ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲಿಗೆ ನೀಡುತ್ತಿರುವ ಹಣ ಕಟ್ಟ ಕಡೆಯ ವ್ಯಕ್ತಿಗೂ ತಲುಪಲಿ : ಸಚಿವ ಕೆ.ಹೆಚ್. ಮುನಿಯಪ್ಪ 

ಕೋಲಾರ : ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಹಣ ಅಂತ್ಯೋದಯ ಕಾರ್ಡ್ ದಾರರು ಹಾಗೂ ಬಿಪಿಎಲ್ ಕಾರ್ಡ್ ದಾರ ಫಲಾನುಭವಿಗಳ ಬ್ಯಾಂಕ್ ಖಾತೆಯ ಕಟ್ಟ ಕಡೆಯ ವ್ಯಕ್ತಿಗೂ ತಲುಪಲಿ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಸೂಚಿಸಿದರು. 

ಇಂದು ಮುಳಬಾಗಿಲು ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲಾಗಿ ಹಣ ನೀಡಲಾಗುತ್ತಿದ್ದು , ಎಲ್ಲಾ ಬಡವರು , ಮಾಧ್ಯಮ ವರ್ಗದವರು , ಕುಟುಂಬಗಳ ಖಾತೆಗೆ ಹಣ ತಲುಪಬೇಕು.

ಇನ್ನೂ ಖಾತೆಗೆ ಹಣ ಹೋಗದೆ ಇರುವಂತಹ ಫಲಾನುಭವಿಗಳ ಮಾಹಿತಿಯನ್ನು ಸಂಗ್ರಹಿಸಿ ತಿಂಗಳ ಅಂತ್ಯದೊಳಗೆ ವರದಿಯನ್ನು ಸಲ್ಲಿಸಬೇಕೆಂದು ಆಹಾರ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿರುವ ಎಲ್ಲಾ ಅಕ್ಕಿ ಉಗ್ರಾಣಗಳಿಗೂ ತಿಂಗಳಿಗೆ ಎರಡು ಬಾರಿ ಭೇಟಿ ನೀಡಿ , ಅಕ್ಕಿ ಏನಾದರೂ ಉಳಿಕೆ ಇದೆಯೇ ಹಾಗೂ ಅಕ್ಕಿ ಗುಣ ಮಟ್ಟವನ್ನು ಸೂಕ್ತವಾಗಿ ಪರಿಶೀಲಿಸಬೇಕು ಎಂದು ಹೇಳಿದರು. 

ಇನ್ನು ಜಿಲ್ಲೆಯಲ್ಲಿ ಆರೋಗ್ಯ ಸಮಸ್ಯೆಯಲ್ಲಿ ಸಿಲುಕಿದ್ದು , ಯಾರಾದರೂ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿಯನ್ನು ತಿಳಿದುಕೊಂಡರು. ಆಹಾರ ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಯೊಬ್ಬರು ಮಾತನಾಡಿ ಜಿಲ್ಲೆಯಲ್ಲಿ ಬಹುತೇಕ ಜನರು ಅಕ್ಕಿಯೇ ಬೇಕು ಹಣ ಬೇಡ ಎಂದು ಹೇಳುತ್ತಿದ್ದಾರೆ ಎಂದು ಸಚಿವರಿಗೆ ಮನವಿ ಮಾಡಿದರು. 

ತೂಕ ಮತ್ತು ಕಾನೂನು ಮಾಪನ ಇಲಾಖೆ ಸಂಬಂಧಪಟ್ಟ ಅಧಿಕಾರಿ ಜೊತೆ ಮಾತನಾಡಿ ಜಿಲ್ಲೆಯಲ್ಲಿರುವ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಹಾಗೂ ಗ್ರಾಹಕ ಕೇಂದ್ರಗಳಲ್ಲಿ ಸರಿಯಾದ ರೀತಿ ತೂಕ ಅಳತೆ ಮಾಡುತ್ತಿದ್ದಾರೆಯೇ ಎಂಬುದನ್ನು ಮಾಹಿತಿ ಪಡೆದು ಶೀಘ್ರವಾಗಿ ವರದಿಯನ್ನು ಸಲ್ಲಿಸಬೇಕು ಎಂದು ಹೇಳಿದರು. 

ಶಿಕ್ಷಣ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಜಿಲ್ಲೆಯಲ್ಲಿ ಎಲ್ಲಾ ಶಾಲಾ ಮಕ್ಕಳಿಗೆ ಗುಣಮಟ್ಟದ ಆಹಾರ , ಕುಡಿಯುವ ನೀರು , ಶೌಚಾಲಯ , ಆಟದ ಮೈದಾನ ಹಾಗೂ ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಪ್ರಮಾಣ ಕಡಿಮೆಯಾಗುತ್ತಿದೆಯೇ ಎಂಬುದನ್ನು ಅದರ ಬಗ್ಗೆ ವಿವರಗಳನ್ನು ಪಡೆದುಕೊಂಡರು. ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಯೊಬ್ಬರು ಮಾತನಾಡಿ , ಜಿಲ್ಲೆಯಲ್ಲಿ ಕೆಲವು ಕಡೆ ಶಿಕ್ಷಕರ ಸಮಸ್ಯೆ ಇದೆ ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ನರಸಾಪುರ , ಮಾಲೂರು , ವೇಮಗಲ್ , ಕೈಗಾರಿಕೆಗಳು ಹೆಚ್ಚು ಇರುವುದರಿಂದ ಸಿಎಸ್‌ಆರ್ ಅನುದಾನದಲ್ಲಿ ಹೆಚ್ಚು ಶಿಕ್ಷಣ ಇಲಾಖೆಯನ್ನು ಅಭಿವೃದ್ಧಿಪಡಿಸುವಲ್ಲಿ ಮುಂದಿನ ದಿನಗಳಲ್ಲಿ ಸಭೆಯನ್ನು ನಡೆಸಿ , ಸಿಎಸ್‌ಆರ್ ಅನುದಾನವನ್ನು ಶಿಕ್ಷಣಕ್ಕಾಗಿ ಹೊತ್ತು ನೀಡಬೇಕು ಹೇಳುತ್ತಾರೆ. ಮುಳಬಾಗಿಲು ತಾಲ್ಲೂಕಿನ ಇಒ ಸರ್ವೇಶ್ ಅವರು ಮಾತನಾಡಿ , ತಾಲೂಕಿನಲ್ಲಿ ಬಹುತೇಕ ಕಾಮಗಾರಿಗಳು ನರೇಗಾ ಯೋಜನೆ ಅಡಿ ಶಾಲೆಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಹೇಳಿದರು. 

ಸಭೆಗೆ ಮುನ್ನ ಕುರುಡುಮಲೆ ಗಣಪತಿ ದೇವಸ್ಥಾನಕ್ಕೆ ಆಹಾರ ಸಚಿವ ಕೆ ಹೆಚ್. ಮುನಿಯಪ್ಪ ಭೇಟಿ ಮುಳಬಾಗಿಲು ಸೆಪ್ಟೆಂಬರ್ 19 ಸುಪ್ರಸಿದ್ಧವಾಗಿರುವ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಎಂದಿನಂತೆ ಪ್ರತಿ ವರ್ಷ ಗಣಪತಿ ಹಬ್ಬದಲ್ಲಿ ಗಣಪತಿ ಉತ್ಸವಗಳು ಹಾಗೂ ರಥೋತ್ಸವಗಳು ಜರುಗುತ್ತಿದ್ದು , ಭಕ್ತರ ಜೊತೆಗೆ ಮಾನ್ಯ ಆಹಾರ 

 ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್ . ಮುನಿಯಪ್ಪ ದಂಪತಿ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದರು. 

ಸಚಿವರು ಪೂಜೆಯನ್ನು ಸಲ್ಲಿಸಿ ನಾಡಿನ ಜನತೆಗೆ ಉತ್ತಮವಾದ ಮಳೆಯಾಗಿ ನಾಡಿನ ಸುಭೀಕ್ಷವಾಗಿರಬೇಕೆಂದು ಹಾಗೂ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು. ಮುಳಬಾಗಿಲು ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಹಜರತ್ ಹಾಗೂ ಸೈಯದನ ಬಾಬಾ ಹೈದರ್ – ಇ – ಖಲಂದರ್ ಪುಸೇನಿ ಸೆಹೆರ್ ವರ್ದಿ ದರ್ಗಾ ಮಹಲ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. 

ಮುಳಬಾಗಿಲು ಶಾಸಕರಾದ ಸಮೃದ್ಧಿ ಮಂಜುನಾಥ , ರಾಮಪ್ರಸಾದ್ , ಊರಬಾಗಿಲು ಶ್ರೀನಿವಾಸ , ರಾಮಪ್ರಸಾದ್ , ರಾಮಲಿಂಗಾರೆಡ್ಡಿ , ಕೋಲಾರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಉಪಸ್ಥಿತರಿದ್ದರು. ಸಭೆಯಲ್ಲಿ ತಾಲೂಕು ದಂಡಾಧಿಕಾರಿಗಳಾದ ರೇಖಾ , ಸಚಿವರ ಆಪ್ತ ಕಾರ್ಯದರ್ಶಿಗಳಾದ ಡಾ || ಎಚ್ ನಟರಾಜ್ , ಹಾಗೂ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.