

ಕೋಲಾರ: ಛಿದ್ರಛಿದ್ರವಾಗಿರುವ ದಲಿತ ಸಂಘಟನೆಗಳನ್ನು ಮತ್ತೆ ಒಗ್ಗೂಡಿಸಿ ಮಾಯವಾಗಿರುವ ಪ್ರೀತಿ,ನಂಬಿಕೆ,ವಿಶ್ವಾಸವನ್ನು ಮರುಸ್ಥಾಪಿಸುವ ಪ್ರಯತ್ನ ಮಾಡುವುದಾಗಿ ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಡಾ.ಸಿ.ಎಂ.ಮುನಿಯಪ್ಪ ಭಾವುಕರಾಗಿ ನುಡಿದರು.
ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಅಂಬೇಡ್ಕರ್ ಪುರಸ್ಕೃತರಾದ ಅವರಿಗೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಐದಾರು ಮಂದಿ ರಾಜ್ಯದ ಸುಮಾರು ನೂರು ಮಂದಿ ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ ಹಗಲು ರಾತ್ರಿ ದುಡಿದು ಕಟ್ಟಿದ ದಲಿತ ಸಂಘಟನೆ ಇಂದು ಛಿದ್ರವಾಗಿದೆ, ಒಳಮೀಸಲಾತಿ ನೆಪದಲ್ಲಿ ಭೋವಿ,ಹೊಲೆಯ,ಮಾದಿಗ ಈಗ ಬೇರೆಬೇರೆಯಾಗಿ ನಿಂತಿದ್ದು, ಇಂತಹ ಸಂದರ್ಭದಲ್ಲಿ ಪ್ರಶಸ್ತಿ ಬಂದಿರುವ ಕುರಿತು ಖುಷಿ ಪಡುವ ಸನ್ನಿವೇಶ ಇಲ್ಲವಾಗಿದೆ ಎಂದು ನುಡಿದರು.
ಪತ್ರಕರ್ತರ ಸಂಘದ ಸ್ನೇಹಿತರು ನೀಡುತ್ತಿರುವ ಅಭಿನಂದನಗೆ ಧನ್ಯವಾದ ಸಲ್ಲಿಸಿದ ಅವರು, ಮತ್ತೆ ಛಿದ್ರವಾಗಿರುವ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ಮುಂದುವರೆಸಲು ಈ ಅಭಿನಂದನೆ ಶಕ್ತಿ ತುಂಬಿದೆ ಎಂದು ಭಾವುಕರಾಗಿ ಮಾತು ಮುಗಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ದಲಿತ ಸಂಘಟನೆಗಳು ಇಂದು ಛಿದ್ರವಾಗಿದ್ದು, ಹೋರಾಟದ ಮಹತ್ವ ಇಲ್ಲವಾಗಿದೆ, ಇದು ಸರಿಹೋಗಬೇಕು ಎಂದ ಅವರು, ಸಿಎಂ ಮುನಿಯಪ್ಪ ಅವರಿಗೆ ಎಲ್ಲಾ ಸಂಘಟನೆಗಳು ಒಗ್ಗೂಡಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಸಿ ಸನ್ಮಾನಿಸುವಂತಾಗಲಿ ಎಂದು ಆಶಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಹೋರಾಟವನ್ನೇ ಉಸಿರಾಗಿಸಿಕೊಂಡ ಸಿಎಂ.ಮುನಿಯಪ್ಪ ಅವರಿಗೆ ಅಂಬೇಡ್ಕರ್ ಪ್ರಶಸ್ತಿ ಬಂದಿರುವುದು ಅವರ ಆತ್ಮಗೌರವ ಹೆಚ್ಚಿಸಿ ಸಾರ್ಥಕ ಮೂಡಿಸಿದೆ, ಅರ್ಹರಿಗೆ ಪ್ರಶಸ್ತಿ ದೊರೆತಿದೆ ಎಂಬ ಸಂತೃಪ್ತಿ ಸಿಕ್ಕಿದೆ ಎಂದರು.
