ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರಕ್ಕೆ ಕರೆತಂದು ಹರಕೆಯ ಕುರಿಯಾಗಿ ಮಾಡಲು ಹೊರಟಿದ್ದಾರೆ:ಸಂಸದ ಪ್ರಜ್ವಲ್ ರೇವಣ್ಣ ವ್ಯಂಗ್ಯ

ಕೋಲಾರ:- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‍ನ ಕೆಲವು ಸ್ಥಳೀಯ ನಾಯಕರು ಕೋಲಾರಕ್ಕೆ ಕರೆತಂದು ಹರಕೆಯ ಕುರಿಯಾಗಿ ಮಾಡಲು ಹೊರಟಿದ್ದಾರೆ, ಕೋಲಾರದ ಜನ ಬುದ್ದಿವಂತರು ಅವರಿಗೆ ತಕ್ಕಪಾಠ ಕಲಿಸಿ ಕಳುಹಿಸಿಕೊಡಲಿದ್ದಾರೆ ಎಂದು ಹಾಸನದ ಸಂಸದ ಪ್ರಜ್ವಲ್ ರೇವಣ್ಣ ವ್ಯಂಗ್ಯವಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರಕ್ಕೆ ಬಂದು ಸ್ಪರ್ಧೆ ಮಾಡುವುದು ಅವರ ವೈಯಕ್ತಿಕ ಹಾಗೂ ಅವರ ಪಕ್ಷದ ವಿಚಾರ. ಆದರೆ ಅವರ ಪಕ್ಷದ ಕೆಲವು ನಾಯಕರೇ ಕೋಲಾರಕ್ಕೆ ಕರೆತಂದು ಹರಕೆಯ ಕುರಿ ಮಾಡುತ್ತಿರುವುದು ವಾಸ್ತವದ ಸಂಗತಿ ಎಂದರು.
ಮಾಜಿ ಮುಖ್ಯಮಂತ್ರಿಯನ್ನು ಕರೆದುಕೊಂಡು ಬಂದು ಇಲ್ಲಿನ ಕೆಲವು ರಾಜಕಾರಣಿಗಳು ಬಲಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿದೆ ಎಂದರು.
ಯಾರೇ ಒಬ್ಬ ಹಿರಿಯ ನಾಯಕರು, ಮಾರ್ಗದರ್ಶನ ಕೊಡುವವರಿಗೆ ನಾವು ಮೊದಲಿನಿಂದಲೂ ಗೌರವ ನೀಡುತ್ತಾ ಬಂದಿರುವುದು ನಮ್ಮ ಸಂಪ್ರದಾಯ. ಸಿದ್ದರಾಮಯ್ಯ ಗೆಲ್ಲಬೇಕು, ಸೋಲಬೇಕು ಎನ್ನುವ ವಿಚಾರ ನಮ್ಮ ಬಳಿ ಇಲ್ಲ. ಆದರೆ, ಅವರದ್ದೇ ಪಕ್ಷದ ಕೆಲವು ನಾಯಕರು ಕೋಲಾರಕ್ಕೆ ಕರೆ ತಂದು ಹರಕೆಯ ಕುರಿ ಮಾಡಲು ನಿಂತಿದ್ದಾರೆ ಎನ್ನುವುದು ವಾಸ್ತವಾಂಶವಾಗಿದೆ ಎಂದರು.
ಇನ್ನು ಸಿ.ಪಿ.ಯೋಗೇಶ್ವರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ, ನಾನೂ ಗೆಲ್ಲುವುದಿಲ್ಲ ಎಚ್.ಡಿ.ಕುಮಾರಸ್ವಾಮಿ ಗೆದ್ದಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ಗೆಲ್ಲೋದಿಲ್ಲ ಮತ್ತೊಮ್ಮೆ ಆಪರೇಷನ್ ಮಾಡಿ ಅಧಿಕಾರಕ್ಕೆ ಬರುವುದಾಗಿಯೂ ಯಾವ ಬಾಯಲ್ಲಿ ಹೇಳಿದ್ದಾರೋ ಎಂದು ಕಿಡಿಕಾರಿದರು.
ಗೆಲ್ತೀವಿ ಅನ್ನೋ ಆತ್ಮಸ್ಥೈರ್ಯ, ವಿಶ್ವಾಸವಿಲ್ಲ. ಯಾರು ಗೆಲ್ಲುತ್ತಾರೆ ನೋಡೋಣ ಎಷ್ಟು ಕೋಟಿ ಕೊಡಬೇಕು ಎನ್ನುವ ಡೀಲ್‍ಗೆ ಅವರು ಮುಂದಾಗಿದ್ದಾರೆ. ಆದರೆ ಈ ಬಾರಿ ಅದ್ಯಾವುದೂ ನಡೆಯುವುದಿಲ್ಲ. ರೈತರು, ಸಾರ್ವಜನಿಕರು ಮೂರೂವರೆ ವರ್ಷದ ಬಿಜೆಪಿ ಸರಕಾರ ನೋಡಿದ್ದಾರೆ ಎಂದರು.
