

ಕುಂದಾಪುರ ; “ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಪ್ರಿಲ್ 1 ರಿಂದ ಆಗಿರುವ ಬದಲಾವಣೆ, ಪರಿಷ್ಕರಣೆ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕಾದುದು ಬಹಳ ಮುಖ್ಯ. ಡಿಜಿಟಲ್ ಬ್ಯಾಂಕಿಂಗ್ ಮತ್ತು ಆಧುನಿಕ ಬ್ಯಾಂಕ್ ಸೇವೆಗಳು ಜನ ಜೀವನದಲ್ಲಿ ಮುಂದೆ ಬಹಳ ಪ್ರಾಮುಖ್ಯತೆ ಪಡೆಯುತ್ತದೆ” ಎಂದು ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಡೆಪ್ಯೂಟಿ ಮೆನೇಜರ್, ಕಾನೂನು ತಜ್ಞ ಹಾಗೂ ಅಂಕಣಗಾರ ವಿ. ಮೋಹನ್ ರಾವ್ ಹೇಳಿದರು.
ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆದ ನೂತನ ಬ್ಯಾಂಕಿಂಗ್ ಸೇವೆ ಬಗ್ಗೆ ಅವರು ಅಂತಿಮ ಬಿಕಾಂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದರು.
ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಬಗ್ಗೆ ಮಾಹಿತಿ, ಈ ಕಾರ್ಡ್ಗಳನ್ನು ಪಡೆಯುವ ಬಗ್ಗೆ ಉಪಯೋಗಿಸುವ ಬಗ್ಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ NEFT, RTGS ಸೇವೆ ಬಗ್ಗೆಯೂ ವಿವರಿಸಿದ ಅವರು, ಚೆಕ್ ರಾಷ್ಟ್ರದ ವಿವಿಧ ಶಾಖೆಗಳಲ್ಲಿ ನಗದೀಕರಣದ ಬಗ್ಗೆಯೂ ಸಲಹೆ ನೀಡಿದರು. ಡಿಜಿಟಲ್ ಸೇವಿಂಗ್ಸ್ ಬ್ಯಾಂಕ್ ಅಕೌಂಟ್, ಡಿಜಿಟಲ್ ಲೋನ್ ಅಕೌಂಟ್ ಬಗ್ಗೆಯೂ ಅರಿವು ಮೂಡಿಸಿದರು.
ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ಇಂಟರ್ನೆಟ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಬಗ್ಗೆ ಉತ್ತರ ನೀಡಿದ ಅವರು ಈಗ ಬ್ಯಾಂಕ್ ಮೂಲಕ ಪಾವತಿಸಬಹುದಾದ ಎಲ್ಲಾ ಆಧುನಿಕ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು.
ಬ್ಯಾಂಕಿಂಗ್ ಸೇವೆ ಬಗ್ಗೆ ಸ್ಕ್ರೀನ್ಶಾಟ್ ಪಡೆಯುವುದು, ರೆಕಾರ್ಡಿಂಗ್ ಮಾಡುವುದು, ಬ್ಯಾಂಕಿಂಗ್ ಆ್ಯಪ್ ಉಪಯೋಗಿಸುವುದು, ಡುಪ್ಲಿಕೇಟ್ ಬ್ಯಾಂಕಿಂಗ್ ಆ್ಯಪ್ಗಳ ಬಳಕೆ, ಒಟಿಪಿ ವ್ಯವಸ್ಥೆ, ಆಧಾರ್ ಮತ್ತು ಇತರ ಮಾಹಿತಿಗಳು, ಎಟಿಎಂ ಹಾಗೂ ಯುಪಿಐ ಸೌಲಭ್ಯ ಬಳಕೆ ಬಗ್ಗೆ ತಿಳುವಳಿಕೆ, ಹತ್ತು ಲಕ್ಷಕ್ಕೂ ಹೆಚ್ಚು ಮೊತ್ತ ಠೇವಣಿ ಬಗ್ಗೆ ಆದಾಯ ತೆರಿಗೆ ನೀಡಬೇಕಾದ ಮಾಹಿತಿ ಮುಂತಾದ ವಿಚಾರ ಸವಿಸ್ತಾರವಾಗಿ ತಿಳಿಸಿದರು.
ವಿದ್ಯಾರ್ಥಿಗಳ ಪ್ರತಿಕ್ರಿಯೆಯಿಂದ ಸಂತೋಷಗೊಂಡ ಮೋಹನ್ ರಾವ್ ಅಂದಿನ ಹಾಗೂ ಇಂದಿನ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿರುವ ಬದಲಾವಣೆ ಬಗ್ಗೆ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ನೀಡಿದರು.
ಕಾಮರ್ಸ್ ವಿಭಾಗದ ಮುಖ್ಯಸ್ಥರಾದ ಅರುಣ್ ಎ. ಎಸ್. ಸ್ವಾಗತಿಸಿದರು.
ಕಾಮರ್ಸ್ ಅಸೋಸಿಯೇಶನ್ ಕೋ-ಆರ್ಡಿನೇಟ್ ಮಮತಾ ಅತಿಥಿಯನ್ನು ಪರಿಚಯಿಸಿದರು. ಕಾರ್ಯಕ್ರಮ ಸಂಯೋಜಕ ಗಣೇಶ್ ಕುಮಾರ್ ವಂದಿಸಿದರು.


