

ಲೇಖಕರು ; ಡಾ. ನಾಗರಾಜ ಕೆ. ಎಸ್., ಸಹಾಯಕ ಪ್ರಾಧ್ಯಾಪಕರು (ಹಣ್ಣು ವಿಜ್ಞಾನ), ತೋಟಗಾರಿಕ ಮಹಾವಿದ್ಯಾಲಯ, ಕೋಲಾರ
ಲೇಖಕರು ; ಡಾ. ನಾಗರಾಜ ಕೆ. ಎಸ್., ಸಹಾಯಕ ಪ್ರಾಧ್ಯಾಪಕರು (ಹಣ್ಣು ವಿಜ್ಞಾನ), ತೋಟಗಾರಿಕ ಮಹಾವಿದ್ಯಾಲಯ, ಕೋಲಾರ
ಪ್ರತಿ ವರ್ಷ ಜುಲೈ 1 ರಂದು ಅಂತರಾಷ್ಟ್ರೀಯ ಹಣ್ಣು ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಜರ್ಮನಿಯ ರಾಜಧಾನಿ ಬರ್ಲಿನ್ ನಲ್ಲಿ 2007ರಲ್ಲಿ ಈ ಮಹತ್ವದ ದಿನಾಚರಣೆ ಹುಟ್ಟಿಕೊಂಡಿದ್ದು, ಈ ದಿನಾಚರಣೆಯ ಮುಖ್ಯ ಧ್ಯೇಯವು ದಿನನಿತ್ಯ ಹಣ್ಣುಗಳನ್ನು ತಿನ್ನಲು ಪ್ರೇರೇಪಿಸುವುದರೊಂದಿಗೆ ಆರೋಗ್ಯವನ್ನು ಸಮತೋಲನದಲ್ಲಿಡುವುದು ಹಾಗೂ ಪ್ರೀತಿ-ಪಾತ್ರರೊಂದಿಗೆ ಹಣ್ಣುಗಳನ್ನು ಹಂಚಿಕೊಂಡು ಸಹಭಾಗಿತ್ವ ಕಾಪಾಡುವುದು ಆಗಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಸಭೆ (ICMR) ಯು ಆರೋಗ್ಯ ಸಮತೋಲನದಲ್ಲಿರಲು ಒಬ್ಬ ಮನುಷ್ಯ ದಿನಕ್ಕೆ ಕನಿಷ್ಠ 100 ಗ್ರಾಂ ಹಣ್ಣು ತಿನ್ನಬೇಕು ಎಂದು ಶಿಫಾರಸ್ಸು ಮಾಡಿದೆ. ಆದುದರಿಂದ ಹಣ್ಣುಗಳನ್ನು ದಿನನಿತ್ಯ ನಾವು ತಿನ್ನಲು ರೂಢಿಯಾಗಿಸಿದ್ದಲ್ಲಿ ಹಲವು ಮಾರಕ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ. ಪ್ರತಿಯೊಂದು ಹಣ್ಣಿನಲ್ಲಿಯೂ ಅನ್ನಾಂಗ ಮತ್ತು ಖನಿಜಗಳು ಹೇರಳವಾಗಿರುತ್ತವೆ.
ಮುಖ್ಯವಾಗಿ ನಮ್ಮ ಉಷ್ಣ ಮತ್ತು ಸಮಶೀತೋಷ್ಣವಲಯದಲ್ಲಿರುವ ಹಣ್ಣುಗಳ ಪ್ರಾಮುಖ್ಯತೆಯನ್ನು ಇಲ್ಲಿ ತಿಳಿಸಲಾಗಿದೆ.

ಮಾವು- ಹಣ್ಣುಗಳ ರಾಜ ಎಂದೇ ಪ್ರಸಿದ್ದಿಯಾಗಿರುವ ಮಾವು ನಮ್ಮ ರಾಷ್ಟ್ರೀಯ ಹಣ್ಣು ಕೂಡ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಾವು ತನ್ನದೆ ಆದ ಪ್ರಾಮುಖ್ಯತೆ ಹೊಂದಿದ್ದು, ಹಬ್ಬ ಹಾಗೂ ಶುಭ-ಸಮಾರಂಭಗಳಲ್ಲಿ ಮಾವಿನ ಎಲೆಗಳ ತೋರಣ, ಒಣ ಕಡ್ಡಿಗಳನ್ನು ಹೋಮ ಹವನಗಳಲ್ಲಿ ಬಳಸುವುದು, ಶಾರದೆಯ ಪೂಜೆಗೆ ಮಾವಿನ ಹೂವು ಬಳಸುವುದು ಪ್ರತಿತಿಯಲ್ಲಿದೆ.
ಮಾವಿನ ಹಣ್ಣಿನಲ್ಲಿ ಅನ್ನಾಂಗ ‘ಎ’ ಮತ್ತು ‘ಸಿ’ ಹೆಚ್ಚಾಗಿರುವುದರಿಂದ ಕಣ್ಣಿನ ತೊಂದರೆ ನಿವಾರಿಸುವುದು ಹಾಗೂ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹಾಗೆಯೇ ಈ ಹಣ್ಣಿನಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ ಹಾಗೂ ಫಾಸ್ಪರಸ್ ಖನಿಜಗಳು ಹೇರಳವಾಗಿರುವುದು.
ಬಾಳೆ- ಬಾಳೆಯು ಕಲ್ಪತರು ಎಂದೇ ಪ್ರಖ್ಯಾತಿ ಹೊಂದಿದೆ. ಎಕೆಂದರೆ ಇದರ ಎಲ್ಲಾ ಭಾಗಗಳು ಉಪಯುಕ್ತ. ಶುಭ ಸಮಾರಂಭಗಳಲ್ಲಿ ಬಾಳೆಗಿಡ ಬಳುಸುವುದು ಸಾಮಾನ್ಯವಾಗಿ ಕಾಣುತ್ತೇವೆ. ಬಾಳೆ ಹಣ್ಣು ಒಂದು ಶಕ್ತಿಯುತ ಆಹಾರವಾಗಿರುವುದಲ್ಲದೆ, ಕಡಿಮೆ ಪ್ರೋಟಿನ್ ಮತ್ತು ಕೊಬ್ಬಿನಾಂಶದಿಂದ ಸಮತೋಲನ ಆಹಾರವಾಗಿದೆ. ಬಾಳೆ ಹಣ್ಣಿನಲ್ಲಿ ಹೆಚ್ಚಿನ ಕಾರ್ಬೊಹೈಡ್ರೇಟಗಳಿದ್ದು, ಅತಿ ಹೆಚ್ಚಿನ ನಾರಿನಂಶದಿಂದ ಜೀರ್ಣ ಕ್ರೀಯೆಯಲ್ಲಿ ಪಾತ್ರವಹಿಸುತ್ತದೆ.
ಸೀಬೆ- ಇದನ್ನು ‘ಬಡವರ ಸೇಬು’ ಎಂದು ಕರೆಯುತ್ತಾರೆ. ಸೇಬಿನಲ್ಲಿರುವ ಪ್ರಮಾಣದಷ್ಟೆ ಪೋಷಕಾಂಶಗಳು ಇದರಲ್ಲಿದ್ದು, ಕಡಿಮೆ ಬೆಲೆಯಲ್ಲಿ ಸಿಗುವುದು. ಹಣ್ಣಿನಲ್ಲಿ ಅನ್ನಾಂಗ ‘ಸಿ’, ಥೈಯಾಮಿನ್, ರೈಬೊಫ್ಲೇವಿನ್ ಮತ್ತು ನಿಯಾಸಿನ್ ಅಂಶವು ಹೆಚ್ಚಿದ್ದು ಹಲವು ರೋಗಗಳಿಗೆ ರಾಮಬಾಣವಾಗಿದೆ.
