

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ಫೆಬ್ರವರಿ 07, 2026 ರಂದು ʼಕಾವ್ಯಾಂ ವ್ಹಾಳೊ-11ʼ ಶೀರ್ಷಿಕೆಯಡಿ ಕವಿಗೋಷ್ಟಿ ನಡೆಯಿತು, ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರು ಪ್ರಾಸ್ತಾವಿಕವಾಗಿ ಮಾತಾನಾಡಿ, “ಕಾವ್ಯಾಂ ವ್ಹಾಳೊ” ಎಂಬ ಕಾರ್ಯಕ್ರಮವು ಕಳೆದ ವರ್ಷ ಮಾರ್ಚ್ 8 ರಂದು ಅಂತರಾಷ್ರೀಯ ಮಹಿಳಾ ದಿನಾಚರಣೆಯ ಸಂಧರ್ಭದಲ್ಲಿ ಮಹಿಳೆಯರಿಗಾಗಿ ಪ್ರಾರಂಭಿಸಿ, ಇಂದು ಕಾವ್ಯಾಂ – ವ್ಹಾಳೊ ಇದರ 11ನೇ ಆವೃತ್ತಿಗೆ ತಲುಪಿದೆ ಎಂದು ಹರುಷ ವ್ಯಕ್ತಪಡಿಸಿದರು. ಕರ್ನಾಟಕ ಸರ್ಕಾರವು ಕೊಂಕಣಿ ಸಮುದಾಯಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿ ಕೊಂಕಣಿ ಭಾಷೆಯ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕಳೆದ ಎಪ್ರಿಲ್ ತಿಂಗಳಿನಿಂದ ಆರಂಭವಾದ ಕಾವ್ಯಾಂ- ವ್ಹಾಳೊ ಕವಿಗೋಷ್ಟಿಗಳಲ್ಲಿ ಕೊಂಕಣಿ ಕವಿಗಳು ಪ್ರಸ್ತುತ ಪಡಿಸಿದ ಕವಿತೆಗಳ ಸಂಗ್ರಹ “ಕಾವ್ಯಾಂ- ವ್ಹಾಳೊ” ಭಾಗ-1 ಈ ಪುಸ್ತಕವನ್ನು ಮುದ್ರಿಸಿ, ಬಿಡುಗಡೆಗೊಳಿಸಲು ಸಂತೋಷಪಡುತ್ತಿದೆ ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು.
2025 ಎಪ್ರಿಲ್ ತಿಂಗಳಿನಿಂದ ಆರಂಭವಾದ ಕಾವ್ಯಾಂ- ವ್ಹಾಳೊ ಕವಿಗೋಷ್ಟಿಗಳಲ್ಲಿ ಕೊಂಕಣಿ ಕವಿಗಳು ಪ್ರಸ್ತುತ ಪಡಿಸಿದ ಕವಿತೆಗಳ ಸಂಗ್ರಹ ಭಾಗ-1 ಇದನ್ನು ಮುಖ್ಯ ಅಥಿತಿಗಳಾದ ಖ್ಯಾತ ಗಾಯಕಿ ಝೀನಾ ಪಿರೇರಾರವರು ಉದ್ಘಾಟಿಸಿ, ಶುಭ ಹಾರೈಸಿದರು. ನಂತರ ಮಾತಾನಾಡಿ, ಕಾದಂಬರಿ, ಸಣ್ಣಕಥೆ, ಕಥೆ, ಇವುಗಳ ಮುಂದೆ ಕವಿತೆಗಳಿಗೆ ಅದರದ್ದೇ ಆದ ಪ್ರಾಶಸ್ತ್ಯವಿದೆ. ಕವಿತೆಗಳನ್ನು ರಚಿಸುವವನು ಜೀವನದಲ್ಲಿ ಸಾಧನೆ ಮಾಡುತ್ತಾನೆ. ಹೀಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿಯ ಎಲ್ಲಾ ಕ್ಷೇತ್ರಗಳಲ್ಲಿ ದುಡಿಯುವ ಜನರನ್ನು ಗುರುತಿಸಿ, ಸನ್ಮಾನಿಸುವ ಕೆಲಸವನ್ನು ಮಾಡುತ್ತಿದೆ ಎಂದು ಅಕಾಡೆಮಿಯನ್ನು ಅಭಿನಂದಿಸಿದರು.
ಕೊಂಕಣಿ ಭಾಷೆಯ ಹಿರಿಯ ಕಾರ್ಯಕರ್ತೆ ಹಾಗೂ ಹೆಸರಾಂತ ಕವಯತ್ರಿ ಶ್ರೀಮತಿ ಜ್ಯೂಲಿಯೆಟ್ ಮೊರಾಸ್ ಇವರನ್ನು ಸನ್ಮಾನಿಲಾಯಿತು.
ಖ್ಯಾತ ಕವಿಗಳಾದ ಶ್ರೀ ವಿನ್ಸೆಂಟ್ ಆಳ್ವರವರು ಕವಿಗೋಷ್ಟಿಯನ್ನು ನಡೆಸಿ, ಕವಿ, ಕವಿತೆಗಳ ಬಗ್ಗೆ ಸವಿಸ್ತಾರ ವಿವರಗಳನ್ನು ನೀಡಿದರು. ಮ್ಯಾಕ್ಸಿಂ ಲುದ್ರಿಗ್ ಬೊಂದೆಲ್, ಸೀಮಾ ಕಾಮತ್, ಜಗದೀಶ್ ಭಂಡಾರಿ, ಮಾರ್ಟಿನ್ ಆರ್. ಡಿಸೋಜಾ, ಸಿ. ಸಿಲ್ವಿಯಾ ಸುವಾರಿಸ್, ವನಿತಾ ನಾಯಕ್, ರೋಶನ್ ಕ್ರಾಸ್ತಾ, ಜೊಯ್ಸ್ ಪಿಂಟೊ ಮತ್ತು ಫೆಲ್ಸಿ ಲೋಬೊ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸಿದರು.
ಅಕಾಡೆಮಿ ಸದಸ್ಯರಾದ ಶ್ರೀ ರೊನಾಲ್ಡ್ ಕ್ರಾಸ್ತಾ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಸದಸ್ಯರಾದ ಶ್ರೀ ಸಮರ್ಥ್ ಭಟ್ ಉಪಸ್ಥಿತರಿದ್ದರು.


