

ಕುಂದಾಪುರ ; ದಿನಾಂಕ : 12.06.2026ರ ಶುಕ್ರವಾರದಂದು ಹೋಲಿ ರೋಸರಿ ಆಂಗ್ಲ ಮಾದ್ಯಮ ಶಾಲೆ ಕುಂದಾಪುರ ಇಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ ಸಮಾರಂಭವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
ಶಾಲಾ ಸಂಚಾಲಕರು ಹಾಗೂ ಸ್ಥಳೀಯ ಚರ್ಚಿನ ಪ್ರಧಾನ ಧರ್ಮಗುರುಗಳೂ ಆಗಿರುವ ಅತೀ ವಂದನೀಯ ಗುರು ಪೌಲ್ ರೇಗೋರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಗತಿ ಮಹಿಳಾ ವಿವಿದೋದ್ಧೇಶ ಸಹಕಾರಿ ಬ್ಯಾಂಕ್, ಶಾಲಾ ಮುಖ್ಯೋಪಾಧ್ಯಾಯರಾಗಿರುವ ವಂದನೀಯ ಗುರು ರೋಲ್ವಿನ್ ಫೆರ್ನಾಂಡೀಸ್, ಶಾಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಶೈಕ್ಷಣಿಕ ಮಾರ್ಗದರ್ಶಕರಾಗಿರುವ ಶ್ರೀಮತಿ ನೀತಾ ಮೆಂಡೋನ್ಸಾ ಮತ್ತು ಶ್ರೀ. ಲೂವಿಸ್ ಪ್ರಶಾಂತ್ ರೆಬೆರೋ ಹಾಗೂ ವಿದ್ಯಾರ್ಥಿ ಮಂತ್ರಿಮಂಡಲದ ಮಾರ್ಗದರ್ಶಕರಾಗಿರುವ ಸಹ ಶಿಕ್ಷಕಿ ಶ್ರೀಮತಿ ಮಮತಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರು, ಮುಖ್ಯ ಅತಿಥಿಗಳು, ಶೈಕ್ಷಣಿಕ ಮಾರ್ಗದರ್ಶಕರು, ಶಾಲಾ ಮಂತ್ರಿಮಂಡಲದ ಮಾರ್ಗದರ್ಶಕರು, ಹೊಸದಾಗಿ ಆಯ್ಕೆಯಾಗಿರುವ ವಿದ್ಯಾರ್ಥಿ ನಾಯಕಿ ಹಾಗೂ ಉಪನಾಯಕರೊಂದಿಗೆ ಶಾಲಾ ಸಂಚಾಲಕರು ಹಾಗೂ ಇಂದಿನ ಈ ಕಾರ್ಯಕ್ರಮದ ಅಧ್ಯಕ್ಷರಾಗಿರುವ ಅತೀ ವಂದನೀಯ ಗುರು ಪೌಲ್ ರೇಗೋರವರು ವೈವಿಧ್ಯಮಯ ರೀತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲಾ ಮುಖ್ಯೋಪಾಧ್ಯಾಯರು, ಶಾಲಾ ಸಂಚಾಲಕರು ಹಾಗೂ ಮುಖ್ಯ ಅತಿಥಿಗಳು ಸಂಸತ್ತಿನ ಎಲ್ಲಾ ಪದಾಧಿಕಾರಿಗಳಿಗೆ ಪದನಾಮ ಪದಕವನ್ನು ತೊಡಿಸಿ ಶಾಲಾ ಸಂಸತ್ತು ಬಹಳ ಸುಂದರವಾಗಿ ಉದ್ಘಾಟನೆಗೊಂಡಿತು. ಶಾಲೆಯ ಶಿಸ್ತು ಸುವ್ಯವಸ್ಥೆಗೆ ವಿದ್ಯಾರ್ಥಿ ಸಂಸತ್ತು ಅತೀ ಅವಶ್ಯಕ. ಒಬ್ಬ ನಿಜವಾದ ನಾಯಕನೆಂದರೆ ದಾರಿಯನ್ನು ತಿಳಿದಿರುವವನು ಹಾಗೂ ಇತರರಿಗೆ ಮಾರ್ಗದರ್ಶಕನಾಗಿ ಮುನ್ನೆಡೆಸುವವನು ಆಗಿರುತ್ತಾನೆ ಎಂಬುವುದಾಗಿ ವಿದ್ಯಾರ್ಥಿ ನಾಯಕ ಹಾಗೂ ಉಪನಾಯಕನಿಗೆ ಕಿವಿ ಮಾತನ್ನು ಹೇಳಿ ಶಾಲಾ ಸಂಚಾಲಕರು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಪ್ರಗತಿ ಮಹಿಳಾ ವಿವಿದೋದ್ಧೇಶ ಸಹಕಾರಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಯುತ ರಾಘವೇಂದ್ರ ಕುಲಾಲ್ ಹೆಮ್ಮಾಡಿರವರು ವಿದ್ಯಾರ್ಥಿಗಳ ಶಿಸ್ತು ಮತ್ತು ಕಾರ್ಯಕ್ರಮವು ಅತ್ಯುತ್ತಮವಾಗಿದೆ. ಇಂದಿನ ಮಕ್ಕಳು ಮುಂದಿನ ದೇಶದ ಪ್ರಜೆಗಳಾಗಿರುವುದರಿಂದ ವಿದ್ಯಾರ್ಥಿ ದೆಸೆಯಲ್ಲಿ ಸಂಸತ್ತಿನ ಜ್ಞಾನ ಇರಬೇಕು, ನಿಮಗೆ ಸಿಕ್ಕಿರುವ ಶಾಲಾ ಸಂಸತ್ತಿನ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ನಾಯಕರಾಗಿ ಎಂಬುವುದಾಗಿ ಹೇಳಿ ಶಾಲಾ ಸಂಸತ್ತಿಗೆ ಶುಭ ಹಾರೈಸಿದರು. ಅದರ ಜೊತೆಗೆ ಎಸ್.ಎಸ್.ಎಲ್.ಸಿ. ಯಲ್ಲಿ 95% ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ರೂ.5000/- ಹಾಗೂ 90% ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ರೂ.2500/-ವನ್ನು ಬಹುಮಾನ ರೂಪದಲ್ಲಿ ನೀಡುವುದಾಗಿ ಹೇಳಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.
ವಿದ್ಯಾರ್ಥಿಗಳಾದ ಡಿಲನ್ ಮತ್ತು ಸ್ತುತಿ ಕಾರ್ಯಕ್ರಮ ನಿರೂಪಿಸಿದರು. ಹಿಂದಿನ ವರ್ಷದ ವಿದ್ಯಾರ್ಥಿ ಉಪನಾಯಕಿ ಮುಜ್ನಾಮ್ ರವರು ಸ್ವಾಗತಿಸಿದರು. ವಿದ್ಯಾರ್ಥಿ ನಾಯಕಿ ಶಿವದಾ ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ಮಮತಾ ಮತ್ತು ಶ್ರೀಮತಿ ರೆನಿಶಾರವರು ಮಕ್ಕಳಿಗೆ ಮಾರ್ಗದರ್ಶನ ನೀಡಿ ಕಾರ್ಯಕ್ರಮ ಆಯೋಜಿಸಿದರು. ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

























