

ಶ್ರೀನಿವಾಸಪುರ: ತಾಲ್ಲೂಕಿನ ಸರ್ಕಾರಿ ಮೌಲಾನಾ ಅಜಾದ್ ಉರ್ದು ಪ್ರಾಥಮಿಕ ಶಾಲೆಯಲ್ಲಿ ಉರ್ದು ಮಾಧ್ಯಮದ ಶಾಲೆಗಳ ಶೈಕ್ಷಣಿಕ ಪರಿಶೀಲನಾ ಸಭೆ ಜರುಗಿತು. ಈ ಸಭೆಯಲ್ಲಿ ಇ ಸಿ ಒ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು (ಸಿಆರ್ಪಿ) ಹಾಗೂ ಎಲ್ಲಾ ಉರ್ದು ಶಾಲೆಗಳ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.
ಸಭೆಯ ವಿಶೇಷ ಆಕರ್ಷಣೆಯಾಗಿ ಪ್ರಧಾನಮಂತ್ರಿ ಹೊಸ 15 ಅಂಶಗಳ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮದಡಿ ರಚಿಸಲಾದ ಜಿಲ್ಲಾ ಮಟ್ಟದ ಸಮಿತಿಯ (DLC) ಸದಸ್ಯರಾದ ಶಬ್ಬೀರ್ ಅಹ್ಮದ್ ಅವರು ಉಪಸ್ಥಿತರಿದ್ದರು.
ಸಭೆಯಲ್ಲಿ ಮಾತನಾಡಿದ ಶಬ್ಬೀರ್ ಅಹ್ಮದ್ ಅವರು, “ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವುದು ಅವರ ಭವಿಷ್ಯ ನಿರ್ಮಾಣಕ್ಕೂ, ಸಮುದಾಯದ ಪ್ರಗತಿಗೂ ಅಗತ್ಯವಿದೆ,” ಎಂದು ಹೇಳಿದರು. ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ನೀತಿಯುತವಾಗಿ ನಿಭಾಯಿಸಬೇಕು ಮತ್ತು ಪೋಷಕರೂ ತಮ್ಮ ಮಕ್ಕಳನ್ನು ಪಠಶಾಲೆಗೆ ಕಳುಹಿಸುವ ಮೂಲಕ ಸಮಾಜದ ಸುಧಾರಣೆಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.
ಅವರು ಶಾಲೆಗಳ ಮುಖ್ಯ ಶಿಕ್ಷಕರಿಂದ ವಿವಿಧ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು ಮಕ್ಕಳ ದಾಖಲಾತಿ ಕಡಿಮೆಯಾದುದು, ಮೂಲಸೌಕರ್ಯಗಳ ಕೊರತೆ, ಶೌಚಾಲಯಗಳ ಅನುಪಸ್ಥಿತಿ ಮತ್ತು ಕುಡಿಯುವ ನೀರಿನ ಅಲಭ್ಯತೆ ಮೊದಲಾದವು ಈ ಸಂದರ್ಭದಲ್ಲಿ ಚರ್ಚೆಗೆ ಬಂದವು.
ಇದಕ್ಕೆ ಪ್ರತಿಯಾಗಿ ಸಿಆರ್ಪಿಗಳು, ಶಿಕ್ಷಕರು ಸ್ಥಳೀಯ ಸಮುದಾಯದೊಂದಿಗೆ ಉತ್ತಮ ಸಂಬಂಧ ಬೆಳೆಸಬೇಕು, ಮಕ್ಕಳನ್ನು ಶಾಲೆಗೆ ಸೆಳೆಯುವ ಹೊಸ ಯೋಜನೆಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ಸಿಆರ್ಪಿ (ಉರ್ದು) ಆರಿಫ್ ಪಾಷಾ ಅವರು ಇಲಾಖೆಯಿಂದ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಮತ್ತು ಎಫ್ ಎಲ್ ಎನ್ ಬಗ್ಗೆ ವಿವರಿಸಿ, ಶಿಕ್ಷಕರು ಅವನ್ನು ಪರಿಣಾಮಕಾರಿಯಾಗಿ ಅಳವಡಿಸಬೇಕೆಂದು ಸೂಚಿಸಿದರು.
ಇ ಸಿ ಒ(ಉರ್ದು) ಮೊಹಮ್ಮದ್ ಸಾದಿಕ್ ಅವರು ಶಿಕ್ಷಕರ ಶ್ರಮವನ್ನು ಶ್ಲಾಘಿಸಿದರು ಮತ್ತು ಪೋಷಕರಿಗೆ ಜಾಗೃತಿ ಮೂಡಿಸುವ ಮೂಲಕ ಮಕ್ಕಳನ್ನು ಸರ್ಕಾರಿ ಉರ್ದು ಶಾಲೆಗಳಲ್ಲಿ ದಾಖಲಿಸುವಂತೆ ಪ್ರೋತ್ಸಾಹಿಸಿದರು.
ಸಭೆಯ ವೇಳೆ ಶಬ್ಬೀರ್ ಅಹ್ಮದ್ ಅವರನ್ನು ಉರ್ದು ಶಾಲೆಗಳ ಶಿಕ್ಷಕರ ಪರವಾಗಿ ಶಾಲು ಹಾಕಿ, ಹೂಮಾಲೆ ಇಟ್ಟು ಗೌರವಿಸಲಾಯಿತು.
ಸಿಆರ್ಪಿ ನಜೀಮ್ ಬೇಗಂ ಅವರು ಕೊನೆಗೆ ಸಭೆಯಲ್ಲಿದ್ದ ಎಲ್ಲ ಮುಖ್ಯೋಪಾಧ್ಯಾಯರಿಗೆ ಧನ್ಯವಾದಗಳನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಅರುಣಾ (ಮೌಲಾನಾ ಅಜಾದ್ ಶಾಲೆಯ ಮುಖ್ಯಶಿಕ್ಷಕಿ), ಬಾಲಕಿಯರ ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಶಕೀಲಾ ಬೇಗಂ ,
ಅಸಿಫ್ ಪಾಷಾ ಮತ್ತು ಇತರ ಉರ್ದು ಶಾಲೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.