ಶ್ರೀನಿವಾಸಪುರ: ಯರ್ರಂವಾರಿಪಲ್ಲಿ ಸ.ಹಿ.ಪ್ರಾ. ಶಾಲೆಗೆ ಅಗತ್ಯ ಸಂಖ್ಯೆಯ ಶಿಕ್ಷಕರನ್ನು ನೇಮಿಸಿ: ವೈ.ಆರ್.ಶ್ರೀನಿವಾಸರೆಡ್ಡಿ ಆಗ್ರಹ

ಶ್ರೀನಿವಾಸಪುರ: ಯರ್ರಂವಾರಿಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯ ಸಂಖ್ಯೆಯ ಶಿಕ್ಷಕರನ್ನು ನೇಮಿಸಬೇಕು ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈ.ಆರ್.ಶ್ರೀನಿವಾಸರೆಡ್ಡಿ ಆಗ್ರಹಿಸಿದರು.
ಸೋಮವಾರ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಶಾಲಾಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಶಾಲೆಯಲ್ಲಿ 1 ರಿಂದ 7ನೇ ತರಗತಿ ವರೆಗೆ 40 ಮಕ್ಕಳು ಕಲಿಯುತ್ತಿದ್ದಾರೆ. ಶಾಲೆ ಉಳಿಸುವ ಉದ್ದೇಶದಿಂದ ಪೋಷಕರನ್ನು ಕಾಡಿ ಬೇಡಿ ಮಕ್ಕಳನ್ನು ದಾಖಲು ಮಾಡಲಾಗಿದೆ. ಇರುವ ಇಬ್ಬರು ಶಿಕ್ಷಕರ ಪೈಕಿ ಒಬ್ಬ ಶಿಕ್ಷಕಿ ಹೆರಿಗೆ ರಜೆಯಲ್ಲಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡುವುದು ಕಷ್ಟವಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಮಾತನಾಡಿ, ಶಿಕ್ಷಕರ ಸಮಸ್ಯೆ ಕುರಿತು ಇಲಾಖೆ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗುವುದು. ಆದಷ್ಟು ಬೇಗ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಶ್ರೀನಿವಾಸಪುರ – ಬಟ್ಲಗುಟ್ಟಪಲ್ಲಿ ಗ್ರಾಮದಲ್ಲಿ ಗಂಪ ಗಂಗಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ

ಶ್ರೀನಿವಾಸಪುರ ತಾಲ್ಲೂಕಿನ ಬಟ್ಲಗುಟ್ಟಪಲ್ಲಿ ಗ್ರಾಮದಲ್ಲಿ ಸೋಮವಾರ ಗಂಪ ಗಂಗಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು.
ಮುಖಂಡರಾದ ನಾರಾಯಣಸ್ವಾಮಿ, ಸತ್ಯನ್ನ, ನರಸಿಂಹಪ್ಪ, ಎಂ.ಜಿ.ಶಂಕರಪ್ಪ, ನಾರಾಯಣಸ್ವಾಮಿ, ವಿ.ಶಿವಣ್ಣ, ವೆಂಕಟರಾಯಪ್ಪ, ಗಂಗಲಪ್ಪ, ರಾಮಮೂರ್ತಿ, ವೆಂಕಟೇಶಪ್ಪ, ನರಸಿಂಹಪ್ಪ, ಭರತ್, ಸುಧೀರ್, ಅರ್ಚಕ ಡಿ.ಎನ್.ಸಂಪತ್ ಕುಮಾರ್ ಇದ್ದರು.

ಪಶು ಆಹಾರ ಬೆಲೆ ಏರಿಕೆ ಆದೇಶ ವಾಪಸ್ ಪಡೆದು, ಹಾಲಿನ ಬೆಲೆ 50ರೂಪಾಯಿ ನಿಗಧಿ ಮಾಡಿ, ಕಲಬೆರಕೆ ತಡೆಯಲು ಜಿಪಿಆರ್‍ಎಸ್ ಅಳವಡಿಸಿ

