HOLY ROSARY CHURCH, KUNDAPUR – 450 th JUBILEE SOUVENIR 2021

ಅರಣ್ಯ ಭೂ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ನಕಲಿ ದಾಖಲೆ ಸೃಷ್ಠಿಸಿರುವ ಕಂದಾಯ, ಸರ್ವೇ, ಅರಣ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಿ- ರೈತಸಂಘ

ಶ್ರೀನಿವಾಸಪುರ; ಜು.26: ಅರಣ್ಯ ಭೂ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಅರಣ್ಯ ಭೂಮಿಗೆ ನಕಲಿ ದಾಖಲೆ ಸೃಷ್ಠಿಸಿರುವ ಕಂದಾಯ, ಸರ್ವೇ, ಅರಣ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಂಡು ಅರಣ್ಯ ಭೂಮಿಯನ್ನು ಉಳಿಸುವಂತೆ ರೈತಸಂಘದಿಂದ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡಲಾಯಿತು.
ಅರಣ್ಯ ಇಲಾಖೆ ಸಚಿವರಿಗೆ, ವಲಯ ಅರಣ್ಯಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಅಧಿಕಾರ, ರಾಜಕೀಯ ಬಲವಿದ್ದರೆ ಕೆರೆ, ಕುಂಟೆ ಜೊತೆಗೆ ಅರಣ್ಯ ಭೂಮಿಯನ್ನು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅಕ್ರಮವಾಗಿ ಭೂ ಒತ್ತುವರಿ ಮಾಡಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿ ಶ್ರೀನಿವಾಸಪುರ ತಾಲೂಕಿನಾದ್ಯಂತ 3725 ಎಕರೆ ಅರಣ್ಯ ಭೂಮಿ ಪ್ರಭಾವಿ ಮಾಜಿ ಶಾಸಕರು ಹಾಗೂ ಅವರ ಹಿಂಬಾಲಕರು ಒತ್ತುವರಿ ಮಾಡಿಕೊಂಡಿರುವುದೇ ಸಾಕ್ಷಿಯಾಗಿದೆ ಎಂದು ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಾಕ್ಷಿ ಇದ್ದರೂ ಬಲಾಢ್ಯರ ಮುಂದೆ ಅರಣ್ಯ ಅಧಿಕಾರಿಗಳು ನಿಂತುಕೊಳ್ಳಲು ಬೆವರುತ್ತಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಸಣ್ಣಪುಟ್ಟ ಅನಕ್ಷರಸ್ಥ ಅಮಾಯಕ ರೈತರು 2 ಗುಂಟೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡರೆ ಆ ಸಮಸ್ಯೆಯನ್ನೇ ದೊಡ್ಡದಾಗಿ ಬಿಂಬಿಸಿ ನೂರಾರು ಪೊಲೀಸರ ರಕ್ಷಣೆಯಲ್ಲಿ ಒತ್ತುವರಿ ತೆರವುಗೊಳಿಸಲು ಸಿಂಹದಂತೆ ಮುನ್ನುಗ್ಗುವ ಅರಣ್ಯ ಅಧಿಕಾರಿಗಳೇ ಸಾವಿರಾರು ಎಕರೆ ಅರಣ್ಯ ಭೂಮಿಗೆ ಕಂದಾಯ ಸರ್ವೇ ಅಧಿಕಾರಿಗಳು ದಾಖಲೆಗಳನ್ನು ಸೃಷ್ಠಿ ಮಾಡಿ ಒತ್ತುವರಿದಾರರಿಗೆ ಕೋಟಿಕೋಟಿ ಹಣಕ್ಕೆ ಮಾರಾಟ ಮಾಡಿರುವವರ ವಿರುದ್ಧ ಕ್ರಮವಿಲ್ಲವೇ ಎಂದು ಪ್ರಶ್ನೆ ಮಾಡಿದರು.
ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ಒತ್ತುವರಿದಾರರು ಅರಣ್ಯ ಭೂಮಿಯ ದಾಖಲೆಗಳನ್ನೇ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಅಡವಿಟ್ಟು ಕೋಟಿಕೋಟಿ ಸಾಲ ಪಡೆದಿದ್ದರೂ ತಾವುಗಳು ಮೌನವೇಕೆ. ಬಲಾಢ್ಯರಿಗೆ ಒಂದು ನ್ಯಾಯ, ಅಮಾಯಕ ಅನ್ನದಾತರಿಗೆ ಒಂದು ನ್ಯಾಯವೇ. ಇದು ನಮ್ಮ ಪ್ರಶ್ನೆ. ಎಲ್ಲಾ ದಾಖಲೆಗಳ ಸಮೇತ ಒತ್ತುವರಿಯಾಗಿರುವ ಅರಣ್ಯ ಭೂಮಿಯ ಬಗ್ಗೆ ಮಾಹಿತಿ ಇದ್ದರೂ ಒತ್ತುವರಿದಾರರಿಗೆ ಹಿರಿಯ ಅಧಿಕಾರಿಗಳು ರಕ್ಷಣೆ ನೀಡಿರುವುದು ನ್ಯಾಯವೇ ಎಂದು ಪ್ರಶ್ನಿಸಿದರು.
ಒಂದು ವಾರದ ಒಳಗೆ ತಾಲೂಕಿನಾದ್ಯಂತ ಒತ್ತುವರಿಯಾಗಿರುವ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸಲು ಸರ್ವೇ ಮಾಡಿಸಬೇಕು. ಜೊತೆಗೆ ಒತ್ತುವರಿದಾರರಿಗೆ ಸಹಕರಿಸಿರುವ ಕಂದಾಯ, ಸರ್ವೇ, ಅರಣ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಂಡು ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ದಾಖಲು ಮಾಡಿ, ಅರಣ್ಯ ಭೂಮಿಯನ್ನು ಉಳಿಸಬೇಕಿದ್ದು, ಇಲ್ಲವಾದರೆ ಮರಗಳ ಸಮೇತ ಅರಣ್ಯ ಸಚಿವರ ಮನೆ ಮುಂದೆ ಹೋರಾಟ ಮಾಡಿ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ವಲಯ ಅರಣ್ಯಾಧಿಕಾರಿಗಳು, ಒತ್ತುವರಿದಾರರ ವಿರುದ್ಧ ಈಗಾಗಲೇ ಅರಣ್ಯ ಕಾಯ್ದೆ ಪ್ರಕಾರ ಕೇಸು ದಾಖಲಿಸಲಾಗಿದೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಆದಷ್ಟು ಬೇಗ ಒತ್ತುವರಿಯನ್ನು ತೆರವುಗೊಳಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಆಲವಾಟಿ ಶಿವ, ಷೇಕ್ ಷಫೀಉಲ್ಲಾ, ಸಹದೇವಣ್ಣ, ಮುನಿರಾಜು, ಫಾರೂಖ್ ಪಾಷ, ಯಾರಂಘಟ್ಟ ಗಿರೀಶ್, ಮಂಗಸಂದ್ರ ತಿಮ್ಮಣ್ಣ, ಬಂಗಾರಿ ಮಂಜು, ರಾಜೇಶ್, ಭಾಸ್ಕರ್, ವಿಜಯ್‍ಪಾಲ್, ವಿಶ್ವ ಮುಂತಾದವರಿದ್ದರು.

