

ಶ್ರೀನಿವಾಸಪುರ: ಗದ್ದರ್ ಸಮಾಜದಲ್ಲಿನ ಶೋಷಿತ ಸಮುದಾಯಗಳ ಬಗ್ಗೆ ಧ್ವನಿ ಎತ್ತಿದ ಕವಿ ಹಾಗೂ ಹಾಡುಗಾರರಾಗಿದ್ದರು. ಶೋಷಣೆ ವಿರುದ್ಧ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಾಲ್ಲೂಕು ದಲಿತ ಮುಖಂಡ ವರ್ತನಹಳ್ಳಿ ವೆಂಕಟೇಶ್ ಹೇಳಿದರು.
ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿ ತಾಲ್ಲೂಕು ದಲಿತ ಸಂಘಟನೆಗಳ ವತಿಯಿಂದ ಬುಧವಾರ ಏರ್ಪಡಿಸಿದ್ದ ಪ್ರಜಾಕವಿ ಗದ್ದರ್ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರಾಗಿದ್ದ ಗದ್ದರ್ ಸಮಾಜ ಸುಧಾರಣೆ ಮಾಡುವ ಉದ್ದೇಶದಿಂದ ನೌಕರಿಗೆ ವಿದಾಯ ಹೇಳಿದರು. ಕ್ರಾಂತಿ ಗೀತೆಗಳನ್ನು ಹಾಡುವುದರ ಮೂಲಕ ದೇಶದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು ಎಂದು ಹೇಳಿದರು.
ದಲಿತ ಮುಖಂಡ ಬದರಿ ನರಸಿಂಹ ಮಾತನಾಡಿ, ಗದ್ದರ್ ನೊಂದ ಜನರ ಕಣ್ಣೀರು ಒರೆಸುವುದರ ಮೂಲಕ ಜನರ ಮನಸ್ಸನ್ನು ಗೆದ್ದಿದ್ದರು. ಅವರ ಸಾವು ದಲಿತರು, ಶೋಷಿತರು ಹಾಗೂ ಬಡವರ ಪಾಲಿಗೆ ದೊಡ್ಡ ನಷ್ಟ. ಅವರ ಸ್ಮರಣೆ ಶೋಷಣೆ ವಿರುದ್ಧ ಹೋರಾಟಕ್ಕೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗದ್ದರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಡಾ. ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಮುಖಂಡರಾದ ರಾಮಾಂಜಮ್ಮ, ಚಲ್ದಿಗಾನಹಳ್ಳಿ ವೀರಪ್ಪ, ಕಲ್ಲೂರು ವೆಂಕಟೇಶ್, ನರಸಿಂಹಮೂರ್ತಿ, ರೆಡ್ಡಿಪ್ಪ, ಪ್ರಭಾಕರಗೌಡ, ಆನಂದ, ವೆಂಕಟರವಣಪ್ಪ, ಮತ್ತಿತರರು ಇದ್ದರು.

