ಸಂಸದ ಮುನಿಸ್ವಾಮಿ ರೈತ ಶಾಲೂ ಅವಹೇಳನ ; ಬಹಿರಂಗ ಕ್ಷಮೆ ಯಾಚಿಸಲು ರೈತ ಸಂಘಗಳ ಒತ್ತಾಯ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕ್ಷಮೆ ಕೇಳದ ಹೋದರೆ ಮುನಿಶಾಮಿ ಹಠಾವೋ.. ಕೋಲಾರ ಬಚಾವೋ ಹೋರಾಟ

ಕೋಲಾರ ಸೆಪ್ಟಂಬರ್ 30 : ಕೋಲಾರ ಸಂಸದ ಮುನಿಸ್ವಾಮಿ ಬುಧವಾರ ಶ್ರೀನಿವಾಸಪುರ ತಾಲ್ಲೂಕಿನ ಶ್ಯಾಗತ್ತೂರು ಗ್ರಾಮದಲ್ಲಿ ರೈತರ ಹಸಿರು ಶಾಲೂ ಬಗ್ಗೆ ಹಾಗೂ ಹಸಿರು ಶಾಲೂ ಹಾಕುವವರ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿ ನಗರದ ಗಾಂಧಿವನದ ಮುಂಭಾಗ ಅನ್ನದಾತರ ಪರ ರೈತ ಸಂಘಟನೆಗಳ ಮುಖಂಡರುಗಳು ಸಂಸದರ ಪ್ರತಿಕೃತಿ ದÀಹನ ಮಾಡುವ ಮುಖಾಂತರ ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿ ಹೋರಾಟ ಮಾಡಲಾಯಿತು.
ಲೋಕಸಭಾ ಚುನಾವಣೆಯಲ್ಲಿ ರೈತರು, ರೈತ ಮುಖಂಡರುಗಳು ಬಹಿರಂಗವಾಗಿ ಸಂಸದ ಮುನಿಸ್ವಾಮಿರವರ ಪರವಾಗಿ ಮತ ನೀಡಬೇಕೆಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಮತ್ತು ರೈತರಲ್ಲಿ ಮನವಿ ಮಾಡಿಕೊಂಡಿದ್ದೆವು. ಎರಡು ಜಿಲ್ಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಾರೆಂದು ನಾವೆಲ್ಲಾ ಭಾವಿಸಿ ಮೂರು ದಶಕಗಳ ಆಡಳಿತಕ್ಕೆ ಮಂಗಳ ಆಡಿ ಸಂಸದ ಮುನಿಸ್ವಾಮಿಯವರನ್ನು ನಾವೆಲ್ಲ ಮತ ನೀಡಿ ಗೆಲ್ಲಿಸಿದೆವು. ಹಾಗೂ ವೇಮಗಲ್ ಠಾಣಾ ವ್ಯಾಪ್ತಿಯಲ್ಲಿ ನಮ್ಮ ಮೇಲೆ ಕೇಸನ್ನು ದಾಖಲಿಸಿಕೊಂಡೆವು ಆದರೆ ಸಂಸದರು ಅಭಿವೃದ್ಧಿ ಕಡೆ ಗಮನ ಹರಿಸುವುದನ್ನು ಬಿಟ್ಟು ಜಿಲ್ಲೆಯ ಜನರನ್ನು ದಿಕ್ಕು ತಪ್ಪಿಸುವ ಸಲುವಾಗಿ ಹಾಗೂ ಸಂಸದರು ಮಾಡುತ್ತಿರುವ ಅಕ್ರಮಗಳನ್ನು ಮುಚ್ಚಿಕೊಳ್ಳಲು ರೈತ ಮುಖಂಡರ ಬಗ್ಗೆ, ಹಸಿರು ಶಾಲು ಹಾಕಿಕೊಳ್ಳುವರ ಬಗ್ಗೆ ಪದೇ ಪದೇ ಹಗುರವಾಗಿ ಮಾತನಾಡುತ್ತಿರುವುದು ನಮಗೆಲ್ಲ ಬಹಳ ನೋವುಂಟಾಗಿದೆ ಎಂದಿದ್ದಾರೆ.
ಕೇಸರಿ ಶಾಲೂ ಹಾಕಿಕೊಂಡು ನಾವು ರೈತ ಪರ ಎಂದು ಮೋಸ ಮಾಡುತ್ತಿರುವರೆಲ್ಲಾ ರೈತ ಮೋರ್ಚಾ ಮುಖಂಡುಗಳೇ? ಹಸಿರು ಶಾಲೂ ಹಾಕಿಕೊಂಡವರು ನಕಲಿಗಳೆಂದರೆ ಇವರ್ಯಾರು? ಮಾಜಿ ಮುಖ್ಯಮಂತ್ರಿ ಯೂಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಕೃಷಿ ಸಚಿವ ಬಿ.ಸಿ.ಪಾಟೀಲ್‍ರವರು ಹಸಿರು ಶಾಲೂ ಹಾಕಿಕೊಂಡು ಪ್ರಮಾಣ ವಚನ ಸ್ವೀಕಾರ ಮಾಡಿದರಲ್ಲಾ, ನೀವು ಹೇಳುವ ಹೇಳಿಕೆ ಇವರಿಗೂ ಅನ್ವಯಿಸುವುದಲ್ಲವೇ ಎಂದು ಪ್ರಶ್ನಿಸಿದ್ದಾರೆ.


