

ಮಲ್ಪೆ: ಇಲ್ಲಿನ ತೊಟ್ಟಂ ಸಂತ ಅನ್ನಮ್ಮ ಚರ್ಚಿನ ವತಿಯಿಂದ ಹಿಂದೂ ಭಾಂಧವರ ಮನೆಗಳಿಗೆ ತೆರಳಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದರ ಮೂಲಕ ವಿಶಿಷ್ಠವಾಗಿ ಆಚರಿಸಲಾಯಿತು.
ದೀಪಾವಳಿಯ ಪ್ರಯುಕ್ತ ಸತತ ಮೂರು ದಿನ ಚರ್ಚ್ ವ್ಯಾಪ್ತಿಯ ವಿವಿಧ ಹಿಂದೂ ಭಾಂಧವರ ಮನೆಗೆ ತೆರಳಿದ ಕ್ರೈಸ್ತ ಬಾಂಧವರು ಸಿಹಿ ತಿಂಡಿ ಹಾಗೂ ಹಣತೆಗಳನ್ನು ನೀಡುವುದರ ಮೂಲಕ ಪರಸ್ಪರ ಹಬ್ಬದ ಸಂಭ್ರಮವನ್ನು ವಿನಿಮಯ ಮಾಡಿಕೊಂಡರು.
ಈ ವೇಳೆ ಮಾತನಾಡಿದ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ದೀಪಾವಳಿ ಒಂದು ಸಾರ್ವತ್ರಿಕ ಹಬ್ಬ. ಇದರ ಆಚರಣೆಯನ್ನು ಪ್ರತಿಯೊಬ್ಬರು ಮಾಡುತ್ತೇವೆ. ದೀಪದ ಬೆಳಕು ಹೇಗೆ ಪ್ರತಿಯೊಬ್ಬರಿಗೂ ಸಮಾನವಾಗಿ ಲಭಿಸುತ್ತದೆಯೋ ಹಬ್ಬದ ಆಚರಣೆಗಳನ್ನು ಕೂಡ ಪರಸ್ಪರ ಕೂಡಿ ಸಂಭ್ರಮಿಸಿದಾಗ ಅದರ ಮಹತ್ವ ಇನ್ನಷ್ಟು ಹೆಚ್ಚಾಗಲು ಸಹಾಯಕವಾಗುತ್ತದೆ.
ಬೆಳಕಿನ ಹಬ್ಬದ ಸಂದರ್ಭದಲ್ಲಿ ದ್ವೇಷ, ಅವಿಶ್ವಾಸ, ಕ್ರೌರ್ಯ, ಹಿಂಸೆಯ ಸ್ಥಳದಲ್ಲಿ ವಿಶ್ವಾಸ ಮತ್ತು ಪ್ರೀತಿಯ ಸೇತುವೆಗಳನ್ನು ಕಟ್ಟುವ ಬೆಳಕು ನಾವಾಗಬೇಕು. ಕತ್ತಲೆಯ ಜಾಗದಲ್ಲಿ ನಾವೊಂದು ಹಣತೆಯಾಗಿ ಇತರರಿಗೆ ಭರವಸೆಯ ಬೆಳಕಾಗುವುದರೊಂದಿಗೆ ಪರಸ್ಪರ ಸೌಹಾರ್ದತೆಯ ಸೇತುವೆಗಳನ್ನು ಕಟ್ಟುವ ಕೆಲಸದಲ್ಲಿ ಒಂದಾಗಿ ಕೈಜೋಡಿಸಬೇಕು ಎಂದರು.
ಈ ವೇಳೆ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, ಸ್ಥಳೀಯಾ ಕಾನ್ವೆಂಟಿನ ಸಿಸ್ಟರ್ ಸುಶ್ಮಾ, ಸಿಸ್ಟರ್ ಶಾಲಿನಿ ಹಾಗೂ ಇತರರು ಉಪಸ್ಥಿತರಿದ್ದರು.