ಕೋಲಾರ; ಆ.22: ಪಶು ಆಹಾರ ಬೆಲೆ ಏರಿಕೆ ಆದೇಶ ವಾಪಸ್ ಪಡೆದು ಪ್ರತಿ ಲೀಟರ್ ಹಾಲಿನ ಬೆಲೆ 50ರೂಪಾಯಿ ನಿಗಧಿ ಮಾಡಿ ಬಿಎಂಸಿಗಳಲ್ಲಿ ಹಾಲು ಕಲಬೆರಕೆ ತಡೆಯಲು ಜಿಪಿಆರ್‍ಎಸ್ ಅಳವಡಿಸಬೇಕೆಂದು ರೈತಸಂಘದಿಂದ ಕೋಮುಲ್ ವ್ಯವಸ್ಥಾಪಕ ನಿರ್ದೇಶಕರು ಮಹೇಶ್ ಮನವಿ ನೀಡಿ ಆಗ್ರಹಿಸಲಾಯಿತು.
ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಹೈನೋದ್ಯಮ ದಿನೇದಿನೇ ದುಬಾರಿಯಾಗುತ್ತಿದೆ. ಒಂದು ಹಸು ಸಾಕಾಣಿಕೆ ಮಾಡಲು ಕನಿಷ್ಠಪಕ್ಷ ತಿಂಗಳಿಗೆ 10 ಸಾವಿರ ರೂಪಾಯಿ ಖರ್ಚು ಬರುತ್ತದೆ. ಆದರೆ, ಒಕ್ಕೂಟ ನೀಡುತ್ತಿರುವ ಹಾಲಿನ ಧರಕ್ಕಿಂತ ಹೆಚ್ಚಾಗಿ ಕೈಯಿಂದ ಬಂಡವಾಳ ಹಾಕುವ ಪರಿಸ್ಥಿತಿ ಇರುವ ಸಮಯದಲ್ಲಿ ಹಾಲು ಒಕ್ಕೂಟ ಒಂದು ರೂಪಾಯಿ ಹಾಲಿನ ಬೆಲೆ ಏರಿಕೆ ಮಾಡಿ ಪಶು ಆಹಾರದ ಬೆಲೆಯನ್ನು ಒಂದು ಮೂಟೆಯ ಮೇಲೆ 70ರೂಪಾಯಿ ಏರಿಕೆ ಮಾಡುವ ಮುಖಾಂತರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಆಕ್ರೋಶ ವ್ಯಕ್ತಪಡಿಸಿದರು.
ಮುಂಗಾರು ಮಳೆ ಆರ್ಭಟಕ್ಕೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆ ನೀರಿನಲ್ಲಿ ಕೊಚ್ಚಿಹೋಗಿ ಕೈಗೆ ಸಿಗದ ಸಮಯದಲ್ಲಿ ಕುಟುಂಬದ ಜೀವ ಕಾಪಾಡುತ್ತಿದ್ದ ಹಾಲು ಉತ್ಪಾದನೆಗೂ ಮಾರಕವಾಗುವ ನೀತಿಗಳನ್ನು ಒಕ್ಕೂಟ ಜಾರಿಗೊಳಿಸುತ್ತಿದೆ. ಒಂದು ರೂಪಾಯಿ ಬೆಲೆ ಏರಿಕೆಯ ಬೆನ್ನಲ್ಲಿಯೇ ಖಾಸಗಿ ಪಶು ಆಹಾರ ಮಾರಾಟಗಾರರು ನೂರು ರೂಪಾಯಿ ಏರಿಕೆ ಮಾಡುತ್ತಿದ್ದಾರೆ. ಇದರಿಂದ ಕೈಯಿಂದ ಬಂಡವಾಳ ಹಾಕದೇ ರೈತರು ಹೈನೋದ್ಯಮದಿಂದ ವಿಮುಕ್ತಿ ಹೊಂದುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.


ಸರ್ಕಾರ ಲಕ್ಷಾಂತರ ಕುಟುಂಬಗಳನ್ನು ಹಾಳು ಮಾಡುವ ಮದ್ಯಪಾನಕ್ಕೆ ಹೆಚ್ಚಿನ ಆದ್ಯತೆ ನೀಡುವ ಇವರಿಗೆ ಪೌಷ್ಠಿಕತೆ ಮತ್ತು ಜನರ ಆರೋಗ್ಯ ಕಾಪಾಡುವ ಹಾಲಿನ ಬೆಲೆ ಏರಿಕೆ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ಸರ್ಕಾರ ಕೂಡಲೇ ಲಾಭ ನಷ್ಟದ ಪ್ರಕಾರ ವರದಿ ತರಿಸಿಕೊಂಡು ಪ್ರತಿ ಲೀಟರ್ ಹಾಲಿಗೆ ಕನಿಷ್ಠ ಪಕ್ಷ 50 ರೂಪಾಯಿ ನಿಗಧಿ ಮಾಡಿ ಪಶು ಆಹಾರವನ್ನು ಉಚಿತವಾಗಿ ನೀಡುವ ಮುಖಾಂತರ ಹೈನೋದ್ಯಮವನ್ನು ನಂಬಿರುವ ಲಕ್ಷಾಂತರ ಕುಟುಂಬಗಳ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.


ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಾತನಾಡಿ, ಕೋಲಾರ ಜಿಲ್ಲಾದ್ಯಂತ ಬಿಎಂಸಿಗಳಿಂದ ಬರುವ ಹಾಲು ಕಲಬೆರಕೆ ತಡೆಗಟ್ಟಲು ಪ್ರತಿ ಲಾರಿಗೂ ಜಿಪಿಆರ್‍ಎಸ್ ಅಳವಡಿಸುವ ಮೂಲಕ ಕಲಬೆರಕೆ ದಂಧೆಗೆ ಕಡಿವಾಣ ಹಾಕಿ ಹಾಲಿನ ಗುಣಮಟ್ಟ ಕಾಯ್ದುಕೊಳ್ಳಬೇಕು. ಹಾಗೂ ಒಕ್ಕೂಟದ ದುಂಧುವೆಚ್ಚಗಳಿಗೆ ಕಡಿವಾಣ ಹಾಕಿ ನಷ್ಟದಲ್ಲಿರುವ ಒಕ್ಕೂಟವನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.


ಸಹಕಾರ ಹಾಲು ಉತ್ಪಾದಕರ ಸಂಘಗಳಿಂದ ಬರುವ ಹಾಲಿನ ಗುಣಮಟ್ಟದ ನೆಪದಲ್ಲಿ ನೋ ಪೇಮೆಂಟ್ ಮೂಲಕ ರೈತರಿಗೆ ಹಾಲಿನ ಬೆಲೆ ನೀಡದೆ ಹಾಲನ್ನು ಒಕ್ಕೂಟವೇ ಇರಿಸಿಕೊಂಡಿರುತ್ತಾರೆ. ಆ ಹಾಲಿನಲ್ಲಿ ಉತ್ಪನ್ನಗಳು ತಯಾರಾಗುತ್ತಿಲ್ಲವೇ. ರೈತರಿಗೆ ಬರೆ ಹಾಕಿ ಒಕ್ಕೂಟ ಲಾಭದಲ್ಲಿ ಹಣವನ್ನು ಉಪಯೋಗಿಸಿಕೊಳ್ಳುತ್ತಿದ್ದು, ಕೂಡಲೇ ರೈತರಿಗೆ ಹಣವನ್ನು ವಾಪಸ್ ನೀಡಬೇಕು. 24 ಗಂಟೆಯಲ್ಲಿ ಏರಿಕೆ ಮಾಡಿರುವ ಪಶು ಆಹಾರದ ಬೆಲೆಯನ್ನು ಇಳಿಕೆ ಮಾಡಿ ಕಲಬೆರಕೆ ತಡೆಗಟ್ಟಲು ಬಿಎಂಸಿಗಳ ಲಾರಿಗಳಿಗೆ ಜಿಪಿಆರ್‍ಎಸ್ ಅಳವಡಿಸಿ ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ನಿಲ್ಲಬೇಕೆಂದು ಆಗ್ರಹಿಸಿದರು.


ಮನವಿ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರು ಮಹೇಶ್‍ರವರು , ಒಕ್ಕೂಟದ ಅಧ್ಯಕ್ಷರು ಹಾಗೂ ನಿರ್ದೇಶಕರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಟೆ ಶ್ರೀನಿವಾಸ್, ಮಂಗಸಂದ್ರ ತಿಮ್ಮಣ್ಣ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಫಾರೂಖ್ ಪಾಷ, ಬಂಗಾರಿ ಮಂಜು, ಭಾಸ್ಕರ್, ಸಂತೋಷ್ ಕುಮಾರ್, ಸುನೀಲ್‍ಕುಮಾರ್, ರಾಜೇಶ್, ತೆರ್ನಹಳ್ಳಿ ಆಂಜಿನಪ್ಪ, ಕುವ್ವಣ್ಣ, ವೆಂಕಟೇಶಪ್ಪ, ಅಂಬ್ಲಿಕಲ್ ಮಂಜುನಾಥ್, ಸುಪ್ರೀಂಚಲ, ಮರಗಲ್ ಮುನಿಯಪ್ಪ, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ರಾಮಸಾಗರ ವೇಣು, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ಕಿರಣ್, ಪದ್ಮಮ್ಮ, ವೆಂಕಟಲಕ್ಷ್ಮಮ್ಮ, ವೆಂಕಟಮ್ಮ, ವೇಣು, ಪೊಂಬರಹಳ್ಳಿ ನವೀನ್ ಮುಂತಾದವರಿದ್ದರು.

