

ಕುಂದಾಪುರ ಆಗಸ್ಟ್ 08. : ‘ ಕಥೆ ಬರೆಯಲು ಬೇಕಾದಷ್ಟು ಅನುಭವಗಳು ಮತ್ತು ವಸ್ತುಗಳು ಎಲ್ಲರಲ್ಲೂ ಇರುತ್ತವೆ. ಆದರೆ ಅವುಗಳನ್ನು ಅಚ್ಚುಕಟ್ಟಾಗಿ ಹೊಂದಿಸಿ ರೂಪಕ-ಪ್ರತಿಮೆಗಳನ್ನು ಅಳವಡಿಸಿಕೊಂಡು ಸುಂದರವಾಗಿ ಮತ್ತು ಕಲಾತ್ಮಕವಾಗಿ ಓದುಗನ ಮನಮುಟ್ಟುವ ರೀತಿಯಲ್ಲಿ ಕಟ್ಟಿ ಕೊಡುವುದು ಒಂದು ಸವಾಲು ‘ ಎಂದು ಖ್ಯಾತ ಲೇಖಕಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಹೇಳಿದರು. ಕನ್ನಡದ ಕಥೆಗಳು, ಗ್ರೀಕ್ ಸಾಹಿತ್ಯ.ಮತ್ತು ಭಾರತೀಯ ಜನಪದ ಸಾಹಿತ್ಯಗಳಿಂದ ಅನೇಕ ಉದಾಹರಣೆಗಳನ್ನು ಕೊಟ್ಟು , ಬರೆಯುವಾಗ ನಾವು ನಮ್ಮ ಪರಂಪರೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು. ಇಲ್ಲಿನ ‘ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆಯವರು ಹಮ್ಮಿಕೊಂಡ ‘ಕರಾವಳಿ ಮಹಿಳಾ ಕಥಾ ಸ್ಪರ್ಧೆ’ಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನಗಳನ್ನು ಕೊಟ್ಟು ಕಥೆಗಳನ್ನು ವಿಶ್ಲೇಷಿಸಿ ಅವರು ಮಾತನಾಡಿದರು. ಸಮಾರಂಭವು ಜನಪ್ರತಿನಿಧಿ ವಾರಪತ್ರಿಕೆಯ ಕಛೇರಿಯಲ್ಲಿ ನಡೆಯಿತು.
ಪ್ರಥಮ ಬಹುಮಾನವನ್ನು ವಿಜಯಶ್ರೀ ಎಂ.ಹಾಲಾಡಿ(ಮುಂಡಪ್ಪ ಮಾವಿನ ಮರ), ದ್ವಿತೀಯ ಬಹುಮಾನವನ್ನು ಪೂರ್ಣಿಮಾ ಹೆಗಡೆ ಬೆಂಗಳೂರು (ನಾಳೆಗಳನ್ನು ಬಿತ್ತಿದ ನಿನ್ನೆಗಳು) ಮತ್ತು ತೃತೀಯ ಬಹುಮಾನವನ್ನು ಶ್ರೀರಂಜನಿ ಅಡಿಗರು(ಮಂಜುಮಾಮಿಯ ಹೂದೋಟ) ಪಡೆದರು. . ಡಾ.ಭಾರತಿ ಮರವಂತೆ, ಶಾಂತಲಾ ರಾವ್, ಆಶಾಮಯ್ಯ ಪುತ್ತೂರು, ನಿರ್ಮಲಾ ಸುರತ್ಕಲ್, ಯಶಸ್ವಿನಿ ಶ್ರೀಧರ ಮೂರ್ತಿ ಮತ್ತು ಭವ್ಯಾ ಹಳೆಯೂರು ಅವರ ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿದ್ದವು. ಬಹುಮಾನ ವಿತರಣೆಯ ನಂತರ ವಿಜಯಶ್ರೀಯವರು ತಾವು ಕಥೆ ಬರೆದ ಸಂದರ್ಭದ ಕುರಿತು ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ಖ್ಯಾತ ವಿಮರ್ಶಕ ಪ್ರೊ.ಉದಯಕುಮಾರ್ ಹಬ್ಬು ಮಾತನಾಡಿ ‘ಎಲ್ಲಾ ಕಥೆಗಳಲ್ಲೂ ಕುಟುಂಬದಲ್ಲಿ ಪುರುಷನ ದುರ್ವರ್ತನೆಯ ಕುರಿತು ಉಲ್ಲೇಖಿಸಲಾಗಿದೆ . ಪುರುಷಾಹಂಕಾರವನ್ನು ತಗ್ಗಿಸಿ ಕುಟುಂಬದ ಸಾಮರಸ್ಯವನ್ನು ಕಾಪಾಡುವಂತೆ ಮಾಡುವುದು ಮಹಿಳೆಯರ ಕೈಯಲ್ಲಿದೆ. ಮಹಿಳೆಯರಲ್ಲಿ ಆ ಸಂಸ್ಕಾರವೂ ಇದೆ, ಸಾಮರ್ಥ್ಯವೂ ಇದೆ’ ಎಂದರು. ಸಭೆಯ ಅಧ್ಯಕ್ಷತೆಯನ್ನು ಲೇಖಕಿ ಡಾ.ಪಾರ್ವತಿ ಜಿ.ಐತಾಳ್ ವಹಿಸಿದ್ದರು.
ಸಂಗೀತ ವಿದುಷಿ ಮೂಕಾಂಬಿಕಾ ಉಡುಪ ಆರಂಭಗೀತೆ ಹಾಡಿದರು. ವೇದಿಕೆಯ ಅಧ್ಯಕ್ಷೆ ಲೇಖಕಿ ಸುಮನಾ ಹೇರ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಪ್ರೀತಾ ಪುರಾಣಿಕ್ ಸ್ವಾಗತಿಸಿದರು. ಸುಜಾತಾ ರಾವ್, ನಿಮಿತಾ ಪಿ.ಶೆಟ್ಟಿ ಮತ್ತು ಮಹಾಲಕ್ಷ್ಮಿ ಸೋಮಯಾಜಿ ಅತಿಥಿಗಳನ್ನು ಪರಿಚಯಿಸಿದರು. ರಾಧಾ ಕಾರಂತ್ ಅವರಿಂದ ಭಾವಗೀತಾ ಗಾಯನ ನಡೆಯಿತು. ಜಯಲಕ್ಷ್ಮಿ ಕಾರಂತ್ ವಂದನಾರ್ಪಣೆ ಗೈದರು. ಜೆಸ್ಸಿ ಎಲಿಝಬೆತ್ ಕಾರ್ಯಕ್ರಮ ನಿರೂಪಿಸಿದರು.

















