ಸಹಕಾರಿ ಸಂಘಗಳಲ್ಲಿರುವ ಮಹಿಳೆಯರ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡಬೇಕು:ರೈತ ಸಂಘದ ರಾಜ್ಯ ಸಂಚಾಲನಾ ಸಮಿತಿ- ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇವರಿಗೆ ಒತ್ತಾಯ

ಕೋಲಾರ, ಜೂ.24: ರೈತ ಸಂಘದ ರಾಜ್ಯ ಸಂಚಾಲನ ಸಮಿತಿ ಚುಕ್ಕಿ ನಂಜುಂಡಸ್ವಾಮಿ ಮತ್ತು ಕೆ.ಟಿ ಗಂಗಾದರ್ ರವರ ನೇತೃತ್ವದಲ್ಲಿ ಸಹಕಾರಿ ಸಂಘಗಳಲ್ಲಿರುವ ಮಹಿಳೆಯರ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡಬೇಕು ಮತ್ತು ಮುಂಬುರುವ ಬಜೆಟ್‍ನಲ್ಲಿ ರೈತ ಪರ ಯೋಜನೆಗಳನ್ನು ಜಾರಿ ಮಾಡಬೇಕೆಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‍ರವರನ್ನು ಬೇಟಿ ಮಾಡಿ ರೈತ ಸಂಘದ ರಾಜ್ಯ ಸಂಚಾಲನಾ ಸಮಿತಿಯಿಂದ ಒತ್ತಾಯಿಸಲಾಯಿತು.
ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದ ರೈತರು ಬೆಳೆಯುವ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಗೆ ಬಳಸಿಕೊಂಡರೆ ಬಡವರಿಗೆ ಅನ್ನಬಾಗ್ಯ ರೈತರಿಗೆ ಬೆಲೆ ಬಾಗ್ಯ ಕೊಟ್ಟ ಹಾಗೆ ಆಗುತ್ತದೆ. ಮುಂಬರುವ ಬಜೆಟ್ ನಲ್ಲಿ ರೈತಪರ ಯೋಜನೆಗಳನ್ನು ಜಾರಿ ಮಾಡುವ ಜೊತೆಗೆ ಪ್ರಜಾಯಾತ್ರೆ ಮತ್ತು ಮಹಿಳಾ ಸಮಾವೇಶಗಳಲ್ಲಿ ಮುಖ್ಯಮಂತ್ರಿಗಳು ಮತ್ತು ನೀವು ಸಹಕಾರ ಸಂಘಗಳಲ್ಲಿನ ಎಲ್ಲಾ ಮಹಿಳೆಯರ ಸಾಲ ಮನ್ನಾ ಮಾಡಿ ನಂತರ 1 ಲಕ್ಷ ರೂ ಬಡ್ಡಿ ರಹಿತ ಸಾಲ ನೀಡುತ್ತೇವೆಂದು ಮಹಿಳೆಯರಿಗೆ ಬಹಿರಂಗ ಸಭೆಯಲ್ಲಿ ವಾಗ್ದಾನ ನೀಡಿದ್ದು, ಸರ್ಕಾರ ಬಂದು ಎರಡು ತಿಂಗಳಾದರೂ ಸ್ತ್ರೀಶಕ್ತಿ ಸಾಲ ಮನ್ನಾ ಬಗ್ಗೆ ಚರ್ಚೆ ಮಾಡದೆ ಇರುವುದು ಮಹಿಳೆಯರಿಗೆ ಮಾಡಿದ ಅಪಮಾನವಾಗಿದ್ದು, ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಮಹಿಳೆಯರೇ ಕಾರಣವಾಗಿದ್ದು, ತಾವುಗಳು ಸ್ತ್ರೀಶಕ್ತಿ ಸಾಲದ ಮನ್ನಾವನ್ನು ಕೂಡಲೇ ಮಾಡಬೇಕೆಂದು ಅಗ್ರಹಿಸಿದರು.
ನಳಿನಿಗೌಡ ಮಾತನಾಡಿ ಮಹಿಳೆಯರು ಕಾಂಗ್ರೇಸ್‍ನ ನಿಮ್ಮ ಮಾತಗೆ ಬೆಲೆ ಕೊಟ್ಟು ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೇವೆ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಕೊಟ್ಟ ಮಾತು ನಡೆಸಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ. ಸ್ತ್ರೀ ಶಕ್ತಿ ಸಾಲ ಮಾಡಿರುವವರು ಉದ್ಯಮಿಗಳು ಮತ್ತು ರಾಜಕಾರಣಿಗಳ ಮನೆಯ ಮಹಿಳೆಯರಲ್ಲ, ಹಳ್ಳಿಗಾಡಿನ ಬಡ ಕೂಲಿಕಾರ್ಮಿಕರ ಹೆಣ್ಣು ಮಕ್ಕಳಾಗಿದ್ದು, ನಿಮ್ಮ ಪಕ್ಷದ ನಾನಾಯಕಿ ಕಾರ್ಯಕ್ರಮಕ್ಕೆ ಮಹಿಳೆಯರೇ ಬಲ ತುಂಬಿರುವುದು ಅದನ್ನು ಮರೆತರೆ ಮುಮದಿನ ಚುನಾವಣೆಯಲ್ಲಿ ಮಹಿಳೆಯರು ತಮ್ಮ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ. ನೀವು ಮನ್ನಾ ಮಾಡದೇ ಹೋದರೆ ಸಹಕಾರಿ ಬ್ಯಾಂಕ್‍ಗಳಿಗೂ ನಷ್ಟ ನಿಮ್ಮ ಪಕ್ಷಕ್ಕೂ ತುಂಬಲಾರದ ನಷ್ಟ ಉಂಟಾಗುತ್ತದೆ ಎಂದು ಮನವರಿಕೆ ಮಾಡಿಕೊಡಲಾಯಿತು.
