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ಕರಾವಳಿಗರು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅಭಿರುಚಿಯನ್ನು ಕಡಿಮೆ ಹೊಂದಿದ್ದು ಉತ್ತರ ಭಾರತದವರು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ. ನಾಗರಿಕ ಸೇವೆಗೆ ಪ್ರಯತ್ನಿಸುವ ಬಯಕೆ ಯಾವುದೇ ಒತ್ತಾಯದಿಂದ ಬರದೆ ಸ್ವಇಚ್ಛೆಯಿಂದ ಬಂದಾಗ ಸಮಾಜದಲ್ಲಿ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ನಾಗರಿಕ ಸೇವೆಗಳಲ್ಲಿ ಸೇರಿಕೊಂಡಾಗ ಅಧಿಕಾರವನ್ನು ಬಳಸಿಕೊಂಡು ಸಮಾಜಕ್ಕೆ ಉಪಯೋಗವಾಗುವಂತಹ ಸೇವೆ ನೀಡಲು ಸಾಧ್ಯವಿದೆ. ಯುವಜನತೆ ಅನಗತ್ಯ ವಿಚಾರಗಳಿಂದ ಹೊರಬರಲು ಇಂತಹ ಪರೀಕ್ಷೆಗಳು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ ನಿಮ್ಮ ಕನಸು ಸ್ಪಷ್ಟವಾಗಿದ್ದರೆ ಕಠಿಣ ಪರಿಶ್ರಮ ಮಾತ್ರ ನಾಗರಿಕ ಸೇವೆಯಲ್ಲಿ ಯಶಸ್ಸು ಕಾಣಲು ಸಾಧ್ಯ. ಎಲ್ಲಿಯ ತನಕ ನಾವು ಪರಿಶ್ರಮಕ್ಕೆ ಸೂಕ್ತ ಗೆಲುವು ಲಭಿಸುವ ತನಕ ಸೋಲನ್ನು ಒಪ್ಪಿಕೊಳ್ಳದೆ ನನಸಾಗಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಮನೆಯಲ್ಲಿ ವಿದ್ಯಾರ್ಥಿಗಳು ಹೆತ್ತವರ ಉತ್ತೇಜನ ಕೂಡ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ನಾಗರಿಕ ಸೇವೆಗಳ ಕುರಿತು ಇನ್ನಷ್ಟು ಮಾಹಿತಿಯನ್ನು ಸಂಗ್ರಹಿಸುವುದರ ಮೂಲಕ ಹೆಚ್ಚಿನ ತರಬೇತಿಯನ್ನು ಧರ್ಮಪ್ರಾಂತ್ಯದ ಮೂಲಕ ನೀಡಲಾಗುವುದು ಎಂದರು.
ನಾಗರಿಕ ಸೇವಾ ಪರೀಕ್ಷೆಯನ್ನು ಬರೆದು ತರಬೇತಿ ಪಡೆಯುತ್ತಿರುವ ಜಾಸ್ಮಿನ್ ಜೆನಿಫರ್ ಲೋಬೊ ಬಂಟ್ವಾಳ ಮತ್ತು ಆಶೀಶ್ ಕುಲದೀಪ್ ಆಳ್ವಾ ಮೂಡುಬೆಳ್ಳೆ ತಮ್ಮ ತರಬೇತಿಯ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಪರಿಚಯ ಸಂಸ್ಥೆ ಪಾಂಬೂರು ಇದರ ಪ್ರಕಾಶ್ ನೊರೊನ್ಹಾ ಅತಿಥಿಗಳ ಪರಿಚಯ ನೀಡಿದರು. ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
















