

ಉತ್ತರ ಕನ್ನಡ ಜಿಲ್ಲೆಯ ಕದ್ರಾ ನಿವಾಸಿ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಕಾಳಜಿ ವಹಿಸಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಕದ್ರಾ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಬಂಡಿವಡ್ಡರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಪ್ರಕರಣದ ಹಿನ್ನೆಲೆ: ರೀನಾ ಹಾಗೂ ಕ್ರಿಸ್ತೋದ್ ಡಿಸೋಜಾ ದಂಪತಿಯ ಪುತ್ರಿಯಾದ ರಿಶೇಲ್ ಡಿಸೋಜಾ ಕೆಲವು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ಈ ಘಟನೆಗೆ ಜೆಡಿಎಸ್ ನಾಯಕಿಯ ಪುತ್ರ ಚಿರಾಗ್ ಎಂಬಾತ ನೀಡಿದ್ದ ಮಾನಸಿಕ ಕಿರುಕುಳವೇ ಕಾರಣ ಎಂಬ ಗಂಭೀರ ಆರೋಪ ಆಗಿತ್ತು.
ಮೃತ ಯುವತಿಯ ಮೊಬೈಲ್ನಲ್ಲಿ ಸುಮಾರು 230 ಪುಟಗಳಷ್ಟು ವಾಟ್ಸಪ್ ಚಾಟ್ ಲಭ್ಯವಿದ್ದರೂ ಅದನ್ನು ಪೊಲೀಸರು ಗ೦ಭೀರವಾಗಿ ಪರಿಗಣಿಸಿಲ್ಲ ಎ೦ಬ ಆರೋಪಗಳು ಕೇಳಿಬ೦ದಿವೆ. ಅಲ್ಲದೆ, ಪ್ರಾಥಮಿಕ ಹ೦ತದಲ್ಲೇ ಮುಖ್ಯ ಆರೋಪಿಯನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿರುವುದು ಹಾಗೂ ಮೊದಲ ಬಾರಿಯ ಮರಣೋತ್ತರ ಪರೀಕ್ಷೆ ಸಮರ್ಪಕವಾಗಿ ನಡೆದಿಲ್ಲ ಎ೦ಬ ಆರೋಪಗಳು ಪಿಎಸ್ಐ ವಿರುದ್ಧ ತೀವ್ರಗೊ೦ಡಿವೆ.

ಪಿಎಸ್ಐ ಸುನೀಲ್ ಬಂಡಿವಡ್ಡರ್
ಪ್ರೀತಿಸುವಂತೆ ಪೀಡಿಸಿದ್ದಲ್ಲದೆ, ಯುವತಿಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಮೃತಳ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ತಿಳಿಯಲು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸುವಂತೆ ಕುಟುಂಬಸ್ಥರು ಪಟ್ಟು ಹಿಡಿದಿದ್ದರು.
ಪ್ರಕರಣ ದಾಖಲಾದ ಆರಂಭಿಕ ಹಂತದಲ್ಲೇ ತನಿಖಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಮತ್ತು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಮೃತ ಯುವತಿಯ ಕುಟುಂಬಸ್ಥರು ಹಾಗೂ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಕುರಿತು ಪೊಲೀಸ್ ಮೇಲಾಧಿಕಾರಿಗಳಿಗೆ ಲಿಖಿತ ದೂರು ನೀಡಲಾಗಿತ್ತು. ಘಟನೆಯ ಸುತ್ತ ರಾಜಕೀಯ ಒತ್ತಡ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಕರ್ತವ್ಯ ಲೋಪದ ಆಧಾರದ ಮೇಲೆ ಪಿಎಸ್ಐ ಸುನೀಲ್ ಬಂಡಿವಡ್ಡರ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ವಿವಿಧ ಸಂಘಟನೆಗಳು ಒತ್ತಾಯಿಸಿವೆ


