ಪ್ರೆಸ್ ಕ್ಲಬ್ ವಿಷಯದಲ್ಲಿ ಗೊಂದಲಕ್ಕೆ ಒಳಗಾಗಬೇಡಿ: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸ್ಪಷ್ಟನೆ

JANANUDI.COM NETWORK

ಪ್ರೆಸ್ ಕ್ಲಬ್ ವಿಷಯದಲ್ಲಿ ಗೊಂದಲಕ್ಕೆ ಒಳಗಾಗಬೇಡಿ: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಪಷ್ಟನೆ
ಕುಂದಾಪುರ: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಹೆಸರನ್ನೇ ಹೋಲುವ ಇನ್ನೊಂದು ಸಂಘಟನೆಯ ಹೆಸರಿನಲ್ಲಿ ‘ಪ್ರೆಸ್ ಕ್ಲಬ್’ ಉದ್ಘಾಟನಾ ಕಾರ್ಯಕ್ರಮ ಎಂಬ ಆಹ್ವಾನ ಪತ್ರಿಕೆಯೊಂದು ಸೊಷಿಯಲ್ ಮೀಡಿಯಾದಲ್ಲಿ ಕಂಡುಬಂದಿದ್ದು ಈ ಕುರಿತು ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದು ಎಂದು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಕಟಣೆ ತಿಳಿಸಿದೆ.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾನ್ಯತೆ ಹೊಂದಿರುವ ಅಧಿಕೃತ ಪತ್ರಕರ್ತರ ಸಂಘಟನೆಯಾಗಿದೆ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ವಾಣಿಜ್ಯ ಸಂಕೀರ್ಣದಲ್ಲಿ ಸಂಘದ ಕಛೇರಿ ಮತ್ತು ಪ್ರೆಸ್ ಕ್ಲಬ್ ಇದ್ದು ಸಂಸ್ಥೆಗೆ ಮೂವತ್ತಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಮಾನ್ಯತೆ ಪಡೆದಿರುವ ನಮ್ಮ ಸಂಘಕ್ಕೂ ಮತ್ತು ನಮ್ಮ ಸಂಘದ ಹೆಸರನ್ನೇ ಹೋಲುವ ಇನ್ನೊಂದು ಸಂಘಟನೆಯ ಪ್ರೆಸ್ ಕ್ಲಬ್ ಅಥವಾ ಇತರ ಯಾವುದೇ ಚಟುವಟಿಕೆಗಳಿಗೂ ಸಂಬಂಧವಿಲ್ಲ ಮತ್ತು ಈ ಕುರಿತು ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗಬಾರದು ಎಂದು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ವಿನಂತಿಸಿದೆ.

ಕನ್ನಡದ ಎಲ್ಲ ದಿನಪತ್ರಿಕೆಗಳು, ಟಿವಿ ಚಾನಲ್‌ಗಳು, ಸ್ಥಳೀಯ ಪತ್ರಿಕೆಗಳಲ್ಲಿ ಕೆಲಸ ಮಾಡುವ ವರದಿಗಾರರು, ಬಿಡಿಸುದ್ದಿಗಾರರು (ಸ್ಟ್ರಿಂಜರ್ಸ್), ಸಂಪಾದಕರು ಮತ್ತು ಇತರ ಪತ್ರಕರ್ತರು ನಮ್ಮ ಸಂಘದ ಸದಸ್ಯರಾಗಿದ್ದು ಸಂಘವು 63 ಸದಸ್ಯ ಬಲವನ್ನು ಹೊಂದಿದೆ. ತಾಲೂಕಿನ ಎಲ್ಲ ರಾಜಕೀಯ ಪಕ್ಷಗಳು, ಸಂಘಸಂಸ್ಥೆಗಳು, ಉದ್ಯಮಗಳು, ವ್ಯಕ್ತಿಗಳು ಸೇರಿದಂತೆ ಎಲ್ಲರ ಪತ್ರಿಕಾಗೋಷ್ಟಿಗಳು ಹಾಗೂ ಇತರ ಸಂಬಂಧಿತ ಚಟುವಟಿಕೆಗಳು ನಮ್ಮ ಪ್ರೆಸ್ ಕ್ಲಬ್‌ನ ಆಶ್ರಯದಲ್ಲೇ ನಡೆಯುತ್ತಿದ್ದು ಇದು ಮುಂದೆಯೂ ಮುಂದುವರಿಯಲಿದೆ. ಈ ಕುರಿತು ಸಾರ್ವಜನಿಕರಲ್ಲಿ ಯಾವುದೇ ಗೊಂದಲ ಬೇಡ ಎಂದು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ್ಯ ಶಶಿಧರ ಹೆಮ್ಮಾಡಿ ಮತ್ತು ಪ್ರಧಾನ ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.