ಮಹಿಳೆಯರಿಗೆ ನೀಡುತ್ತಿರೋದು ಬಡ್ಡಿರಹಿತ ಸಾಲ-ವದಂತಿಗಳಿಗೆ ಕಿವಿಗೊಡದಿರಿ ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಬ್ಯಾಂಕ್ ಉಳಿಸಿ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವುದು ಬಡ್ಡಿರಹಿತ ಸಾಲ ಮಹಿಳೆಯರು ವದಂತಿಗಳಿಗೆ ಕಿವಿಗೊಡದಿರಿ, ಪಡೆದ ಸಾಲ ಮರುಪಾವತಿಸಿ, ಬ್ಯಾಂಕ್ ಉಳಿಸಿ ಬೆಳೆಸಿದ ನೀವು ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಲು ಕಾರಣರಾಗದಿರಿ ಎಂದು ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮನವಿ ಮಾಡಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಸರ್ಕಾರದ ತೀರ್ಮಾನಕ್ಕೂ ಬ್ಯಾಂಕಿಗೂ ಸಂಬಂಧವಿಲ್ಲ ಏಕೆಂದರೆ ಬ್ಯಾಂಕಿನ ಸ್ವಂತ ಬಂಡವಾಳ, ಠೇವಣಿ ಜತೆಗೆ ಅಫೆಕ್ಸ್ ಬ್ಯಾಂಕ್,ನಬಾರ್ಡ್‍ನಿಂದ ಸಾಲ ತಂದು ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡಿದ್ದೇವೆ ಎಂದು ತಿಳಿಸಿದರು.
ಬ್ಯಾಂಕ್ ಕಳೆದ 2016-17ನೇ ಸಾಲಿನಿಂದಲೂ ಭದ್ರತೆ ರಹಿತ ಸಾಲವನ್ನು ಮಹಿಳೆಯರಿಗೆ ನೀಡುತ್ತಿದೆ, ಮಹಿಳೆಯರು ಶೇ.100 ಮರುಪಾವತಿಯ ಮೂಲಕ ಬ್ಯಾಂಕನ್ನು ಉಳಿಸಿದ್ದಾರೆ, ಡಿಸಿಸಿ ಬ್ಯಾಂಕ್ ಇಂದು ಇಷ್ಟೊಂದು ಉತ್ತಮ ಸ್ಥಿತಿಯಲ್ಲಿ ಇರುವುದಕ್ಕೆ ಮಹಿಳೆಯರೇ ಕಾರಣ ಎಂದರು.
ಡಿಸಿಸಿ ಬ್ಯಾಂಕಿನ ಆಧಾರಸ್ತಂಭವಾಗಿರುವ ಮಹಿಳೆಯರು ಸಕಾಲಕ್ಕೆ ಸಾಲ ಮರುಪಾವತಿಸುವ ಮೂಲಕ ರಾಜ್ಯದಲ್ಲೇ ಬ್ಯಾಂಕನ್ನು ನಂ1 ಸ್ಥಾನಕ್ಕೆ ತಂದಿದ್ದಾರೆ, ಆದರೆ ಚುನಾವಣೆ ನಂತರ ಇದೀಗ ಸಾಲ ಮನ್ನಾದಂತಹ ವದಂತಿಗಳಿಗೆ ಕಿವಿಗೊಟ್ಟು ಸಾಲ ಮರುಪಾವತಿ ವಿಳಂಬ ಮಾಡಿದರೆ ಅದರಿಂದ ಬ್ಯಾಂಕಿನ ಆರ್ಥಿಕ ಸ್ಥಿತಿಗೆ ಹೊಡೆತ ಬೀಳುತ್ತದೆ ಎಂದು ತಿಳಿಸಿದರು.
ಸಕಾಲಕ್ಕೆ ಸಾಲದ ಕಂತು ನೀವು ಮರುಪಾವತಿಸದಿದ್ದರೆ ನಿಮಗೂ ಬಡ್ಡಿಯ ಹೊರೆ ಬೀಳುತ್ತದೆ ಜತೆಗೆ ಬ್ಯಾಂಕ್ ಇತರೆ ತಾಯಂದಿರಿಗೂ ಸಾಲ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಈ ಎಲ್ಲಾ ಅಂಶಗಳನ್ನು ಮನಗಂಡು ಸಕಾಲಕ್ಕೆ ಸಾಲ ಮರುಪಾವತಿಸುವ ಮೂಲಕ ಬ್ಯಾಂಕನ್ನು ಉಳಿಸುವ ಜವಾಬ್ದಾರಿ ಮಹಿಳೆಯರದ್ದಾಗಿದೆ ಎಂದರು.
ತಾಯಂದಿರು ವದಂತಿಗಳಿಗೆ ಕಿವಿಗೊಡದೇ ಸಾಲ ಮರುಪಾವತಿ ಮುಂದುವರೆಸುವ ಮೂಲಕ ಬ್ಯಾಂಕ್ ಸದೃಢವಾಗಿರಲು ಸಹಕರಿಸಬೇಕು ಎಂದು ಕೋರಿದ ಅವರು, ದಿವಾಳಿಯಾಗಿದ್ದ ಬ್ಯಾಂಕನ್ನು ಕಳೆದ 10 ವರ್ಷಗಳಿಂದ ನಿಮ್ಮ ಸಹಕಾರದಿಂದ ಉಳಿಸಿ,ಬೆಳೆಸಿದ್ದೇವೆ, ಮಹಿಳೆಯರ ಸಬಲೀಕರಣಕ್ಕೆ ನೆರವಾಗಿದ್ದೇವೆ, ಇಂತಹ ಸಂದರ್ಭದಲ್ಲಿ ಬ್ಯಾಂಕಿಗೆ ಶಕ್ತಿ ತುಂಬಿದ ನೀವೆ ಸಂಕಷ್ಟ ತಂದೊಡ್ಡದಿರಿ ಎಂದು ಮನವಿ ಮಾಡಿದರು.
