

ಹಳ್ಳಿಯ ಜೀವನ ಜನರನ್ನು ಒಳ್ಳೆಯ ಆರೋಗ್ಯವಂತರನ್ನಾಗಿ ಮಾಡುತ್ತದೆ. ಮನುಷ್ಯ ಆರೋಗ್ಯವಂತನಾಗಿ ಬದುಕಬೇಕಾದರೆ ಹಳ್ಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಓಡಾಡಬೇಕು. ಇಂದಿನ ಮಕ್ಕಳಿಗೆ ಹಳ್ಳಿ ಜೀವನದ ಪರಿಚಯವಿಲ್ಲ. ಆದರೆ ಈ ರೀತಿಯ ಕ್ಯಾಂಪ್ಗಳನ್ನು ಶಾಲೆಗಳಲ್ಲಿ ಆಯೋಜಿಸುವುದರಿಂದ ಮಕ್ಕಳಿಗೆ ಹಳ್ಳಿ ಜನರ ಬದುಕಿನ ಪರಿಕಲ್ಪನೆಯನ್ನು ತಿಳಿಸಲು ಸಾಧ್ಯ ಹಾಗೂ ಆರೋಗ್ಯ ಮತ್ತು ಶಿಕ್ಷಣ ವ್ಯಾಪಾರೀಕರಣವಾದರೆ ಯಾವುದೇ ದೇಶ ಪ್ರಗತಿ ಕಾಣಲು ಸಾಧ್ಯವಿಲ್ಲವೆಂದು ಕುಂದಾಪುರದ ಪ್ರಸಿದ್ಧ ನ್ಯಾಯವಾದಿ, ಉತ್ತಮ ವಾಗ್ಮಿಯೂ ಆಗಿರುವ ತಲ್ಲೂರು ಬಾಲಚಂದ್ರ ಶೆಟ್ಟಿಯವರು ಮಾತನಾಡಿದರು.
ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್. ಆಂಗ್ಲ ಮಾಧ್ಯಮ ಶಾಲೆಗಳು ಆಯೋಜಿಸುತ್ತಿರುವ “ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ “ ಸೀಸನ್ – 3 ಕಾರ್ಯಕ್ರಮವನ್ನು ಹಳ್ಳಿಯ ಸೊಗಡು ಬಿಂಬಿಸುವ ಬೀಸುಕಲ್ಲಿನಲ್ಲಿ ಉದ್ದು ಬೀಸುವ ಮೂಲಕ ಉದ್ಘಾಟಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಶಿಕ್ಷಕಿ ರೇಖಾ ಕೆ.ಯು ಉಪಸ್ಥಿತರಿದ್ದರು.
ಹಾಗೆಯೇ ಮಧ್ಯಾಹ್ನದ ಅವಧಿಯ ಸಂಪನ್ಮೂಲ ವ್ಯಕ್ತಿಯಾಗಿರುವ ಉರಗ ತಜ್ಞ ಗುರುರಾಜ್ ಸನಿಲ್ ರವರು ಆಗಮಿಸಿ, ವಿಭಿನ್ನ ಪ್ರಕಾರದ ಹಾವುಗಳ ಪರಿಚಯ, ಅವುಗಳ ಜೀವನ ಕ್ರಮ ಮತ್ತು ಅವುಗಳನ್ನು ಸಂರಕ್ಷಿಸುವ ಅವಶ್ಯಕತೆಯನ್ನು ಶಿಬಿರಾರ್ಥಿಗಳಿಗೆ ದೃಶ್ಯ ಸರಣಿಗಳ ಮೂಲಕ ಅರುಹಿದರು. ಶಿಬಿರಾರ್ಥಿಗಳು ವಿವಧ ಬಗೆಯ ಹಾವುಗಳನ್ನು ನೋಡಿ ಸಂಭ್ರಮಿಸಿದರು. ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಹಾಗೂ ಎಲ್ಲಾ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಕ್ರಾರ್ಯಕ್ರಮವನ್ನು ಶಿಕ್ಷಕಿ ಸ್ವಪ್ನ ಸತೀಶ್ ಮತ್ತು ಕಿರಣ್ ನಿರೂಪಿಸಿದರು.








































































































































































