

ಉಡುಪಿ, ತಾ.05,11.2023 ರಂದು ತೊಟ್ಟಂ ಸಂತಾ ಅನ್ನಮ್ಮ ಸಭಾಂಗಣದಲ್ಲಿ ಚರ್ಚಿನ ಅಂತರ್ ಧರ್ಮಿಯ ಆಯೋಗ ಹಾಗು ಸರ್ವ ಧರ್ಮ ಸೌಹಾರ್ದ ಸಮಿತಿಯ ಸಹಯೋಗದೊಂದಿಗೆ ಸರ್ವಧರ್ಮ ದೀಪಾವಳಿ ಹಬ್ಬವನ್ನು, ದೀಪದಿಂದ ದೀಪವ ಹಚ್ಚೋಣ ಪ್ರೀತಿಯಿಂದ ಪ್ರೀತಿಯ ಹಂಚೋಣ ಎಂಬ ಧ್ಯೇಯ ವಾಕ್ಯದೊಂದಿಗೆ ತುಂಬಾ ಸಡಗರದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೊರವರು ವಹಿಸಿದ್ದರು.
ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಶ್ರೀ ಪಾಂಡುರಂಗ ರಾವ್ ಪ್ರಧಾನ ಅರ್ಚಕರು ಶ್ರೀ ದುರ್ಗಾ ‘ ಪರಮೇಶ್ವರಿ ದೇವಸ್ಥಾನ, ಬಡಾನಿಡಿಯೂರು. , ಮೌಲಾನಾ ಇಮ್ರಾನುಲ್ಲಾ ಖಾನ್ ಮನ್ಸೂರಿ ಧರ್ಮಗುರುಗಳು ಜಾಮಿಯಾ ಮಸೀದಿ ಸಯ್ಯಾದಿನಾ ಅಬೂಬಕರ್ ಸಿದ್ದೀಕ್ ಮಲ್ಪೆ, ಶ್ರೀಮತಿ ಸುಧಾ ಕೆ ಎಸ್ ಶಿಕ್ಷಕಿ ಸರ್ಕಾರಿ ಒರಿಯ ಪ್ರಾಥಮಿಕ ಶಾಲೆ ಬಡಾನಿಡಿಯೂರು, ಕಾರ್ಯಕ್ರಮದಲ್ಲಿ ಭಾಗಸಿದ್ದರು.
ಚರ್ಚಿನ ಗಾಯನ ಮಂಡಳಿಯವರು ಪ್ರಾರ್ಥನಾ ಗೀತೆಯ ಮೂಲಕ ದೇವರ ಸ್ಮರಣೆಯನ್ನು ಮಾಡಿದರು. ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿಯ ಉದ್ಘಾಟನೆಯನ್ನು ತ್ರಿವರ್ಣ ಧ್ವಜದ ಬಣ್ಣದ ಬಲೂನುಗಳನ್ನು ತೇಲಿ ಹಾರಿಸುವ ಮೂಲಕ ಉದ್ಘಾಟಿಸಲಾಯಿತು. ಹಾಗೂ ಸರ್ವ ಧರ್ಮ ದೀಪಾವಳಿ ಹಬ್ಬದ ಆಚರಣೆಯನ್ನು ತೊಟ್ಟಂ ಸಂತಾ ಅನ್ನಮ್ಮ ದೇವಾಲಯ ಧರ್ಮಗುರುಗಳು ಪೂಜ್ಯ ಡೆನಿಸ್ ಡೇಸಾರವರು ಬ್ರಹತ್ ಗೂಡುದೀಪವನ್ನು ಮೇಲಕ್ಕೇರಿಸಿ, ಪ್ರಾಸ್ತಾವಿಕ ನುಡಿಗಳ ಸಂದೇಶದಲ್ಲಿ ’ಮನುಷ್ಯತ್ವದ ದೀಪ, ಸಾಮರಸ್ಯದ ದೀಪವನ್ನು ಮತ್ತೆ ಬೆಳಗಿಸುವ ಹಬ್ಬವೇ ದೀಪಾವಳಿ. ಸಮಾನತೆ, ಸಾಮರಸ್ಯ, ಸಹೋದರತೆ, ಸಹಬಾಳ್ವೆಯ ಸಂಬಂಧದೊಂದಿಗೆ ನಾವೆಲ್ಲರೂ ಬದುಕಬೇಕು. ಸಮಿತಿಯ ಉದ್ದೇಶ ಬರಿ ಹಬ್ಬ ಹರಿದಿನ ಮಾಡುವುದು ಮಾತ್ರವಲ್ಲ. ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿ. ಸಾಮಾಜಿಕ ಅಭಿವೃದ್ಧಿಯನ್ನು ಮಾಡುವುದು ಸೌಹಾರ್ದ ಸಮಿತಿಯ ಉದ್ದೇಶ ಹಾಗೂ ಎಲ್ಲ ಧರ್ಮದ ಸಾರಾಂಶ ಎಂದು ನುಡಿದರು.
