ಎ.ಜಿ.ಕೊಡ್ಗಿ ಅವರಿಗೆ ‘ಕೋ.ಮ. ಕಾರಂತ ಪ್ರಶಸ್ತಿ’ ಪ್ರದಾನ

JANANUDI.COM NETWORK


ಕುಂದಾಪುರ; “ವಿವಿಧ ಕ್ಷೇತ್ರಗಳಲ್ಲಿ ಸ್ಮರಣೀಯ ಸಾಧನೆ ಮಾಡಿರುವ ಎ.ಜಿ.ಕೊಡ್ಗಿ ಅವರನ್ನು ಕುಂದಪ್ರಭ ಗೌರವಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ” ಎಂದು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಹೇಳಿದರು.
ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಫೆ. 4 ರಂದು ಕುಂದಪ್ರಭ ಸಂಸ್ಥೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ 3ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎ.ಜಿ.ಕೊಡ್ಗಿ ಅವರಿಗೆ ‘ಕೋ.ಮ. ಕಾರಂತ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಎ.ಜಿ.ಕೊಡ್ಗಿಯವರು, ಕೋ.ಮ.ಕಾರಂತರು ಇಬ್ಬರೂ ದೊಡ್ಡ ಸಾಧಕರು. ಎ.ಜಿ.ಕೊಡ್ಗಿ ಯವರು ಕೃಷಿಯಲ್ಲಿ ವಿಶ್ವಕೋಶ ಇದ್ದ ಹಾಗೆ. ಅವರ ಜ್ಞಾನ ಅನುಭವಗಳು ಸಮಾಜಕ್ಕೆ ಮಾದರಿ. ಸಮಾಜ ನಮ್ಮ ಸಾಧನೆಗಳನ್ನು ಗಮನಿಸುತ್ತಿರುತ್ತದೆ. ಕರ್ಣಾಟಕ ಬ್ಯಾಂಕಿನ ನಿರ್ದೇಶಕರಾಗಿಯೂ ಅವರು ಬ್ಯಾಂಕಿನ ಪ್ರಗತಿಯಲ್ಲಿ ಕೈಜೋಡಿಸಿದವರು” ಎಂದು ಅವರು ಹೇಳಿದರು.
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ‘ಹಿರಿಯರಾದ ಎ.ಜಿ. ಕೊಡ್ಗಿ ಅವರು ಜ್ಞಾನದ ಭಂಡಾರ. ಕೇವಲ ಹಣಕಾಸು ಆಯೋಗದ ಅಧ್ಯಕ್ಷರಾಗಿ ಮಾತ್ರವಲ್ಲ, ಸುದೀರ್ಘವಾದ ರಾಜಕೀಯ ಹಾಗೂ ಸಾಮಾಜಿಕ ಜೀವನÀದಲ್ಲಿ ತಮ್ಮ ಜ್ಞಾನ ಹಾಗೂ ಅನುಭವಗಳನ್ನು ಸಮಾಜಕ್ಕಾಗಿ ಧಾರೆ ಎರೆದಿರುವ ಕರ್ಮಯೋಗಿ’ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮಾತನಾಡಿ, ‘ಕೊಡ್ಗಿ ಅವರ ದೂರಗಾಮಿ ಚಿಂತನೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಬೇರುಗಳನ್ನು ಗಟ್ಟಿಗೊಳಿಸಿವೆ. ಯುವಕರನ್ನು ಸಹಕಾರಿ ಆಂದೋಲನಕ್ಕೆ ತರಬೇಕು ಎನ್ನುವ ಅವರ ಇಚ್ಛಾಶಕ್ತಿಯ ಕಾರಣದಿಂದಾಗಿ ನಾನು ಇಂದು ಒಕ್ಕೂಟದ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ’ ಎಂದರು.
ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಅವರು ಕೋ.ಮ. ಕಾರಂತ ಪರಿಚಯ ಪುಸ್ತಕ ಬಿಡುಗಡೆ ಮಾಡಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ 12 ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರನ್ನು ಗೌರವಿಸಲಾಯಿತು.
ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ಸ್ವಾಗತಿಸಿದರು. ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಕೋ.ಶಿವಾನಂದ ಕಾರಂತ ಪ್ರಾಸ್ತಾವಿಕ ಮಾತನಾಡಿದರು. . ಪ್ರಾಂಶುಪಾಲ ವಿಶ್ವನಾಥ ಕರಬ ನಿರೂಪಿಸಿದರು. ಪಿ.ಜಯವಂತ ಪೈ ವಂದಿಸಿದರು.
ಇದಕ್ಕೂ ಮೊದಲು ಕೋಟೇಶ್ವರದ ವೇಣುಗೋಪಾಲ ಭಟ್ ಹಾಗೂ ಬಳಗದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ಸೆಲ್ಕೊ ಸೋಲಾರ್ ಲೈಟ್ ಪೈ ಲಿ., ಬೆಂಗಳೂರು, ಭಾರತೀಯ ವಿಕಾಸ್ ಟ್ರಸ್ಟ್ ಉಡುಪಿ, ಹಳೇವಿದ್ಯಾರ್ಥಿ ಸಂಘ, ಬೋರ್ಡ್ ಹೈಸ್ಕೂಲ್, ಕುಂದಾಪುರ, ಸರಕಾರಿ ಪ.ಪೂ. ಕಾಲೇಜು ಕುಂದಾಪುರ, ವಂಡ್ಸೆ, ತೆಂಕನಿಡಿಯೂರು, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಸಂಗೀತ ಭಾರತಿ ಟ್ರಸ್ಟ್, ಕುಂದಾಪುರ, ಮಂಗಳೂರು ಕ್ಯಾಶ್ಯೂ ಇಂಡಸ್ಟ್ರೀಸ್ ಮುಂತಾದ ಸಂಸ್ಥೆಗಳ ಪದಾಧಿಕಾರಿಗಳು ಎ.ಜಿ.ಕೊಡ್ಗಿಯವರನ್ನು ಗೌರವಿಸಿದರು.

ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್., ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ, ದ,ಕ. ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಆಯ್ಕೆ ಸಮಿತಿ ಸಂಚಾಲಕ ಕೋ.ಶಿವಾನಂದ ಕಾರಂತ, ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ, ಕೆ.ರಮಾನಂದ ಕಾರಂತ, ಶ್ರೀಮತಿ ಕುಸುಮಾ ಎಸ್. ಕಾರಂತ, ಶ್ರೀಮತಿ ಸಾಧನಾ ಶೆಣೈ, ವಿಶ್ವನಾಥ ಕರಬ, ಪಿ.ಜಯವಂತ ಪೈ, ಹೆಚ್.ಸೋಮಶೇಖರ ಶೆಟ್ಟಿಯವರು ಗೌರವಿಸಿದರು.

ಭಾರತ ದೇಶದ ಸ್ವಾತಂತ್ರ್ಯದ ಹೋರಾಟದಲ್ಲಿ ಭಾಗಿಯಾಗಿ ಜೈಲುವಾಸವನ್ನು ಅನುಭವಿಸಿದ ಸ್ವಾತಂತ್ರ್ಯ ಯೋಧರ ಕುಟುಂಬ ಸದಸ್ಯರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಅತಿಥಿಗಳು ನೆರವೇರಿಸಿದರು.
ಬಿ. ಅಪ್ಪಣ್ಣ ಹೆಗ್ಡೆಯವರು ಕೋ.ಮಹಾಬಲೇಶ್ವರ ಕಾರಂತರ ಪರಿಚಯ ನೀಡುವ ಕೋ.ಮ. ಕಾರಂತ ಕೃತಿ ಬಿಡುಗಡೆ ಮಾಡುತ್ತಿರುವುದು

ಜಿ.ಭಾಸ್ಕರ ಕಲೈಕಾರ್ ವಸ್ತುಪ್ರದರ್ಶನ ಉದ್ಘಾಟನೆ


ಅಪೂರ್ವ ವಸ್ತುಗಳ ಸಂಗ್ರಾಹಕ, ಗಂಗೊಳ್ಳಿ ಭಾಸ್ಕರ ಕಲೈಕಾರ್ ಅವರ ಸಂಗ್ರಹದಲ್ಲಿರುವ ವೈವಿಧ್ಯಮಯ ಪ್ರದರ್ಶನ ಕುಂದಾಪುರದ ಸರಕಾರಿ ಪ.ಪೂ. ಕಾಲೇಜಿನ ಕಲಾ ಮಂದಿರದಲ್ಲಿ ಫೆ. 3 ರಂದು ನಡೆಯಿತು. ಕೋ.ಮ. ಕಾರಂತ ಪ್ರಶಸ್ತಿ ಪುರಸ್ಕøತರಾದ ಎ.ಜಿ.ಕೊಡ್ಗಿಯವರು ನಂದಾದೀಪ ಬೆಳಗಿಸಿ ಉದ್ಘಾಟಿಸಿದರು. ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್., ಬಿ.ಅಪ್ಪಣ್ಣ ಹೆಗ್ಡೆ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಭಾಗವಹಿಸಿ ಶುಭ ಹಾರೈಸಿದರು.

ಫೋಟೊ : ಭಾರತ ದೇಶದ ಸ್ವಾತಂತ್ರ್ಯದ ಹೋರಾಟದಲ್ಲಿ ಭಾಗಿಯಾಗಿ ಜೈಲುವಾಸವನ್ನು ಅನುಭವಿಸಿದ ಸ್ವಾತಂತ್ರ್ಯ ಯೋಧರ ಕುಟುಂಬ ಸದಸ್ಯರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಅತಿಥಿಗಳು ನೆರವೇರಿಸಿದರು.