ಸಹಕಾರ ಸೋಸೈಟಿ ಮತ್ತು ಬ್ಯಾಂಕ್ ಸಿಬ್ಬಂದಿ ಈಗಾಗಲೇ ಮಹಿಳೆಯರಿಗೆ ಸಾಲ ವಸೂಲಿ ಹೆಸರಿನಲ್ಲಿ ಕಿರುಕುಳ ಕೊಡಲು ಪ್ರಾರಂಭಿಸಿದ್ದರೂ ಸರ್ಕಾರ ಮೌನವಾಗಿ ಕುಳಿತಿದೆ ಹಾಗೂ ಕೋಲಾರ, ಚಿಕ್ಕಬಳ್ಳಾಪುರ , ತುಮಕೂರು, ಮಂಡ್ಯ, ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡುವಂತೆ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದು,ಸಹಕಾರ ಸಿಬ್ಬಂದಿ ಮತ್ತು ಮಹಿಳೆಯರ ನಡುವೆ ಜಟಾಪಟಿಗಳು ನಡೆದು ಗಲಾಟೆಗಳಾಗಿರುವುದು ಗುಪ್ತಚರ ವರದಿಯಿಂದ ನಿಮ್ಮ ಗಮನಕ್ಕೂ ಬಂದಿದೆ. ಆದ್ದರಿಂದ ಕೊಟ್ಟ ಮಾತಿನಂತೆ ಈ ಬಜೆಟ್‍ನಲ್ಲಿ ಮಹಿಳೆಯರ ಸಾಲ ಮನ್ನಾ ಮಾಡುತ್ತೇವೆಂದು ಘೋಷಿಸಬೇಕು.ನೀವು ಮನ್ನಾ ಮಾಡದೇ ಹೋದರೆ ಮಹಿಳೆಯರು ಬೀದಿಗೆ ಇಳಿದು ಸರ್ಕಾರದ ವಿರುದ್ದ ರೊಚ್ಚಿಗೇಳುವುದು ಗ್ಯಾರಂಟಿ ಆಗಿದೆ ಇದರ ಪರಿಣಾಮ ಸರ್ಕಾರದ ಮೇಲೆ ಬೀಳುತ್ತದೆ.ಸಹಕಾರಿ ಬ್ಯಾಂಕ್‍ಗಳು ನೀವು ಕೊಟ್ಟ ಮಾತಿನಿಂದ ದಿವಾಳಿ ಅಂಚಿಗೆ ಬಂದು ನಿಲ್ಲುತ್ತವೆ
ಮನವಿ ಸ್ವೀಕರಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‍ರವರು ಮಾತನಾಡಿ ನಮ್ಮ ಸರ್ಕಾರ ರೈತರ ಪರ ಮಹಿಳೆಯರ ಪರವಾಗಿದ್ದು, ರೈತರ ಸಮಸ್ಯೆಗಳನ್ನು ಸಂಬಂದಪಟ್ಟವರೊಂದಿಗೆ ಚರ್ಚಿಸಿ ಬಗೆಹರಿಸುವ ಜೊತೆಗೆ ಮಹಿಳೆಯರಿಗೆ ಕೊಟ್ಟ ಮಾತು ಕಾಂಗ್ರೇಸ್ ಸರ್ಕಾರ ಎಂದಿಗೂ ಮರೆಯುವುದಿಲ್ಲ ನಾವು ನೀಡಿರುವ 5 ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಹೆಚ್ಚಿನ ಭಾಗ ಮೀಸಲಾಗಿದ್ದು, ಸ್ತ್ರೀ ಶಕ್ತಿ ಸಾಲ ಮನ್ನಾ ಬಗ್ಗೆ ನಾನು ಹಾಗೂ ಮುಖ್ಯಂತ್ರಿಗಳು ಸಚಿವ ಸಂಪುಟದ ಜೊತೆ ಮಹಿಳೆಯರಿಗೆ ಕೊಟ್ಟಿರುವ ಸಾಲ ಮನ್ನಾದ ಭರವಸೆಯ ಬಗ್ಗೆ ಕಾನೂನಾತ್ಮಕವಾಗಿ ಚರ್ಚಿಸುವ ಭರವಸೆ ನೀಡಿದರು.
ನಿಯೋಗದಲ್ಲಿ ರಾಜ್ಯ ಸಂಚಲನಾ ಸಮಿತಿ ಸದಸ್ಯರಾದ ಕೆ.ಟಿ ಗಂಗಾದರ್, ಹಾವೇರಿ ಮಲ್ಲಿಕಾರ್ಜುನ್ ಬಳ್ಳಾರಿ, ಕೋಲಾರ ತಿಮ್ಮಣ್ಣ, ಯಲ್ಲಪ್ಪ, ತುಮಕೂರು ದೇವರಾಜ್, ರಾಮನಗರ ಅನುಸೂಯಮ್ಮ, ಬೆಳಗಾವಿ ಸುರೇಖಾ, ಮೈಸೂರು ಮಂಜುಕಿರಣ್, ವಿದ್ಯಸಾಗರ್, ಚಿಕ್ಕಬಳ್ಳಾಪುರ ಪ್ರತೀಶ್, ಮಂಡ್ಯ ನಾಗಣ್ಣ, ಎಲ್ಲಾ ಸಂಚಲನಾ ಸಮಿತಿ ಸದಸ್ಯರು ಹಾಜರಿದ್ದರು.