ಅಂಬೇಡ್ಕರ್ ಸಹಾ ಓರ್ವ ಪತ್ರಕರ್ತರು ಎಂಬ ಅರಿವು ಇನ್ನೂ ಸುಮಾರು ಮಂದಿಗೆ ಇಲ್ಲವಾಗಿದೆ, ಮೂಕನಾಯಕ ಪತ್ರಿಕೆಯನ್ನು ಗಾಂಧಿಯವರ ಹರಿಜನ ಪತ್ರಿಕೆಗಿಂತಲೂ ಮೊದಲು ಆರಂಭಿಸಿದವರು ಅಂಬೇಡ್ಕರ್ ಎಂದ ಅವರು, ಪತ್ರಕರ್ತರ ಸಂಘದ ಅಡಿಯಲ್ಲಿ ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ ಆಶಯಗಳ ಕುರಿತು ವಿಚಾರ ಸಂಕಿರಣ ಮೂಲಕ ಆಚರಿಸುವಂತಾಗಲಿ, ಪತ್ರಕರ್ತರೂ ಆಗಿದ್ದ ಅಂಬೇಡ್ಕರ್ ವಿಚಾರಧಾರೆ ಅರಿಯುವ ಪ್ರಯತ್ನ ಪತ್ರಕರ್ತರ ಸಂಘದಿಂದ ಆಗಲಿ ಎಂದು ಸಲಹೆ ನೀಡಿದರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ವಿ.ಮುನಿರಾಜು ಮಾತನಾಡಿ, ಶೋಷಿತರ ಧ್ವನಿಯಾಗಿ ಹೋರಾಟವೇ ಜೀವನವಾಗಿಸಿಕೊಂಡಿದ್ದ ಸಿ.ಎಂ.ಮುನಿಯಪ್ಪ ಅವರೊಂದಿಗೆ ತಮ್ಮ ೩೫ ವರ್ಷಗಳ ಸ್ನೇಹದ ಕುರಿತು ಗಮನ ಸೆಳೆದು, ಈಗಾಗಲೇ ಅವರು ಸಂಸದರಾಗುವ ಅವಕಾಶ ತಪ್ಪಿಹೋಗಿದ್ದು, ಮುಂದಿನ ದಿನಗಳಲ್ಲಿ ಅಂತಹ ಅವಕಾಶ ಸಿಗಲಿ ಎಂದು ಹಾರೈಸಿದರು.
ಹಿರಿಯ ಪತ್ರಕರ್ತರಾದ ಅನಂತರಾಮ್,ವಿಶ್ವ ಕುಂದಾಪುರ, ಸಿ.ವಿನಾಗರಾಜ್, ಸಂಚಿಕೆ ನಾರಾಯಣಪ್ಪ, ಮಾತನಾಡಿ, ಐದು ದಶಕಗಳ ಹೋರಾಟ, ಅನುಭವವನ್ನು ಪಡೆದಿರುವ ಸಿಎಂ. ಮುನಿಯಪ್ಪನವರ ಆಶಯ ಬಸವಣ್ಣ ಅಂಬೇಡ್ಕರ್ ಅವರ ಆಶಯದಂತೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಡೋಂಗಿ ಜಾತ್ಯತೀತ ವಾದಿಗಳು ಹೆಚ್ಚಾಗಿದ್ದು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಅಂಬೇಡ್ಕರ್ ಅವರು ಏನೇನು ಅನುಭವಿಸಿದ್ದರು, ಎಲ್ಲ ಸಮಸ್ಯೆಗಳನ್ನು ಸಿಎಂ ಮುನಿಯಪ್ಪನವರು ಜೀತದಾಳು ಮಗನಾಗಿ ಹುಟ್ಟಿ ಅನುಭವಿಸಿದ್ದಾರೆ. ತನ್ನದೇ ಆದ ಸಾಮರ್ಥ್ಯದಲ್ಲಿ ಹೋರಾಟದ ಮೂಲಕ ಜನಗಳಿಗೆ ನ್ಯಾಯ ಕೊಡಿಸಿ, ಸಂಚಿಕೆ ಪತ್ರಿಕೆ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ, ಜೀತಗಾರ ಕುಟುಂಬದಿಂದ ಜೀವನಗಾಥೆ ಬರೆಯುವ ಉನ್ನತ ಹಂತಕ್ಕೇರಿದ್ದಾರೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ ಕುಮಾರ್, ಸಿಎಂ.ಮುನಿಯಪ್ಪ ಅವರ ಹೋರಾಟದ ಹಾದಿ, ಪತ್ರಕರ್ತರಾಗಿ ಮಾಡಿದ ಸೇವೆಯ ಕುರಿತು ಇಂಚಿಂಚು ಮಾಹಿತಿ ಒದಗಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯ ಸಿ.ವಿ.ನಾಗರಾಜ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಜಿಲ್ಲಾಉಪಾಧ್ಯಕ್ಷ ರವಿ, ಕಾರ್ಯದರ್ಶಿ ಷಮ್ಗರ್,ವಿವಿಧ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರುಗಳಾದ ಬಂಗಾರಪೇಟೆ ಮೋಹನ್, ಕೆಜಿಎಫ್ ತ್ಯಾಗರಾಜ್, ಶ್ರೀನಿವಾಸಪುರದ ನಾಗರಾಜ್ ಸಂಪಾದಕರಾದ ದುನಿಯ ಮುನಿಯಪ್ಪ, ಚಾಂದ್ ಪಾಷಾ, ವೆಂಕಟೇಶ್ ಬಾಬಾ, ಲಕ್ಷ್ಮಣ್,ಉಪೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲ ಹಿರಿಯ ಪತ್ರಕರ್ತರು, ಸಂಪಾದಕರು, ಜಿಲ್ಲಾವರದಿಗಾರರು ಹಾಜರಿದ್ದರು.

