ಬಿಜೆಪಿ ಕಾರ್ಯಕರ್ತರು ಪ್ರಶಿಕ್ಷಣ ಪಡೆದು ಭವಿಷ್ಯದ ನಾಯಕರಾಗಬೇಕು : ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್‌.ವೇಣುಗೋಪಾಲ್‌

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಬಿಜೆಪಿ ಕಾರ್ಯಕರ್ತರು ಪ್ರಶಿಕ್ಷಣ ಪಡೆದು ಭವಿಷ್ಯದ ನಾಯಕರಾಗಬೇಕು ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್‌.ವೇಣುಗೋಪಾಲ್‌ ಹೇಳಿದರು.  ಪಟ್ಟಣದ ಹೊರವಲಯದ ವಿಐಪಿ ಪಬ್ಲಿಕ್‌ ಸ್ಕೂಲ್‌ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಮಂಡಲ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿ, ಕಾರ್ಯಕರ್ತರು ಪಕ್ಷದ ನಿಜವಾದ ಆಸ್ತಿ. ಸಾಂಘಿಕ ಪ್ರಯತ್ನದ ಮೂಲಕ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಹೇಳಿದರು.  ಬಿಜೆಪಿ ಅತಿ ಹೆಚ್ಚು ಸಂಖ್ಯೆಯ ಕಾರ್ಯಕರ್ತರನ್ನು ಒಳಗೊಂಡಿರುವ ಏಕೈಕ ರಾಜಕೀಯ ಪಕ್ಷವಾಗಿದೆ. ವಿಚಾರ ಮರೆತು ಸ್ವಾರ್ಥಕ್ಕೆ ಇಂಬುಗೊಡು ಯಾವುದೇ ಪಕ್ಷಕ್ಕೆ ಭವಿಷ್ಯ ಇರುವುದಿಲ್ಲ. ಕಾಂಗ್ರೆಸ್ ಅದಕ್ಕೆ ಉತ್ತಮ ನಿದರ್ಶನವಾಗಿದೆ. ವಿಚಾರದಿಂದ ದೂರವಾಗಿ ವ್ಯಕ್ತಿ ಪೂಜೆಗೆ ಇಳಿದ ಪರಿಣಾಮವಾಗಿ ಲೋಕಸಭೆಯಲ್ಲಿ 40 ಸ್ಥಾನಗಳಿಗೆ ತೃಪ್ತಿ ಪಡಬೇಕಾಯಿತು. ಬಿಜೆಪಿ ವಿಚಾರಗಳಿಗೆ ಕಟ್ಟು ಬಿದ್ದುದರ ಫಲವಾಗಿ 303 ಸ್ಥಾನ ಪಡೆದು ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.  ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡಂತೆ ಇಂದು ಕೇಂದ್ರ ಹಾಗೂ ರಾಜ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಬಿಜೆಪಿ ನಾಯಕರು, ಹಿಂದೆ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷದ ಸಂಘಟನೆಗೆ ಶ್ರಮಿಸಿದ್ದಾರೆ. ಅವರ ತೋರಿದ ಮಾರ್ಗದಲ್ಲಿ ಕಾರ್ಯಕರ್ತರು ನಡೆಯಬೇಕು. ಬೂತ್‌ ಮಟ್ಟದಿಂದ ಪಕ್ಷವನ್ನು ಸಂಘಟಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಯನ್ನು ಜನರ ಗಮನಕ್ಕೆ ತರಬೇಕು ಎಂದು ಹೇಳಿದರು.  ಮುಖಂಡರಾದ ಕೃಷ್ಣಮೂರ್ತಿ, ಎಸ್‌.ವಿ.ಮುನಿವೆಂಕಟಪ್ಪ, ರಾಜೀವ್‌, ಎಂ.ಲಕ್ಷ್ಮಣಗೌಡ, ಅಶೋಕರೆಡ್ಡಿ, ವೆಂಕಟೇಗೌಡ, ಇ.ಶಿವಣ್ಣ, ವಿಐಪಿ ನಾಗರಾಜ್‌, ಜಯರಾಮರೆಡ್ಡಿ, ಶಿವಶಂಕರರೆಡ್ಡಿ ಇದ್ದರು.