2000 ಸಾವಿರ ರೂಪಾಯಿ ಮುಖಬೆಲೆಯ 10 ಕೋಟಿ ಬೆಲೆಯ ನಖಲಿ ನೋಟುಗಳು ರಸ್ತೆ ಬದಿಯ ಪೋದೆಯಲ್ಲಿ ಪತ್ತೆ

ಬೆಂಗಳೂರು: ಕನಕಪುರ ರಸ್ತೆಯ ಪಕ್ಕದ ನೈಸ್ ರಸ್ತೆಯ ಬಳಿಯ ಪೊದೆಯಲ್ಲಿ ಸೂಟ್ ಕೇಸ್ ಹಾಗೂ ಎರಡು ರಟ್ಟಿನ ಕಾರ್ಟುನ್ಗಳಲ್ಲಿ ಎರಡು ಸಾವಿರ ಮುಖಬೆಲೆಯ ಜೆರಾಕ್ಸ್ ನೋಟುಗಳು ಪತ್ತೆಯಾಗಿವೆ. ಬಾಕ್ಸ್ ಮತ್ತು ಸೂಟ್ ಕೇಸ್  ಬಿಚ್ಚಿ ನೋಡಿದಾಗ ₹2000 ಮುಖಬೆಲೆಯ ಜೆರಾಕ್ಸ್ ಮಾಡಿದ ನೋಟುಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ₹2000 ಮುಖಬೆಲೆಯ ಒಟ್ಟು ಮೊತ್ತ ₹10 ಕೋಟಿ ಯಾಗಿದ್ದು, ಅಸಲಿ ನೋಟುಗಳ ಜೊತೆ ಸೇರ್ಪಡೆ ಮಾಡಿ ಚಲಾವಣೆ ಮಾಡುವ ಜಾಲದ ಕೈವಾಡ ಇದಾಗಿದೆ ಎಂದು ಅನುಮಾನಿಸಲಾಗಿದೆ. ₹2000 ಮುಖಬೆಲೆಯ ನೋಟುಗಳನ್ನು ಚಲಾವಣೆಯನ್ನು ಆರ್ ಬಿಐ ರದ್ದು ಮಾಡಿದ್ದು, ಹಳೆಯ ನೋಟುಗಳನ್ನು ಬ್ಯಾಂಕ್ ಗೆ ಪಾವತಿಸಲು ಕ್ರಮ ತೆಗೆದುಕೊಂಡಿದ್ದರಿಂದ ರಸ್ತೆ ಬದಿಗೆ ಎಸೆದಿರಬೇಕು ಎಂದು ಅನುಮಾನ ಪಡಲಾಗಿದೆ. ಖೋಟಾ ನೋಟು ಜಾಲ ಸಕ್ರಿಯವಾಗಿದೆಯೆಂದು ಅನುಮಾನ ಕಾಡಿದ್ದು, ಈ ಪ್ರಕರಣದ ಹಿಂದೆ ಯಾರ ಕೈವಾಡ ಇದೆಯೆಂಬುದನ್ನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.

ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಮಾಜಿ ಸೈನಿಕ ಮೋಹನ್ ಕುಮಾರ್ ಅವರಿಗೆ ಸನ್ಮಾನ

ಕೋಲಾರ,ಜು.26: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ತಾಲೂಕಿನ ನರಸಾಪುರದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಾಜಿ ಸೈನಿಕ ಮೋಹನ್ ಕುಮಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯೋಗ ಸಮಿತಿಯ ಉಪಾಧ್ಯಕ್ಷ ರಾಜೇಂದ್ರ, ಮುಖ್ಯ ಶಿಕ್ಷಕ ಮಂಜುನಾಥ್, ಯೋಗ ಬಂಧುಗಳು ಹಾಜರಿದ್ದರು.

ಆಟೋದಲ್ಲಿ ಮರೆತಿದ್ದ ಹಣ ಮತ್ತು ಬೆಲೆ ಬಾಳುವ ಬ್ಯಾಗನ್ನು ಕೇವಲ 1 ತಾಸಿನಲ್ಲೇ ವಾರಸುದಾರರಿಗೆ ತಲುಪಿಸುವಲ್ಲಿ ಪೊಲೀಸರು ಯಶಸ್ವಿ

ಕೋಲಾರ,ಜು.26: ಮಹಿಳೆಯೋರ್ವರು ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದ ಹಣ ಮತ್ತು ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗನ್ನು ಕೇವಲ 1 ತಾಸಿನಲ್ಲೇ ಆಟೋ ಪತ್ತೆ ಹಚ್ಚಿ, ಬ್ಯಾಗನ್ನು ಮರಳಿ ವಾರಸುದಾರರಿಗೆ ನೀಡುವಲ್ಲಿ ನಗರದ ಗಲ್‍ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆ ಉದ್ಯೋಗಿ ಭಾರತಿ (ಹೆಸರು ಬದಲಿಸಲಾಗಿದೆ) ಎಂಬ ಮಹಿಳೆ 23 ರಂದು ತನ್ನ ತಾಯಿಯನ್ನು ನಂಗಲಿ ಗ್ರಾಮದ ಮನೆಯಲ್ಲಿ ಬಿಟ್ಟು ಮರಳಿ ಬಸ್‍ನಲ್ಲಿ ನಗರದ ಹಳೇ ಬಸ್ ನಿಲ್ದಾಣದಲ್ಲಿ ಮಕ್ಕಳ ಸಮೇತ ಇಳಿದುಕೊಂಡಿದ್ದಾರೆ. ನಂತರ ಇಲ್ಲಿ ಆಟೋ ಹತ್ತಿದ ಈಕೆ ತಂಗಿಯ ಮನೆಗೆ ಹೋಗಲು ಇಲ್ಲಿನ ಬೈರೇಗೌಡ ನಗರದ ಮೈಲಾರಿ ಹೋಟೆಲ್ ಹತ್ತಿರ ಇಳಿದು ಬ್ಯಾಗ್ ಮರೆತು ಹಾಗೆ ಹೋಗಿದ್ದಾರೆ.
ಬ್ಯಾಗ್ ಬಿಟ್ಟಿದ್ದನ್ನು ಅರಿತ ಅವರು ತಕ್ಷಣ ತಾನು ಬಂದ ದಾರಿ ಮತ್ತು ಹಳೇ ಬಸ್ ನಿಲ್ದಾಣದ ವಿವಿಧ ಕಡೆ ಹುಡುಕಾಡಿದರೂ ಆಟೋ ಪತ್ತೆ ಹಚ್ಚಲಾಗಲಿಲ್ಲ, ಕೊನೆಗೆ 24 ರಂದು ನಗರದ ಗಲ್‍ಪೇಟೆ ಪೊಲೀಸ್ ಠಾಣೆಗೆ ಮಧ್ಯಾಹ್ನ 12-00 ಗಂಟೆಗೆ ಬೇಟಿ ನೀಡಿದ ಮಹಿಳೆ ಘಟನೆಯ ಬಗ್ಗೆ ಮಾಹಿತಿನೀಡಿದ್ದಾರೆ. ಠಾಣಾಧಿಕಾರಿ ಅರುಣ್‍ಗೌಡ ಪಾಟೀಲ್ ಅವರು ತಕ್ಷಣ ಆಟೋ ಪತ್ತೆ ಹಚ್ಚುವಂತೆ ಪೇದೆ ಹೆಚ್.ರಾಜಣ್ಣ ಅವರಿಗೆ ಸೂಚಿಸಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಪೇದೆ ರಾಜಣ್ಣ ಹಳೇ ಬಸ್ ನಿಲ್ದಾಣ ಮತ್ತು ಸುತ್ತಮುತ್ತಲಿನ ಸಿ.ಸಿ.ಕ್ಯಾಮೆರಾಗಳನ್ನು ಪರಿಶೀಲಿಸಲು ಹೋದಾಗ ಅವುಗಳು ಕೆಟ್ಟಿರುವುದು ಹಾಗೂ ಅಂಗಡಿಗಳ ಸಿ.ಸಿ. ಕ್ಯಾಮೆರಾ ಪರಿಶೀಲಿಸಲಾಗಿ ಅವು ರಸ್ತೆಯ ಕಡೆ ಪೋಕಸ್ ಮಾಡದೆ ಇರುವ ಕಾರಣ ಯಾವುದೇ ಸುಳಿವು ಸಿಗಲಿಲ್ಲ. ಕೊನೆಗೆ ಮಹಿಳೆಯು ಇಳಿದುಕೊಂಡಿದ್ದ ಸ್ಥಳಕ್ಕೆ ಹೋಗಲಾಗಿ ಮೈಲಾರಿ ಹೋಟೆಲ್‍ನ ಸಿ.ಸಿ.ಕ್ಯಾಮೆರಾ ಪರಿಶೀಲಿಸಲಾಗಿ ಮಹಿಳೆ ಆಟೋ ಇಳಿದು ಹಣ ಕೊಟ್ಟು ಬ್ಯಾಗ್ ಬಿಟ್ಟು ಬರಿಕೈಲಿ ಮಳೆಯ ಕಾರಣ ತರಾತುರಿಯಲ್ಲಿ ಹೋಗುತ್ತಿರುವುದು ಕಂಡು ಬಂದಿದೆ.
ಸದರಿ ಆಟೋ ನೊಂದಣಿ ಸಂಖ್ಯೆ ಕೆ.ಎ-05 ಎಂಬುದನ್ನು ಬಿಟ್ಟರೆ ಉಳಿದ ಸಂಖ್ಯೆಗಳು ಅಸ್ಪಷ್ಟವಾಗಿತ್ತು. ಹಾಗೂ ಬಲಭಾಗದ ಇಂಡಿಕೇಟರ್ ಒಡೆದುಹೋಗಿತ್ತು. ಇದರ ತುಣುಕು (ಪುಟೇಜ್) ಪಡೆದ ಪೇದೆ ಆರ್.ಟಿ.ಓದಲ್ಲಿ ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ನಂತರ ಆಟೋ ಚಾಲಕರು ಹಾಗೂ ಸಂಘದ ಮುಖಂಡರನ್ನು ಭೇಟಿ ಮಾಡಿ ಅವರ ಸಂಪರ್ಕ ಜಾಲದಲ್ಲಿ ತಲಾಷೆ ಮಾಡಿದಾಗ ಆಟೋ ಮತ್ತು ಚಾಲಕನ ಸುಳಿವು ಸಿಕ್ಕಿ ನಂತರ ಹಳೇ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಲಾಯಿತು.
ಆಟೋವನ್ನು ಪರಿಶೀಲಿಸಲಾಗಿ ಸೀಟಿನ ಹಿಂಭಾಗ ಬ್ಯಾಗ್ ಇದುವುದು ಪತ್ತೆಯಾಯಿತು. ಅದರೊಳಗೆ 5 ಸಾವಿರ ನಗದು, ಬ್ಯಾಂಕಿಗೆ ಸಂಬಂಧಪಟ್ಟ ಎ.ಟಿ.ಎಂ, ಕ್ರೆಡಿಟ್ ಕಾರ್ಡ್‍ಗಳು, ಅಮೂಲ್ಯ ದಾಖಲೆಗಳು ಹಾಗೂ ಬಟ್ಟೆಗಳು ಹಾಗೆ ಇರುವುದು ಕಂಡುಬಂತು. ಮಹಿಳೆ ಮಕ್ಕಳನ್ನು ಸೀಟಿನಲ್ಲಿ ಕುಳ್ಳರಿಸಿಕೊಂಡಿದ್ದು ಆಕೆಯ ಬ್ಯಾಗನ್ನು ಹಿಂಭಾಗದ ಜಾಗದಲ್ಲಿ ಇಟ್ಟು ಮರೆತು ಬಿಟ್ಟು ಹೋಗಿದ್ದು ಇದು ನನ್ನ ಗಮನಕ್ಕೆ ಬಂದಿಲ್ಲವೆಂದು ಚಾಲಕ ತಿಳಿಸಿದ್ದಾನೆ.
ಮಾಹಿತಿ ಬಂದು ಒಂದು ತಾಸಿನಲ್ಲಿ ಆಟೋ ಪತ್ತೆ ಹಚ್ಚಿ ಅಧಿಕಾರಿಗಳ ಸಮ್ಮುಖದಲ್ಲಿ ಅದೇ ಚಾಲಕನಿಂದ ಮಹಿಳೆಗೆ ಬ್ಯಾಗ್ ಹಿಂದಿರುಗಿಸಿದ ಪೇದೆ ರಾಜಣ್ಣ ಕಾರ್ಯವೈಖರಿಗೆ ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.