ಗೌರವಾನ್ವಿತ ಮುಖ್ಯ ಅಥಿತಿ ಶ್ರೀಮತಿ ಸುಧಾ ಕೆ ಎಸ್ ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಾನಿಡಿಯೂರು ಇವರು ದೀಪಾವಳಿ ಹಬ್ಬ ಅಂದರೆ ಅನ್ಯಾಯದ ವಿರುದ್ಧ ನ್ಯಾಯದ, ಸುಳ್ಳಿನ ವಿರುದ್ಧ ಸತ್ಯದ, ದುಷ್ಟಶಕ್ತಿಯ ವಿರುದ್ಧ ಒಳ್ಳೆಯತನದ ಹಾಗೂ ಅಂಧಕಾರದ ವಿರುದ್ಧ ಬೆಳಕಿನ ಗೆಲುವು ಆಗಿದೆ. ಸರ್ವ ಧರ್ಮದ ಜನರೆಲ್ಲರೂ ಇಲ್ಲಿ ಸೇರಿರುವುದು ಇಡೀ ಭಾರತ ದೇಶ ತನ್ನ ಕಣ್ಣ ಮುಂದಂತಿದೆ’ ಎಂದು ಹಿತವಚನ ನುಡಿದರು.
ಮೌಲಾನಾ ಇಮ್ರಾನುಲ್ಲಾ ಮಸೀದಿ ಸಯ್ಯದಿನಾ ಅಬೂಬಕರ್ ಸಿದ್ದೀಕ್ ಮಲ್ಪೆ, ಇನ್ನೋರ್ವ ಅತಿಥಿಯವರು ತಮ್ಮ ಹಿತನುಡಿಯಲ್ಲಿ ’ದೀಪಾವಳಿ ಹಬ್ಬ ಅಂದರೆ ಕತ್ತಲೆ ವಿಜಯದ ಸಂಕೇತದ ಹಬ್ಬ, ಧರ್ಮ ಧರ್ಮಗಳ ನಡುವೆ ಇರುವ ಕತ್ತಲೆ ಹೋಗಲಾಡಿಸಿ ಜ್ಞಾನವೆಂಬ ಬೆಳಕನ್ನು ಹರಿಸುವ ಹಬ್ಬ. ಸರ್ವಧರ್ಮ ಸೌಹಾರ್ದ ಸಮಿತಿಯ ಮುಖಾಂತರ ಜಾತಿ ಧರ್ಮ ಎಂಬ ಭೇದಭಾವ ಮರೆತು ಪರೋಪಕಾರಿ ಜೀವನ ನಡೆಸಲು ಸಹಕಾರಿಯಾಗಬೇಕು.’ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೊರವರು ತಮ್ಮ ಹಿತನುಡಿಯಲ್ಲಿ ’ಬೆಳಕು ಎಂದರೆ ಮಾರ್ಗದರ್ಶಿ, ಎಚ್ಚರಿಕೆಯ ಸಂಕೇತ. ಜಗತ್ತಿಗೆ ನಾವು ಬೆಳಕಾಗಬೇಕು. ನಾವು. ಬದುಕಿನಲ್ಲಿ ಸೂರ್ಯನ ಕಿರಣವಾಗಬೇಕು. ನಾವೆಲ್ಲರೂ ನಮ್ಮ ಒಳ್ಳೆಯ ವ್ಯಕ್ತಿತ್ವದಿಂದ ಜಗತ್ತಿಗೆ ಬೆಳಕಾಗಬೇಕೇ ಹೊರತು ಕೊಳಕಾಗಬಾರದು. ಪರರಿಗೆ ಸದಾ ಒಳಿತನ್ನು ಮಾಡು, ಒಳಿತನ್ನು ಬಯಸು, ಒಳಿತನ್ನೇ ಯೋಚಿಸು. ನಾವೆಲ್ಲರೂ ಪರಸ್ಪರ ಪ್ರೀತಿ ಸೌಹಾರ್ದದಿಂದ ಬಾಳೋಣ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮೂರೂ ಧರ್ಮದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಜಾಮಿಯಾ ಮಸೀದಿ ಸಯ್ಯದಿನಾ ಅಬೂಬಕರ್ ಸಿದ್ದೀಕ್ , ಮಲ್ಪೆ ಮಕ್ಕಳಿಂದ ಸರ್ವಧರ್ಮ ಗೀತೆ, ಪ್ರಶಾಂತ್ ಬಡಾನಿಡಿಯೂರು ಇವರ ಸಹಯೋಗದಲ್ಲಿ, ಚಿಕ್ಕ ಮೇಳದ ವತಿಯಿಂದ ಯಕ್ಷಗಾನ ತುಣುಕಿನ ಪ್ರದರ್ಶನ. ಪ್ರವೀಣ್ ಗಾಣಿಗ ಮತ್ತು ಬಳಗ, ಸರಸ್ಪತಿ ಸಾಂಸ್ಕೃತಿಕ ಕಲಾ ತಂಡ ವಡಬಾಂಡೇಶ್ವರ, ಮಲ್ಪೆ ಪತಿಯಿಂದ ಸುಗ್ಗಿ ಕುಣಿತ, ಕಂಗಿಲು ನೃತ್ಯ ಹಾಗೂ ಐಸಿವೈಎಂ ಮತ್ತು ವೈಸಿಎಸ್ ಸದಸ್ಯರಿಂದ ಸಮೂಹ ನೃತ್ಯ ಪ್ರದರ್ಶನದೊಂದಿಗೆ ಮನರಂಜಿಸಲಾಯಿತು.
ಅಂತರ್ ಧರ್ಮಿಯ ಆಯೋಗದ ಸಂಚಾಲಕರಾದ ಶ್ರೀ ಆಗ್ನೆಲ್ ಫೆರ್ನಾಂಡಿಸ್ ರವರು ಅತಿಥಿಗಳನ್ನು ಸ್ವಾಗತಿಸಿ, ಸಂತಾ ಅನ್ನಮ್ಮ ದೇವಾಲಯದ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸುನಿಲ್ ಫೆರ್ನಾಂಡಿಸ್ ರವರು ಧನ್ಯವಾದ ಸಮರ್ಪಣೆ ಮಾಡಿ, ಲೆಸ್ಬಿ ಆರೋಜ ತೊಟ್ಟಂ ಹಾಗೂ ಪ್ರವೀಣ್ ಚಂದ್ರ ತೋನ್ಸೆ ಕಾರ್ಯ ಕ್ರಮ ನಿರೂಪಣೆ ಮಾಡಿದರು. ಸಿಹಿತಿಂಡಿ ಮತ್ತು ತಂಪು ಪಾನೀಯ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಒಟ್ಟು 600, ಜನರು ಪಾಲ್ಗೊಂಡು. ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದರು.










































































































































