ಶ್ರೀನಿವಾಸಪುರದಲ್ಲಿ ಮಾ.12 ರಂದು ಸಂಜೆ ಲೋಕಕಲ್ಯಾಣಾರ್ಥ ಶ್ರೀನಿವಾಸ ಕಲ್ಯಾಣೋತ್ಸವ – ರಾಜೇಂದ್ರ ಪ್ರಸಾದ್

ಶ್ರೀನಿವಾಸಪುರ: ಇಲ್ಲಿ ಮಾ.12 ರಂದು ಸಂಜೆ 4.30 ಗಂಟೆಯಿಂದ 7 ಗಂಟೆ ವರೆಗೆ ಲೋಕಕಲ್ಯಾಣಾರ್ಥ ಶ್ರೀನಿವಾಸ ಕಲ್ಯಾಣೋತ್ಸವ ಏರ್ಪಡಿಸಲಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.11 ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ರಥಬೀದಿಯಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ಏರ್ಪಡಿಸಲಾಗಿದೆ. ಮೆರವಣಿಗೆ ಬಳಿಕ ವಿವಿಧ ಧಾರ್ಮಿಕ ಕಾರ್ಯಗಳು ಮುಗಿದ ಬಳಿಕ, ಕನಕ ಮಂದಿರದ ಸಮೀಪ ನಿರ್ಮಿಸಲಾಗಿರುವ ವೇದಿಕೆಯಲ್ಲಿ ವಾದ್ಯಗೋಷ್ಠಿ ಏರ್ಪಡಿಸಲಾಗಿದೆ ಎಂದು ಹೇಳಿದರು.
ಮಾ.12 ರಂದು ಶ್ರೀನಿವಾಸ ಕಲ್ಯಾಣೋತ್ಸವ ಮುಗಿದ ಬಳಿಕ, ಉತ್ಸವದಲ್ಲಿ ಭಾಗವಹಿಸುವ ಎಲ್ಲರಿಗೂ ತಿರುಪತಿಯಿಂದ ತರಿಸಲಾಗುವ ಲಾಡು ವಿತರಣೆ ಮಾಡಲಾಗುವುದು. ಸಂಜೆ ರಸ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜದ ಎಲ್ಲ ವರ್ಗದ ಜನರೂ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ರಾಜಶೇಖರರೆಡ್ಡಿ, ಮುಖಂಡರಾದ ಗುಂಜೂರು ಆರ್.ಶ್ರೀನಿವಾಸರೆಡ್ಡಿ, ಶಂಕರೇಗೌಡ, ನಾರಾಯಣರೆಡ್ಡಿ, ಶಿವಣ್ಣ, ಮಂಜುನಾಥ, ಮುನಿರೆಡ್ಡಿ, ಮುಳ್ಳಳ್ಳಿ ಚೌಡರೆಡ್ಡಿ, ರಾಜಣ್ಣ, ಯಲ್ದೂರು ಶಿವಣ್ಣ ಇದ್ದರು.