ಕುಂದಾಪುರದ ಉಮಾ ಪ್ರಕಾಶ್ ಶೆಟ್ಟಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ನೀಡುವ 2020-2023 ಸಾಲಿನ ಉಮಾದೇವಿ ಶಂಕರ್ ರಾವ್ ದತ್ತಿ ಪ್ರಶಸ್ತಿಯು ಕುಂದಾಪುರದ ಉಮಾಪ್ರಕಾಶ್ ಶೆಟ್ಟಿ ಅವರ ‘ತೆರೆಯೋ… ಬಾಗಿಲನು’ ಸಣ್ಣ ಕಥೆಗೆ ಲಭಿಸಿದೆ. ಬೆಂಗಳೂರಿನ ನಯನ ಸಭಾಂಗಣದಲ್ಲಿ ಜು.23ರ ಭಾನುವಾರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಬಾಲ್ಯದಿಂದಲೂ ಪರಿಸರ ಮತ್ತು ಸಾಹಿತ್ಯ ಪ್ರೇಮಿಯಾಗಿರುವ ಉಮಾ ಪ್ರಕಾಶ್ ಶೆಟ್ಟಿ ಅವರು ತಮ್ಮ ತಂದೆ ದಿವಂಗತ ದಾಸರಬೆಟ್ಟು ವೆಂಕಪ್ಪಶೆಟ್ಟಿ ಅವರ ಜೀವಮಾನದ ಸಾಧನೆ ಕುರಿತ ನೈಜ ಕಥೆ ಆಧರಿಸಿ ‘ತೆರೆಯೋ… ಬಾಗಿಲನು’ ಕಥೆ ಬರೆದಿದ್ದಾರೆ.


ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾದ ಎಚ್.ಎಲ್. ಪುಷ್ಪಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ ಮತ್ತು ರಾಣಿ ಸತೀಶ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಬಿ.ಎಂ. ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ, ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಇದ್ದರು. ಮೂಲತ ಕುಂದಾಪುರದವರಾದ ಉಮಾ ಪ್ರಕಾಶ್ ಶೆಟ್ಟಿಯವರು, ಕುಂದಾಪುರ ಭಂಡಾರ್ಕಾರ್ಸ ಕಾಲೇಜಿನ ಹಳೆಯ ವಿಧ್ಯಾರ್ಥಿನಿಯೂ ಹೌದು ಹಾಗೂ ಕುಂದಾಪುರ ರೋಟರಿ ಇನ್ನರ್ವೀಲ್ ಸೌತ್, ಸದಸ್ಯೆ ಕೂಡಾ ಆಗಿರುತ್ತಾರೆ, ಅವರ ಪತಿ ಟಿ. ಪ್ರಕಾಶ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ಉದ್ಯಮಿಯಾಗಿರುತ್ತಾರೆ.

ಕುಂದಾಪುರದ ಡಾ.ನಮೀತಾ ವಿಯೊನ್ನಾ ಪಾಯಸ್ ಇವರಿಗೆ ಅಮೇರಿಕಾದ ಕನೆಕ್ಟಿಕಟ್ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್

ಕುಂದಾಪುರ : ಮೂಲತ: ಕುಂದಾಪುರದವರಾದ ಡಾ.ನಮೀತಾ ವಿಯೊನ್ನಾ ಪಾಯಸ್ ಅವರು ಸಂಖ್ಯಾಶಾಸ್ತ್ರ ವಿಭಾಗದಲ್ಲಿ ‘ ಮೊಡಲಿಂಗ್ ಆಫ್ ಕ್ರಾಸ್ ಸೆಕ್ಷನಲ್ , ರೀಪಿಟೇಡ್ ಮೇಸರ್ಸ್ ಮತ್ತು ಟೈಮ್ ಸೀರಿಸ್ ಡಾಟಾ ಸ್ಟ್ರಚರ್ಸ್ ‘ ಸಂಶೋಧನಾ ಪ್ರಬಂಧಕ್ಕೆ ಅಮೇರಿಕಾದ ಕನೆಕ್ಟಿಕಟ್ ವಿಶ್ವ ವಿದ್ಯಾಲಯ ಡಾಕ್ಟರೇಟ್ ಪ್ರದಾನ ಮಾಡಿದೆ.

ಅಮೇರಿಕಾದ ಕನೆಕ್ಟಿಕಟ್ ವಿಶ್ವ ವಿದ್ಯಾಲಯದ ಸಂಖ್ಯಾ ಶಾಸ್ತ್ರ ವಿಭಾಗದ ಸಂಗುತ್ತೇವಾರ್ ರಾಜೇಶೇಖರನ್ ಡಾ.ನಳೀನಿ ರವಿಶಂಕರ ಅವರ ಮಾರ್ಗದರ್ಶನ ಪಡೆದುಕೊಂಡಿರುವ ನಮೀತಾ, ಕುಂದಾಪುರದ ಹಿರಿಯ ಪತ್ರಕರ್ತ, ಉದ್ಯಮಿ ವಿನಯ್‌ ಎ. ಪಾಯಸ್ ಹಾಗೂ ಜಸಿಂತಾ ವಿ. ಪಾಯಸ್ ಅವರ ಪುತ್ರಿಯಾಗಿದ್ದಾರೆ. ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜ್ ಹಾಗೂ ಪೂನಾದ ಸಾವಿತ್ರಿ ಬಾಯಿ ಪುಲೆ ವಿಶ್ವವಿದ್ಯಾಲಯದ ಪ್ರಾಕ್ತನ ವಿದ್ಯಾರ್ಥಿನಿಯಾಗಿದ್ದಾರೆ.