ಶಿವಮೊಗ್ಗ ಓಪನ್ 3ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಝಾರಾಗೆ ಎರಡು ಪದಕಗಳು

ಕುಂದಾಪುರ: ಅಗಸ್ಟ್ 18 ರಿಂದ 22 ರ ವರೆಗೆ ನಡೆದ  ಶಿವಮೊಗ್ಗ ಓಪನ್ 3 ನೇ ಅಂತರಾಷ್ಟ್ರೀಯ ಕರಾಟೆ 22 ರ ಪಂದ್ಯಾವಳಿಯಲ್ಲಿ 11 ವರ್ಷದ ಝಾರಾ  “ಕುಮೀಟ್”  ಶೈಲಿಯಲ್ಲಿ ಬೆಳ್ಳಿ ಪದಕ ಹಾಗೂ “ಕಟಾ”  ಶೈಲಿಯಲ್ಲಿ ಕಂಚು ಪದಕ ಗಳಿಸಿದ್ದಾರೆ.

ಝಾರಾಗೆ ಕುಂದಾಪುರ ಕುಂಭಾಶಿಯ ಗಣೇಶ ನಗರ ನಿವಾಸಿಗಳಾದ ಮಹಮ್ಮದ್ ಇಮ್ರಾನ್  ಮತ್ತು ಅಸ್ಮಾ ದಂಪತಿಯ ಪುತ್ರಿಯಾಗಿದ್ದಾಳೆ.   

ಇವಳಿಗೆ  ಕೀಯೋಷಿ ಕಿರಣ್ ಕುಂದಾಪುರ, ರೇನ್ಸಿ ಸಂದೀಪ್ ವಿ.ಕಿರಣ್, ಸೇನ್ ಸಾಯಿ ಸಿಹಾನ್ ಶೇಕ್, ಸೇನ್ ಸಾಯಿ ಶಸಾಂಕ್ ಶೆಣೈಟಿ.ಇವರು ತರಬೇತಿ ನೀಡಿದ್ದರು ಇವಳು ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿಯಾಗಿದ್ದಾಳೆ

ಶಿವಮೊಗ್ಗ ಓಪನ್ ಕರಾಟೆ ಪಂದ್ಯಾವಳಿಯ ಕಟಾ ವಿಭಾಗದಲ್ಲಿ ಕುಂದಾಪುರದ ಅರ್ನೊನ್ ಡಿಆಲ್ಮೇಡಾಗೆ ಚಿನ್ನದ ಪದಕ

ಕುಂದಾಪುರ: ಅಗಸ್ಟ್ 18 ರಿಂದ 22 ರ ವರೆಗೆ ನಡೆದ  ಶಿವಮೊಗ್ಗ ಓಪನ್ 3 ನೇ ಅಂತರಾಷ್ಟ್ರೀಯ ಕರಾಟೆ 22 ರ ಪಂದ್ಯಾವಳಿಯ ಕಟಾ ವಿಭಾಗದ 8 ವರ್ಷದ ವಯೋಮಿತಿಯಲ್ಲಿ ಕುಂದಾಪುರದ ಅರ್ನೊನ್ ಡಿಆಲ್ಮೇಡಾ ಚಿನ್ನದ ಪದಕ ಪಡೆದುಕೊಂಡಿದ್ದಾನೆ.

ಈತ ಕುಂದಾಪುರ ಟಿ.ಟಿ. ರಸ್ತೆ ವಿವಾಸಿ ವಿಲ್ಸನ್ ಡಿಆಲ್ಮೇಡಾ ಮತ್ತು ಜ್ಯೋತಿ ಡಿಆಲ್ಮೇಡಾ ದಂಪತಿಯ ಪುತ್ರನಾಗಿದ್ದಾನೆ.

ಇತನಿಗೆ ಕೀಯೋಷಿ ಕಿರಣ್ ಕುಂದಾಪುರ, ರೇನ್ಸಿ ಸಂದೀಪ್ ವಿ.ಕಿರಣ್, ಸೇನ್ ಸಾಯಿ ಸಿಹಾನ್ ಶೇಕ್, ಸೇನ್ ಸಾಯಿ ಶಸಾಂಕ್ ಶೆಣೈಟಿ.ಇವರು ತರ್ಅಬೇತಿ ನೀಡಿದ್ದರು.

