ಕರಾವಳಿ ಅಡುಗೆ ಕಾರ್ಮಿಕರು ಮತ್ತು ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಪುರೋಹಿತರು, ಅರ್ಚಕರು ಮತ್ತು ಅಡಿಗೆಯವರು ಸರ್ಕಾರಿ ಸೌಲಭ್ಯ ವಂಚಿತರು – ಕೆ. ವಿ. ಸುರೇಶ್ ಕುಮಾರ್

ಕುಂದಾಪುರ : “ಸರಕಾರದಿಂದ ಸೌಲಭ್ಯಗಳು ನಿರಂತರವಾಗಿ ಬರುತ್ತಿವೆ. ಆದರೆ ಅವುಗಳನ್ನು ಉಪಯೋಗಿಸಿಕೊಳ್ಳುವಂತಹ ಅರಿವು ನಮ್ಮಲ್ಲಿ ಮೂಡಬೇಕು. ಬ್ರಾಹ್ಮಣ ಸಮಾಜದ ಅಡುಗೆ ಕಾರ್ಮಿಕರು ಮತ್ತು ಪುರೋಹಿತ, ಅರ್ಚಕ ವೃತ್ತಿಯವರು ಸರಕಾರಿ ಸೌಲಭ್ಯ ಪಡೆದುಕೊಳ್ಳುವಲ್ಲಿ ತೀರಾ ಹಿದುಳಿದಿದ್ದಾರೆ. ಇವರೆಲ್ಲಾ ಕಷ್ಟಪಟ್ಟು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುವವರು. ಇವರ್ಯಾರೂ ಅರ್ಜಿ ಹಾಕಿಕೊಂಡು ಈ ವೃತ್ತಿಗೆ ಬಂದವರಲ್ಲ. ಸರಕಾರದಿಂದ ಸಿಗುವಂತಹ ಪ್ರಯೋಜನಗಳನ್ನು ಪಡೆದುಕೊಳ್ಳುವಲ್ಲಿ ಅವರು ಮುಂಚೂಣಿಯಲ್ಲಿ ನಿಲ್ಲಬೇಕು” ಎಂದು ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಸಂಘದ ಗೌರವಾಧ್ಯಕ್ಷ ಕೆ.ವಿ ಸುರೇಶ್ ಕುಮಾರ್ ಹೇಳಿದರು.

ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ಬೆಂಗಳೂರು, ಕರ್ನಾಟಕ ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಇವರ ಸಹಯೋಗದೊಂದಿಗೆ ಬಿದ್ಕಲ್ ಕಟ್ಟೆಯ ನಾಗಲಕ್ಷ್ಮೀ ಸಭಾಭವನದಲ್ಲಿ ನಡೆದ ಕರಾವಳಿ ಅಡುಗೆ ಕಾರ್ಮಿಕರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಎಲ್ಲೇ ಹೋದರೂ ಅಲ್ಲಿ ಕುಂದಾಪುರದ ಅಡುಗೆಯವರು ಮತ್ತು ಅವರ ಕೈ ರುಚಿ ಸಿಕ್ಕೇ ಸಿಗುತ್ತದೆ. ಹಾಗಾಗಿ ಕುಂದಾಪುರದವರ ಅಡುಗೆ ಏನು ಅನ್ನುವುದು ಪ್ರಪಂಚಕ್ಕೇ ಗೊತ್ತಿದೆ. ಅವರೆಲ್ಲರೂ ಸಶಕ್ತರಾಗಬೇಕು. ಹಾಗೂ ಈ ಹೊಸ ಘಟಕಕ್ಕೆ ಇನ್ನಷ್ಟು ಜನ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಎಲ್ಲ ಅರ್ಹರಿಗೂ ಸೌಲಭ್ಯ ದೊರಕುವಂತಾಗಬೇಕು” ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೆಂಗಳೂರಿನ ಅಸಂಘಟಿತ ಅಡುಗೆ ಕಾರ್ಮಿಕ ಹಾಗೂ ಸಹಾಯಕ ಕಾರ್ಮಿಕರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಚ್‍. ವಿ. ನಾಗರಾಜ್ ಅವರು, ಅಸಂಘಟಿ ಅಡುಗೆ ಕಾರ್ಮಿಕ ಸಂಘಟನೆ, ಅದರ ಅವಶ್ಯಕತೆ, ಇದರಿಂದ ಏನೆಲ್ಲಾ ಅನುಕೂಲವಾಗುವುದು ಎಂಬುದರ ಬಗ್ಗೆ ಜನರಿಗೆ ಮನವರಿಕೆ ಮಾಡಿದರು.
