

ಕಾರವಾರ ತಾಲೂಕಿನ ಕದ್ರಾ ನಿವಾಸಿ ಯುವತಿ ರಿಶೆಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಕದ್ರಾ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಬಂಡಿವಡ್ಡರ್ ಅವರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣವು ರಾಜಕೀಯ ಹಾಗೂ ಸಾಮಾಜಿಕವಾಗಿ ಗಂಭೀರ ತಿರುವು ಪಡೆದುಕೊಂಡ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಕದ್ರಾ ನಿವಾಸಿಗಳಾದ ರೀನಾ ಹಾಗೂ ಕ್ರೀಸ್ತೋದ್ ಡಿಸೋಜ
ದಂಪತಿಯ ಪುತ್ರಿ ರಿಶೆಲ್ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವಿಗೆ ಜೆಡಿಎಸ್ ಮುಖಂಡೆ ಚೈತ್ರಾ ಕೊಠಾರ್ ಅವರ ಪುತ್ರ ಚಿರಾಗ್ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಯುವತಿಯನ್ನು ಪ್ರೀತಿಸುವಂತೆ ಒತ್ತಡ ಹೇರುತ್ತಿದ್ದ ಹಾಗೂ ಸಾವಿಗೂ ಮುನ್ನ ಅತ್ಯಾಚಾರ ಎಸಗಿರುವ ಸಂಶಯವಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಮೃತ ಯುವತಿಯ ಮೊಬೈಲ್ನಲ್ಲಿ ಸುಮಾರು 230 ಪುಟಗಳಷ್ಟು ವಾಟ್ಸಪ್ ಚಾಟ್ ಲಭ್ಯವಿದ್ದರೂ ಅದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಅಲ್ಲದೆ, ಪ್ರಾಥಮಿಕ ಹಂತದಲ್ಲೇ ಮುಖ್ಯ ಅರೋಪಿಯನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿರುವುದು ಹಾಗೂ ಮೊದಲ ಬಾರಿಯ ಮರಣೋತ್ತರ ಪರೀಕ್ಷೆ ಸಮರ್ಪಕವಾಗಿ ನಡೆದಿಲ್ಲ ಎಂಬ ಆರೋಪಗಳು ಪಿಎಸ್ಐ ವಿರುದ್ಧ ತೀವ್ರಗೊಂಡಿವೆ.
ಅತ್ಯಾಚಾರದ ಸಂಶಯ ಹಿನ್ನೆಲೆಯಲ್ಲಿ ತಜ್ಞ ವೈದ್ಯರಿಂದ ಮರು ಮರಣೋತ್ತರ ಪರೀಕ್ಷೆ ನಡೆಸುವಂತೆ ಪೋಷಕರು ಒತ್ತಾಯಿಸಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಪ್ರಕರಣದ ಗಂಭೀರತೆಯನ್ನು ಅರಿತು ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆಯಾಗಿದ್ದು, ಕ್ರೈಸ್ತ ಸಮುದಾಯದ ಮುಖಂಡರು ಹಾಗೂ ರಾಜಕೀಯ ಒತ್ತಡವೂ ಹೆಚ್ಚಾಗಿದೆ.
ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದರೂ, ಸಮರ್ಪಕ ಮತ್ತು ಕಾನೂನಾತ್ಮಕ ಸಾಕ್ಷ್ಯಗಳ ಕೊರತೆಯಿಂದ ತಕ್ಷಣ ಬಂಧನ ಸಾಧ್ಯವಾಗಿರಲಿಲ್ಲ ಎಂದು ಪೊಲೀಸ್ ವಲಯದ ಮೂಲಗಳು ತಿಳಿಸಿವೆ. ಆದರೆ ಪ್ರಾಥಮಿಕ ತನಿಖೆಯಲ್ಲೇ ವಿಳಂಬ ಉಂಟಾಗಿರುವುದು ಹಾಗೂ ಕ್ಷೇತ್ರ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪಿಎಸ್ಐ ಅವರನ್ನು ಅಮಾನತ್ತಿನಲ್ಲಿ ಇಡಲಾಗಿದೆ.
ಪ್ರಕರಣದ ಸತ್ಯಾಸತ್ಯತೆ ಹತ್ತೆಹಚ್ಚಲು ಈಗಾಗಲೇ ಪ್ರತ್ಯೇಕ ತನಿಖಾ ತಂಡ ರಚಿಸಲಾಗಿದ್ದು, ಆರೋಪಿಗಳ ಬಂಧನ ಹಾಗೂ ಪ್ರಕರಣದ ಎಲ್ಲಾ ಆಯಾಮಗಳ ಬಗ್ಗೆ ಅಳವಾದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕ್ಷೇತ್ರ ತನಿಖೆಯಲ್ಲಿ ನಿರ್ಲಕ್ಷ್ಯ ಕಂಡುಬಂದ ಹಿನ್ನೆಲೆಯಲ್ಲಿ, ಹೆಚ್ಚಿನ ತನಿಖೆಯ ಹಿತದೃಷ್ಟಿಯಿಂದ ಕದ್ರಾ ಪಿಎಸ್ಐ ಅವರನ್ನು ಅಮಾನತ್ತಿನಲ್ಲಿ ಇಡಲಾಗಿದೆದಿನಾಂಕ 19/01/2026 ರಂದು ಕಾರವಾರದಲ್ಲಿ ಕ್ರೈಸ್ತ ಮುಖಂಡರು ಹಾಗೂ ಕರ್ನಾಟಕ ಕ್ರೈಸ್ತ ಸಂಘಟನೆಗಳ ಅಧ್ಯಕ್ಷ ರಾದ ಶ್ರೀಮನ್ ಸ್ಟ್ಯಾನಿ ಪಿಂಟೋರವರ ನೇತೃತ್ವದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆಯನ್ನು ಆಯೋಜಿಸಿರುತ್ತಾರೆ. ಸಮಗ್ರ ತನಿಖೆ ನಡೆಸಿ ಮೃ ತ ಕುಟುಂಬಕ್ಕೆ ನ್ಯಾಯ ಒದಗಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಆಲ್ ಇಂಡಿಯಾ ಕಥೋಲಿಕ್ ಯೂನಿಯನ್ (AICU)ರಾಜಾಧ್ಯಕ್ಷ ಶ್ರೀಮಾನ್ ಅಲ್ವಿನ್ ಡಿಸೋಜ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

