ಕೋವಿಡ್ ಪರೀಕ್ಷೆ ನಡೆಸಿದ 24 ಗಂಟೆ ಒಳಗೆ ಫಲಿತಾಂಶ ನೀಡಿ , ಪಾಸಿಟಿವ್ ಬಂದ ತಕ್ಷಣ ಚಿಕಿತ್ಸೆ ಪ್ರಾರಂಭಿಸಿ – ಡಾ|ಅಶ್ವಥ್ ನಾರಾಯಣ.ಸಿ.ಎನ್

ವರದಿ ;ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು .
ಕೋವಿಡ್ ಪರೀಕ್ಷೆ ನಡೆಸಿದ 24 ಗಂಟೆಗಳ ಒಳಗೆ ಫಲಿತಾಂಶ ನೀಡಬೇಕು . ಪಾಸಿಟಿವ್ ಬಂದ ತಕ್ಷಣ ಚಿಕಿತ್ಸೆಯನ್ನು ಪ್ರಾರಂಭ ಮಾಡಿ ವೇಗವಾಗಿ ಕೋವಿಡ್ ನಿಯಂತ್ರಣ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿಗಳಾದ ಡಾ || ಅಶ್ವಥ್ ನಾರಾಯಣ ಸಿ.ಎನ್ . ಅವರು ತಿಳಿಸಿದರು .

ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯ ಡಿಜಿಟಲ್ ಅರೋಗ್ಯ ವಾಹಿನಿಯಲ್ಲಿರುವ ಕೋವಿಡ್ ವಾರ್ ರೂಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ , ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು .
ಕೊವಿಡ್ ಎರಡನೇ ಅಲೆಯಿಂದ ಜಿಲ್ಲೆಯೂ ಸಾಕಷ್ಟು ಸಮಸ್ಯೆಗೀಡಾಗಿದ್ದು ಆಮ್ಲಜನಕ , ರಮ್‌ಡಿಸಿಎ‌ , ಐಸಿಯು ಹಾಸಿಗೆಗಳು , ವೆಂಟಿಲೇಟರ್‌ , ರಿಮೋಟ್ ಐಸಿಯು , ಕೋವಿಡ್ ಪರೀಕ್ಷೆ , ಫಲಿತಾಂಶ ಮತ್ತಿತರೆ ಸೌಲಭ್ಯಗಳ ಬಗ್ಗೆ ಅವರು ಪರಿಶೀಲನೆ ಮಾಡಿ , ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು .
ಆಸ್ಪತ್ರೆ ಹಾಗೂ ಕೋವಿಡ್ ವಾರ್ ರೂಂನಲ್ಲಿರುವ ಕೊರತೆಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು . ವಾರ್ ರೂಮ್ ಸಿಬ್ಬಂದಿಯವರೊಂದಿಗೆ ಸಮಾಲೋಚನೆ ನಡೆಸಿ , ಎರಡನೇ ಅಲೆ ತಡೆಗಟ್ಟುತ್ತಿರುವ ವಿಧಾನವನ್ನು ಪರಿಶೀಲಿಸಿದರು . ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಮಾಹಿತಿ ಪಡೆದರು . ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ , ಅದನ್ನು ಮತ್ತಷ್ಟು ಉತ್ತಮ ಪಡಿಸುವ ಬಗ್ಗೆ ವೈದ್ಯರಿಗೆ ಸಲಹೆ ನೀಡಿದರು . ಏನು ಕೋಲಾರ ವಾರ್ ರೂಂ ಬಹಳ ಚೆನ್ನಾಗಿದೆ . ಉತ್ತಮ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಮೆಚ್ಚುಗೆ ಸೂಚಿಸಿದರು . ಜಿಲ್ಲೆಯ ಸಮಗ್ರ ಮಾಹಿತಿಯನ್ನು ಇಲ್ಲಿಗೆ ಒದಗಿಸಿದರೆ ಸರಕಾರಕ್ಕೆ ಸೌಲಭ್ಯಗಳನ್ನು ಕೊಡುವುದು ಸುಲಭವಾಗುತ್ತದೆ ಎಂದು ಹೇಳಿದರು .
