

ಕುಂದಾಪುರ: ಪ್ರತಿ ಕಾಲೇಜುಗಳಲ್ಲಿ “ಡ್ರಗ್ಸ್ ವಿರೋಧಿ ಸಂಘ’ ವನ್ನು ಆರಂಭಿಸಿ ಅದರ ಮೂಲಕ ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಗೃತಿಯನ್ನು ಮೂಡಿಸಬೇಕು ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕೊಡ್ಗಿ ಅಭಿಪ್ರಾಯಪಟ್ಟರು.
ಅವರು ಆಗಸ್ಟ್ 5ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕೇಂದ್ರ ಸರ್ಕಾರದ ಯುವಜನ ಮತ್ತು ಕ್ರೀಡಾ ಸಚಿವಾಲಯ ಮೈ ಭಾರತ್, ಉಡುಪಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಮಹಾವಿಷ್ಣು ಯೂಥ್ ಕ್ಲಬ್, ಹೆರಗೋಡು ಕಟ್ಬೆಲ್ತೂರು, ಇವರು ಸಹಯೋಗದಲ್ಲಿ ಆಯೋಜಿಸಿದ್ದ ‘ನಶಾ ಮುಕ್ತ ಯುವ” ವಿಕಸಿತ ಭಾರತಕ್ಕಾಗಿ ‘ ಕಾರ್ಯಕ್ರಮದಲ್ಲಿ ಉದ್ಧೇಶಿಸಿ ಮಾತನಾಡಿದರು.
ಶಾಲಾ ಕಾಲೇಜುಗಳ ಮೂಲಕ ಈ ತರಹದ ಕಾರ್ಯಕ್ರಮಗಳು ನಡೆದಾಗ ಡ್ರಗ್ಸ್ ವಿರೋಧಿ ಅಭಿಯಾನಕ್ಕೆ ಅರ್ಥಪೂರ್ಣ ಯಶಸ್ಸು ದೊರೆಯುತ್ತದೆ. ಉತ್ತಮ ಜೀವನ ಪಡೆಯುವತ್ತ ಗಮನಹರಿಸಬೇಕು ಭವಿಷ್ಯದ ಭಾರತದ ಉತ್ತಮ ಪ್ರಜೆಗಳಾಗುವ ಮತ್ತು 2047ರ ವಿಕಸಿತ ಭಾರತದ ಕನಸು ನನಸಾಗುವತ್ತ ಹೆಜ್ಜೆ ಇಡಬೇಕು ಎಂದು ಕರೆ ನೀಡಿದರು. ಮಾದಕ ವಸ್ತುಗಳ ಸೇವನೆಯಿಂದ ಸಮಾಜಕ್ಕೆ, ಕುಟುಂಬಕ್ಕೆ, ಹೊರೆಯಾಗದೆ ನಿಮ್ಮ ಸುಂದರ ಭವಿಷ್ಯವನ್ನು ರೂಪಿಸಿಕೊಳ್ಳಲು ಈ ಅಮೂಲ್ಯ ವಿದ್ಯಾರ್ಥಿ ಜೀವನವನ್ನು ಬಳಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಕುಂದಾಪುರ ಪೋಲಿಸ್ ಠಾಣೆಯ ಪಿಎಸ್ಐ ನಂಜಾನಾಯ್ಕ್ ಅವರು ಮಾತನಾಡಿ ವಿಕಸಿತ ಭಾರತಕ್ಕಾಗಿ ನಶಾ ಮುಕ್ತ ಯುವ ಈ ಕಾರ್ಯಕ್ರಮದ ಮೂಲಕ ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಗೃತಿಯನ್ನು ಮೂಡಿಸುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಅದರಲ್ಲೂ ವಿಶೇಷವಾಗಿ ತಂತ್ರಜ್ಞಾನ ಯುಗದಲ್ಲಿ ಯುವ ಮನಸ್ಸುಗಳಿಗೆ ಸ್ಪರ್ಧೆಗಳನ್ನು ಆಯೋಜಿಸಿರುವುದು ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿಗಳಿಂದ ಜಾಗೃತಿ ಮೂಡಿಸಲು ನೆರವಾಗುತ್ತದೆ. ಮಾದಕ ವ್ಯಸನದ ವಿರುದ್ಧ ವಿಡಿಯೋ, ರೀಲ್ಸ್, ಪೋಸ್ಟರ್ ಗಳ ಮೂಲಕ ಜಾಗೃತಿ ಮೂಡಲಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನಮ್ಮ ಭೂಮಿ ಸಿ.ಡಬ್ಲೂ.ಸಿ. ಇದರ ಉಪ ನಿರ್ದೇಶಕರಾದ ಶಿವಾನಂದ ಶೆಟ್ಟಿ, ನಮ್ಮ ಭೂಮಿಯ ಕೃಪಾ ಎಂ ಎನ್, ಕುಂದಾಪುರದ ವಿದ್ಯುತ್ ಗುತ್ತಿಗೆದಾರರಾದ ಕೆ.ಆರ್.ನಾಯಕ್, ಉಡುಪಿ ಜಿಲ್ಲಾ ರಾಷ್ಟ್ರೀಯ ಸೇವಾ ಯೋಜನೆಯ ನಿರ್ದೇಶಕರಾದ ಡಾ.ರಾಜೇಂದ್ರ ಕೆ. ಹೆರಗೋಡು ಕಟ್ಬೆಲ್ತೂರುನ ಮಹಾವಿಷ್ಣು ಯೂಥ್ ಕ್ಲಬ್ ನ ಗೌರವಾಧ್ಯಕ್ಷ ರಾಘವೇಂದ್ರ ಚರಣ್ ನಾವಡ,
ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರೋಜ ಎಮ್, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ರಾಮಚಂದ್ರ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.
ಕೇಂದ್ರ ಸರ್ಕಾರದ ಯುವಜನ ಮತ್ತು ಕ್ರೀಡಾ ಸಚಿವಾಲಯ ಮೈ ಭಾರತ್ ಇದರ ಉಡುಪಿ ಜಿಲ್ಲಾ ಉಪನಿರ್ದೇಶಕರಾದ ಉಲ್ಲಾಸ್ ಕೆ.ಟಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ನರಸಿಂಹ ಗಾಣಿಗ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ವಂದಿಸಿದರು. ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಕುಂದಾಪ್ರ ಇದರ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.
ಆ ನಂತರ ಕಾಲೇಜು ವಿದ್ಯಾರ್ಥಿಗಳಿಗೆ ‘ಡ್ರಗ್ಸ್ ವಿರೋಧಿ ಅಭಿಯಾನ’ ದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.