ಖಾಸಗಿ ಸಾಲದ ಶೂಲಕ್ಕೆ
ಸಿಲುಕುತ್ತೀರಿ ಎಚ್ಚರ
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಮಹಿಳೆಯರಿಗೆ ಭದ್ರತೆ ರಹಿತ ಸಾಲ ನೀಡುವ ಮೂಲಕ ರಾಜ್ಯದ ಯಾವುದೇ ಡಿಸಿಸಿ ಬ್ಯಾಂಕ್ ಮಾಡದ ಧೈರ್ಯ ಮಾಡಿದ್ದೇವೆ, ಪಡೆದ ಸಾಲಕ್ಕೆ ನೀವು ಕೇವಲ ತಿಂಗಳಿಗೆ 1500 ಪಾವತಿಸಿದರೆ 36 ತಿಂಗಳಲ್ಲಿ ಸಾಲ ತೀರುತ್ತೆ ಆದರೆ ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಿದರೆ ನೀವು ಖಾಸಗಿ ಸಾಲದ ಶೂಲಕ್ಕೆ ನೀವು ಸಿಕ್ಕಿಹಾಕಿಕೊಂಡರೆ ತಿಂಗಳಿಗೆ ಬಡ್ಡಿಯೇ 2500 ಕಟ್ಟಬೇಕಾಗುತ್ತದೆ ಎಂಬ ಸತ್ಯದ ಅರಿವು ಇರಲಿ, ನಿಮ್ಮದೇ ಬ್ಯಾಂಕ್ ಅದರ ಕತ್ತು ಹಿಸುಕುವ ಕೆಲಸ ಮಾಡದಿರಿ ಎಂದು ಮನವಿ ಮಾಡಿದರು.
ಯಾವುದೇ ಮಧ್ಯವರ್ತಿಗಳ ಹಾವಳಿ, ಲಂಚ,ಭ್ರಷ್ಟತೆಗೆ ಅವಕಾಶವಿಲ್ಲದೇ ನಿಮಗೆ ಸಾಲ ನೀಡಿದ್ದೇವೆ, ನಿಮ್ಮ ಮರುಪಾವತಿಯ ಬದ್ದತೆಗೆ ಧನ್ಯವಾದ ತಿಳಿಸುವೆ, ಅದೇ ಬದ್ದತೆ ಇಂತಹ ಸಂಕಷ್ಟದ ಸಂದರ್ಭದಲ್ಲೂ ಇರಬೇಕಿದೆ, ನಿಮ್ಮದೇ ಬ್ಯಾಂಕ್ ಉಳಿಸಿಕೊಳ್ಳುವ ಹೊಣೆಗಾರಿಕೆಯೂ ನಿಮ್ಮದೇ ಆಗಿದೆ ಎಂದರು.
24119 ಸಂಘಗಳು
3 ಲಕ್ಷ ಕುಟುಂಬಗಳು
ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಒಟ್ಟು 24119 ಸ್ತ್ರೀಶಕ್ತಿ ಸಂಘಗಳ 3 ಲಕ್ಷ ಕುಟುಂಬಗಳ ಮಹಿಳೆಯರಿಗೆ ಸಾಲ ನೀಡಿದೆ, ಇಷ್ಟೊಂದು ಭದ್ರತೆರಹಿತ ಸಾಲ ನೀಡಿರುವ ಖ್ಯಾತಿ ಡಿಸಿಸಿ ಬ್ಯಾಂಕಿಗೆ ಮಾತ್ರವಿದೆ ಎಂದರು.
ದಿವಾಳಿಯಾಗಿದ್ದ ಬ್ಯಾಂಕನ್ನು ನಿಮ್ಮ ಮಗುವಿನಂತೆ ಗರ್ಭದಲ್ಲಿ 9 ತಿಂಗಳು ರಕ್ಷಿಸಿ ಸಾಕಿದ್ದೀರಿ, ಇದೀಗ ನೀವು ಸಾಲ ಸಕಾಲಕ್ಕೆ ಮರುಪಾವತಿ ಮಾಡದಿದ್ದರೆ ನಿಮ್ಮದೇ ಮಗು ಸಾಯುವಂತಾಗುತ್ತದೆ ಎಂದು ತಿಳಿಸಿ, ನೀವು ಸಾಲ ಮನ್ನಾ ಆಮಿಷಕ್ಕೆ ಒಳಗಾಗದಿರಿ, ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಿದರೆ ಮತ್ತೆ ನಿಮಗೆ ಸಾಲ ನೀಡುವ ಧೈರ್ಯ ಮಾಡಲು ಸಾಧ್ಯವಿಲ್ಲ, ಅದರಿಂದ ಲಕ್ಷಾಂತರ ಮಹಿಳೆಯರ ಸಬಲೀಕರಣ,ಸ್ವಾವಲಂಬಿ ಬದುಕಿಗೆ ಹಾನಿಯಾಗುತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಬ್ಯಾಂಕಿನ ಎಜಿಎಂಗಳಾದ ಶಿವಕುಮಾರ್, ಖಲೀಮುಲ್ಲಾ, ಅಧಿಕಾರಿಗಳಾದ ಭಾನುಪ್ರಕಾಶ್, ಮಂಗಳಗೌರಿ ಮತ್ತಿತರರಿದ್ದರು.

