ಭಂಡಾರ್ಕಾರ್ಸ್: ಭಾಷೆಯು ದೇಶದ ಐಕ್ಯತೆ ಮತ್ತು ಮಾನವನ ಸಾಮಾಜಿಕ ಜೀವನದ ಮಹತ್ವದ ಸಂವಹನದ ಮಾಧ್ಯಮ – ಡಾ. ಮಂಜುನಾಥ ಉಡುಪ

ಕುಂದಾಪುರ: ಭಾಷೆಯು ದೇಶದ ಐಕ್ಯತೆ ಮತ್ತು ಮಾನವನ ಸಾಮಾಜಿಕ ಜೀವನದ ಮಹತ್ವದ ಸಂವಹನದ ಮಾಧ್ಯಮ ಎಂದು ಬ್ರಹ್ಮಾವರದ ಎಸ್.ಎಂ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಅವರು ಹೇಳಿದರು. ಸೆಪ್ಟೆಂಬರ್ 14ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಹಿಂದಿ ವಿಭಾಗ ಆಯೋಜಿಸಿದ್ದ “ಹಿಂದಿ ದಿವಸ್ – ಜ್ಯೋತ್ಸ್ನಾ” ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯತೆಯನ್ನು ಬಿಂಬಿಸುವ ಹಿಂದಿ ಭಾಷೆಯು ಅನೇಕ ಭಾಷೆಗಳ ಪದಗಳನ್ನು ತನ್ನೊಳಗೆ ಸೇರಿಸಿಕೊಂಡು ದೇಶವನ್ನು ಒಗ್ಗೂಡಿಸುವ ಹಾದಿಯಲ್ಲಿದೆ. ದೇಶದ ಮತ್ತು ಜಾಗತಿಕವಾಗಿ ಅತಿ ಹೆಚ್ಚು ಜನರು ಸಂವಾದ ನಡೆಸುವ ಭಾಷೆ ಹಿಂದಿ. ಜನರ ಬದುಕಿನಲ್ಲಿ ಭಾಷಾ ಬೇಧದ ಯಾವ ಮಡಿವಂತಿಕೆಯೂ ಅನ್ವಯವಾಗುವುದಿಲ್ಲ. ಹಿಂದಿ ಭಾಷೆಯು ಭಾರತದ ಗರಿಮೆಯ ಭಾಷೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಅವರನ್ನು ಹಿಂದಿ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು.
ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ, ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ, ಐಕ್ಯೂಎಸಿ ಸಂಯೋಜಕರಾದ ಡಾ. ವಿಜಯ್ ಕುಮಾರ್ ಉಪಸ್ಥಿತರಿದ್ದರು
“ಹಿಂದಿ ದಿವಸ್ – ಜ್ಯೋತ್ಸ್ನಾ” ದ ಅಂಗವಾಗಿ ಕಬೀರ್ ಭಜನ್, ಹನುಮಾನ್ ಚಾಲೀಸ್ ಕಂಠಪಾಠ, ಹಿಂದಿ ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ.ಪ್ರಫುಲ್ಲಾ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಿಂದಿ ವಿಭಾಗದ ಉಪನ್ಯಾಸಕಿಯರಾದ ಅಶ್ವಿನಿ ಪಿ. ವಂದಿಸಿದರು. ಶ್ರೀನಿಧಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ತೃತೀಯ ಬಿ.ಎಸ್.ಸಿ ವಿದ್ಯಾರ್ಥಿ ಶ್ರೀಕೃಷ್ಣ ಕೆದಿಲಾಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಹಿಂದಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.