ಪಪಾಯ- ಇದು ಒಂದು ಅದ್ಭುತ ಹಣ್ಣಾಗಿದ್ದು, ಪೋಷಕಾಂಶ ಭರಿತವಾಗಿದೆ. ಈ ಹಣ್ಣು ಜಾಮ್, ಜೆಲ್ಲಿ, ಸಿರಪ್, ವೈನ್ ಮತ್ತು ಇನ್ನಿತರ ಸಂಸ್ಕರಣೆಯಲ್ಲಿ ಬಳಕೆಯಾಗುತ್ತದೆ. ಪಪೇನ್ ಎಂಬ ಪಪಾಯ ಹಾಲಿನಂತಹ ದ್ರವವನ್ನು ಔಷಧೀಯ ತಯಾರಿಕೆಯಲ್ಲಿ ಬಳಸುತ್ತಾರೆ. ಪಪಾಯ ಎಲೆಗಳನ್ನು ಡೆಂಗ್ಯೂ ನಿವಾರಣೆಯಲ್ಲಿ ಬಳಸಲಾಗುತ್ತದೆ.

ದಾಳಿಂಬೆ- ಇದನ್ನು ದಾಳಿಂಬೆರಸ, ಸಿರಪ್ ಹಾಗೂ ಜೆಲ್ಲಿಯಲ್ಲಿ ಬಳಸುತ್ತಾರೆ. ದಾಳಿಂಬೆಯ ರಸದಿಂದ ಅನಾರ್ ರಬ್ ಎಂಬ ಸಾಸ್ ತಯಾರಿಸುತ್ತಾರೆ ಹಾಗೂ ದಾಳಿಂಬೆಯ ಒಣಗಿದ ಬೀಜಗಳನ್ನು ಅನಾರ್ದಾನ ಎಂದು ವ್ಯಂಜನ ಪದಾರ್ಥವಾಗಿ ಬಳಸುವುದು. ದಾಳಿಂಬೆ ರಸವನ್ನು ಜ್ವರ, ಅತಿಸಾರ, ಕುಷ್ಠರೋಗ, ಹೊಟ್ಟೆ ಸಂಬಂಧಿತ ಹಾಗೂ ಹೃದಯದ ಕಾಯಿಲೆಯ ನಿವಾರಣೆಯಲ್ಲಿ ಬಳಸುವರು.
ದ್ರಾಕ್ಷಿ: ದ್ರಾಕ್ಷಿಯು ಹೆಚ್ಚಿನ ಔಷಧಿ ಗುಣಹೊಂದಿದ್ದು, ಹಿಂದಿನ ಕಾಲದಲ್ಲಿ ಕ್ಯಾನ್ಸರ್ನ್ನು ಗುಣಪಡಿಸಲು ‘ಗ್ರೇಪ್ ಥೆರಪಿ’ ಎಂದು ಬಳಸುತ್ತಿದ್ದರು. ದ್ರಾಕ್ಷಿಯಲ್ಲಿರುವ ‘ರೆಸ್ವೆರಟ್ರಾಲ್’ ಎಂಬ ರಾಸಾಯನಿಕವು ಕ್ಯಾನ್ಸರ್ ಗುಣಪಡಿಸುವ ಸಾಮಥ್ರ್ಯ ಹೊಂದಿದೆ.
ನೇರಳೆ ಹಣ್ಣು: ನೇರಳೆಯು ಮಧುಮೇಹ, ಅತಿಸಾರ, ಹೃದಯ ಹಾಗೂ ಪಿತ್ತಕೋಶದ ಸಮಸ್ಯೆಯನ್ನು ನಿವಾರಿಸುವುದು. ಹಾಗೆಯೇ ಅಧಿಕ ರಕ್ತದೊತ್ತಡ ಕಡಿಮೆ ಮಾಡುವ ಗುಣ ಹೊಂದಿದೆ.