ಮುಳಬಾಗಲು :ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡುತ್ತೇನೆಂದು ಮಾತು ತಪ್ಪಿದ ಸರ್ಕಾರದ ವಿರುದ್ದ ಪ್ರತಿಭಟನೆ

ಮುಳಬಾಗಿಲು,ಜೂ.16 : ಮುಳಬಾಗಲು ಬೈರಕೂರು ಹೋಬಳಿ ಹೀರೇಗೌಡನಹಳ್ಳಿಯಲ್ಲಿ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡುತ್ತೇನೆಂದು ಮಾತು ತಪ್ಪಿದ ಸರ್ಕಾರದ ವಿರುದ್ದ ಸಾಲ ಕಟ್ಟಲ್ಲ ಎಂದು ಸಿಡಿದೆದ್ದ ಮಹಿಳೆಯರು
ಸಾಲ ಮನ್ನಾ ಮಾಡುತ್ತೇನೆಂದು ಮಾತಿದ ತಪ್ಪಿದ ಕಾಂಗ್ರೇಸ್ ಸರ್ಕಾರ ಮಹಿಳೆಯರ ಆಕ್ರೋಶಕ್ಕೆ ಗುರಿಯಾದ ಪಲವಾಗಿ ಇಂದು ಸಾಲವಸೂಲಿಗೆ ಹೋದ ಸೋಸೈಟಿ ಸಿಬ್ಬಂದಿಯನ್ನು ಹಗ್ಗದಿಂದ ಕಟ್ಟಿಹಾಕಲು ಮುಂದು ಆಗಿ ಸಾಲ ವಸೂಲಿ ಮಾಡಲು ಬಂದರೆ ಹುಷಾರ್ ಸಾಲ ಮನ್ನಾ ಮಾಡುತ್ತೇವೆಂದು ನಮಗೆ ಮೋಸ ಮಾಡಿದ ಮುಖ್ಯಮಂತ್ರಿಗಳ ಬಳಿ ಸಾಲ ವಸೂಲಿ ಮಾಡಿಕೊಳ್ಳಿ ಎಂದು ಕಡಕ್ ಎಚ್ಚರಿಕೆ ನೀಡಿದರು.
ಚುನಾವಣೆ ಸಮಯದಲ್ಲಿ ಕಾಂಗ್ರೇಸ್ ಸಮಾವೇಶಗಳಲ್ಲಿ ಸಿದ್ದರಾಮಯ್ಯನವರು ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡೇ ಮಾಡ್ತಿನಿ ಎಂದು ಮಹಿಳೆಯರ ವೋಟ್ ಗಾಗಿ ಹೇಳಿಕೆ ಕೊಟ್ಟರೆ ಸಾಲದು ಕೊಟ್ಟ ಮಾತನ್ನು ಇಂದು ಉಳಿಸಿಕೊಳ್ಳಬೇಕಾಗಿದೆ. ಇಲ್ಲವಾದರೆ ಬ್ಯಾಂಕ್ ಸಿಬ್ಬಂದಿ ಮತ್ತು ಸರ್ಕಾರಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಆಗಿದೆ.
ಕಾಂಗ್ರೇಸ್‍ನ ಪ್ರಜಾಯಾತ್ರೆ ಸಮಾವೇಶಗಳಲ್ಲಿ ಸಾವಿರಾರು ಮಹಿಳೆಯರ ಸಮ್ಮುಖದಲ್ಲಿ ನಮ್ಮ ಪಕ್ಷಕ್ಕೆ ಮಹಿಳೆಯಾದ ನೀವು ಮತ ನೀಡಿದರೆ ಸಹಕಾರ ಬ್ಯಾಂಕ್‍ಗಳಲ್ಲಿ ಪಡೆದಿರುವ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುತ್ತೇವೆಂಧು ಮಾತು ನೀಡಿ ಮತ ಪಡೆದ ಸಿದ್ದರಾಮಯ್ಯನವರ ಸರ್ಕಾರ ಸ್ತ್ರೀಶಕ್ತಿ ಸಾಲ ಮನ್ನಾ ಮಾಡದೆ ಇರುವುದು ಮಹಿಳೆಯರಿಗೆ ಮಾಡಿದ ದ್ರೋಹವಾಗಿದೆ
ನಿಯತ್ತಾಗಿ ಮಾಡಿದ ಸಾಲವನ್ನು ಮರುಪಾವತಿ ಮಾಡುವುದು ನಾವೇ ಆಗಿದ್ದೇವೆ, ಹಾಗೂ ನಿಮ್ಮ ಮಾತಿಗೆ ಬೆಲೆ ಕೊಟ್ಟು ಕಾಂಗ್ರೇಸ್ ಸರ್ಕಾರವನ್ನು ನಮ್ಮ ಎಲ್ಲಾ ಮಹಿಳೆಯರು ಬೆಂಬಲಿಸಿ ಮತ ನೀಡಿ ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದೇವೆ ಎಂಬುದನ್ನು ಮರೆಯಬೇಡಿ ಸಿದ್ದರಾಮಣ್ಣ, ಸಾಲ ಮನ್ನಾ ಆಗುವವರೆಗೂ ನಾವು ಸಾಲ ಕಟ್ಟುವುದಿಲ್ಲ. ಸಹಕಾರಿ ಬ್ಯಾಂಕ್‍ಗಳ ಸಿಬ್ಬಂದಿ ಏನಾದರೂ ಸಾಲ ವಸೂಲಿ ಹೆಸರಿನಲ್ಲಿ ಬಂದರೆ ಕಟ್ಟಿ ಹಾಕಬೇಕಾಗುತ್ತದೆ ಎಂದು ಬ್ಯಾಂಕ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ರೈತ ಸಂಘದ ನಾರಾಯಣಗೌಡರು ಘಟನೆ ನಡೆದ ಸ್ಥಳಕ್ಕೆ ದಾವಿಸಿ ಕೂಡಲೇ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡು ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು
ರೈತ ಸಂಘದ ನಾರಾಯಣಗೌಡ, ಮುನಿಲಕ್ಷ್ಮಮ್ಮ, ಗೀತಾ, ಮುನಿಲಕ್ಷ್ಮೀ, ನಾಗರತ್ನ, ನಾರಾಯಣಮ್ಮ, ಹನುಮಕ್ಕ, ಸುನಂದ, ಶಿಲ್ಪ, ಸಾವಿತ್ರಮ್ಮ, ಮಂಜುಳಾ, ಲಕ್ಷ್ಮೀದೇವಮ್ಮ, ಶೋಭಾ, ಶೈಲ, ಉಮಾ, ಈಶ್ವರಮ್ಮ, ಕಾಂತಮ್ಮ ಮುಂತಾದವರಿದ್ದರು.

