ಪ್ರಸಿದ್ಧ ಹೋಟೆಲ್ ಉದ್ಯಮಿಯಾಗಿದ್ದ ಕೃಷ್ಣಮೂರ್ತಿ ಕಾಳಾವರ (78) -ನಿಧನ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಕೋಟೇಶ್ವರ ಸಮೀಪದ ಕಾಳಾವರ ಮೂಲದವರಾಗಿದ್ದು, ಆಂಧ್ರಪ್ರದೇಶದ ಧರ್ಮಾವರಂ ನಲ್ಲಿ ಪ್ರಸಿದ್ಧ ಹೋಟೆಲ್ ಉದ್ಯಮಿಯಾಗಿದ್ದ ಕೃಷ್ಣಮೂರ್ತಿ ಕಾಳಾವರ (78) ಜ.13ರ ಬುಧವಾರ ಮುಂಜಾನೆ ಧರ್ಮಾವರಂ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.

ದಾನಿಗಳೂ ಧರ್ಮಬೀರುಗಳೂ ಆಗಿದ್ದ ಇವರು ಕಾಳಾವರದ ಶ್ರೀ ಮಹಾಲಿಂಗೇಶ್ವರ ದೇವರ ರಜತ ಮುಖವಾಡ ರಚನೆ ಹಾಗೂ ವಿವಿಧೆಡೆಗಳ ಹಲವಾರು ಕಾರ್ಯಗಳಿಗೆ ದೇಣಿಗೆ ನೀಡಿ ಸಹಕರಿಸಿದ್ದರು. ಕರಾವಳಿ ಭಾಗದಿಂದ ಧರ್ಮಾವರಂಗೆ ಆಗಮಿಸುವ ಕರ್ನಾಟಕದವರಿಗೆ ತಮ್ಮ ಹೋಟೆಲ್ ಗಳಲ್ಲಿ ಆತಿಥ್ಯ ನೀಡಿ ಸತ್ಕರಿಸುತ್ತಿದ್ದರು. ಕಾಳಾವರದ ಪ್ರಸಿದ್ಧ ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ಮತ್ತು ಶ್ರೀ ಮಹಾಲಿಂಗೇಶ್ವರ ದೇವಳ ವ್ಯವಸ್ಥಾಪನಾ ಸಮಿತಿ ಹಾಗೂ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಗಳ ಮಾಜಿ ಅಧ್ಯಕ್ಷರಾದ ಪ್ರೊ. ಶಂಕರ ರಾವ್ ಕಾಳಾವರರ ಸಹೋದರರಾದ ಇವರು, ಸುಮಾರು ಏಳು ದಶಕಗಳಿಂದಲೂ ಧರ್ಮಾವರಂ ನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಾ ಆ ಪ್ರದೇಶದಲ್ಲಿ ತಮ್ಮ ಸತ್ಕಾಯಗಳಿಂದ ಖ್ಯಾತರಾಗಿದ್ದರು. ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.