ಕೋವಿಡ್ ಎರಡೂ ಅಲೆಗಳ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದವರ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣಕ್ಕೆ , ವೈದ್ಯಾಧಿಕಾರಿಯನ್ನು ಮೊದಲ ಅಲೆ ಬಂದಾಗಿನಿಂದ ಮಾಡುತ್ತಿದ್ದೀರಿ ? ಎಷ್ಟು ಸೋಂಕಿತರು ಬಂದರು ? ಎಷ್ಟು ಜನ ದಾಖಲಾದರು ? ಎಷ್ಟು ಜನ ಚಿಕಿತ್ಸೆ ಪಡೆದರು ? ಇತ್ಯಾದಿ ಮಾಹಿತಿ ಇಲ್ಲದಿದ್ದರೆ ಹೇಗೆ ? ಸರಿಯಾಗಿ ಮಾಹಿತಿಯೇ ಇಲ್ಲದಿದ್ದರೆ ನೀವು ಉತ್ತಮ ಸೌಲಭ್ಯ ನೀಡಲು ಪೂರ್ವ ಸಿದ್ಧತೆ ಮಾಡಿಕೊಳ್ಳಲು ಹೇಗೆ ಸಾಧ್ಯ ? ಎಂದು ಮಾಹಿತಿ ಕೇಳಿದರು . ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ , ಕೋವಿಡ್ ಸೋಂಕಿತರಾಗಿ ಮನೆಗಳಲ್ಲಿ ಮತ್ತು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರವವರ ಮಾಹಿತಿಯನ್ನು ಸರಿಯಾಗಿ ಸಂಗ್ರಹ ಮಾಡಬೇಕೆಂದು ಸೂಚಿಸಲಾಗಿದೆ .
ಪ್ರತಿ ಮಾಹಿತಿಯನ್ನು ಕೋವಿಡ್ ವಾರ್ ರೂಂಗೆ ಅಪ್‌ಡೇಟ್ ಮಾಡಬೇಕು . ಪ್ರತಿ ಸೋಂಕಿನ ಮಾಹಿತಿಯನ್ನು ಚಾಚೂ ತಪ್ಪದೇ ಇಟ್ಟಿರಬೇಕು . ಹೋಮ್ ಐಸೋಲೇಷನ್ ಆದವರು ಮಾತ್ರವಲ್ಲ ಉಳಿದೆಲ್ಲ ಸೋಂಕಿತರಿಗೆ ಇರುವ ಸೌಲಭ್ಯ ಮತ್ತಿತರೆ ಎಲ್ಲ ಅಂಶಗಳ ಬಗ್ಗೆಯೂ ಕಾಲ್ ಸೆಂಟರ್‌ಗೆ ಮಾಹಿತಿ ನೀಡಬೇಕು ಎಂದರು . ಯಾವುದೇ ಕಾರಣಕ್ಕೂ ಹೊರಗೆ ಭೇಟಿ ನೀಡುವ ಸಿಬ್ಬಂದಿ ಕೈಯ್ಯಲ್ಲಿ ಔಷಧಿ ಕೊರತೆ ಆಗದಂತೆ ನೋಡಿಕೊಳ್ಳಬೇಕು . ಇವತ್ತು ಶೇ .80 ರಿಂದ 90 ರಷ್ಟು ಸೋಂಕಿತರು ಮನೆಗಳಲ್ಲಿಯೇ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಹೀಗಾಗಿ ಔಷಧಿ ಕೊರತೆ ಇರಬಾರದು . ಔಷಧಿಯ ಜೊತೆಗೆ ಅವರಿಗೆ ಅಗತ್ಯ ಮಾಹಿತಿಯನ್ನೂ ಕಾಲ ಕಾಲಕ್ಕೆ ಕೊಡುತ್ತಿರಬೇಕು ಎಂದು ತಿಳಿಸಿದ್ದೇನೆ ಎಂದರು . ಜಿಲ್ಲೆಯಲ್ಲಿ ದಿನಕ್ಕೆ 1,400 ಜನರ ಸ್ಯಾಂಪಲ್ ಪರೀಕ್ಷೆ ನಡೆಯುತ್ತಿತ್ತು . ಇದುವರೆಗೂ ಇಲ್ಲಿ ‘ ಎ ‘ ಸಿಂಪ್ಲಾಮಿಕ್ ಹೊಂದಿರುವವರ ಪರೀಕ್ಷೆಯನ್ನು ಮಾಡಲಾಗುತ್ತಿತ್ತು . ಇನ್ನು ಮುಂದೆ ರೋಗ ಲಕ್ಷಣ ಇರುವವರ ಸ್ಯಾಂಪಲ್ ಮಾತ್ರ ತೆಗೆದುಕೊಳ್ಳಿ ಎಂದು ಸೂಚಿಸಿದ್ದೇನೆ . ದಿನಕ್ಕೆ ಸರಾಸರಿ 300 ಜನರಿಗೆ ಪಾಸಿಟೀವ್ ಬರುತ್ತಿದೆ . ಸ್ಯಾಂಪಲ್ ಪಡೆಯುವುದರ ಜತೆಗೆ ಅಷ್ಟೇ ಬೇಗ ರಿಸಲ್ಟ್ ಕೂಡ ಕೊಡಬೇಕು . ಆಯಾ ದಿನ ಸಂಗ್ರಹ ಮಾಡಿದ ದಿನವೇ ರಿಸಲ್ಟ್ ಕೊಡಲೇಬೇಕು . ಬಾಕಿ ಉಳಿಸಿಕೊಳ್ಳಬಾರದು . ನನಗೆ ಸಿಕ್ಕಿದ ಮಾಹಿತಿ ಪ್ರಕಾರ 6,500 ಸ್ಯಾಂಪಲ್ ಬಾಕಿ ಇದೆ . ಅದನ್ನು ಕೂಡಲೇ ಕ್ಲಿಯರ್ ಮಾಡಬೇಕು . ಪಾಸಿಟೀವ್ ಬಂದ ಕೂಡಲೇ ಚಿಕಿತ್ಸೆ ಆರಂಭ ಮಾಡಬೇಕು . ರಕ್ತ ಪರೀಕ್ಷೆ , ಎಲ್ಲಾ ಪರೀಕ್ಷೆಗಳು ಶೀಘ್ರಗತಿಯಲ್ಲಿ ನಡೆಸಬೇಕು ಎಂದು ನಿರ್ದೇಶನ ನೀಡಿದ್ದೇನೆ ಎಂದರು . ಆಸ್ಪತ್ರೆಯಲ್ಲಿ ಹಾಸಿಗೆಗಳ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು . ಈಗ ಆಸ್ಪತ್ರೆಯಲ್ಲಿ 500 ಬೆಡ್‌ಗಳಿವೆ . ಅದರಲ್ಲಿ ಹಾಸಿಗೆಗಳನ್ನು ಮಕ್ಕಳು , ತಾಯಂದಿರಿಗೆ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲೂ ಆಕ್ಸಿಜನ್ ಬೆಡ್‌ಗಳನ್ನು ಹೆಚ್ಚಿಸಲಾಗುವುದು . ಜಿಲ್ಲಾಸ್ಪತ್ರೆಯಲ್ಲಿ 100 ಮೀಸಲು ಇಡಲಾಗಿದೆ . ರೆಮ್‌ಡಿಸಿವಿ‌ ಸೇರಿ ಸಾಕಷ್ಟು ಔಷಧಿ ಸಂಗ್ರಹ ಇದೆ . ಅಗತ್ಯವಾದರೆ ಖಾಸಗಿ ಆಸ್ಪತ್ರೆಯವರು ಆನ್‌ಲೈನ್‌ನಲ್ಲಿ ಬೇಡಿಕೆ ಸಲ್ಲಿಸಿ ತಕ್ಷಣ ಪಡೆಯಬಹುದು ಎಂದ ಅವರು , ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲೂ ಚಿಕಿತ್ಸೆಯನ್ನು ಚುರುಕು ಮಾಡಬೇಕು ಹಾಗೂ ವ್ಯಾಕ್ಸಿನೇಷನ್ ಅಭಿಯಾನಕ್ಕೆ ವೇಗ ಕೊಡಬೇಕು ಎಂದು ಸೂಚಿಸಿದ್ದೇನೆ ಎಂದರು . ಆಮ್ಲಜನಕ ಪೂರೈಕೆ ಬಗ್ಗೆ ಪರಿಶೀಲನೆ ನಡೆಸಿದ್ದೇನೆ . ಎಸ್ ಎನ್ ಆರ್ ಆಸ್ಪತ್ರೆಯಲ್ಲಿ ಒಂದು ಜಂಬೋ ಸಿಲಿಂಡರ್‌ , ಒಂದು ಡ್ಯೂರಾ ಸಿಲಿಂಡರ್ ಇದೆ . ಅವುಗಳ ಸಂಗ್ರಹ ಪ್ರಮಾಣ 6 ಸಾವಿರ ಲೀಟರ್‌ಗೆ ಹೆಚ್ಚಿಸಲು ಸೂಚಿಸಿದ್ದೇನೆ . ಐಸಿಯುಗೆ ಪ್ರತ್ಯೇಕ ಪೈಪ್‌ಲೈನ್‌ ಮಾಡಲಾಗುವುದು , ಈಗಿರುವ ಪೈಪ್‌ಲೈನ್‌ಗೆ 60 ಪಾಯಿಂಟ್ಸ್ ಕ್ಯಾರಿ ಮಾಡುವ ಸಾಮರ್ಥ್ಯ ಇದೆ . ಅದನ್ನು 200 ಪಾಯಿಂಟ್ಸ್ ಪ್ರಮಾಣಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು . ಸಭೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ , ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ , ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸ ಗೌಡ , ಜಿಲ್ಲಾಧಿಕಾರಿಗಳಾದ ಡಾ || ಆರ್.ಸೆಲ್ವಮಣಿ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್‌ರೆಡ್ಡಿ , ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕ್ಕಿಯಾ ಕರುಣಾಕರನ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ವಿಜಯ್ ಕುಮಾರ್ , ಡಾ || ಜಗದೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು
.