ಕಳಪೆ ರೇಷ್ಮೆ ಹುಳ ವಿತರಣೆಯಿಂದ ನಷ್ಟವಾಗಿರುವ ರೈತರಿಗೆ ಪ್ರ ಪರಿಹಾರ, ದುಬಾರಿ ಚಾಕಿ ಹುಳ ಬೆಲೆ ನಿಯಂತ್ರಣಕ್ಕೆ ಒತ್ತಾಯ

ಕೋಲಾರ ಜೂ.16: ಕಳಪೆ ರೇಷ್ಮೆ ಹುಳ ವಿತರಣೆಯಿಂದ ನಷ್ಟವಾಗಿರುವ ರೈತರಿಗೆ ಪ್ರತಿ 100 ಮೊಟ್ಟೆಗೆ 1 ಲಕ್ಷ ಪರಿಹಾರ ಜೊತೆಗೆ ದುಬಾರಿ ಚಾಕಿ ಹುಳ ಬೆಲೆ ನಿಯಂತ್ರಣಕ್ಕೆ ತಂಡ ರಚನೆ ಮಾಡಿ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ರೇಷ್ಮೆ ಸಚಿವರನ್ನು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯ ಮಾಡಿದರು.
ಕಳಪೆ ರೇಷ್ಮೆ ಹುಳ ವಿತರಣೆಯಿಂದ ನಷ್ಟವಾಗಿರುವ ವರದೇನಹಳ್ಳಿ ರೈತ ರಮೇಶ್ ಅವರ ಹುಳ ಮನೆಗೆ ಭೇಟಿ ನೀಡಿ ಮಾತನಾಡಿದ ಅವರು, ಟೊಮೇಟೊ ಮಾವಿಗೆ ರೋಗ ಬಾಧೆ, ಹೈನೋದ್ಯಮಕ್ಕೆ ಕಲಬೆರಕೆ ಬಾಧೆ, ಇದರ ಮಧ್ಯೆ ಬದುಕು ಕಟ್ಟಿಕೊಳ್ಳುತ್ತಿರುವ ಲಕ್ಷಾಂತರ ರೈತ ಕುಟುಂಬಗಳಿಗೆ ಜೀವನಾಧಾರವಾಗಿದ್ದ ರೇಷ್ಮೆ ಬೆಲೆ ಕುಸಿತದ ಜೊತೆಗೆ ದುಬಾರಿ ಚಾಕಿ ಹುಳದ ನಿಯಂತ್ರಣವಿಲ್ಲದೆ ಕಳಪೆ ಹುಳವನ್ನು ವಿತರಣೆ ಮಾಡುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ರೇಷ್ಮೆ ಇಲಾಖೆ ವಿಫಲವಾಗಿದೆ ಎಂದು ಆರೋಪ ಮಾಡಿದರು.
ಕೋಲಾರ ತಾಲೂಕು ಕಸಬಾ ಹೋಬಳಿ ವರದೇನಹಳ್ಳಿ ಗ್ರಾಮದ ರೈತ ರಮೇಶ್ 150 ಮೊಟ್ಟೆಯನ್ನು ಖಾಸಗಿ ಚಾಕಿ ಸಾಕಾಣಿಕ ಕೇಂದ್ರದಲ್ಲಿ ಪ್ರತಿ 100 ಮೊಟ್ಟೆಗೆ 6,500 ರೂಗಳಂತೆ 9 ಸಾವಿರ ಕೊಟ್ಟು 150 ಮೊಟ್ಟೆ ಹುಳವನ್ನು ತಂದು ಕೊಂಡ ಸೊಪ್ಪಿನಲ್ಲಿ ಸಾಕಾಣಿಕೆ ಮಾಡಿ 4ನೇ ಹಂತದ ನಂತರ 15 ದಿನಗಳಾದರೂ ಇದುವರೆಗೂ ಹಣ್ಣಾಗದೆ ರೈತ ಕಂಗಾಲಾಗಿದ್ದಾನ.
ರೇಷ್ಮೆ ಅಧಿಕಾರಿಗಳನ್ನು ಕೇಳಿದರೆ ಸೊಪ್ಪಿನಲ್ಲಿ ವಿಷದ ಅಂಶ ಇಲ್ಲವೇ ಚಾಕಿ ಸಾಕಾಣಿಕ ಕೇಂದ್ರದಲ್ಲಿ ಹವಾಮಾನ ವೈಫರೀತ್ಯದಿಂದ ಹೀಗೆ ಆಗಿರಬಹುದು. ವಿಜ್ಞಾನಿಗಳು ಬಂದು ಪರಿಶೀಲನೆ ಮಾಡಿದ ನಂತರ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದಾರೆಂದು ನೊಂದ ರೈತ ಕಣ್ಣೀರಾಕುತ್ತಿದ್ದಾನೆ.
ನೊಂದ ರೈತ ರಮೇಶ್ ಮಾತನಾಡಿ, ಹವಾಮಾನ ಏರಿಳಿತದಿಂದ ಕಂಗೆಟ್ಟಿರುವ ರೇಷ್ಮೆ ಕೃಷಿಕರು ತಮ್ಮಲ್ಲಿರುವ ಅಲ್ಪ ಪ್ರಮಾಣದ ನೀರಿನಲ್ಲಿ ರೇಷ್ಮೆ ಬೆಳೆದು ಬದುಕು ಕಟ್ಟಿಕೊಳ್ಳುವ ಸಮಯದಲ್ಲಿ ಬೆಲೆ ಕುಸಿತದ ಜೊತೆಗೆ ದುಬಾರಿ ಚಾಕಿ ಹುಳ ಬೆಲೆಯಿಂದ ರೈತ ಕಂಗೆಟ್ಟಿದ್ದರೆ ಮತ್ತೆ ಕಳಪೆ ಚಾಕಿ ಹುಳ ವಿತರಣೆಯಿಂದ ರೈತರು ದಿಕ್ಕು ತೋಚದಂತೆ ಹುಳ ಬೆಳೆಯಿಂದ ಲಕ್ಷಾಂತರ ರೂಪಾಯಿ ಸಾಲಗಾರರಾಗುತ್ತಿದ್ದಾರೆಂದು ಅಳಲು ತೋಡಿಕೊಂಡರು.
ಮಾರುಕಟ್ಟೆಯಲ್ಲಿ 500 ರೂಗಳಿಂದ 800 ರೂಗಳವರೆಗೆ ಇದ್ದ ರೇಷ್ಮೆ ಬೆಲೆ ಏಕಾಏಕಿ 200 ರಿಂದ 300ರೂಗೆ ಕುಸಿದಿರುವುದರಿಂದ ರೈತರಿಗೆ ಈಗಿನ ಪರಿಸ್ಥಿತಿಯಲ್ಲಿ ಅಸಲು ಸಹ ಕೈಗೆ ಸಿಗದೆ, ಮಾಡಿದ ಸಾಲ ತೀರಿಸಲಾಗದೆ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ರೇಷ್ಮೆ ಬಿಟ್ಟು ಬದುಕು ಕಟ್ಟಿಕೊಳ್ಳಲು ನಗರಗಳತ್ತ ಕೆಲಸ ಹುಡುಕಿಕೊಂಡು ವಲಸೆ ಹೋಗಬೇಕಾಗುತ್ತದೆ ಎಂದರು.
ಸರ್ಕಾರದ ರೇಷ್ಮೆ ಇಲಾಖೆಯಿಂದ ಪ್ರತಿ 100 ಮೊಟ್ಟೆಗೆ 600ರೂಪಾಯಿ, ಅದೇ ಖಾಸಗಿ ಚಾಕಿ ಸಾಕಾಣಿಕಾ ಕೇಂದ್ರದವರು ಅಧಿಕಾರಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಪ್ರತಿ 100 ಮೊಟ್ಟೆ ಚಾಕಿ ಹುಳುವಿಗೆ 6000 ರೂಗಳಿಂದ 7000 ರೂಗಳವರೆಗೂ ಮಾರಾಟ ಮಾಡುವ ಮುಖಾಂತರ ಹಗಲು ದರೋಡೆ ಮಾಡುತ್ತಿದ್ದರೂ ಬೆಲೆ ನಿಯಂತ್ರಣ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆರೋಪ ಮಾಡಿದರು.
ಸರ್ಕಾರ ಕೂಡಲೇ ಕಳಪೆ ರೇಷ್ಮೆ ಹುಳದಿಂದ ನಷ್ಟವಾಗಿರುವ ಪ್ರತಿ ರೈತರ 100 ಮೊಟ್ಟೆಗೆ 1 ಲಕ್ಷ ಪರಿಹಾರ, ಬೆಲೆ ನಿಯಂತ್ರಣದ ಜೊತೆಗೆ ರೇಷ್ಮೆ ಬೆಳೆಗಾರರ ರಕ್ಷಣೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ನೊಂದ ರೈತ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಯಾರಂಘಟ್ಟ ಗಿರೀಶ್, ರೇಷ್ಮೆ ತಾಂತ್ರಿಕ ಅಧಿಕಾರಿ ಐತರಾಸನಹಳ್ಳಿ ಶ್ರೀನಿವಾಸಗೌಡ, ನೊಂದ ರೈತರು ಉಪಸ್ಥಿತರಿದ್ದರು.

ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಸಂಸತ್ತು ಉದ್ಘಾಟನೆ

ಕುಂದಾಪುರ, ಜೂ.16: ಸ್ಥಳೀಯ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಈ ಸಾಲಿನ ವಿದ್ಯಾರ್ಥಿ ಸಂಸತ್ತು ಉದ್ಘಾಟನೆಯ ಕಾರ್ಯಕ್ರಮವು ಜೂ. 16 ರಂದು ನೆರವೇರಿತು. ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರುಗಳಾದ ಅಶ್ವಿನ್ ಅರಾನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶಾಲಾ ಸಂಸತ್ತನ್ನು ವಿದ್ಯುಕ್ತವಾಗಿ ಉದ್ಘಾಟಿಸಿ “ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣವನ್ನು ಮೈಗೂಡಿಸಿಕೊಳ್ಳಬೇಕೆಂಬ ಸಂದೇಶದೊಂದಿಗೆ ಸತತ 6 ವರ್ಷಗಳಿಂದ ಸಂಸ್ಥೆ ಶೇಕಡಾ 100% ದಾಖಲೆಯ ಫಲಿತಾಂಶ ಗಳಿಸುತ್ತಾ ಬಂದಿದ್ದು ಪ್ರಸ್ತುತ ವರ್ಷದಲ್ಲಿಯೂ ಶೇಕಡಾ 100% ಫಲಿತಾಂಶ ಗಳಿಸಿ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಗುರುತಿಸಿ ಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ. ಉಪಸ್ಥಿತರಿದ್ದು ಶಾಲಾ ಸಂಸತ್ತಿನ ನಾಯಕರು ಹಾಗೂ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು.ಶಾಲಾ ವಿದ್ಯಾರ್ಥಿ ನಾಯಕಿ ರಿಷಿಕಾ ಜಾಟ್ ಸ್ವಾಗತಿಸಿದರು. ಮಯೊಲ್ಲಾ ಧನ್ಯವಾದ ಸಮರ್ಪಿಸಿದರು. ಡಿ ಸಾನ್ವಿ, ಅಕ್ಷಯ, ಮರಿಯಾ ವಿಯೊಲ್ಲಾ ಕಾರ್ಯಕ್ರಮವನ್ನು ನಿರೂಪಿಸಿದರು.