ಡಬಲ್ ಎಂಜಿನ್ ಸರಕಾರ ಏನು ಮಾಡಿದೆ. ಜಿಎಸ್‍ಟಿಯಲ್ಲಿ ನಮ್ಮ ಪಾಲಿನ ಹಣವನ್ನು ಕೇಂದ್ರದಿಂದ ತರಲು ಸಾಧ್ಯವಾಗಿಲ್ಲ. ಮುಂದೆ ಸರಕಾರ ಬಂದರೆ ಇಂತಹ ಯೋಜನೆ ಜಾರಿಗೆ ತರುತ್ತೇವೆ ಎಂದು ಎಲ್ಲೂ ಹೇಳುತ್ತಿಲ್ಲ. ಆದರೆ, ಕುಮಾರಸ್ವಾಮಿ ಪಂಚರತ್ನ ಯೋಜನೆಗಳನ್ನು ರೂಪಿಸಿಕೊಂಡು ಚುನಾವಣೆಗೆ ಹೋಗುತ್ತಿದ್ದಾರೆ. ಅಂತಹ ಶಕ್ತಿ ಹೊಂದಿರುವ ಏಕೈಕ ಪಕ್ಷ ಜೆಡಿಎಸ್ ಎಂದು ಹೇಳಿದರು.
ಜೆಡಿಎಸ್ ಪಕ್ಷಕ್ಕೆ ಸಿ.ಎಂ.ಇಬ್ರಾಹಿಂ ಅವರು ರಾಜ್ಯಾಧ್ಯಕ್ಷರಾದ ಬಳಿಕ ಅಲ್ಪಸಂಖ್ಯಾತರ ಕೂಗು ನಮ್ಮ ಪಕ್ಷದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಕೋಲಾರ ಭಾಗದಲ್ಲಿ ಅಭ್ಯರ್ಥಿಗಳನ್ನು ಜೆಡಿಎಸ್ ಬಾವುಟ ಹಾರಿಸಿ, ಎಚ್ಡಿಕೆ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಜನರೇ ಹೇಳುತ್ತಿದ್ದಾರೆ. ನಾನು ಸಹ ಮುಂದಿನ ದಿನಗಳಲ್ಲಿ ಈ ಭಾಗದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
ಅಮಿತ್ ಶಾ ಮಂಡ್ಯಕ್ಕೆ ಒಂದು ಬಾರಿ ಬಂದಾಗಲೇ ಬಾಂಬ್ ಒಂದನ್ನು ಹಾಕಿ ಹೋಗಿದ್ದಾರೆ. ಅಮುಲ್‍ಗೆ ನಂದಿನಿಯನ್ನು ಸೇರಿಸುತ್ತೇವೆ ಎಂದರೆ ಅದು ಯಾರಪ್ಪನ ಆಸ್ತಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನಿಸಿದರು.
ನಂದಿನಿ ಎಂಬ ಬಡ ಸಂಸ್ಥೆಯನ್ನು ರೈತರು, ಸಾರ್ವಜನಿಕರು ಇಷ್ಟು ದೊಡ್ಡ ಮಟ್ಟಕ್ಕೆ ಶಕ್ತಿಯಾಗಿ ಬೆಳೆಸಿದ್ದಾರೆ. ಕೆಎಂಎಫ್ ಅಧ್ಯಕ್ಷ ಸ್ಥಾನ ಸಚಿವರಿಗೆ ಸಮಾನವಾಗಿದೆ. ಕೋಲಾರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಇಡೀ ರಾಜ್ಯದಲ್ಲಿ ಡೈರಿ ಸ್ಥಾಪನೆಯಾಗಿರುವುದರಿಂದಲೇ ಸಿಲ್ಕ್-ಮಿಲ್ಕ್-ಚಿನ್ನಕ್ಕೆ ಹೆಸರುವಾಸಿಯಾಗಿದೆ ಎಂದ ಅವರು, ಅಮಿತ್ ಶಾ 10ಬಾರಿ ಅಲ್ಲ 15 ಬಾರಿ ಬಂದರೂ ಅಷ್ಟೇ ಮಂಡ್ಯದಲ್ಲಿ ಕಳೆದ ಬಾರಿ ಪಡೆದಿದ್ದ ರೀತಿಯಲ್ಲೇ 100 ಕ್ಕೆ 100 ಸ್ಥಾನಗಳನ್ನು ಪಡೆದುಕೊಳ್ಳುತ್ತೇವೆ. ಮಂಡ್ಯ ಎಂದಿಗೂ ದೇವೇಗೌಡರ ಕ್ಷೇತ್ರ ಎಂದು ನುಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಕೋಲಾರ ಅಭ್ಯರ್ಥಿ ಸಿಎಂಆರ್ ಶ್ರೀನಾಥ್, ಬಂಗಾರಪೇಟೆ ಅಭ್ಯರ್ಥಿ ಮಲ್ಲೇಶ್‍ಬಾಬು, ಮುಖಂಡರಾದ ವಕ್ಕಲೇರಿ ರಾಮು, ಬಣಕನಹಳ್ಳಿ ನಟರಾಜ್, ಜಮೀರ್, ಮುಸ್ತಾಫ ಮತ್ತಿತರರಿದ್ದರು.