ವಿಮಾ ಪರಿಹಾರ ಚೆಕ್ ಪಡೆದ ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸು ಖರೀದಿ ಮಾಡಬೇಕು : ಎನ್.ಹನುಮೇಶ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ವಿಮಾ ಪರಿಹಾರ ಚೆಕ್ ಪಡೆದ ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸು ಖರೀದಿ ಮಾಡಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ 42 ಹಾಲು ಉತ್ಪಾದಕರಿಗೆ ರೂ.23.45 ಲಕ್ಷ ಮೌಲ್ಯದ ರಾಸು ವಿಮಾ ಪರಿಹಾರ ಚೆಕ್ ವಿತರಿಸಿ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡಬೇಕು. ಆ ಮೂಲಕ ಹಾಲು ಒಕ್ಕೂಟದಿಂದ ನೀಡುತ್ತಿರುವ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.
ಶಿಬಿರ ಕಚೇರಿ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ ಮಾತನಾಡಿ, ಹಾಲು ಉತ್ಪಾದಕರು ಹಾಲಿನ ಗುಣಮಟ್ಟ ಹೆಚ್ಚಲು ಹಸುಗಳಿಗೆ ಹಸಿರು ಹಾಗೂ ಒಣ ಮೇವಿನ ಜತೆಗೆ ಪಶು ಆಹಾರ, ಖನಿಜ ಮಿಶ್ರಣ, ಗೋಧಾರ ಶಕ್ತಿ ಪುಡಿ ನೀಡಬೇಕು. ಕಾಲು ಬಾಯಿ ಜ್ವರ ಹರಡದಂಗೆ ಎಚ್ಚರ ವಹಿಸಬೇಕು. ಸಾಫ್ ಕಿಟ್ ಬಳಸಬೇಕು ಎಂದು ಹೇಳಿದರು.
ಈಗ ಬೇಸಿಗೆ ಪ್ರಾರಂಭವಾಗಿದ್ದು, ಬಿಸಿಲಿ ಝಳ ಹೆಚ್ಚಿದೆ. ಸೀಮೆ ಹಸುಗಳು ಸೂಕ್ಷ್ಮವಾಗಿದ್ದು, ಅವುಗಳನ್ನು ನರಳುಳ್ಳ ಮರಗಳ ಕೆಳಗೆ ಕಟ್ಟಬೇಕು. ಬಿಸಿಲಿನಲ್ಲಿ ಬಿಡುವುದರಿಂದ ಹಲವು ಸಮಸ್ಯೆಗಳು ತಲೆದೋರುವ ಸಂಭವ ಇರುತ್ತದೆ. ಹಸು ಆರೋಗ್ಯವಾಗಿದ್ದರೆ ಮಾತ್ರ ಗುಣಮಟ್ಟದ ಹಾಲು ಸಿಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಉಪ ಕಚೇರಿ ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್ ಎನ್.ಶಂಕರ್, ಪಿ.ಕೆ.ನರಸಿಂಹರಾಜು, ಎಸ್.ವಿನಾಯಕ, ಕೆ.ಪಿ.ಶ್ವೇತ ಇದ್ದರು.