ಕುಂದಾಪುರ : ಎಮ್.ಸಿ.ಸಿ. ಬ್ಯಾಂಕಿನಿಂದ ಶಾಲಾ ವಿದ್ಯಾಥಿಗಳಿಗೆ ಪುಸ್ತಕ ಮತ್ತು ಕೊಡೆಗಳ ವಿತರಣೆ


ಕುಂದಾಪುರ,ಜೂ.16: ಕುಂದಾಪುರ ರೋಜರಿ ಚರ್ಚಿನ, ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂತ ಮೇರಿಸ್ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಸಂತ ಮೇರಿಸ್ ಪ್ರೌಢ ಶಾಲೆ, ಹೋಲಿ ರೋಜರಿ ಆಂಗ್ಲಾ ಮಾದ್ಯಮ ಶಾಲೆ ಮತ್ತು ಸಂತ ಮೇರಿಸ್ ಪದವಿ ಪೂ.ಕಾಲೇಜಿನ ಅರ್ಹ ವಿದ್ಯಾರ್ಥಿಗಳಿಗೆ ಎಮ್.ಸಿ.ಸಿ. ಬ್ಯಾಂಕ್ ವತಿಯಿಂದ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಪುಸ್ತಕ ಮತ್ತು ಕೊಡೆಗಳ ವಿತರಣೆಯನ್ನು ಇತ್ತೀಚೆಗೆ ಮಾಡಿದರು. ವಿತರಣೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಶಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊರವರು ಸಹಕರಿಸಿದರು.


ಈ ಸಂದರ್ಭದಲ್ಲಿ ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ, ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಸಂತ ಮೇರಿಸ್ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯಿನಿ ಡೋರಾ ಡಿಸೋಜಾ, ಹೋಲಿ ರೋಜರಿ ಆಂಗ್ಲಾ ಮಾದ್ಯಮ ಶಾಲೆಯ ಮುಖ್ಯೋಪಾದ್ಯಾಯಿನಿ ಸಿಸ್ಟರ್ ತೆರೆಜಾ ಶಾಂತಿ, ಸಂತ ಮೇರಿಸ್ ಪದವಿ ಪೂ.ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್, ಬ್ಯಾಂಕಿನ ನಿರ್ದೇಶಕರಾದ ಡಾ.ಜೆರಾಲ್ಡ್ ಪಿಂಟೊ ಮತ್ತು ಕಿರಣ್ ಕ್ರಾಸ್ಟೊ ಉಪಸ್ಥಿತರಿದ್ದರು. ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ಅಸುಂಪ್ತಾ ಲೋಬೊ ಸ್ವಾಗತಿಸಿದರು. ಪ್ರಾದ್ಯಪಕ ನಾಗರಾಜ ಶೆಟ್ಟಿ ವಂದಿಸಿದರು. ದೈಹಿಕ ಶಿಕ್ಷಕ ಚಂದ್ರಶೇಖರ್ ಬೀಜಾಡಿ ನಿರೂಪಿಸಿದರು
.

ಕೆ.ಆರ್.ರಮೇಶ್ ಕುಮಾರ್ ಪಕ್ಷ ವಿರೋಧಿ ಚಟುವಟಿಕೆ ತೊಡಗಿದ್ದಾರೆಂದು ಆಧಾರ ರಹಿತ ಆಪಾದನೆ ಮಾಡುತ್ತಿರುವ ಶೇಷಾಪುರ ಗೋಪಾಲರ ಅಮಾನತಿಗೆ ಒತ್ತಡ

ಶ್ರೀನಿವಾಸಪುರ:  ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಹಾಗೂ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ವಿರುದ್ಧ ಆಧಾರ ರಹಿತ ಆಪಾದನೆ ಮಾಡುತ್ತಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಶೇಷಾಪುರ ಗೋಪಾಲ್ ಅವರನ್ನು ಆ ಹುದ್ದೆಯಿಂದ ಅಮಾನತುಗೊಳಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಕೆ.ಕೆ.ಮಂಜುನಾಥರೆಡ್ಡಿ ಆಗ್ರಹಿಸಿದರು.

  ಪಟ್ಟಣದ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡಿದ ಶೇಷಾಪುರ ಗೋಪಾಲ್ ಅವರಿಗೆ, ಕೆ.ಆರ್.ರಮೇಶ್ ಕುಮಾರ್ ಅಥವಾ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಹೇಳಿದರು.

  ಹಿಂದೆ ಲೋಕಸಭಾ ಚುನಾವಣೆಯಲ್ಲಿ ಕೆ.ಆರ್.ರಮೇಶ್ ಕುಮಾರ್ ಬಿಜೆಪಿ ಬೆಂಬಲಿಸಿ, ಕೆ.ಎಚ್.ಮುನಿಯಪ್ಪ ಅವರ ಸೋಲಿಗೆ ಕಾರಣರಾಗಿದ್ದಾರೆ. ಆ ಕಾರಣಕ್ಕಾಗಿ ಅವರನ್ನು ಕಾಂಗ್ರೆಸ್‌ನಿAದ ಉಚ್ಚಾಟಿಸಬೇಕು ಎಂದು ಮಾಧ್ಯಮದ ಮೂಲಕ ಆಪಾದಿಸಲಾಗಿದೆ. ಆದರೆ ಅದಕ್ಕೆ ಯಾವುದೇ ಪುರಾವೆ ಇಲ್ಲ. ರಮೇಶ್ ಕುಮಾರ್ ಅಂಥ ಕೀಳು ರಾಜಕೀಯ ಮಾಡುವವರಲ್ಲ. ಶೇಷಾಪುರ ಗೋಪಾಲ್ ಜೆಡಿಎಸ್ ಅಭ್ಯರ್ಥಿ ಜತೆ ಚುನಾವಣಾ ಪ್ರಚಾರ ಮಾಡಿದ್ದಕ್ಕೆ ಆಧಾರವಿದೆ ಎಂದು ಹೇಳಿದರು.