ಹಠಾತ್ ಪ್ರವಾಹದ ಹವಾಮಾನ ಇಲಾಖೆಯ ಮುನ್ಸೂಚನೆ: ಎಚ್ಚರಿಕೆ ವಹಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

ಬೆಂಗಳೂರು, ಜು.೧೬:ಹವಾಮಾನ ಇಲಾಖೆಯು ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ (ಫ್ಲ್ಯಾಷ್ ಫ್ಲಡ್) ಮುನ್ಸೂಚನೆ ನೀಡಿರುವುದರಿಂದ ಜಿಲ್ಲಾಡಳಿತ ಎಚ್ಚರಿಕೆಯಿಂದ ಇರಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಈ ಕುರಿತು ಉಡುಪಿಯ ಜಿಲ್ಲಾಧಿಕಾರಿ ಹಾಗೂ ಇತರ ಹಿರಿಯ ಅಧಿಕಾರಿಗಳಿಗೆ ಸಚಿವರು ಸಂದೇಶ ರವಾನಿಸಿದ್ದಾರೆ. ಉಡುಪಿ, ಉತ್ತರ ಕನ್ನಡ, ಮಹಾರಾಷ್ಟ್ರದ ಸಿಂಧುದುರ್ಗ, ರತ್ನಾಗಿರಿ, ಉತ್ತರ ಹಾಗೂ ದಕ್ಷಿಣ ಗೋವಾ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಹಠಾತ್ ಪ್ರವಾಹ (ಫ್ಲ್ಯಾಷ್ ಫ್ಲಡ್) ಸಾಧ್ಯತೆ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಿಲ್ಲಾಡಳಿತ ಸಾಧ್ಯವಾದಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕರೂ ಅಪಾಯಕಾರಿ ಪ್ರದೇಶಗಳಿಗೆ ತೆರಳದಂತೆ ಎಚ್ಚರಿಕೆ ನೀಡಬೇಕು. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.

ಸೇಂಟ್ ಆಗ್ನೆಸ್ ಪಿಯು ಕಾಲೇಜ್: “ಕಲರ್ ಸ್ಪ್ಲಾಶ್” ವಿಷಯದೊಂದಿಗೆ ಹಳೆ ವಿದ್ಯಾರ್ಥಿಗಳ “ಅಗ್ನೋಸ್ಪಿಯರ್” ಜು. 22-23 ರ ಸಹಮಿಲನ

ಮಂಗಳೂರು: “ಕಲರ್ ಸ್ಪ್ಲಾಶ್” ಎಂಬ ವಿಷಯದೊಂದಿಗೆ ಬಹು ನಿರೀಕ್ಷಿತ ಹಳೆಯ ವಿದ್ಯಾರ್ಥಿಗಳ ಸಭೆ -ಅಗ್ನೋಸ್ಪಿಯರ್ ಜುಲೈ 22, 2023, ಶನಿವಾರ ಮಂಗಳೂರಿನ ಸೇಂಟ್ ಆಗ್ನೆಸ್ ಪಿಯು ಕಾಲೇಜಿನಲ್ಲಿ ನಡೆಯಿತು. ಈವೆಂಟ್ ಆಗ್ನೇಷಿಯನ್ನರನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿತ್ತು, ಅವರು ತಮ್ಮ ಅಲ್ಮಾ ಮೇಟರ್ ಅನ್ನು ಮರುಭೇಟಿ ಮಾಡುವಾಗ ಉತ್ಕಟತೆ ಮತ್ತು ಸೌಹಾರ್ದತೆಯ ವಾತಾವರಣವನ್ನು ಸೃಷ್ಟಿಸಿದರು. ರೋಮಾಂಚಕ ಥೀಮ್ “ಕಲರ್ ಸ್ಪ್ಲಾಶ್” ಉತ್ಕ್ರಷ್ಟತೆ ಉತ್ಸಾಹ ಹಳೆ ನೆನಪುಗಳಿಂದ ತುಂಬಿದ ಸುಂದರ ಸಂಜೆಯಾಗಿ ಮಾರ್ಪಟ್ಟಿತು.
ಹಳೆಯ ವಿದ್ಯಾರ್ಥಿಗಳ ಸಭೆಯು ಹೃದಯಕ್ಕೆ ತಟ್ಟುವ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು, ದಿನದ ಪ್ರಕ್ರಿಯೆಗಳಿಗೆ ಪ್ರತಿಫಲಿತ ಮತ್ತು ಆಧ್ಯಾತ್ಮಿಕ ಧ್ವನಿಯನ್ನು ಹೊಂದಿಸುತ್ತದೆ. ಪ್ರತೀಕ್ಷಾ ಮತ್ತು ತಂಡದವರು ಮನಮೋಹಕ ನೃತ್ಯ ಪ್ರದರ್ಶನದೊಂದಿಗೆ ಸಭಿಕರನ್ನು ಸ್ವಾಗತಿಸಿದರು. ಕಾಲೇಜಿನ ಗೌರವಾನ್ವಿತ ಪ್ರಾಂಶುಪಾಲೆ ಸಿಸ್ಟರ್ ನೊರಿನ್ ಡಿಸೋಜಾ ಅವರು ಹಳೆ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಅವರನ್ನು ಉದ್ದೇಶಿಸಿ ಮಾತನಾಡಿ, ಅವರ ಉಪಸ್ಥಿತಿಗೆ ಕೃತಜ್ಞತೆ ಸಲ್ಲಿಸಿ, ತಮ್ಮ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿರುವುದರ ಮಹತ್ವವನ್ನು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರು ಅಗ್ನೋಸ್ಫಿಯರ್ – ದಿ ಅಲುಮ್ನಿ ಅಸೋಸಿಯೇಷನ್ ಅನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಮತ್ತು ಪ್ರಪಂಚದಾದ್ಯಂತದ ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಜವಾಬ್ದಾರಿಯನ್ನು