ಕುಟುಂಬ ಜೀವನದ ಮಹತ್ವ ತಿಳಿಸಿಕೊಟ್ಟ ಮಹಾನ್ ಮಾನವತಾವಾದಿ ಶ್ರೀರಾಮಚಂದ್ರ – ಸೋದೆ ಶ್ರೀ -ಕೋಟೇಶ್ವರದಲ್ಲಿ ಶ್ರೀ ರಾಮ ಭಜನಾ ಸಪ್ತಾಹ ಪೂರ್ವಕ ಶ್ರೀ ರಾಮೋತ್ಸವ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಶ್ರೀ ಮಹಾ ವಿಷ್ಣುವಿನ ಅವತಾರಗಳಲ್ಲಿ ರಾಮಾವತಾರವು ತುಂಬಾ ವಿಶಿಷ್ಟವಾದುದು. ಇಲ್ಲಿ ಭಗವಂತ ಮಾನವನಾಗಿ ಅವತರಿಸಿ, ಮಾನವೀಯತೆಯಿಂದ ಹೇಗೆ ಬದುಕಬೇಕು ಎಂದು ವಿಶ್ವಕ್ಕೆ ತೋರಿಸಿಕೊಟ್ಟ. ಚಕ್ರವರ್ತಿಯ ಪಟ್ಟ ಕೊನೇ ಕ್ಷಣ ಕೈತಪ್ಪಿದರೂ ಮರುಗಲಿಲ್ಲ, ಪರರ ದೂಷಿಸಲಿಲ್ಲ. ವನವಾಸಕ್ಕೆ ಮುಂದಾದ. ಸೀತಾದೇವಿ, ಲಕ್ಷ್ಮಣ ಎಲ್ಲರ ನಡೆಯೂ ನಮಗೆ ಮಾದರಿ. ಪತಿ ಇರುವಲ್ಲೇ ಪತ್ನಿ, ಅಣ್ಣ ಇರುವಲ್ಲೇ ತಮ್ಮ ಎಂಬ ಅವರ ನಡೆ ಕುಟುಂಬವನ್ನು ದೂರ ಮಾಡಬಾರದು ಎಂಬ ಸಂದೇಶ ನೀಡುತ್ತದೆ. ಇಂತಹ ರಾಮನ ಆದರ್ಶವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಶ್ರೀ ರಾಮಚಂದ್ರನಿಗೆ ಸಲ್ಲಿಸುವ ನಿಜವಾದ ಸೇವೆ ಎಂದು ಶ್ರೀ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ಹೇಳಿದರು.
ಕೋಟೇಶ್ವರದ ಶ್ರೀ ಕೋದಂಡ ರಾಮ ಮಂದಿರದಲ್ಲಿ ನಡೆಯುತ್ತಿರುವ ಶ್ರೀ ರಾಮೋತ್ಸವದಲ್ಲಿ ಸಾನಿಧ್ಯ ವಹಿಸಿದ ಅವರು, ದಾನಿಗಳು ಕೊಡಮಾಡಿದ ದೇವರ ನೂತನ ರಜತ ಉತ್ಸವ ಮೂರ್ತಿಯನ್ನು ಸಮರ್ಪಿಸಿ, ಆಶೀರ್ವಚನ ನೀಡಿದರು.
ಸುಮಾರು ಏಳು ಲಕ್ಷ ರೂ. ಮೌಲ್ಯದ, ಒಂಭತ್ತು ಕೆ ಜಿ ಭಾರದ ಬೆಳ್ಳಿಯ ಶ್ರೀ ಸೀತಾ ಲಕ್ಷ್ಮಣ, ಹನುಮತ್ಸಮೇತದ ಉತ್ಸವ ಮೂರ್ತಿಯನ್ನು ದೇಣಿಗೆಯಾಗಿ ನೀಡಿದ ದಾನಿ ತುಮಕೂರಿನ ರುಕ್ಮಿಣಿಯಮ್ಮ ಮತ್ತು ಪುತ್ರ ಗುರುರಾಜ ಚಾತ್ರ ಹಾಗೂ ಮಂದಿರ ಜೀರ್ಣೋದ್ಧಾರಕ್ಕೆ ಸಹಕರಿಸಿದ ದಾನಿಗಳನ್ನು ಸ್ವಾಮೀಜಿಯವರು ಗೌರವಿಸಿ ಆಶೀರ್ವದಿಸಿದರು.
ಆಡಳಿತ ಸಮಿತಿ ಅಧ್ಯಕ್ಷ ಹಲಸಿನಕಟ್ಟೆ ಶ್ರೀನಿವಾಸ ಮೂರ್ತಿ ಸ್ವಾಗತಿಸಿದರು. ಫಲ ಪುಷ್ಪಗಳನ್ನು ಸಮರ್ಪಿಸಿ, ಮಾಲಿಕೆ ಮಂಗಳಾರತಿ ಬೆಳಗಿ ಶ್ರೀ ವಿಶ್ವವಲ್ಲಭ ತೀರ್ಥರನ್ನು ಗೌರವಿಸಲಾಯಿತು. ಬಿ. ಜಿ. ಸೀತಾರಾಮ ಧನ್ಯ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಜಗದೀಶ ರಾವ್ ವಂದಿಸಿದರು.
ಶ್ರೀ ಕೋದಂಡರಾಮ ಸನ್ನಿಧಿಯಲ್ಲಿ ಶ್ರೀ ರಾಮ ಭಜನಾ ಸಪ್ತಾಹಪೂರ್ವಕ ಶ್ರೀ ರಾಮೋತ್ಸವದಂಗವಾಗಿ ಏ.3ರ ಭಾನುವಾರದಿಂದ ಪ್ರತಿದಿನ ಸಂಜೆ 5 ರಿಂದ ರಾತ್ರಿ 8.30ರವರೆಗೆ ಭಜನೆ, ವಿಶೇಷ ಪೂಜೆ ನಂತರ ವಸಂತ ಪೂಜೆ ನಡೆದವು. ಶ್ರೀರಾಮ ನವಮಿಯಂದು ಬೆಳಿಗ್ಗೆ ಸೀತಾಕಲ್ಯಾಣ, ವಿಶೇಷ ಪೂಜೆಗಳು, ಸಂಜೆ 7ಕ್ಕೆ ವೈಭವೋಪೇತ ಪುರಮೆರವಣಿಗೆ, ವಸಂತ ಪೂಜೆ ಇತ್ಯಾದಿಗಳನ್ನು ನೆರವೇರಿಸಲಾಯಿತು.