 

ಕುಂದಾಪುರದ ದೇವಲ್ಕುಂದದಲ್ಲಿ ಪತ್ನಿಯನ್ನು ಹತ್ಯೆಗೈದು, ಆತ್ಮಹತ್ಯೆ ಮಾಡಿಕೊಂಡ ಪತಿ

ಕುಂದಾಪುರ: ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಲು ತವರು ಮನೆಯಿಂದ ಬಂದಿದ್ದ ಪತ್ನಿಯನ್ನು ಕುಡಿದ ಮತ್ತಿನಲ್ಲಿ ಹತ್ಯೆಗೈದ ಪತಿ ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಇಲ್ಲಿನ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೇವಲ್ಕುಂದ ಶಾಲೆ ಸಮೀಪದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

   ಮುಲತಹ ಸೊರಬ ನಿವಾಸಿ ಪೂರ್ಣಿಮಾ ಆಚಾರ್ಯ (38) ಕೊಲೆಯಾದ ಮಹಿಳೆ. ಕೋಗಾರ್ ನಿವಾಸಿ ರವಿ ಆಚಾರ್ಯ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

   ಮೂಲತ ಸೊರಬ ನಿವಾಸಿ ಆಗಿರುವ ಪೂರ್ಣಿಮಾ ಆಚಾರ್ಯ ಅವರು ಕಳೆದ ಹದಿನಾರು ವರ್ಷಗಳ ಹಿಂದೆ ಕೋಗಾರ್ ಮೂಲದ ರವಿ ಆಚಾರ್ಯ ಅವರೊಂದಿಗೆ ವಿವಾಹವಾಗಿದ್ದರು. ಟಿಪ್ಪರ್ ಚಾಲಕನಾಗಿದ್ದ ರವಿ,  ಹೆಮ್ಮಾಡಿ ಸಮೀಪದ ಬಗ್ವಾಡಿಯಲ್ಲಿ ಟಿಪ್ಪರ್ ಚಾಲಕನಾಗಿ ದುಡಿಯುತ್ತಿದ್ದು, ಪತಿ ಹಾಗೂ ಪತ್ನಿ ತಮ್ಮ ಎರಡು ಮಕ್ಕಳೊಂದಿಗೆ ಮೊದಲು ಇಲ್ಲಿಯೇ ನೆಲೆಸಿದ್ದರು. ಅತೀಯಾದ ಕುಡಿತದ ಚಟ ಅಂಟಿಸಿಕೊಂಡ ರವಿ ಕುಡಿದು ಆಗಾಗ್ಗೆ ಗಲಾಟೆ ಮಾಡುತ್ತಿದ್ದು, ಪತ್ನಿಗೂ ಕಿರುಕುಳ ನೀಡುತ್ತಿದ್ದನು. ಈ ಹಿನ್ನೆಲೆ ಮನೆಯವರು ಮಾತುಕತೆ ನಡೆಸಿ  ಬಳಿಕ ಪತಿಯಿಂದ ದೂರ ಉಳಿದುಕೊಂಡಿದ್ದ ಪತ್ನಿ ಪೂರ್ಣಿಮಾ ತಮ್ಮ ಇಬ್ಬರು ಮಕ್ಕಳೊಂದಿಗೆ ತಾಯಿಯ ಮನೆ ಸೊರಬದಲ್ಲಿ ನೆಲೆಸಿದ್ದರು.

     ಭಾನುವಾರ ಹೆಮ್ಮಾಡಿ ಸಮೀಪದಲ್ಲಿ ಸಂಬಂಧಿಕರ ಸೀಮಂತ ಕಾರ್ಯಕ್ರಮಕ್ಕೆ ಪೂರ್ಣಿಮಾ ಬಂದಿದ್ದರು. ಪತಿ ಕರೆ ಮಾಡಿ ಮನೆಗೆ ಬರುವಂತೆ ಕೇಳಿಕೊಂಡಿದ್ದು, ಪೂರ್ಣಿಮಾ ಕಾರ್ಯಕ್ರಮ ಮುಗಿದ ಬಳಿಕ ಪತಿ ನೆಲೆಸಿದ್ದ ಬಾಡಿಗೆ ಮನೆಗೆ ತೆರಳಿ ತಮ್ಮತಾಯಿಗೆ ಮಾಹಿತಿ ನೀಡಿದ್ದರು. ರಾತ್ರಿ ಪತಿ ಪತ್ನಿ ಮಧ್ಯೆ ಜಗಳವಾಗಿ ಈ ಕೃತ್ಯ ನಡೆದಿರಬಹುದು ಎಂದು ಪೊಲೀಸರ ಶಂಖೆಯಾಗಿದೆ.ಭಾನುವಾರ ರಾತ್ರಿಯಿಂದ ಸೊರಬದಲ್ಲಿ ನೆಲೆಸಿರುವ ಮಕ್ಕಳು ತಾಯಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಅನುಮಾನಗೊಂಡ ಪೂರ್ಣಿಮಾ ಅವರ ತಾಯಿ ಹೆಮ್ಮಾಡಿಯಲ್ಲಿರುವ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಮನೆಗೆ ಹೋಗಿ ನೋಡಿ ಬರುವಂತೆ ತಿಳಿಸಿದ್ದರು.

