ನಗರಸಭೆ ನೂತನ ಕಟ್ಟಡ ನಿರ್ಮಾಣದ ಕರಡು ವಿನ್ಯಾಸ ನಕ್ಷೆಗೆ ಅನುಮೋದನೆ

ವರದಿ :ಶಬ್ಬೀರ್ ಅಹಮ್ಮದ್ ‌ಶ್ರೀನಿವಾಸಪುರ

ಕೋಲಾರ, ಸೆ.28-ನಗರಸಭೆ ಕಚೇರಿಯ ನೂತನ ಕಟ್ಟಡ ನಿರ್ಮಾಣದ ಕರಡು ವಿನ್ಯಾಸ ನಕ್ಷೆಗೆ ಹಲವು ಬದಲಾವಣೆಗಳನ್ನು ಮಾಡಲು ನಗರಸಭೆ ಸದಸ್ಯರು ಸೂಚಿಸಿ ಹಲವಾರು ಸಲಹೆಗಳನ್ನು ನೀಡುವ ಮೂಲಕ ಅನುಮೋದನೆ ನೀಡಿದರು.
ನಗರಸಭೆಯ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷೆ ಶ್ವೇತಾ.ಆರ್.ಶಬರೀಶ್ ರವರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ವಿಶೇಷ ಚರ್ಚೆ ಆದ ನಂತರ ತಾಲ್ಲೂಕು ಕಚೇರಿ ಪಕ್ಕದಲ್ಲಿರುವ ನಗರ ಸಭೆ ಆಸ್ತಿಯಲ್ಲಿ 133×125 ಅಡಿಗಳ ಅಳತೆಯ ಮೂರು ಅಂತಸ್ತಿನ ಸುಸಜ್ಜಿತ ಕಟ್ಟಡವನ್ನು 10 ಕೋಟಿ ರೂಗಳ ವೆಚ್ಚದಲ್ಲಿ ಕಟ್ಟಲು ಸಭೆ ಅನುಮೋದನೆ ನೀಡಿತು.
ನೂತನ ಕಟ್ಟಡದಲ್ಲಿ ಬ್ಯಾಂಕ್, ಎ.ಟಿ.ಎಂ, ಕ್ಯಾಂಟೀನ್ ಹಾಗೂ ಲೈಬ್ರೆರಿ ಹಾಗೂ ಮುಂದಿನ ದಿನಗಳಲ್ಲಿ ನಗರಸಭೆ ಮೇಲ್ದರ್ಜೆಗೆ ಹೋಗುವುದರಿಂದ ನೂರು ಆಸನಗಳ ಸುಸಜ್ಜಿತ ಮೀಟಿಂಗ್ ಹಾಲ್ ಮಾಡಲು ಸದಸ್ಯರು ಸಲಹೆಗಳನ್ನು ನೀಡಿದರು.
ನಗರಸಭೆ ವ್ಯಾಪ್ತಿಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ದೃಷ್ಟಿಯಿಂದ ಆಸ್ತಿ ತೆರಿಗೆ ವಸೂಲಾತಿಯನ್ನು ಉನ್ನತೀಕರಿಸಲು ಬೆಂಗಳೂರಿನ ಸೆಮಿನಲ್ ಸಾಪ್ಟ್ ವೇರ್ ಪ್ರೈವೇಟ್ ಲಿ ರವರಿಂದ ಆಸ್ತಿಗಳ ಸರ್ವೆ ಮಾಡಿಸಿ ಗಣಕೀಕರಣಗೊಳಿಸಲು ಸಭೆ ಅನುಮೋದನೆ ನೀಡಿತು.
ನಗರದ ಬೆಸ್ಕಾಂ ರಸ್ತೆ ವೃತ್ತದಲ್ಲಿ (ಎ.ಸಿ.ಬಿ. ಕಚೇರಿ ಮುಂಭಾಗ) ಸಿ.ಎಸ್.ಆರ್. ಅಥವಾ ದಾನಿಗಳ ನೆರವಿನಿಂದ ಅಶೋಕ ಪಿಲ್ಲರ್ ಮಾದರಿಯಲ್ಲಿ ನಿರ್ಮಿಸಿ ಅಭಿವೃದ್ಧಿಪಡಿಸಲು ಸಭೆ ತೀರ್ಮಾನ ಕೈಗೊಂಡಿತು.
