ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಒತ್ತಾಯಿಸಿ ಪ್ರತಿಭಟನೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : ಕೋಲಾರ ನಗರದ ಮಣಿಘಟ್ಟ ರಸ್ತೆಯಲ್ಲಿರುವ ರಾಜಕಾಲುವೆಯ ಒತ್ತುವರಿಯನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕೆಂದು ಒತ್ತಾಯಿಸಿ ವಿವಿದ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರ ನಗರದ ಮಧ್ಯ ಇರುವ ಹಲವಾರು ರಾಜಕಾಲುವೆಗಳು ಒತ್ತುವರಿಯಾಗಿವೆ. ಮಳೆ ಬಂದಾಗ ಅಂತರಗಂಗೆ ಬೆಟ್ಟದ ಬೀಳುವ ಮಳೆ ನೀರು ರಾಜ ಕಾಲುವೆ ಮೂಲಕ ಅಮಾನಿಕೆರೆ ಮತ್ತು ಚಿನ್ನಾಪುರ ಕೆರೆಗೆ ಹರಿಯುತ್ತದೆ. ಅಮೃತ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ರಾಜಕಾಲುವೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಆದರೆ ಕಳಪೆ ಕಾಮಗಾರಿ ಮತ್ತು ಒತ್ತುವರಿಯಿಂದಾಗಿ ನೀರು ಸರಾಗವಾಗಿ ಹರಿಯದೆ ದುರ್ನಾತ ಬೀರುತ್ತಿದೆ.
ಕಳೆದ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಬಾರಿ ಮಳೆಯಾದಾಗ ಕೋಲಾರ ನಗರದ ಗಾಂಧಿನಗರ ಹಾಗೂ ಚಿನ್ನಾಪುರ ಗ್ರಾಮಕ್ಕೆ ನೀರು ನುಗ್ಗಿತ್ತು. ಆಗ ರಾಜಕಾಲುವೆಗಳು ತುಂಬಿ ನೀರು ಮನೆಗಳಿಗೆ ನುಗ್ಗಿತ್ತು. ಕೋಲಾರ ನಗರದಲ್ಲಿ ಮಂಗಳವಾರ ರಾತ್ರಿ ಮಳೆಯಾಗಿದ್ದು, ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯದೆ ದುರ್ನಾತ ಬೀರುತ್ತಿದೆ. ಮಳೆಗಾಲ ಆರಂಭವಾಗಿದ್ದು, ಮಳೆ ಜೋರಾಗಿ ಬಿದ್ಧಾಗ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯದೆ ರಾಜಕಾಲುವೆಯ ಆಸುಪಾಸಿನ ಜನರಿಗೆ ತೊಂದರೆಯಾಗುತ್ತದೆ. ಕೋಲಾರದ ಅಮಾನಿಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಒತ್ತುವರಿಯಾಗಿದೆ.
ಕಸಕಡ್ಡಿ ತುಂಬಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಣಿಘಟ್ಟ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ನೀರಾವರಿ ಹೋರಾಟ ಸಮಿತಿಯ ಹೊಳಲಿ ಪ್ರಕಾಶ್ ಮಾತನಾಡಿ ಕಳೆದ ನವೆಂಬರ್‍ನಲ್ಲಿ ಆದ ಬಾರಿ ಮಳೆಯಿಂದಾಗಿ ನ್ಯಾಯಾಲಯ ಹಿಂದಿನ ಬಡಾವಣೆಗಳು ಚಿನ್ನಾಪುರ ಗ್ರಾಮ ಹಾಗೂ ಅಮಾನಿಕೆರೆಯ ರಾಜಕಾಲುವೆಯ ಬಳಿ ಇರುವ ಗಾಂಧಿನಗರದ ಮನೆಗಳಿಗೆ ನೀರು ನುಗ್ಗಿತ್ತು. ಆಗ ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಗೀತಾ, ನೀರಾವರಿ ಹೋರಾಟ ಸಮಿತಿಯ, ಕುರುಬರಪೇಟೆ ವೆಂಕಟೇಶ್, ರಾಮುಶಿವಣ್ಣ, ಜಿ.ನಾರಾಯಣಸ್ವಾಮಿ, ನಳಿನಿಗೌಡ, ಎಂ.ಆರ್.ಚೇತನ್‍ಬಾಬು, ಚಂದ್ರಕಾಂತ್ ಸೂರ್ಯವಂಶಿ, ಚಿನ್ನಿ ಶ್ರೀನಿವಾಸ್, ಚರ್ಚ್ ಛೇಮನ್ ಸುಧೀರ್, ಸುರೇಶ್ ನಟರಾಜ್ ಮುಂತಾದವರು ಭಾಗವಹಿಸಿದ್ದರು.ಚಿ