ಸಂಬಂಧಿಕರು ರಾತ್ರಿ ಹೋಗಿ ನೋಡಿದಾಗ ಲೈಟ್ ಆಫ್ ಇದ್ದ ಕಾರಣ ಮಲಗಿರಬಹುದು ಎಂದು ಅಂದಾಜಿಸಿ ವಾಪಾಸಾಗಿದ್ದರು. ಆದರೆ ಬೆಳಿಗ್ಗೆಯೂ ಕರೆ ಸ್ವೀಕರಿಸದ ಹಿನ್ನೆಲೆ ಮತ್ತೆ ಹೋಗಿ ನೋಡಿದಾಗ ಬಾಗಿಲು ಲಾಕ್ ಆಗಿತ್ತು. ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ ಪೂರ್ಣಿಮಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬಳಿಕ ಹೆಂಚು ತೆಗೆದು ಒಳಗೆ ಹೋಗಿ ನೋಡಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ, ಸಿಪಿಐ ಗೋಪಿಕೃಷ್ಣ, ಠಾಣಾಧಿಕಾರಿ ಪವನ್ ನಾಯ್ಕ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ತನಿಖೆ ಮುಂದುವರೆಸಿದ್ದಾರೆ.

ರಾಜ್ಯದಾತ್ಯಂತ ಮುಂದಿನ 5 ದಿನ ಭಾರೀ ಮಳೆಯಾಗಲಿದೆ- ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಿದೆ.

   ಆಗಸ್ಟ್ 23 ಹಾಗೂ 24 ರಂದು ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಕೂಡ ಹವಾಮಾನ ಇಲಾಖೆ ತಿಳಿಸಿದೆ.

“ಬಾಲವನದ ಜಾದೂಗಾರ” ಕಿರುಚಿತ್ರದ ಟೀಸರ್ ಮತ್ತು ಪೋಸ್ಟರ್ ಬಿಡುಗಡೆ

ಕುಂದಾಪುರ : ಚಲನಚಿತ್ರ ಮಾಧ್ಯಮವು ಸಮಾಜದ ಮೇಲೆ ಶೀಘ್ರ ಪರಿಣಾಮ ಬೀರುವ ಶಕ್ತಿ ಹೊಂದಿದೆ. ಇದರ ಮೂಲಕ ಯಾವುದೇ ಸಂದೇಶಗಳನ್ನು ಜನರಿಗೆ ಸ್ಪಷ್ಟವಾಗಿ ತಲುಪಿಸಬಹುದು. ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ರವರ ಚುತ್ರಗಳಲ್ಲಿ ಸಮಾಜಕ್ಕೆ ಒಳ್ಳೆಯ ಸ್ಪಷ್ಟ ಸಂದೇಶಗಳಿರುತ್ತಿತ್ತು. ಇಂತಹ ಚಿತ್ರಗಳನ್ನು ನೋಡಿ ಅದೆಷ್ಟೋ ಮಂದಿ ಜೀವನದಲ್ಲಿ ಮಹತ್ಸಾಧನೆಗಳನ್ನು ಮಾಡಿದ್ದಾರೆ. ಆದರೆ ಇಂದು ಬಿಡುಗಡೆಗೊಳ್ಳುತ್ತಿರುವ ಹೆಚ್ಚಿನ ಚಿತ್ರಗಳು ಕೇವಲ ಮನೋರಂಜನೆ ಮತ್ತು ವ್ಯಾಪಾರಿ ಉದ್ದೇಶ ಹೊಂದಿದ್ದು, ಸಮಾಜವಿರೋಧಿ ಸಂಗತಿಗಳಿಂದಲೇ ವಿಜೃಂಭಿಸುತ್ತಿವೆ. ಇಂತಹವು ಯುವ ಜನಾಂಗದವರನ್ನು ತಪ್ಪು ದಾರಿಗೆಳೆಯಲು ಪ್ರಚೋದಿಸುತ್ತವೆ. ಇಂತಹ ಕಾಲ ಘಟ್ಟದಲ್ಲಿ, ಅತ್ಯದ್ಭುತ ಜಾದೂಗಾರ, ಕನಸುಗಾರ, ಸಾಧಕ ಡಾ. ಕೋಟ ಶಿವರಾಮ ಕಾರಂತರ ಸಮಾಜಮುಖೀ ಸಂದೇಶವನ್ನು ಮಕ್ಕಳಿಗೆ ತಲುಪಿಸುವ ಮಹತ್ವಾಕಾಂಕ್ಷೆಯಲ್ಲಿ ನಿರ್ಮಿಸಿರುವ “ಬಾಲವನದ ಜಾದೂಗಾರ” ಕಿರುಚಿತ್ರವನ್ನು ಎಲ್ಲರೂ ವೀಕ್ಷಿಸಬೇಕು. ಈ ಚಿತ್ರದ ಮೂಲಕ, ಸರ್ವ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ಸೈ ಎನಿಸಿಕೊಂಡ ಡಾ. ಕಾರಂತರ ಕೃತಿಗಳನ್ನು ಓದುವ, ಅವರ ಆಶಯಗಳನ್ನು ಮೈಗೂಡಿಸಿಕೊಳ್ಳುವ ಸದಾಶಯ ಮಕ್ಕಳಲ್ಲಿ ಮೂಡಲಿ. ಶಿಕ್ಷಣದ ಜೊತೆಗೆ ಮನೋರಂಜನೆಯನ್ನೂ ಒದಗಿಸುವ ಈ ಚಿತ್ರ ಯಶಸ್ವಿಯಾಗಲಿ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಶಿಕ್ಷಣ ತಜ್ಞ ಕೆರಾಡಿ ಚಂದ್ರಶೇಖರ ಶೆಟ್ಟಿ ಹಾರೈಸಿದರು.