ನಿರ್ವಹಿಸಿದ್ದಕ್ಕಾಗಿ ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಸುವಾಸಿನಿ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಆಗ್ನೇಶಿಯನ್ನರ ಮನಮೋಹಕ ನೃತ್ಯ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಿದವು. ಯೋಶಿತಾ ಮತ್ತು ಅವರ ತಂಡವು ತಮ್ಮ ಸಿಂಕ್ರೊನೈಸ್ ಮಾಡಲಾದ ಚಲನೆಗಳೊಂದಿಗೆ ವೇದಿಕೆಯನ್ನು ಆಕರ್ಷಣೆಗೆ ಒಳಪಡಿಸಿದರು, ಭೂಮಿಕಾ ಮತ್ತು ಅವರ ಗುಂಪಿನಿಂದ ಪ್ರದರ್ಶನ ಪ್ರೇಕ್ಷರ ಮೇಲೆ ಪ್ರಭಾವ ಬಿರಿತು. ತ್ರಿಶಾ ಶೆಟ್ಟಿ ತಮ್ಮ ಅಸಾಧಾರಣ ನೃತ್ಯ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ತಮ್ಮ ಆಕರ್ಷಕ ಏಕವ್ಯಕ್ತಿ ಪ್ರದರ್ಶನದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಪ್ರತಿಭಾವಂತ ಸಹೋದರಿಯರಾದ ಜೆನ್ನಿಫರ್ ಮತ್ತು ಶರಲ್ ಸಿಕ್ವೇರಾ ಅವರು ಜನಪ್ರಿಯ ಪಾಶ್ಚಿಮಾತ್ಯ ಗೀತೆಯ ಸುಮಧುರ ನಿರೂಪಣೆಯನ್ನು ನೀಡಿದರು, ಅವರ ಸಂಗೀತ ಪ್ರತಿಭೆಯ ಬಗ್ಗೆ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಕಾಲೇಜು ದಿನಗಳಲ್ಲಿ ಸೆರೆಹಿಡಿಯಲಾದ ಅಚ್ಚುಮೆಚ್ಚಿನ ಫೋಟೋಗಳ ಮೂಲಕ ‘ಕಾಲೇಜು ದಿನಗಳ ಥ್ರೋಬ್ಯಾಕ್’ ವಿಷಯದ ಮೇಲೆ ಆತ್ಮವನ್ನು ಕಲಕುವ ವೀಡಿಯೊವನ್ನು ಪ್ರಸ್ತುತಪಡಿಸಲಾಯಿತು.
ಹಳೆಯ ವಿದ್ಯಾರ್ಥಿಗಳಿಗೆ ಎದ್ದುಕಾಣುವ ಕ್ಷಣಗಳನ್ನು ಸೆರೆಹಿಡಿಯಲು ಅವಕಾಶವನ್ನು ಒದಗಿಸಲು ಸೃಜನಾತ್ಮಕ ಫೋಟೋ ಬೂತ್‌ಗಳನ್ನು ಚಿಂತನಶೀಲವಾಗಿ ಹೊಂದಿಸಲಾಗಿತ್ತು. ಸಭಾಂಗಣದಲ್ಲಿ ರೋಮಾಂಚಕ ಮತ್ತು ವರ್ಣರಂಜಿತ ಅಲಂಕಾರಗಳು ಈ ಚಿತ್ರ-ಪರಿಪೂರ್ಣ ಕ್ಷಣಗಳಿಗೆ ಪರಿಪೂರ್ಣ ಹಿನ್ನೆಲೆಯನ್ನು ಒದಗಿಸಿತ್ತು.
ಸಹಮಿಲನದ ಪಾಲಿಸಬೇಕಾದ ಸಂಪ್ರದಾಯದಂತೆ, ಆಯಾಯ ಬ್ಯಾಚುಗಳ ಛಾಯಾಚಿತ್ರಗಳನ್ನು ಕ್ಲಿಕ್ ಮಾಡಲಾಗಿದ್ದು, ಘಟನೆಯ ನೆನಪುಗಳನ್ನು ಸಂರಕ್ಷಿಸಲಾಗಿದ್ದು ಹಳೆಯ ವಿದ್ಯಾರ್ಥಿಗಳ ಸಂಘದ ಏಕತೆ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ.
ಈ ಕಾರ್ಯಕ್ರಮವನ್ನು ಸಂಚಾಲಕ ಶ್ರೀಮತಿ ವೆನಿಟಿಯಾ ರಸ್ಕ್ವಿನ್ಹಾ ನೇತೃತ್ವದ ಆಗ್ನೋಸ್ಫಿಯರ್ ಕೋರ್ ಕಮಿಟಿಯು ನಿಖರವಾಗಿ ಯೋಜಿಸಿತ್ತು. ಇದಕ್ಕೆ ವೈಸ್ ಪ್ರಿನ್ಸಿಪಾಲ್, ಸೀನಿಯರ್ ಜಾನೆಟ್ ಸಿಕ್ವೇರಾ, ಬೋಧಕ ಮತ್ತು ಸಹಾಯಕ ಸಿಬ್ಬಂದಿ ಮತ್ತು ರೋಮಾಂಚಕ ಮತ್ತು ಶಕ್ತಿಯುತ ಹಳೆಯ ವಿದ್ಯಾರ್ಥಿಗಳ ದೊಡ್ಡ ಗುಂಪು ಸಾಕ್ಷಿಯಾಯಿತು. ಪ್ರೀವಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರೆ, ಕಾಲ್ಡ್ರಿಡಾ ಡಿಸೋಜ ವಂದಿಸಿದರು.
ಅಲುಮ್ನಿ ಮೀಟ್ “ಕಲರ್ ಸ್ಪ್ಲಾಶ್” ನಿಸ್ಸಂದೇಹವಾಗಿ ಸ್ಮರಣೀಯ ಮತ್ತು ಆನಂದದಾಯಕ ಘಟನೆಯಾಗಿದೆ. ವಿವಿಧ ಬ್ಯಾಚ್‌ಗಳ ಆಗ್ನೇಷಿಯನ್‌ಗಳು ಹಳೆಯ ಸ್ನೇಹವನ್ನು ಪುನರುಜ್ಜೀವನಗೊಳಿಸಿದರು, ಪ್ರೀತಿಯ ನೆನಪುಗಳನ್ನು ಹಂಚಿಕೊಂಡರು ಮತ್ತು ಕಾಲೇಜಿನೊಂದಿಗೆ ತಮ್ಮ ಸಂಪರ್ಕವನ್ನು ಆಚರಿಸಿದರು. ಯಶಸ್ವಿ ಸಭೆಯು ಸಂಸ್ಥೆ ಮತ್ತು ಅದರ ಹಿಂದಿನ ವಿದ್ಯಾರ್ಥಿಗಳ ನಡುವಿನ ಬಲವಾದ ಬಾಂಧವ್ಯವನ್ನು ಪುನರುಚ್ಚರಿಸಿತು, ಸೇಂಟ್ ಆಗ್ನೆಸ್ ಪಿಯು ಕಾಲೇಜಿನ ಸ್ಪೂರ್ತಿಯು ಮುಂದಿನ ಪೀಳಿಗೆಗೆ ಅಭಿವೃದ್ಧಿ ಹೊಂದುವುದನ್ನು ಖಾತ್ರಿಪಡಿಸಿತು.

ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಕಲ್ಪಿಸಲು, ಮಾದರಿ ಜಿಲ್ಲೆಯನ್ನಾಗಿಸಲು ಕ್ರಮ : ಪತ್ರಕರ್ತರೊಂದಿಗೆ ಸಂವಾದದಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ

ಕೋಲಾರ,ಜು.25: ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳಿರುವುದು ಗಮನಿಸಿದ್ದು ಅವುಗಳಿಗೆ ಶಾಶ್ವತವಾದ ಪರಿಹಾರಗಳನ್ನು ಹಂತ,ಹಂತವಾಗಿ ಕಲ್ಪಿಸಲು ಕ್ರಮ ಕೈಗೊಂಡು ರಾಜ್ಯದಲ್ಲಿ ಕೋಲಾರ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಲು ಉತ್ತಮವಾದ ಆಡಳಿತ ನೀಡಲು ನಿಮ್ಮೆಲ್ಲರ ಸಹಕಾರದೊಂದಿಗೆ ಪಣ ತೊಡುವುದಾಗಿ ಜಿಲ್ಲಾಧಿಕಾರಿ ಅಕ್ರಂ ಪಾಷ ಘೋಷಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ನಾನು ಇದೇ ರಾಜ್ಯದ, ತುಮಕೊರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕುಗ್ರಾಮದಲ್ಲಿ ಜನಿಸಿ ಇದೇ ಅವಿಭಜಿತ ಜಿಲ್ಲೆಯಲ್ಲಿ ಶಿಕ್ಷಣ ಪಡೆದ ಕನ್ನಡಿಗನಾಗಿದ್ದೇನೆ. ಕಳೆದ 8 ವರ್ಷ ಉಪನ್ಯಾಸಕನಾಗಿ ವಿವಿಧ ಕಡೆ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಈ ಹುದ್ದೆಗೆ ಬಂದವನಾಗಿದ್ದೇನೆ. ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಕಾರ್ಯನಿರ್ವಾಹಿಸಿದ್ದು, ಇದೀಗ ಕೋಲಾರದಲ್ಲಿ ಕಾರ್ಯನಿರ್ವಹಿಸಲು ಸಿಕ್ಕಿರುವ ಅವಕಾಶವನ್ನು ಸದ್ಬಳಸಿಕೊಳ್ಳುವುದಾಗಿ ತಿಳಿಸಿದರು.
ಜಿಲ್ಲೆಯ 17 ಇಲಾಖೆಗಳಲ್ಲಿ ನೇಮಕಾತಿಯ ಅಧಿಕಾರಿಗಳು ಇಲ್ಲ. ಕಂದಾಯ ಇಲಾಖೆಯಲ್ಲಿ ಶೇ 60 ರಷ್ಟು ಸಿಬ್ಬಂದಿ ಕೊರತೆ ಇದೆ. 300 ಗ್ರಾಮ ಲೆಕ್ಕಿಗರ ಪೈಕಿ 71 ಹುದ್ದೆಗಳು ಖಾಲಿ ಇದೆ. ವಿವಿಧ ಇಲಾಖೆಗಳಿಂದ ಬೇರೆ ಜಿಲ್ಲೆಗಳಲ್ಲಿ ನಿಯೋಜಿತ ಅಧಿಕಾರಿಗಳನ್ನು ವಾಪಾಸ್ ಕರೆಸಲು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ನನಗೆ ಹುದ್ದೆಯ ಆಹಂ ಇಲ್ಲ. ಎಲ್ಲಾ ಅಧಿಕಾರಿಗಳೊಂದಿಗೆ ಜಿಲ್ಲೆಯ ಶ್ರೇಯೋಭಿವೃದ್ದಿಗೆ ಕಾರ್ಯನಿರ್ವಹಿಸುತ್ತೇನೆ. ಮೈಸೂರು, ಮಡಿಕೇರಿ, ಹಾಸನ,ಬೆಂಗಳೂರು ಸೇರಿದಂತೆ ಅನೇಕ ಕಡೆ ಕಾರ್ಯನಿರ್ವಹಿಸಿದ್ದೇನೆ. ಆಲ್ಪಸಂಖ್ಯಾತರ ಇಲಾಖೆ, ಕಾರ್ಮಿಕ ಇಲಾಖೆ, ಸಕ್ಕರೆ ಕಂಪನಿ, ಹಿಂದುಳಿದ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದೇನೆಂದು ಹೇಳಿದರು.
ಕಾರ್ಮಿಕ ಇಲಾಖೆಯಲ್ಲಿದ್ದಾಗ 17 ಲಕ್ಷ ವಿಧ್ಯಾರ್ಥಿಗಳಿಗೆ ವಿಶೇಷವಾದ ವೇತನದ ಸೌಲಭ್ಯ ಕಲ್ಪಸಿದ್ದೇನೆ, 20 ವಿವಿಧ ಯೋಜನೆಗಳಲ್ಲಿ ವಿದ್ಯಾರ್ಥಿಗಳಿಗೆ ವಿಶೇಷವಾದ ಶೈಕ್ಷಣಿಕ ನೆರವು ಸಿಗುವಂತೆ ಮಾಡಿರುವೆ,150 ಮೂರಾರ್ಜಿ ವಸತಿ ಶಾಲೆ, 350 ವಿದ್ಯಾರ್ಥಿಗಳ ವಸತಿ ನಿಲಯಗಳು, ಸೇರಿದಂತೆ ಉನ್ನತವಾದ ಶಿಕ್ಷಣಕ್ಕೆ ಪೂರಕವಾದ ಅನೇಕ ಸೌಲಭ್ಯಗಳನ್ನು ಕಲ್ಪಿಸಿ ಪ್ರೋತ್ಸಾಹಿಸುವ ಕೆಲಸ ನಿರ್ವಹಿಸಿರುವುದಾಗಿ ತಿಳಿಸಿದರು.
ಮುಖ್ಯವಾಗಿ ಶೈಕ್ಷಣಿಕವಾಗಿ 40 ಲಕ್ಷ ಕಾರ್ಮಿಕ ಮಕ್ಕಳನ್ನು ನೊಂದಾಯಿಸುವ ಮೂಲಕ ಅನುಕೊಲಗಳನ್ನು ಕಲ್ಪಿಸಿದೆ. 11 ಲಕ್ಷ ವಿದ್ಯಾರ್ಥಿಗಳಿಗೆ 800 ಕೋಟಿ ರೂ ವೇತನವನ್ನು ವಿತರಿಸಲಾಯಿತು. ಕಾರ್ಮಿಕ ಇಲಾಖೆಯಲ್ಲಿ ಪೈಲೆಟ್ ಯೋಜನೆ ಮೂಲಕ ವಿನೂತನವಾದ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಒತ್ತು ನೀಡಲಾಯಿತು, ವಿಮೆ ಸೌಲಭ್ಯ, ಉನ್ನತ ಶಿಕ್ಷಣ ಸೌಲಭ್ಯಗಳು, ಸಾಮಾಜಿಕ ಭದ್ರತೆ ನೀಡಲಾಯಿತು. ಕೊರೋನಾ ಸಂದರ್ಭದಲ್ಲಿ ಶ್ರಮಿಕ ವರ್ಗದವರನ್ನು ಗುರುತಿಸಿ 25 ಸಾವಿರ ಜನಕ್ಕೆ ತಮ್ಮ ಊರುಗಳಿಗೆ ತೆರಳು ಸಾರಿಗೆ ಸೌಲಭ್ಯ ಪ್ರತಿ ದಿನ ಆಹಾರದ ಕಿಟ್‍ಗಳು ನೀಡಿದ್ದನ್ನು ನೆನಪಿಸಿಕೊಂಡರು.
ಜಿಲ್ಲಾ ಪಂಚಾಯುತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪದ್ಮಬಸಂತಪ್ಪ ಮಾತನಾಡಿ, ಪ್ರಥಮ ದರ್ಜೆ ಗುಮಾಸ್ತೆಯಾಗಿ, ಉಪನ್ಯಾಸಕಿಯಾಗಿ, ಉಪವಿಭಾಗಾಧಿಕಾರಿಯಾಗಿ, ಅಪರ ಜಿಲ್ಲಾಧಿಕಾರಿಯಾಗಿ ವಿವಿಧಡೆ ಕಾರ್ಯ ನಿರ್ವಹಿಸಿರುವ ವಿವಿಧ ಜಿಲ್ಲೆಗಳ ಪರಿಚಯದೊಂದಿಗೆ ತಮ್ಮ ಕೊಡುಗೆಗಳನ್ನು ತಿಳಿಸಿದ ಅವರು ಜಿಲ್ಲಾ ಪಂಚಾಯತ್ ಸಿ.ಇ.ಓ ಅಗಿ ಎರಡನೇ ಅವಕಾಶ ಕೋಲಾರದಲ್ಲಿ ದೊರಕಿದೆ. ಈಗಾಗಲೇ ಅಧಿಕಾರ ವಹಿಸಿಕೊಂಡ ನಂತರ ಅಂಗನಾವಡಿಗಳಿಗೆ, ಕೆರೆಗಳು ಅಭಿವೃದ್ದಿಯಲ್ಲಿ ಅಮೃತ ಸರೋವರ ಯೋಜನೆಗಳನ್ನು ಗಮನಿಸಿರುವೆ ಎಂದು ಹೇಳಿದರು.
