ಸ್ವಸಹಾಯ ಸಂಘಗಳ ಸದಸ್ಯರು ನಿಯಮಾನುಸಾರ ಸಂಘದ ವ್ಯವಹಾರ ನಿರ್ವಹಿಸಬೇಕು:ಗೋವಿಂದ ಮೂರ್ತಿ

ಶ್ರೀನಿವಾಸಪುರ: ಸ್ವಸಹಾಯ ಸಂಘಗಳ ಸದಸ್ಯರು ನಿಯಮಾನುಸಾರ ಸಂಘದ ವ್ಯವಹಾರ ನಿರ್ವಹಿಸಬೇಕು ಎಂದು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆ ಜಿಲ್ಲಾ ಘಟಕದ ಮಿಷನ್ ವ್ಯವಸ್ಥಾಪಕ ಗೋವಿಂದ ಮೂರ್ತಿ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಸ್ವಸಹಾಯ ಸಂಘ ಮತ್ತು ಪ್ರದೇಶ ಮಟ್ಟದ ಒಕ್ಕೂಟದ ಸದಸ್ಯರಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಕಾರ ಸಂಘ ಸದಸ್ಯರು ಸರ್ಕಾರದ ಸೌಲಭ್ಯ ಪಡೆದು ಜೀವನೋಪಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಂಘಿಕ ಪ್ರಯತ್ನ ನಡೆಸಬೇಕು. ಆ ನಿಟ್ಟಿನಲ್ಲಿ ಗಳಿಕೆ ದಾರಿ ತೋರಿಸುವ ಬಗ್ಗೆ ಹಾಗೂ ಸಂಘ ನಿರ್ವಹಣೆ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ತರಬೇತಿ ಶಿಬಿರದಲ್ಲಿ ಸ್ವಸಹಾಯ ಸಂಘಗಳಿಗೆ ಸರ್ಕಾರದಿಂದ ದೊರೆಯುವ ಆರ್ಥಿಕ ಸೌಲಭ್ಯ ಹಾಗೂ ಸಂಘಗಳ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು. ವ್ಯವಹಾರ ಪಾರದರ್ಶಕವಾಗಿ ಇರುವಂತೆ ನೋಡಿಕೊಳ್ಳಲು ಸೂಚಿಸಲಾಯಿತು.
ಪುರಸಭೆ ಕಿರಿಯ ಅಭಿಯಂತರ ವಿ.ಶ್ರೀನಿವಾಸಪ್ಪ, ಕಂದಾಯ ನಿರೀಕ್ಷಕ ಎಣ್.ಶಂಕರ್, ಸದಸ್ಯ ಬಿ.ವೆಂಕಟರೆಡ್ಡಿ, ಮಾಜಿ ಸದಸ್ಯ ರೆಡ್ಡಪ್ಪ ಇದ್ದರು.