


ಕುಂದಾಪುರ : ಪ್ರತಿಷ್ಠಿತ ರೆಡಿಮಿಕ್ಸ್ ಕಾಂಕ್ರೀಟ್ ಸಂಸ್ಥೆಯಾಗಿರುವ ಸೀಮೆಕ್ಸ್ ಇಂಡಿಯಾ ಇದರ ಕಾರ್ಪೊರೇಟ್ ಕಚೇರಿಯು ಕುಂದಾಪುರದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಫಿಲೋಮಿನಾ ಕಮರ್ಷಿಯಲ್ ಪಾರ್ಕ್ ನಲ್ಲಿ ಜುಲೈ 9ರಂದು ಉದ್ಘಾಟನೆಗೊಂಡಿತು.
ಫಿಲಿಪ್ ಡಿಕೋಸ್ಟಾ ಅಂಡ್ ಕಂಪನಿ ಇದರ ಪ್ರವರ್ತಕರು ಮತ್ತು ಸೀಮೆಕ್ಸ್ ಇಂಡಿಯಾ ಕಂಪನಿಯ ಗೌರವ ಸಲಹೆಗಾರರಾಗಿರುವ ಫಿಲಿಪ್ ಡಿಕೋಸ್ಟ ಮತ್ತು ಸೀಮೆಕ್ಸ್ ಇಂಡಿಯಾ ಕಂಪನಿಯ ಪ್ರವರ್ತಕ ರೋವನ್ ಡಿಕೋಸ್ಟಾ ಅವರ ಸುಪುತ್ರಿ ಅಲೆನಾ ಡಿಕೋಸ್ಟ ಉದ್ಘಾಟಿಸಿದರು. ಸಂತ ಫಿಲಿಪ್ ನೇರಿ ಚರ್ಚ್ ಬಸ್ರೂರು ಇಲ್ಲಿಯ ಪ್ರಧಾನ ಧರ್ಮ ಗುರುಗಳಾದ ವಂ.ಫಾ. ರೋಯ್ ಲೋಬೊ ಆಶೀರ್ವಚನ ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ವಂ.ಫಾ. ರೋಯ್ ಲೋಬೊ, ಒಂದು ಸಂಸ್ಥೆಯ ಯಶಸ್ಸು ಅದರ ಕಟ್ಟಡದಲ್ಲಲ್ಲ, ಬದಲಾಗಿ ಅದರ ಮೌಲ್ಯಗಳಲ್ಲಿ ಅಡಗಿದೆ. ಉದ್ಯಮದಲ್ಲಿ ಯಶಸ್ಸು ಗಳಿಸುವುದು ಅಷ್ಟು ಸುಲಭವಲ್ಲ. ಪ್ರತಿಯೊಂದು ಯಶಸ್ಸಿನ ಹಿಂದೆ ಅನೇಕ ಸವಾಲುಗಳಿರುತ್ತವೆ. ಪರಿಶ್ರಮದ ಮೂಲಕ ಇಂತಹ ಸವಾಲುಗಳನ್ನು ಎದುರಿಸಿದರೆ ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಉದ್ಯಮದಲ್ಲಿ ಪ್ರಾಮಾಣಿಕತೆ, ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದಿರುವುದು ಮತ್ತು ಗ್ರಾಹಕರಿಗೆ ನೀಡುವ ನಿಷ್ಠಾವಂತ ಸೇವೆಯೇ ಒಂದು ಸಂಸ್ಥೆಯನ್ನು ಶಾಶ್ವತವಾಗಿ ಯಶಸ್ಸು ಗಳಿಸಲು ಮುನ್ನುಡಿ ಎಂದರು.
ಇದೇ ಸಂದರ್ಭದಲ್ಲಿ ಸಹನಾ ಗ್ರೂಪ್ ಆಫ್ ಕಂಪೆನಿಯ ಪ್ರವರ್ತಕ ಸುರೇಂದ್ರ ಶೆಟ್ಟಿ, ಯೂನಿಯನ್ ಬ್ಯಾಂಕಿನ ಸಹಾಯಕ ಮುಖ್ಯ ಪ್ರಬಂಧಕರಾದ ಅಶೋಕ್, ಲಯನ್ಸ್ ಜಿಲ್ಲಾ ನಿಕಟಪೂರ್ವ ಗವರ್ನರ್ ಲಯನ್ ಸಪ್ನಾ ಸುರೇಶ್, ರೋಸರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಾನ್ಸನ್ ಡಿಅಲ್ಮೇಡಾ ಶುಭ ಹಾರೈಸಿದರು.
ಸೀಮೆಕ್ಸ್ ಇಂಡಿಯಾ ಕಂಪನಿಯ ಪ್ರವರ್ತಕ ರೋವನ್ ಡಿಕೋಸ್ಟ ಸ್ವಾಗತಿಸಿದರು, ಕಂಪನಿಯ ಮಾನವ ಸಂಪನ್ಮೂಲ ಮತ್ತು ಆಡಳಿತ ಅಧಿಕಾರಿ ಹರೀಶ್ ವಿ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋವಾ ಪ್ರಾಂತ್ಯದ ಮುಖ್ಯಸ್ಥ ಗೌರೀಶ್ ಧನ್ಯವಾದ ಸಮರ್ಪಿಸಿದರೆ, ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅನುಷಾ ಡಿಕೋಸ್ಟ, ಆಡಳಿತ ನಿರ್ದೇಶಕರಾದ ಚಂದನ್ ಆರ್. ಪಿ, ದಕ್ಷಿಣ ಕನ್ನಡ ಪ್ರಾಂತ್ಯದ ಮ್ಯಾನೇಜರ್ ಪ್ರಜ್ವಲ್, ಫಿಲಿಪ್ ಡಿಕೋಸ್ಟ ಅಂಡ್ ಕಂಪನಿಯ ಪಾಲುದಾರ ರವಿಕಿರಣ್ ಡಿಕೋಸ್ಟ ಮತ್ತಿತರರು ಉಪಸ್ಥಿತರಿದ್ದರು.
ಸೀಮೆಕ್ಸ್ ಇಂಡಿಯಾ ಕಂಪನಿಯು ದಕ್ಷಿಣ ಕನ್ನಡ, ಮೈಸೂರು, ಬೆಂಗಳೂರು ಮತ್ತು ಗೋವಾ ಪ್ರಾಂತ್ಯ ಒಳಗೊಂಡಿದ್ದು, ಒಟ್ಟು 12 ರೆಡಿಮಿಕ್ಸ್ ಪ್ಲಾಂಟ್ ಗಳನ್ನು ಹೊಂದಿದೆ.