ಹಲಸು: ನವ ಕಲ್ಪವೃಕ್ಷ ಎಂದೇ ನಾಮಾಂಕಿತವಾಗಿರುವ ಹಲಸು, ಹಲವು ರೋಗಗಳನ್ನು ನಿವಾರಿಸುವ ಗುಣ ಹೊಂದಿದೆ. ಮಲಬದ್ಧತೆ, ಚರ್ಮದ ರೋಗ, ಊರಿಯುತವನ್ನು ನಿವಾರಿಸುವುದು. ‘ಲೆಕ್ಟೈನ್’ ಎಂಬ ಸ್ವಾಭಾವಿಕ ಪ್ರೋಟಿನ್ನ್ನು ಹಲಸು ಹೊಂದಿದ್ದು ಇದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಕೆಯಾಗುತ್ತದೆ. ಹಲಸಿನಲ್ಲಿರುವ ರಾಸಾಯನಿಕ ‘ಜಕಾಲಿನ್’ ಏಡ್ಸಗೆ ನಿರೋಧಕ ಶಕ್ತಿ ಹೊಂದಿದೆ.
ಬೆಣ್ಣೆ ಹಣ್ಣು; ಅವಕಾಡೊ ಎಂದು ಕರೆಯಲ್ಪಡುವ ಬೆಣ್ಣೆಹಣ್ಣು ಶಕ್ತಿಯ ಆಗರವಾಗಿದ್ದು ಹೆಚ್ಚಿನ ಕೊಬ್ಬಿನಾಂಶ ಹೊಂದಿದ್ದು, ಅನ್ನಾಂಗಗಳಾದ ಎ, ಬಿ ಮತ್ತು ಸಿ ಯಥೇಚ್ಚವಾಗಿದೆ. ಕಡಿಮೆ ಸಕ್ಕರೆ ಅಂಶ ಹೊಂದಿದ ಇದನ್ನು ಮಧುಮೇಹಿಗಳು ಸವಿಯಬಹುದು.
ಡ್ರಾಗನ್ ಹಣ್ಣು: ಪಿತಾಯ ಎಂದು ಕರೆಯಲ್ಪಡುವ ಡ್ರಾಗನ್ ಹಣ್ಣು ಪೋಷಕಾಂಶಗಳ ಆಗರವಾಗಿದೆ. ಕಡಿಮೆ ಕ್ಯಾಲೋರಿ ಹೊಂದಿರುವ ಈ ಹಣ್ಣು ಹೆಚ್ಚಿನ ಅನ್ನಾಂಗ ಎ ಮತ್ತು ಇ, ಆಂಟಿಆಕ್ಸಿಡೆಂಟ್ಗಳು, ನಾರಿನಾಂಶ, ಪಾಲಿಫೆನಾಲ್ ಹಾಗೂ ಕೆರೋಟಿನಾಯ್ಡಗಳನ್ನು ಹೊಂದಿದ್ದು ಟೈಪ್ 2 ಮಧುಮೇಹ ನಿವಾರಣೆಯಲ್ಲಿ, ತೂಕ ಕಡಿಮೆ ಮಾಡಲು, ಹೃದಯ ರೋಗನಿವಾರಣೆ, ಅಸ್ತಮಾ, ಚರ್ಮರೋಗ ಇನ್ನು ಹಲವು ರೋಗನಿವಾರಣೆಯಲ್ಲಿ ಅಧ್ಬುತ ಪಾತ್ರವಹಿಸುತ್ತದೆ.
ಹಾಗೆಯೇ ನೆಲ್ಲಿಕಾಯಿ, ಕವಳೆಹಣ್ಣು, ಲಕ್ಷ್ಮಣಫಲ, ಅಂಜೂರ, ಬೇಲದ ಹಣ್ಣು, ನಿಂಬೆ ಜಾತಿಯ ಹಣ್ಣುಗಳು (ಕಿತ್ತಳೆ/ಆರೇಂಜ್), ಅನಾನಸ್, ಸೇಬು ಇತ್ಯಾದಿ ಹಣ್ಣುಗಳನ್ನು ಸವಿಯುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಬದಲಾಗುತ್ತಿರುವ ವರ್ತಮಾನದಲ್ಲಿ ಹಣ್ಣುಗಳನ್ನು ದೈನಂದಿನ ಸೇವಿಸುವುದನ್ನು ರೂಢಿಸಿಕೊಂಡರೆ ಮಾರಕ ರೋಗಗಳಿಂದ ಪಾರಾಗಿ ಉತ್ತಮ ಜೀವನ ನಮ್ಮದಾಗಿಸಿಕೊಳ್ಳಬಹುದು.

