

ಕೋಲಾರ:- ಸಾಮಾಜಿಕ ಸೇವೆಯ ಮೂಲಕ ಬಡವರಿಗೆ ನೆರವಾಗುವ ಕೆಲಸ ದೇವರಿಗೂ ಪ್ರೀತಿಯಾಗಿರುತ್ತದೆ, ಹಸಿದವನಿಗೆ, ಅಗತ್ಯವಿದ್ದವನಿಗೆ ಊಟ ಹಾಕಿದರೆ ಅದು ಸಾರ್ಥಕವಾಗುತ್ತದೆ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ಕುಮಾರ್ ತಿಳಿಸಿದರು.
ತಾಲ್ಲೂಕಿನ ಯಲ್ದೂರು ಹಾಗೂ ರೋಣೂರು ಗ್ರಾಮದಲ್ಲಿ ಡಿ.ಕೆ.ಶಿವಕುಮರ್ ಅವರ ಹುಟ್ಟುಹಬ್ಬದ ಅಂಗವಾಗಿ ನಡೆದ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಡಿಕೆಶಿ ಆಪ್ತರಾದ ಪುರ್ನಹಳ್ಳಿಯ ಚೆನ್ನಮ್ಮ ವರದಪ್ಪ ಕುಟುಂಬದವರು ಶ್ರೀನಿವಾಸಪುರ ತಾಲ್ಲೂಕು ಆಸ್ಪತ್ರೆ ಹಾಗೂ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಉಚಿತವಾಗಿ ನೀಡಿರುವ ಶವ ಪೆಟ್ಟಿಗೆ ಫ್ರೀಜರ್ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ಇಂದು ಸಮಾಜದಲ್ಲಿ ಉಳ್ಳವರು ಎಷ್ಟೋ ಮಂದಿ ಇದ್ದಾರೆ ಆದರೆ ಎಲ್ಲರಿಗೂ ಸಹಾಯ ಮಾಡುವ ಗುಣ ಬರಲಾರದು ಎಂದ ಅವರು, ಶ್ರೀಮಂತರಿಗೆ ಮಾತ್ರ ಸತ್ತಾಗ ಬಳಕೆಯಾಗುವ ಈ ಫ್ರೀಜರ್ಅನ್ನು ಬಡವರಿಗೂ ಸಿಗುವಂತೆ ಮಾಡಿರುವ ಪ್ರಯತ್ನ ಶ್ಲಾಘನೀಯ ಎಂದರು.
ಹಣವಿರುವವರು ಸತ್ತಾಗ ಅಂತ್ಯಸಂಸ್ಕಾರ ತಡವಾದರೂ ಹಣಕೊಟ್ಟು ಆಧುನಿಕ ಫ್ರೀಜರ್ ತಂದು ಶವವಿಟ್ಟು ಅಂತಿಮ ದರ್ಶನಕ್ಕೆ ಬರುವವರಿಗೆ ಕಾಯುತ್ತಾರೆ ಆದರೆ ಬಡವನ ಗತಿಯೇನು ಎಂದು ಪ್ರಶ್ನಿಸಿದ ಅವರು, ಶವ ಹೆಚ್ಚು ಹೊತ್ತು ಇಟ್ಟರೆ ವಾಸನೆ ಬರುತ್ತದೆ ಅಂತಹ ಸಂದರ್ಭದಲ್ಲಿ ಬಡವನ ಸ್ಥಿತಿ ಶೋಚನೀಯವಾಗುತ್ತದೆ ಎಂದ ಅವರು, ತಾಲ್ಲೂಕಿನಲ್ಲಿ ಇಂತಹ ಮಾನವೀಯ ನೆರವು ನೀಡುವ ಮೂಲಕ ಪುರ್ನಹಳ್ಳಿ ಚೆನ್ನಮ್ಮ ವರದಪ್ಪ ಕುಟುಂಬ ಉತ್ತಮ ಕೆಲಸ ಮಾಡಿದೆ ಎಂದರು.
ಇಂದು ನೈತಿಕತೆ,ಮೌಲ್ಯಗಳು ಮಾಯವಾಗಿವೆ, ಎಷ್ಟು ಸಿಗುತ್ತೋ ಅಷ್ಟು ಬಾಚಿಕೊಳ್ಳೋಣ ಎನ್ನುವವರೆ ಜಾಸ್ತಿ ಎಂದ ಅವರು, ಇಂತಹ ಪರಿಸ್ಥಿತಿಯಲ್ಲಿ ಇಡೀ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈ ಸೌಲಭ್ಯ ಒದಗಿಸುವ ಪ್ರಯತ್ನ ಮಾಡಿದ್ದಾರೆ, ಅದನ್ನು ಸದುಪಯೋಗ ಮಾಡಿಕೊಳ್ಳಬೇಕು, ಬಡವರಿಗೆ ಸಿಗುವಂತೆ ಮಾಡಬೇಕು ಎಂದರು.
ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರು, ನಮ್ಮ ಪಕ್ಷದ ನಾಯಕರು, ಅವರಿಗೆ ಮತ್ತಷ್ಟು ಉತ್ತಮ ಅವಕಾಶಗಳು ಲಭಿಸಲಿ, ಅವರ ಆಶಯಗಳು ಈಡೇರಲಿ ಎಂದ ಅವರು, ಅವರ ಹೆಸರಿನಲ್ಲಿ ನೆರವು ನೀಡಿ ಈ ಬಡವರ ಆಶೀರ್ವಾದ ಅವರಿಗೆ ಸಿಗುವಂತೆ ಮಾಡಿದ್ದಾರೆ ಎಂದರು.
ಯಲ್ದೂರು ಮತ್ತು ರೋಣೂರುಗಳಲ್ಲಿ ನಡೆದ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಯಲ್ದೂರು ಗ್ರಾ.ಪಂ ಮಾಜಿ ಅಧ್ಯಕ್ಷ ಶ್ರೀರಾಮಬಾಬು, ಕೆಪಿಸಿಸಿ ಸದಸ್ಯ ಗೋವಿಂದಪ್ಪ, ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥ್, ಮುಖಂಡರಾದ ಎಸ್.ವಿ.ಸುಧಾಕರ್, ಸಂಜಯ್ರೆಡ್ಡಿ, ಚೌಡರೆಡ್ಡಿ, ಶ್ಯಾನಭೋಗ್ ಶ್ರೀನಾಥ್, ಸೋಮಣ್ಣ, ಹೆಚ್.ಎಂ.ನಾರಾಯಣಸ್ವಾಮಿ, ಮೋಹನ್ ಬಾಬು, ಅರುಣ್, ಶಿವಶಂಕರ್, ಆಚಂಪಲ್ಲಿ ಗಂಗಾಧರ್, ಜಿ.ಎನ್.ಕೋದಂಡರಾಮ್,ಕೋರನಳ್ಳಿ ಆಂಜಿ ಮತ್ತಿತರರಿದ್ದರು.

