

ಕೋಲಾರ:- ಪತ್ರಕರ್ತರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಸರ್ಕಾರದಿಂದ ಜಮೀನು ಮಂಜೂರು ಮಾಡುವ ಸಾಧ್ಯತೆಗಳ ಪರಿಶೀಲಿಸುವುದರ ಜೊತೆಗೆ ಕೆಯುಡಿಎ ಸೇರಿದಂತೆ ಪರ್ಯಾಯ ಮಾರ್ಗದಿಂದಲೂ ನಿವೇಶನ ಒದಗಿಸಲು ಪರಿಶೀಲಿಸಿ ಕ್ರಮವಹಿಸುವುದಾಗಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭರವಸೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಆಶ್ರಯದಲ್ಲಿ ಕೋಲಾರ ಸುತ್ತ ಮುತ್ತ ಪತ್ರಕರ್ತರಿಗೆ ಸೂರು ಕಟ್ಟಿಕೊಳ್ಳಲು ಅಗತ್ಯವಾದ 5 ಎಕರೆ ಜಮೀನು ಮಂಜೂರಾತಿ ಕೋರಿ ಮಾಡಿದ ಮನವಿಗೆ ಸ್ಪಂದಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರದಿಂದ ಜಮೀನು ಪಡೆಯುವ ಪ್ರಯತ್ನದ ಜೊತೆಗೆ ಪರ್ಯಾಯವಾಗಿಯೂ ನಿವೇಶನ ಪಡೆದುಕೊಳ್ಳಲು ಪ್ರಯತ್ನಿಸಿ ಎಂದು ಸೂಚಿಸಿದ ಡಿಸಿಯವರು, ಮೈಸೂರಿನಲ್ಲಿ ನಗರಾಭಿವೃದ್ದಿ ಪ್ರಾಧಿಕಾರ ಮೂಡಾದಿಂದ ನಿವೇಶನ ಒದಗಿಸಿರುವ ಕುರಿತು ಉದಾಹರಿಸಿದರು.
ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮನವಿ ಸಲ್ಲಿಸಿ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಪತ್ರಕರ್ತರಿಗೆ ಸೂರು ಇಲ್ಲವಾಗಿದೆ, ಬಾಡಿಗೆ ಮನೆಯಲ್ಲೇ ಅನೇಕರು ಜೀವನ ಸಾಗಿಸುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ 5 ಎಕರೆ ಜಮೀನು ನೀಡಿದಲ್ಲಿ ಅಲ್ಲಿ ನಿವೇಶನಗಳನ್ನು ಸಹಕಾರ ಸಂಘದಿAದಲೇ ಅಭಿವೃದ್ದಿಪಡಿಸಿ ಅರ್ಹ ಪತ್ರಕರ್ತರಿಗೆ ವಿತರಿಸಲು ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.
ಇದಕ್ಕೆ ಸ್ಪಂದಿಸಿದ ಡಿಸಿಯವರು ಸರ್ಕಾರಿ ಜಮೀನು ನೀಡಲು ಅವಕಾಶವಿದ್ದಲ್ಲಿ ಪರಿಶೀಲಿಸಿ ಕ್ರಮವಹಿಸುವುದಾಗಿ ನುಡಿದು, ಇದರ ಜೊತೆಗೆ ಖಾಸಗಿ ಸಹಭಾಗಿತ್ವ, ನಗರಾಭಿವೃದ್ದಿ ಪ್ರಾಧಿಕಾರ, ನಗರಸಭೆ ಮತ್ತಿತರ ಮೂಲಗಳಿಂದಲೂ ನಿವೇಶನ ಪಡೆಯಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.
ನಗರದ ಮಧ್ಯಭಾಗದಲ್ಲಿ ಪತ್ರಕರ್ತರ ಸಹಕಾರ ಸಂಘಕ್ಕೆ ನಗರಸಭೆಯಿಂದ ನಿವೇಶನ ಪಡೆದುಕೊಳ್ಳಲು ಅವಕಾಶವಿದ್ದು, ಈ ಕುರಿತು ಪರೀಶೀಲಿಸುವುದಾಗಿ ಡಿಸಿಯವರು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್, ಸಹಕಾರ ಸಂಘದ ನಿರ್ದೇಶಕರು ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ಕುಮಾರ್, ಖಜಾಂಚಿ ರಾಜೇಂದ್ರ ಸಿಂಹ, ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಷಮ್ಗರ್, ಪತ್ರಕರ್ತರಾದ ಚಾಂದ್ಪಾಷ, ಸಿ.ವಿ.ನಾಗರಾಜ್, ಬಾಲನ್, ಮುಳಬಾಗಿಲು ನಾಗರಾಜಯ್ಯ, ಶ್ರೀನಿವಾಸಪುರ ಶಬ್ಬೀರ್ ಅಹಮದ್, ಸತೀಶ್, ಶಿವಕುಮಾರ್, ಮದನ್, ವಿನೋದ್, ಕೋಲಾರ ನ್ಯೂಸ್ ಚಂದ್ರು, ಶ್ರೀಕಾಂತ್ ಮತ್ತಿತರರಿದ್ದರು.