ಅಧ್ಯಕ್ಷರ ಅಪ್ಪಣೆ ಮೇರೆಗೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಎಂ ಮುಬಾರಕ್ ಮಾತನಾಡಿ, ನಗರದಲ್ಲಿ ರಸ್ತೆಗಳು ಹಾಳಾಗಿದ್ದು ಟೆಂಡರ್ ಮುಗಿದ್ದರೂ ಕಾಮಗಾರಿ ಮಗಿಯದೇ ಓಡಾಡಲು ತುಂಬಾ ಕಷ್ಟವಾಗುತ್ತಾ ಇದೆ, ಇದಕ್ಕೆ ಪಿ.ಡಬ್ಲ್ಯೂ ಇಲಾಖೆ ಬೇಜವಾಬ್ದಾರಿಯೇ ಕಾರಣ,ಇಲಾಖೆಗೆ ಪತ್ರಬರೆಯುವುದಲ್ಲದೆ ಟೆಂಡರುದಾರನಿಗೆ ನೋಟೀಸ್ ಕೊಡಬೇಕು ಎಂದಾಗ ಇದಕ್ಕೆ ಧ್ವನಿ ಗೂಡಿಸಿದ ಮಾಜಿ ಅಧ್ಯಕ್ಷೆ ನಾಜಿಯಾ ಹಾಗೂ ಅಂಬರೀಶ್ ಮತ್ತು ಇತರೆ ಸದಸ್ಯರು ಸಭೆಯಲ್ಲಿ ಹಾಜರಿದ್ದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮುಸ್ತಾಕ್ ರನ್ನು ತರಾಟೆಗೆ ತೆಗೆದು ಕೊಂಡರು.
ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮುಸ್ತಾಕ್ ಮಾತನಾಡಿ, ಆದಷ್ಟೂ ಬೇಗ ಗುತ್ತಿಗೆ ದಾರರ ಮೂಲಕ ರಸ್ತೆಗಳ ಕಾಮಗಾರಿ ಕೆಲಸ ಪ್ರಾರಂಭ ಮಾಡುವುದಾಗಿ ಸಭೆಗೆ ತಿಳಿಸಿದರು.
ಸದಸ್ಯ ಅಂಬರೀಶ್ ಮಾತನಾಡಿ, ಕೋಡಿ ಕಣ್ಣೂರು ಕೆರೆ ಬಿರುಕು ಬಿಟ್ಟಿದ್ದು ನೀರು ಸೋರಿಕೆ ಯಿಂದ ಮನೆಗಳಿಗೆ ನೀರು ಹರಿಯುತ್ತಿದ್ದು, ಲೀಕೇಜ್ ತಡೆಯಲು ಕಟ್ಟೆಗೆ ರಿವಿಟ್ಮೆಂಟ್ ಮಾಡಬೇಕು, ಕೋಲಾರಮ್ಮ ಕರೆಯಲ್ಲಿ ಬೆಳದಿರುವ ಜೊಂಡು ತೆಗೆಸಲು ಕ್ರಮ ಕೈಗೊಳ್ಳಲು ವಿನಂತಿಸಿದರು.
ಕೋಲಾರಮ್ಮ ಕೆರೆ ಕೋಡಿ ಹರಿಯುತ್ತಿದ್ದು,ಅಧ್ಯಕ್ಷರು, ಉಪಾಧ್ಯಕ್ಷರು,ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಒಟ್ಟಿಗೆ ಸೇರಿ ಬಾಗೀನ ನೀಡಲು ದಿನಾಂಕ ನಿಗಧಿಪಡಿಸುವಂತೆ ಹಾಗೂ ಕೆಂದಟ್ಟಿ ಬಳಿ ಬುಧವಾರ ಕಸ ವಿಲೇವಾರಿ ಘಟಕದ ಕಾಂಪೌಂಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲು ಸಭೆ ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಪ್ರವೀಣ್ ಗೌಡ,ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಆಯುಕ್ತ ಪ್ರಸಾದ್ , ಕಂದಾಯ ಅಧಿಕಾರಿ, ಚಂದ್ರು, ತ್ಯಾಗರಾಜ್ ಹಾಗೂ ನಗರಸಭೆ ಸಿಬ್ಬಂದಿ, ಸದಸ್ಯರು, ನಾಮನಿರ್ದೇಶನ ಸದಸ್ಯರು ಉಪಸ್ಥಿತರಿದ್ದರು.