ಪಠ್ಯ–ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ವೃದ್ಧಿ

ಶ್ರೀನಿವಾಸಪುರ: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಅವರಲ್ಲಿ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ ಎಂದು ತಾಲ್ಲೂಕು ಯೋಜನಾಧಿಕಾರಿ (ಟಿಪಿಒ) ಎಸ್. ವೆಂಕಟಸ್ವಾಮಿ ಹೇಳಿದರು. ತಾಲೂಕಿನ ಯಲ್ದೂರು ಗ್ರಾಮದಲ್ಲಿನ ಶ್ರೀ ಶ್ರೀನಿವಾಸ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಅಂತರ್‌ಶಾಲಾ ರಸಪ್ರಶ್ನೆ ಸ್ಪರ್ಧೆ ಹಾಗೂ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯೆ ಎಂಬುದು ಯಾರೊಬ್ಬರ ಸ್ವತ್ತಲ್ಲ. ಆಸಕ್ತಿ ಮತ್ತು ಶ್ರಮದಿಂದ ವಿದ್ಯೆ ಕಲಿಯುವವರಿಗೆ ಮಾತ್ರ ಅದು ಒಲಿಯುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಯಾವುದೇ ಕಾರಣಕ್ಕೂ ಹೋಲಿಕೆ ಮಾಡಬಾರದು. ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮವಾಗಿದ್ದು, ಪ್ರತಿಯೊಬ್ಬ ಮಗುವಿನಲ್ಲಿಯೂ ತಮ್ಮದೇ ಆದ ಸಾಮರ್ಥ್ಯ ಹಾಗೂ ಜ್ಞಾನ ಅಡಗಿದೆ. ಅದನ್ನು ಗುರುತಿಸಿ ಜಾಗೃತಿಯಿಂದ ಮಕ್ಕಳನ್ನು ಬೆಳೆಸಬೇಕಾಗಿದೆ ಎಂದು ಸಲಹೆ ನೀಡಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎನ್. ರವೀಂದ್ರನಾಥ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಮಾಡಲು ಎಲ್ಲ ಕ್ಷೇತ್ರಗಳಲ್ಲಿಯೂ ನಿರಂತರ ಶ್ರಮ ಅಗತ್ಯ. ವಿದ್ಯಾರ್ಥಿಗಳು ತಮ್ಮ ಮುಂದಿನ ಗುರಿ ಹಾಗೂ ಆಸಕ್ತ ಕ್ಷೇತ್ರವನ್ನು ಮೊದಲೇ ಆಯ್ಕೆ ಮಾಡಿಕೊಂಡು, ಅದಕ್ಕೆ ಸಂಬಂಧಿಸಿದ ಪಠ್ಯಕ್ರಮವನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡಬೇಕು. ಶಿಸ್ತು, ಸಂಯಮ ಹಾಗೂ ಆತ್ಮನಿಯಂತ್ರಣದೊಂದಿಗೆ ನಿರಂತರ ಅಭ್ಯಾಸವೇ ಯಶಸ್ಸಿನ ಮೂಲಮಂತ್ರ ಎಂದು ಹೇಳಿದರು.
ಶಿಕ್ಷಣಪ್ರೇಮಿ ಜೆ. ಎಸ್. ಮಣಿ ಮಾತನಾಡಿ, ವಿದ್ಯಾರ್ಥಿಗಳು ಕಾಲಹರಣ ಮಾಡದೆ ಓದಿನ ಕಡೆ ಹೆಚ್ಚು ಗಮನ ಹರಿಸಬೇಕು. ಪೋಷಕರ ವಿಶ್ವಾಸ ಮತ್ತು ಭರವಸೆಯನ್ನು ನೆರವೇರಿಸುವಂತೆ ಪರಿಶ್ರಮ ಪಡಬೇಕು. ಹಿರಿಯರ ಆದರ್ಶವನ್ನು ಅನುಸರಿಸಿ ದೊರಕುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿ ಆರ್. ಅಮರೇಶ್, ಶಿಕ್ಷಣಪ್ರೇಮಿಗಳಾದ ಟಿ. ಎಸ್. ನಾಗರಾಜ್, ವಿ. ರಾಮಂಜಿ, ಎಸ್. ಲಕ್ಷ್ಮಣಬಾಬು, ಕಿಶೋರ್, ಕೆ. ಪ್ರಕಾಶಯ್ಯ, ಕುವೆಂಪು ಪ್ರೌಢಶಾಲೆ ಮುಖ್ಯಶಿಕ್ಷಕ ವಿ. ನಾಗರಾಜ್, ಮುಳಬಾಗಿಲು ಜ್ಞಾನವಾಹಿನಿ ಶಾಲೆ ಶಿಕ್ಷಕ ಚಂದ್ರಶೇಖರ್, ಸರಸ್ವತಿ ಶಾಲೆ ಮುಖ್ಯಶಿಕ್ಷಕ ನಾಗರಾಜ್, ಶಾಲೆಯ ಮುಖ್ಯಶಿಕ್ಷಕ ಎನ್. ಆರ್. ರಮೇಶ್ ಸೇರಿದಂತೆ ಶಿಕ್ಷಕರಾದ ಶಶಿಕಲಾ, ರೂಪ, ಜವೇರಿಯಾ, ಅಂಜುಂ, ಆಯೆಷಾಖಾನಂ, ಶಮಾಸುಲ್ತಾನ, ಜಯರಾಜ್, ಆನಂದ್, ಮುನಿರತ್ನಮ್ಮ ಉಪಸ್ಥಿತರಿದ್ದರು.