ಕುಂದಾಪುರದ ಉದ್ಯಮಿ ಕೆ. ಪಿ. ಶ್ರೀಶನ್ ಅವರು ವಸಂತ ಪ್ರೊಡಕ್ಷನ್ ಹೌಸ್ ಬ್ಯಾನರ್ ನಲ್ಲಿ ನಿರ್ಮಿಸಿರುವ, ಡಾ. ಶಿವರಾಮ ಕಾರಂತರ ಸಾಧನೆಗಳನ್ನು ಪರಿಚಯಿಸುವ ಸಂದೇಶ ಹೊಂದಿರುವ “ಬಾಲವನದ ಜಾದೂಗಾರ” ಕಿರುಚಿತ್ರದ ಟೀಸರ್ ಮತ್ತು ಪೋಸ್ಟರ್ ಗಳನ್ನು ನಗರದಲ್ಲಿ ಬಿಡುಗಡೆಗೊಳಿಸಿ ಅವರು ಶುಭ ಹಾರೈಸಿದರು.

ಕೆರಾಡಿಯ ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಈ ಚಿತ್ರಪ್ರದರ್ಶನ ವ್ಯವಸ್ಥೆಗೊಳಿಸುವುದಾಗಿ ಭರವಸೆ ನೀಡಿದ ಅವರು, ಕೊಲ್ಲೂರು ದೇವಳ ಶಿಕ್ಷಣ ಸಂಸ್ಥೆಗಳಲ್ಲೂ ಪ್ರದರ್ಶನ ವ್ಯವಸ್ಥೆಗೆ ಯತ್ನಿಸುವುದಾಗಿ ತಿಳಿಸಿದರು.

ಮುಖ್ಯ ಅತಿಥಿ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಮಾತನಾಡಿ, ಇಂದು ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಯುವಜನಾಂಗವನ್ನು ಮೊಬೈಲ್ ಮೋಡ್ ನಿಂದ ರೀಡಿಂಗ್ ಮೋಡ್ ಗೆ ತರಲು ಇಂತಹ ಮಹಾನ್ ಸಾಧಕರ ಕುರಿತಾದ ಚಿತ್ರಗಳು ಅವಶ್ಯಕವಿವೆ. ಇದು ಮಕ್ಕಳ ಮೇಲೆ ಧನಾತ್ಮಕ ಪರಿಣಾಮ ಬೀರಬಲ್ಲದು. ಆ ಮೂಲಕ ಕಾರಂತರ ಸಾಧನೆ ಅವರಿಗೆ ಸ್ಫೂರ್ತಿ ತುಂಬಬಲ್ಲದು ಎಂದು ಹೇಳಿ, ಚಿತ್ರವನ್ನು ಕ್ಷೇತ್ರದ ಎಲ್ಲಾ ಶಾಲೆಗಳಲ್ಲೂ ಪ್ರದರ್ಶಿಸುವ ಬಗ್ಗೆ ಇಲಾಖೆಯಿಂದಾಗುವ ಸಹಕಾರವನ್ನು ನೀಡುವ ಭರವಸೆ ನೀಡಿದರು.