ಮುಖ್ಯ ಅತಿಥಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಸಂಘಟಿತ ಪುರೋಹಿತ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರಕಾಶ್ ಹೊಳ್ಳ ಮಾತನಾಡಿ, ತನ್ನೊಂದಿಗೆ ತನ್ನವರನ್ನೂ ಬೆಳೆಸುವಂತಹ ಗುಣ ವಿರುವಂತಹದ್ದು ಬ್ರಾಹ್ಮಣರಿಗೆ ಮಾತ್ರ. ಹಾಗಾಗಿ ಬ್ರಾಹ್ಮಣರು ಸಶಕ್ತರಾಗಬೇಕು. ಇನ್ನಷ್ಟು ಸವಲತ್ತುಗಳು ಅವರಿಗೆ ಸಿಗುವಂತಾಗಬೇಕು. ಸಂಘಟನೆ ಬಲಗೊಳ್ಳದೆ ಸರ್ಕಾರದ ಗಮನ ಸೆಳೆಯಲಾಗದು. ಆದ್ದರಿಂದ ಇಂತಹ ಸಂಘಟನೆಗಳು, ಘಟಕಗಳು ಇನ್ನಷ್ಟು ಕಡೆಗಳಲ್ಲಿ ಆರಂಭವಾಗಬೇಕು ಎಂದು ಸಲಹೆ ಮಾಡಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ರಾಘವೇಂದ್ರ ಅಡಿಗ ಮಾತನಾಡಿ, ಈ ಸಂಘಟನೆ ಇನ್ನಷ್ಟು ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ. ಈ ಸಂಘಟನೆಯಿಂದ ಎಲ್ಲರಿಗೂ ಅನುಕೂಲ ವಾಗಲಿ ಎಂಬುದಾಗಿ ಆಶಿಸಿದರು.
ಇದೇ ವೇಳೆ ಮಾತನಾಡಿದ ಗುರು ನರಸಿಂಹ ದೇವಸ್ಥಾನದ ಪುರೋಹಿತರು, ಅಸಂಘಟಿತ ಪುರೋಹಿತರ ಕ್ಷೇಮಾಭಿವೃದ್ಧಿ ಸಂಘದ ಸಂಘಟಕರಾದ ನರಸಿಂಹ ಭಟ್ ಸಾಲಿಗ್ರಾಮ ಅವರು, ಬ್ರಾಹ್ಮಣ ಸಮಾಜ ಒಗ್ಗಟ್ಟಾಗಬೇಕು. ಕೇವಲ ಮಾತಿನಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ಅದರ ಬದಲು ಎಲ್ಲರೂ ಒಗ್ಗಟ್ಟಾಗಿ ಕೆಲಸಗಳನ್ನು ಮಾಡಿದರೆ ಒಗ್ಗಟ್ಟಾಗಿ ಸರಕಾರದ ಮುಂದೆ ಆಗ್ರಹಿಸಿದರೆ ಮಾತ್ರ ನಮಗೆ ಬೇಕಾದಂತಹ ಸೌಲಭ್ಯಗಳು ದೊರೆಯಲು ಸಾಧ್ಯ ಎಂಬುದುದಾಗಿ ಹೇಳಿದರು. ಸಂಘದ ಐಡಿ ಕಾರ್ಡ್ ಹಾಗೂ ಇ- ಶ್ರಮ್ ಕಾರ್ಡ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಂಜುನಾಥ ಮಯ್ಯ ಕಮಲ ಶಿಲೆ, ಗಣೇಶ್ ಉಪಾದ್ಯ ಬಳ್ಕೂರು, ಅನ್ನಪೂರ್ಣ ಕಾರಂತ ಕೋಣಿ, ಜತೆ ಕಾರ್ಯದರ್ಶಿ ಚಿತ್ರಾ ಕುಂಭಾಶಿ, ಸುರೇಂದ್ರ ನಾವಡ, ಖಜಾಂಚಿ ವಿಶ್ವನಾಥ ಭಟ್ ಸಾಲಿಗ್ರಾಮ, ಕಾರ್ಯಕಾರಿ ಸಮಿತಿ ಸದಸ್ಯರಾದ ಚಂದ್ರ ಶೇಖರ ಉಡುಪ ಹರಾವರಿ, ನಾಗೇಂದ್ರ ಬಿಳಿಯ ಕೋಟೇಶ್ವರ, ರೇಣುಕಾ ಹತ್ವಾರ್ ಬೀಜಾಡಿ ಮೊದಲಾದವರು ಉಪಸ್ಥಿತರಿದ್ದರು.
ಸುಧಾ ರಾಜಗೋಪಾಲ್ ಕೋಟೇಶ್ವರ ಪ್ರಾರ್ಥಿಸಿದರು. ಸಂಘದ ಗೌರವ ಅಧ್ಯಕ್ಷ ಅರವಿಂದ ಐತಾಳ್ ಕೋಟೇಶ್ವರ ಸ್ವಾಗತಿಸಿದರು.ಅಕ್ಷತಾ ಗಿರೀಶ್ ಐತಾಳ್ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಶಿವಾನಂದ ಅಡಿಗ ಮಣೂರು ವಂದಿಸಿದರು.