ಈ ಹಿಂದಿನ ಸಿ.ಇ.ಓ. ಯುಕೇಶ್‍ಕುಮಾರ್ ಅವರು ಉತ್ತಮ ಕೆಲಸಗಳನ್ನು ಮಾಡಿ ಜಿಲ್ಲೆಗೆ ಪ್ರಶಸ್ತಿ ತಂದು ಕೊಟ್ಟಿದ್ದಾರೆ ಎಂದು ಶ್ಲಾಘಿಸಿದ ಅವರು, ಅಮೃತ ಸರೋವರ ಯೋಜನೆಯಲ್ಲಿ 200 ಕೆರೆಗಳ ಅಭಿವೃದ್ದಿ ಗುರಿ ನಿಗಧಿಪಡಿಸಲಾಗಿದೆ ಅದರೆ ನಾವು ಇನ್ನು ಹೆಚ್ಚುವರಿಯಾಗಿ 224 ಕೆರೆಗಳ ಗುರಿ ಹೊಂದಿರುವುದಾಗಿ ತಿಳಿಸಿದರು. ಅಂಗನವಾಡಿಗಳಲ್ಲಿ ಎಸ್.ಸಿ.ಎಸ್.ಟಿ. ಸಮುದಾಯದವರು ಅಡುಗೆ ಮಾಡುವುದಕ್ಕೆ ಕೆಲವಡೆ ಅಸಮಾಧಾನ ಹಾಗೂ ಅಸಹಕಾರ ವ್ಯಕ್ತಪಡಿಸುತ್ತಿರುವುದು ಸಮಂಜಸವಲ್ಲ. ಗರ್ಭಿಣಿ, ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ಪೌಷ್ಠಿಕಾಂಶದ ಆಹಾರಗಳನ್ನು ಸಮರ್ಪಕವಾಗಿ ತಲುಪಿಸ ಬೇಕಾಗಿದೆ ಎಂದು ತಿಳಿಸಿದರು.
ಕೆರೆಗಳಲ್ಲಿ ಹೂಳು ತೆಗೆದು ನೀರು ತುಂಬಿಸುವ ಕೆಲಸಗಳಿಗೆ ಮರು ಚಾಲನೆ ನೀಡ ಬೇಕಾಗಿದೆ. ಗ್ರಾಮಗಳಲ್ಲಿ ತೆರಿಗೆ ಸಂಗ್ರಹಕ್ಕೆ ಪಂಚತಂತ್ರ ಅನುಷ್ಠಾನಕ್ಕೆ ಒತ್ತು ನೀಡ ಬೇಕಾಗಿದೆ.ಮೊಬೈಲ್‍ಗಳ ಅ್ಯಪ್‍ಗಳ ಸದ್ಬಳಿಸಿ ಕೊಂಡು ಹಣ ಪಾವತಿ, ಜಲ ಜೀವನ್ ಮಿಷನ್, ಶೌಚಾಲಯ, ಸ್ವಚ್ಚತೆ, ರಸ್ತೆಗಳ ಅಭಿವೃದ್ದಿ, ನರೇಗಾ ಯೋಜನೆ ಮೂಲಕ ಉದ್ಯೋಗ ಸೃಷ್ಠಿ ಇತ್ಯಾದಿ ಸರ್ಕಾರದ ಸೌಲಭ್ಯಗಳ ಅರಿವು ಮೋಡಿಸಿ ಸದ್ಬಳಿಸಿ ಕೊಳ್ಳುವಂತೆ ಗ್ರಾಮ ಪಂಚಾಯತ್‍ಗಲ ಮೂಲಕ ಜಾಗೃತಿ ಮೋಡಿಸುವುದು ಮಾಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಮಾತನಾಡಿ, ನಾನು ಇದೇ ಅವಿಭಜಿತ ಜಿಲ್ಲೆಯ ಮಂಡಿಗಲ್ ಗ್ರಾಮದವನಾಗಿದ್ದು ನಾನು ಬಡ ಕುಟುಂಬದಿಂದ ಬಂದವನು ನಮ್ಮ ತಂದೆ ಓರ್ವ ಕಾರ್ಮಿಕರಾಗಿದ್ದವರು.ನನ್ನ ಶಿಕ್ಷಣ ಚಿಕ್ಕಬಳ್ಳಾಪುರ,ಬೆಂಗಳೂರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದವನಾಗಿದ್ದೇನೆ.ಮೂಲತಹ ಕಾರ್ಮಿಕ ಕುಟುಂಬದಿಂದ ಬಂದ ನನಗೆ ಬಡತನದ ಅರಿವು ಇದೆ. ನನ್ನ ಉನ್ನತ ಶಿಕ್ಷಣದ ತರಬೇತಿಯಲ್ಲಿ 120 ಮಂದಿ ಪೈಕಿ 50 ಮಂದಿ ಕೋಲಾರದವರೇ ಇದ್ದದ್ದು ವಿಶೇಷತೆಯಾಗಿತ್ತು. ನನ್ನ ವೃತ್ತಿಯಲ್ಲಿ ಮೂಲತಹ ಕೋಲಾರದ ಅನೇಕ ಅಧಿಕಾರಿಗಳ ಪರಿಚಯವಾಗಿದ್ದನ್ನು ನೆನಪಿಸಿ ಕೊಂಡರು.
ಲೋಕಯುಕ್ತ ಇಲಾಖೆಯಲ್ಲಿ ಕಾರ್ಯನಿರ್ವಹಿಸಿರುವುದು ನನಗೆ ತೃಪ್ತಿ ತಂದಿದ್ದು, ಬೆಸ್ಕಾಂ ಜಾಗೃತ ದಳದಲ್ಲಿ ಇದ್ದು ಕಾರ್ಯನಿರ್ವಹಿಸಿರುವೆ. ಪೊಲೀಸ್ ಇಲಾಖೆ ಇಂಟಲೇಜೇನ್ಸ್ ಇಲಾಖೆಯಲ್ಲಿ ಸೇರಿದಂಂತೆ ಎ.ಎಸ್.ಪಿ. ಡಿಸಿಪಿಯಾಗಿ ಸೇರಿದಂತೆ ಹಲವಾರು ಕಡೆ ಕಾರ್ಯನಿರ್ವಹಿಸಿದ ಸಂದರ್ಭಗಳನ್ನು ನೆನಪಿಸಿ ಕೊಂಡರು. ಪ್ರಮುಖವಾಗಿ ಕೊರೋನಾ ಸಂದರ್ಭದಲ್ಲಿ ತಮ್ಮ ಕುಟುಂಬವು ಸಂಕಷ್ಟಕ್ಕೆ ಸಿಲುಕಿದಾಗ ಕರ್ತವ್ಯವನ್ನು ನಿರ್ಲಕ್ಷಿಸದೆ ಸೇವೆ ಸಲ್ಲಿಸಿದ್ದನ್ನು ಹಾಗೂ ಬೆಂಗಳೊರಿನಲ್ಲಿ 150 ಅಂಬ್ಯುಲೆನ್ ವ್ಯವಸ್ಥೆ ಮಾಡಿದ್ದ ಸಂದರ್ಭ ಸೇರಿದಂತೆ ತಮ್ಮ ವೃತ್ತಿಯಲ್ಲಿ ಎದುರಾದ ಅನೇಕ ಸವಾಲುಗಳನ್ನು ಎದುರಿಸಿದ್ದನ್ನು ವಿವರಿಸಿದ ಅವರು ಕೊರೋನಾ ಸಂದರ್ಭವು ಪ್ರತಿಯೊಬ್ಬರಿಗೂ ಪಾಠ ಕಲಿಸಿದಂತಾಯಿತು ಎಂದು ಅಭಿಪ್ರಾಯಪಟ್ಟರು.
ಪತ್ರಿಕೆಗಳು ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿದೆ. ಪತ್ರಿಕಾ ರಂಗವು ಸಮಾಜದಲ್ಲಿ 4ನೇ ಅಂಗವಾಗಿ ಪರಿಗಣಿಸಲಾಗಿದೆ. ಶಾಸನಗಳ ಅನುಷ್ಟಾನಕ್ಕೆ ಪತ್ರಿಕಾ ರಂಗದ ಪಾತ್ರ ಮಹತ್ವದ್ದಾಗಿದೆ. ಪತ್ರಿಕಾ ವರದಿಗಳು ಅಧಿಕಾರಿಗಳ ಕರ್ತವ್ಯದಲ್ಲಿ ಎಚ್ಚರಿಸುವಂತ ಕೆಲಸಗಳನ್ನು ಮಾಡಲಿದೆ. ಸಾಮಾಜಿಕ ಜಾಲತಾಣದ ಯೂ ಟ್ಯೊಬ್‍ಗಳು, ಕ್ರಿಮಿನಲ್ ಪ್ರಕರಣಗಳನ್ನು ಹಾಗೂ ಸಮಾಜ ಘಾತುಕ ಕೃತ್ಯಗಳಿಗೆ ಸಂಬಂಧಿಸಿದಂತೆ ವೈಭವಿಕರಣ ಸಲ್ಲದು, ಜನತೆ ಸೌಲಭ್ಯಗಳನ್ನು ಕಲ್ಪಿಸುವಂತ ಸಕಾರತ್ಮಕ ಸುದ್ದಿಗಳಿಗೆ ಹೆಚ್ಚು ಒತ್ತು ನೀಡ ಬೇಕೆಂದರು. ಅವರು ಸಂವಿಧಾನದ ಆಶಯಗಳಿಗೆ ಪೂರಕವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ತಮ್ಮ ಹಕ್ಕುಗಳನ್ನು ಚಲಾಯಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಪಡೆಯಬೇಕು. ಸಂವಿಧಾನದ ಪ್ರಕಾರ ಕಾನೂನುಗಳನ್ನು ಪ್ರತಿಯೊಬ್ಬರೂ ಪಾಲಿಸಿದಾಗ ಮಾತ್ರ ಅಭಿವೃದ್ದಿ ಸಾಧ್ಯ. ಸಂವಿಧಾನ ಬದ್ದ ಕೆಲಸಗಳಿಗೆ ಪೊಲೀಸ್ ಇಲಾಖೆಯ ಸಹಕಾರ ಸದಾ ಇರುತ್ತದೆ. ನಮ್ಮ ಸೀಮಿತದಲ್ಲಿ ಕಾರ್ಯನಿರ್ವಹಿಸಲು ನಾವುಗಳು ಬದ್ದರಾಗಿರುತ್ತೇವೆ ಎಂದರು.