ರೈತ ಮುಖಂಡರು ಹಸಿರು ಶಾಲೂ ಹಾಕಿ ತಪ್ಪು ಮಾಡಿದ್ದರೆ ಬಹಿರಂಗವಾಗಿ ಅವರ ಹೆಸರನ್ನು ಹೇಳಿ, ಅದನ್ನು ಬಿಟ್ಟು ಸಾಮೂಹಿಕವಾಗಿ ಎಲ್ಲಾ ರೈತ ಮುಖಂಡರನ್ನು ತೆಗಳಿರುವುದು ಖಂಡನೀಯ. ನಾವೆಲ್ಲರೂ ಯಾವುದೇ ಅಧಿಕಾರ ಆಸೆಗೆ ಅಥವಾ ಪಕ್ಷದಿಂದ ಪಕ್ಷಕ್ಕೆ ಹಾರುವ ಮುಖಂಡರಲ್ಲ. ನಾವು ಯಾವೊತ್ತಿದ್ದರೂ ರೈತನ ಋಣದಲ್ಲಿದ್ದೇವೆ. ಹಾಗೂ ನಾವೂ ರೈತರಾಗಿದ್ದೇವೆ. ಅದಕ್ಕಾಗಿ ರೈತರ ಉಳಿವಿಗಾಗಿ ದೇಶದ ಅನ್ನದಾತನ ಪರವಾಗಿ, ಅನ್ನದಾತರು ಕಷ್ಟಕ್ಕೆ ಸಿಲುಕಿಕೊಂಡಾಗ ನಮ್ಮನಾಳುವ ಸರ್ಕಾರಗಳಿಂದ ದೇಶದ ರೈತರಿಗೆ ತೊಂದರೆಯಾಗುವ ಸಮಯದಲ್ಲಿ ನಾವೆಲ್ಲಾ ಮುಖಂಡರುಗಳು ಒಂದಾಗಿ ಹೋರಾಟ ಮಾಡುವ ಮೂಲಕ ಸರ್ಕಾರವನ್ನು ಎಚ್ಚರಿಸುತ್ತಿದ್ದೇವೆ. ಹಾಗೂ ಸರ್ಕಾರ ತಪ್ಪು ಹೆಜ್ಜೆ ಇಟ್ಟಾಗ ಸರಿ ದಾರಿಗೆ ತರುವ ಕೆಲಸವನ್ನು ರೈತ ಸಂಘಟನೆಗಳು ಮಾಡಿವೆ ಎಂದರು.
1980ರಲ್ಲಿ ರೈತ ಮುಖಂಡರುಗಳ ಬಗ್ಗೆ ಹಗುರವಾಗಿ ಮಾತನಾಡಿದ ಸರ್ಕಾರವನ್ನೇ ಉರುಳಿಸಿರುವುದು ಇತಿಹಾಸ. ಅದೇ ರೀತಿ ಕೋಲಾರ ಜಿಲ್ಲೆಯಿಂದ ನಿಮ್ಮನ್ನು ಹೊರ ಹಾಕುವ ಸಮಯ ಬಹು ದೂರವಿಲ್ಲ. ಸಂಸದರು ಬಹಿರಂಗವಾಗಿ ಕ್ಷಮೆ ಕೇಳದೆ ಹೋದರೆ ಅವರು ಜಿಲ್ಲೆಯಲ್ಲಿ ಮಾಡುತ್ತಿರುವ ಅಕ್ರಮ ದಂದೆಗಳನ್ನು ಒಂದೊಂದಾಗಿ ಬೀದಿಗೆ ತಂದು ಹೋರಾಟ ಮಾಡುವ ಮೂಲಕ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುತ್ತೇವೆ ಹಾಗೂ ಮುನಿಶಾಮಿ ಹಠಾವೋ.. ಕೋಲಾರ ಬಚಾವೋ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಯುವ ಘಟಕದ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‍ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ಮುನೇಗೌಡ, ತಮ್ಮೇಗೌಡ, ಕೆ.ಬಿ.ಮುನಿವೆಂಕಟಪ್ಪ, ಮಂಗಸಂದ್ರ ತಿಮ್ಮಣ್ಣ, ಪುತ್ತೇರಿ ರಾಜು, ಕೋಲಾರ ತಾಲ್ಲೂಕು ಅಧ್ಯಕ್ಷ ಕೆಂಬೋಡಿ ರವಿ, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ದೊಡ್ಡಕುರುಬರಹಳ್ಳಿ ಶಂಕರಪ್ಪ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಎಲ್.ಎನ್.ಬಾಬು, ಉಪಾಧ್ಯಕ್ಷ ಧನರಾಜ್, ನಗರ ಘಟಕದ ಅಧ್ಯಕ್ಷ ಸತೀಶ್, ಯುವ ಮುಖಂಡ ಪುಲಿಕೇಶಿ ಇನ್ನು ಮುಂತಾದವರು ಭಾಗವಹಿಸಿದ್ದರು.