  ಮುಖಂಡ ದರ್ಶನ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯ. ಮತದಾರರ ತೀರ್ಪಿಗೆ ತಲೆ ಬಾಗಲೇಬೇಕು. ಯಾವುದೇ ಒಬ್ಬ ವ್ಯಕ್ತಿಯಿಂದ ಸೋಲಿಸಲು ಸಾಧ್ಯವಿಲ್ಲ. ರಮೇಶ್ ಕುಮಾರ್ ಅವರನ್ನು ನಾನೇ ಸೋಲಿಸಿದೆ ಎಂದು ಶೇಷಾಪುರ ಗೋಪಾಲ್ ಹೇಳಿಕೊಳ್ಳುತ್ತಿರುವುದು ಸರಿಯಲ್ಲ. ರಮೇಶ್ ಕುಮಾರ್ ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿಯಲು ಹೊರಟಿದ್ದಾರೆ ಎಂದು ಹೇಳುವುದರಲ್ಲೂ ಅರ್ಥವಿಲ್ಲ. ರಮೇಶ್ ಕುಮಾರ್ ಅವರಂಥ ಬುದ್ಧಿವಂತ ಹಾಗೂ ಸಮಾಜ ಮುಖಿ ರಾಜಕಾರಣಿ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯಕ್ಕೆ ಬೇಕಾಗಿದೆ. ಆ ನಿಟ್ಟಿನಲ್ಲಿ ಪಕ್ಷ ಅವರನ್ನು ವಿಧಾನ ಪರಿಷತ್‌ಗೆ ಕಳಿಸಿಕೊಡಲು ನಿರ್ಧರಿಸಿದೆ ಎಂದು ಹೇಳಿದರು.

  ಶಾಸಕರಾದವರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡಬೇಕಾಗುತ್ತದೆ. ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಕೆ.ಆರ್.ರಮೇಶ್ ಕುಮಾರ್ ತಮ್ಮದೇ ಆದ ಯೋಜನೆ ರೂಪಿಸಿದ್ದರು. ಕೃಷಿ, ನೀರಾವರಿ, ಆರೋಗ್ಯ ಹಾಗೂ ಸಮುದಾಯ ಅಭಿವೃದ್ಧಿಗೆ ಬಗ್ಗೆ ತಮ್ಮದೇ ಆದ ಕನಸು ಕಟ್ಟಿಕೊಂಡಿದ್ದರು. ಈ ನಿಟ್ಟಿನಲ್ಲಿ ಹಾಲಿ ಶಾಸಕರು ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

  ಮುಖಂಡರಾದ ಸೀತಾರಾಮರೆಡ್ಡಿ, ಎನ್.ತಿಮ್ಮಯ್ಯ, ಗೋಪಾಲ್ ಮಾತನಾಡಿದರು.

  ಮುಖಂಡರಾದ ಕಾಂಗ್ರೆಸ್ ಜಿಲ್ಲಾ ಸಮಾಜಿಕ  ಜಾಲ ತಾಣ ಅಧ್ಯಕ್ಷ ಕೆ.ಎನ್‌ .ಶ್ರೀನಿವಾಸ್., ಕೃಷ್ಣರೆಡ್ಡಿ,ಮಂಜುನಾಥ್ ರೆಡ್ಡಿ, ಅಯ್ಯಪ್ಪ, ಸಿ.ಮುನಿವೆಂಕಟಪ್ಪ,ವಿ.ಮುನಿಯಪ್ಪ, ಉಮಾದೇವಿ, ಗೋಪಾಲ್ ,ಹರೀಶ್ ಯಾದವ್,ವೇಣು, ಇದ್ದರು.

ಕುಂದಾಪುರ ಭಾ. ರೆ. ಕ್ರಾಸ್ ಸಂಸ್ಥೆ ಮತ್ತು ಭಂಡಾರ್ಕರ್ಸ್ ಕಾಲೇಜು ಜಂಟಿ ಆಶ್ರಯದಲ್ಲಿ ವಿಶ್ವ ರಕ್ತ ದಾನಿಗಳ ದಿನಾಚರಣೆ

ಕುಂದಾಪುರ; ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಭಂಡಾರ್ಕರ್ಸ್ ಆರ್ಟ್ಸ್ & ಸಯನ್ಸ್ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ವಿಶ್ವ ರಕ್ತ ದಾನಿಗಳ ದಿನಾಚರಣೆಯನ್ನು ಜೂನ್ 14 ರಂದು ಕಾಲೇಜಿನ ಅರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಆಯೋಜಿಸಲಾಯಿತು.

ರೆಡ್ ಕ್ರಾಸ್ ಸಭಾಪತಿ ಎಸ್. ಜಯಕರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಪ್ರಾಂಶುಪಾಲರಾದ ಡಾ. ಎನ್ ಪಿ. ನಾರಾಯಣ ಶೆಟ್ಟಿ ಉದ್ಘಾಟಿಸಿ ಭಾಷಣ ಮಾಡಿದರು. ಉಪ ಸಭಾಪತಿ ಡಾ. ಉಮೇಶ್ ಪುತ್ರನ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕಿ ಕು. ವಿದ್ಯಾರಾಣಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ಸಂಯೋಜಕರಾದ ಪ್ರೊಫೆಸರ್ ಸತ್ಯನಾರಾಯಣ ಶುಭ ಹಾರೈಸಿದರು. ಸಂಯೋಜಕರುಗಳಾದ – ವಿದ್ಯಾರಾಣಿ, ಸುಪ್ರೀತಾ, ಕಲಾವತಿ, ಯೋಗೀಶ್ ಶಾನುಬಾಗ್, ಶೇಖರ್ ಬಿ. ಮತ್ತು ಸತೀಶ್ ಸಾಲಿಯನ್ ಹಾಗೂ 21 ರಕ್ತ ದಾನಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಖಜಾಂಚಿ ಶಿವರಾಮ ಶೆಟ್ಟಿ ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ವೆಲ್ ಪ್ಹೇರ್ ಆಫೀಸರ್ ಢಾ ಶುಭಕರ್ ಆಚಾರ್ಯ, ರೆಡ್ ಕ್ರಾಸ್ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ, ಮತ್ತು ಸದಾನಂದ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. ಸೋನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಮತ್ತು ಎಲ್ಲಾ ಆಹ್ವಾನಿತರಿಗೆ ಉಪಹಾರ ನೀಡುವ ಮೂಲಕ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು.