ವೆಂಕಟರಮಣ ಶಿಕ್ಶಜನ ಸಂಸ್ಥೆಗಳ ಮುಖ್ಯಸ್ಥ ಕೆ. ರಾಧಾಕೃಷ್ಣ ಶೆಣೈ ಶುಬ್ಗಹಾರೈಸಿದರು.

ಚಿತ್ರ ಕತೆಗಾರ ಮನ್ಸೂರ್ ಪಳ್ಳೂರು ಮಾತನಾಡಿದರು. ನಿರ್ದೇಶಕ ಇ. ಎಂ. ಅಶ್ರಫ್ ಮಾತನಾಡಿ, ಚಿತ್ರ ನಿರ್ಮಾಣದ ಉದ್ದೇಶವನ್ನು ತೆರೆದಿಟ್ಟರು. ತಾನು ಈ ಹಿಂದೆ ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ ಸನ್ಮಾನಿತನಾದುದನ್ನು ಸ್ಮರಿಸಿಕೊಂಡರು. ವಿದ್ಯಾರ್ಥಿಗಳು ಮಾತ್ರವಲ್ಲದೆ, ಪೋಷಕರೂ ಈ ಕಿರು ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಬಾಲವನದ ಜಾದೂಗಾರ ಕಿರು ಚಿತ್ರದ ನಿರ್ಮಾಪಕ, ವಸಂತ ಪ್ರೊಡಕ್ಷನ್ ಹೌಸ್ ಮಾಲೀಕ ಕೆ. ಪಿ. ಶ್ರೀಶನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾನು ಮಲಯಾಳಿ ಮೂಲದವನಾದರೂ ಶಿವರಾಮ ಕಾರಂತರ ಅಪಾರ ಸಾಧನೆಗಳಿಂದ ಪ್ರಭಾವಿತನಾಗಿ, ಮಕ್ಕಳಲ್ಲಿ ಎಳವೆಯಲ್ಲೇ ಕಾರಂತರ ಧನಾತ್ಮಕ ಚಿಂತನೆಯನ್ನು ಬೆಳೆಸುವ ಉದ್ದೇಶದಿಂದ ಚಿತ್ರ ನಿರ್ಮಿಸಿರುವುದಾಗಿ ತಿಳಿಸಿದರು. ಚಿತ್ರವನ್ನು ಇತರ ಭಾಷೆಗಳಿಗೂ ಡಬ್ ಮಾಡಿ ನಮ್ಮ ಕಾರಂತರನ್ನು ವಿಶ್ವಕ್ಕೆ ಪರಿಚಯಿಸುವ ಯೋಜನೆ ಹೊಂದಿರುವುದಾಗಿಯೂ ಅವರು ತಿಳಿಸಿದರು.

ಹಿರಿಯ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಶುಭಹಾರೈಸಿ, ಕೊಲೆ, ದರೋಡೆ ಮುಂತಾದ ಭಯಾನಕ ಕಥಾನಕ ಹೊಂದಿರುವ ಚಿತ್ರಗಳೇ ಹೆಚ್ಚು ಬರುತ್ತಿರುವ ಇಂದು, ನಮ್ಮ ನೆಲದ ಸಾಧಕರನ್ನು ಯುವಜನರಿಗೆ ಪರಿಚಯಿಸುವ ಇಂತಹ ಚಿತ್ರ ನಿರ್ಮಿಸಿದ ಶ್ರೀಶನ್ ರವರನ್ನು ಅಭಿನಂದಿಸಬೇಕು ಎಂದರು.

ಕುಂದಪ್ರಭಾ ಪತ್ರಿಕಾ ಸಂಪಾದಕ ಯು. ಎಸ್. ಶೆಣೈ ಸ್ವಾಗತಿಸಿ, ಪ್ರಸ್ತಾವನೆಗೈದರು. ನಾಗರತ್ನ ಕಾರ್ಯಕ್ರಮ ನಿರೂಪಿಸಿ, ಚಿತ್ರದ ನಿರ್ಮಾಣ ನಿರ್ವಾಹಕ ಜಾಯ್ ಕರ್ವಾಲೋ ವಂದಿಸಿದರು. ಬಾಲವನದ ಜಾದೂಗಾರ ಕಿರುಚಿತ್ರದ 20 ಸೆಕೆಂಡ್ ಗಳ ಟೀಸರನ್ನು ಪ್ರದರ್ಶಿಸಲಾಯಿತು.