ಕಳೆದ 4 ತಿಂಗಳು ಚುನಾವಣೆಯ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವ್ಯಸ್ಥೆಗಳ ಕಡೆ ಹೆಚ್ಚು ಗಮನ ಹರಿಸಲು ಸಾಧ್ಯವಾಗಲಿಲ್ಲ. ಈಗ ಕಳೆದ ತಿಂಗಳಿಂದ ಪ್ರಾರಂಭಿಸಿರುವೆ. ಮುಂದಿನ ದಿನಗಳಲ್ಲಿ ಮತ್ತು ಚುನಾವಣೆಗಳು ಬರಲಿದ್ದು ಅದಕ್ಕೆ ಅಗತ್ಯವಾದ ಸಿದ್ದತೆಗಳನ್ನು ಮಾಡಿ ಕೊಳ್ಳ ಬೇಕಾಗಿದೆ. ಜಿಲ್ಲೆಯಲ್ಲಿ ಕೆಲವಡೆ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಹಂತ, ಹಂತವಾಗಿ ಕ್ರಮಕೈಗೊಳ್ಳಲಾಗುತ್ತಿದೆ. ರಾತ್ರಿ 11 ಗಂಟೆಯಲ್ಲಿ ಸಂಚರಿಸುವರ ಬೆರಳಚ್ಚು ಪಡೆಯಲಾಗುವುದು, ಈಗಾಗಲೇ ಸಿ.ಸಿ.ಕ್ಯಾಮೆರಗಳಿಗೆ ಸಂಬಂಧಿಸಿದಂತೆ 40 ಲಕ್ಷ ನಗರೋತ್ಥಾನದಿಂದ ಪಡೆಯಲಾಗಿದೆ. ನರಸಾಪುರ ಮತ್ತು ಸುಗಟೂರಿನಲ್ಲಿ ಹೆಚ್ಚುವರಿಯಾಗಿ ಪೊಲೀಸ್ ಠಾಣೆಗಳ ಸ್ಥಾಪನೆಗೆ ಕ್ರಮ ಜರುಗಿಸಲಾಗುವುದು. 500 ವಸತಿಗಳಿರುವ ಕ್ವಾಟರ್ಸ್ ನಿರ್ಮಿಸಲು ಇಲಾಖೆಯು ಚಿಂತಿಸಿದೆ ಜೂತೆಗೆ ಪೊಲೀಸ್ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು. ಜನರ ಹಲವು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಆಶ್ವಾಸನೆ ನೀಡಿದರು.
ಇದಕ್ಕೂ ಮುನ್ನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಜಿಲ್ಲೆಯ ಸರ್ವತೋಮುಖ ಪ್ರಗತಿಗೆ ಜಿಲ್ಲಾಡಳಿತ ಮುಂದಾಗಬೇಕು. ದೊಡ್ಡ ಹಳ್ಳಿಯಂತೆ ಇರುವ ಕೋಲಾರದ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಜಿಲ್ಲಾಧಿಕಾರಿ ಆಕ್ರಂಪಾಷ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸಂತಪ್ಪ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ಅವರಲ್ಲಿ ಮನವಿ ಮಾಡಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಬಂದ ಮರುದಿನವೇ ಪದ್ಮ ಬಸಂತಪ್ಪ ರವರು ಜಿಲ್ಲಾದ್ಯಂತ ಸಂಚರಿಸಿ ಸಮಸ್ಯೆಗಳ ಅವಲೋಕನ ನಡೆಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಾಗುತ್ತಿರುವುದು ಶ್ಲಾಘನೀಯ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್ ಮಾತನಾಡಿ, ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಸ್ಥಳೀಯರು ಮತ್ತು ಕನ್ನಡಿಗರಾಗಿದ್ದು, ಹೊಂದಾಣಿಕೆಯಿಂದ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿ ಎಂದು ಆಶಿಸಿದರು.
ಜಿಲ್ಲಾಧಿಕಾರಿ ಅಕ್ರಂಪಾಷ ಅವರು ನಗರಪ್ರದಕ್ಷಿಣೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಆಳಿತಕ್ಕೆ ಚುರುಕು ಮುಟ್ಟಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ಅಪರಾಧ ಪ್ರಕರಣಗಳನ್ನು ಒಂದೆರಡು ದಿನಗಳಲ್ಲಿ ಪತ್ತೆ ಹಚ್ಚಿ ಇಲಾಖೆಯ ಕೆಲಸಕ್ಕೆ ವೇಗವನ್ನು ನೀಡಿದ್ದಾರೆ. ಪದ್ಮ ಬಸಂತಪ್ಪ ರವರು ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿದ್ದು, ಈ ಮೂವರ ಸಂಘಟಿತ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು, ಮಾತನಾಡಿ, ಜಿಲ್ಲಾಧಿಕಾರಿ ಆಕ್ರಂಪಾಷ ಅವರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ವ್ಯಕ್ತಿ ಎಂದರೆ ತಪ್ಪಿಲ್ಲ, ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ವಿದೇಶದಲ್ಲಿ ಕೋಲಾರ ಜಿಲ್ಲಾಧಿಕಾರಿಯನ್ನು ನೆನೆಯುತ್ತಿದ್ದಾರೆ ಎಂದರು. ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ.
ಅಧಿಕಾರಿಗಳು ಕೆಲಸ ಮಾಡಿದರೆ, ಮಾತ್ರ ಜಿಲ್ಲೆಯ ಅಭಿವೃದ್ಧಿ ಸಾಧ್ಯ, ರಾಜಕಾರಣಿಗಳು ಒಂದು ಪಕ್ಷದಲ್ಲಿ ಇರುತ್ತಾರೆ, ಇನ್ನೊಂದು ಪಕ್ಷಕ್ಕೆ ಹೋಗುತ್ತಾರೆ ಇವರಿಂದ ಯಾವುದೇ ಅಭಿವೃದ್ಧಿ ಕಾಣಲ್ಲ ಎಂದರು.
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಚೇತನ್‍ಕುಮಾರ್ ಉಪಸ್ಥಿತರಿದ್ದರು.
ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿ, ಖಜಾಂಚಿ ಎ.ಜಿ.ಸುರೇಶ್‍ಕುಮಾರ್ ನಿರೂಪಿಸಿ, ವಂದಿಸಿದರು.
ಸಂವಾದದಲ್ಲಿ ಹಿರಿಯ ಪತ್ರಕರ್ತರಾದ ಎಂ.ಜಿ.ಪ್ರಭಾಕರ, ಎಸ್.ಸಚ್ಚಿದಾನಂದ, ಅಬ್ಬಣಿಶಂಕರ್, ಬಿ.ಎಲ್.ರಾಜೇಂದ್ರಸಿಂಹ, ಸಿ.ವಿ.ನಾಗರಾಜ್, ಎನ್.ಸತೀಶ್, ಜಹೀರ್‍ಆಲಂ, ಎಂ.ಡಿ.ಚಾಂದ್‍ಪಾಷ, ಕೋ.ನಾ.ಮಂಜುನಾಥ್, ಸಿ.ಜಿ.ಮುರಳಿ, ಕೆ.ಆಸೀಫ್‍ಪಾಷ ಕೆ.ನಾರಾಯಣಗೌಡ, ಚಂದ್ರು, ಮುಕ್ತಿಯಾರ್ ಅಹಮದ್, ರಮೇಶ್, ಶ್ರೀನಿವಾಸಮೂರ್ತಿ, ಗಂಗಾಧರ್, ಗೋಪಿನಾಥ್, ಬಿ.ಎಸ್.ಸ್ಕಂದಕುಮಾರ್, ವಿ.ನವೀನ್‍ಕುಮಾರ್, ಕೆ.ಬಿ.ಜಗದೀಶ್, ವೆಂಕಟೇಶಪ, ಶಮ್ಗರ್, ಎಂ.ವಿ.ವೇಣುಗೋಪಾಲ್, ಸುನೀಲ್‍ಕುಮಾರ್, ಅಮರ್, ಮದನ್, ಮಂಜುನಾಥ್, ಈಶ್ವರ್, ಸಮೀರ್‍ಅಹಮದ್, ಬಾಲನ್, ಲಕ್ಷ್ಮೀಪತಿ ಡಿ.ಎನ್, ಎನ್.ಶಿವಕುಮಾರ್, ಸುಧಾಕರ್, ರಾಘವೇಂದ್ರಪ್ರಸಾದ್ ಅಮರೇಶ್, ಪರ್ವೀಜ್ ಅಹಮದ್, ವಿಜಯಕುಮಾರ್, ವಿನೋದ್, ಸವಜ್ಞಮೂರ್ತಿ, ಅಮರ್ ಮಂಜುನಾಥ್ ಉಪಸ್ಥಿತರಿದ್ದರು.