ಶ್ರೀನಿವಾಸಪುರ: ತಾಲ್ಲೂಕಿನ ರೈತರಿಗೆ ಕೆಸಿ ವ್ಯಾಲಿ ನೀರು ವರದಾನವಾಗಿದೆ:ಶಾಸಕ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ತಾಲ್ಲೂಕಿನ ರೈತರಿಗೆ ಕೆಸಿ ವ್ಯಾಲಿ ನೀರು ವರದಾನವಾಗಿದೆ. ಕ್ಷೇತ್ರದ ಕೆರೆ ತುಂಬುವ ಕಾರ್ಯ ಪ್ರಗತಿಯಲ್ಲಿದ್ದು, ಅಂತರ್ಜಲ ಹೆಚ್ಚಿದೆ. ರೈತರು ನೆಮ್ಮದಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಈತರಾಸನಹಳ್ಳಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳಾ ಸಂಘಗಳಿಗೆ ಬಡ್ಡಿರಹಿತ ಸಾಲ ನೀಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಸಾಲದ ಪ್ರಮಾಣ ಹೆಚ್ಚಿಸಲಾಗುವುದು ಎಂದು ಹೇಳಿದರು.
ನನ್ನ ಎದುರಾಳಿಗಳು ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಮತ ಯಾಚನೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಏಕೆಂದರೆ ಮತ ಕೇಳಲು ಅಭಿವೃದ್ಧಿ ಕಾರ್ಯ ಕೈಗೊಂಡಿರಬೇಕು. ಮತದಾರರು ತಮ್ಮ ಮತವನ್ನು ಜಾತಿಗೆ ಹಾಕಬಾರದು ದೇಶದ ಪ್ರಗತಿಗೆ ಹಾಕಬೇಕು. ಅಭಿವೃದ್ಧಿಗಾಗಿ ಶ್ರಮಿಸಿದ ಹಾಗೂ ಶ್ರಮಿಸುವ ವ್ಯಕ್ತಿಗಳಿಗೆ ಮತ ನೀಡಬೇಕು. ಚುನಾವಣೆ ವಿಷಯದಲ್ಲಿ ಗೊಂದಲಕ್ಕೆ ಅವಕಾಶ ಬೇಡ. ಪ್ರಗತಿಗೆ ಮತ ನೀಡಿ ಎಂದು ಹೇಳಿದರು.
ಮುಖಂಡರಾದ ಎನ್.ಜಿ.ಬೇಟಪ್ಪ, ಎಂ.ಗೋವಿಂದಗೌಡ, ಸೊಣ್ಣೇಗೌಡ, ವಿ.ವೆಂಕಟಸ್ವಾಮಿ, ಎನ್.ಮೋಹನ್, ವಿ.ಬಾಬು, ಐ.ಎಂ.ಮಂಜುನಾಥ್, ಎಂ.ಸಂಪತ್, ವೆಂಕಟೇಶರೆಡ್ಡಿ, ಸಂತೋಷ್ ಇದ್ದರು.