“ಹರ್ಷಿತ”ಳಿಗೆ ಕಲಾ ಕೌಸ್ತುಭ ಪ್ರಶಸ್ತಿ


ಕುಂದಾಪುರ ಶ್ರೀ ವೆಂಕಟರಮಣ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಗಳಿಸಿದ ಕುಂದಾಪುರದ “ಹರ್ಷಿತ”ಳನ್ನು ದಾವಣೆಗೆರೆ ಕಲಾ ಕುಂಚ ಸಾಂಸ್ಕøತಿಕ ಸಂಸ್ಥೆ “ಕನ್ನಡ ಕೌಸ್ತುಭ” ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜುಲೈ 30 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಂಭ್ರಮದ ಸಮಾರಂಭದಲ್ಲಿ “ಹರ್ಷಿತ”ಳನ್ನು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ತಿಳಿಸಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಪೂರ್ಣಾಂಕ ಗಳಿಸಿದವರಿಗೆ ಕಲಾ ಕುಂಚ ಗೌರವಿಸುತ್ತದೆ. ಕು. ಹರ್ಷಿತ ಇವರು ದಿ. ಲೋಕೇಶ್ ರಾವ್ ಹಾಗೂ ಕುಂದಾಪುರದ ಸಿನಿಯರ್ ಸಿವಿಲ್ ಜಡ್ಜ್‍ನ ಶೀಘ್ರ ಲಿಪಿಗಾರರಾದ ಸುನಂದಾ ಶೆಟ್ಟಿಗಾರ ದಂಪತಿಯ ಪುತ್ರಿ.

Mr. Alwyn D’Souza has been elected as the new president of the Central Catholic Sabha / ಕಥೊಲಿಕ್ ಸಭಾ ಕೇಂದ್ರೀಯ ನೂತನ ಅಧ್ಯಕ್ಷರಾಗಿ ಆಲ್ವಿನ್ ಡಿಸೋಜ ಆಯ್ಕೆ

The annual election for Catholic Sabha Mangalore (R.) Of Mangalore diocese for the year 2023-24  was conducted at the Bishop’s house Mangalore. Mr. Alwyn D’Souza Panir was elected as the new President by majority. Mrs. Wilma Monterio Derebail was elected as the Secretary, Mr. Norbert Misquith Surathkal and Mr. Lawrence D’Souza Surathkal as Vice Presidents, Mr. Roshan Boniface Martis Surikumeru as Co-Secretary, Mr. Francis Monterio Thalpady as Treasurer, Mr. Santosh D’Souza Bajpe as Co-Treasurer, Mr. Stany Lobo as Immediate Past President and Most Reverend J.B. Saldanha as Spiritual Director. All the elected office bearers were congratulated by the immediate past president Mr. Rolfy DCosta.

ಕಥೊಲಿಕ್ ಸಭಾ ಕೇಂದ್ರೀಯ ನೂತನ ಅಧ್ಯಕ್ಷರಾಗಿ ಆಲ್ವಿನ್ ಡಿಸೋಜ ಆಯ್ಕೆ.

ಮಂಗಳೂರು ಧರ್ಮಕ್ಷೇತ್ರದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ 2023-24 ನೇ ಸಾಲಿಗೆ ವಾರ್ಷಿಕ ಚುನಾವಣೆಯು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಶ್ರೀ ಆಲ್ವಿನ್ ಡಿಸೋಜ ಪಾನೀರ್ ಬಹುಮತದಿಂದ ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿಯಾಗಿ ಶ್ರೀಮತಿ ವಿಲ್ಮಾ ಮೊಂತೆರೊ ದೆರೆಬೈಲ್, ಉಪಾಧ್ಯಕ್ಷರಾಗಿ ಶ್ರೀ ನೊರ್ಬರ್ಟ್ ಮಿಸ್ಕಿತ್ ಸುರತ್ಕಲ್ ಮತ್ತು ಶ್ರೀ ಲೋರೆನ್ಸ್ ಡಿಸೋಜ ಸುರತ್ಕಲ್, ಸಹ ಕಾರ್ಯದರ್ಶಿಯಾಗಿ ಶ್ರೀ ರೋಷನ್ ಬೊನಿಫಾಸ್ ಮಾರ್ಟಿಸ್ ಸೂರಿಕುಮೇರು, ಖಜಾಂಚಿಯಾಗಿ ಶ್ರೀ ಫ್ರಾನ್ಸಿಸ್ ಮೊಂತೆರೊ ತಲಪಾಡಿ, ಸಹ ಖಜಾಂಚಿಯಾಗಿ ಶ್ರೀ ಸಂತೋಷ್ ಡಿಸೋಜ ಬಜ್ಪೆ, ನಿಕಟ ಪೂರ್ವ ಅಧ್ಯಕ್ಷರಾಗಿ ಶ್ರೀ ಸ್ಟ್ಯಾನಿ ಲೋಬೊ ಹಾಗೂ ಆಧ್ಯಾತ್ಮಿಕ ನಿರ್ದೇಶಕರಾಗಿ ಅತೀ ವಂದನೀಯ ಜೆ.ಬಿ.ಸಲ್ಡಾನ್ಹಾರವರು ಆಯ್ಕೆಯಾಗಿರುತ್ತಾರೆ. ಆಯ್ಕೆಗೊಂಡ ಎಲ್ಲಾ ಪದಾಧಿಕಾರಿಗಳಿಗೆ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರೊಲ್ಫಿ ಡಿಕೋಸ್ತರವರು ಅಬಿನಂದನೆಯನ್ನು ಸಲ್ಲಿಸಿರುತ್ತಾರೆ.