
ಮಂಗಳೂರು: ಕಾಂಗ್ರೆಸ್ ಪಕ್ಷವು ಜಾತ್ಯಾತೀತತೆ ಮತ್ತು ಸಾಮಾಜಿಕ ನ್ಯಾಯದ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಿದ್ದರೂ, ಪಕ್ಷದ ಸಂಘಟನೆಯಲ್ಲಿ ಕ್ರೈಸ್ತ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಲಾಗುತ್ತಿಲ್ಲ ಎಂದು ಅಖಿಲ ಭಾರತ ಕ್ರೈಸ್ತ ಒಕ್ಕೂಟದ (AICU) ನಿಕಟ ಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ?
ಇತ್ತೀಚೆಗೆ ರಾಜ್ಯದ 35 ಜಿಲ್ಲಾ ಕಾಂಗ್ರೆಸ್ ಸಮಿತಿಗಳ (DCC) ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ಒಬ್ಬ ಕ್ರೈಸ್ತ ನಾಯಕನಿಗೂ ಅವಕಾಶ ನೀಡದಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದಾರೆ.
“ಕಾಂಗ್ರೆಸ್ ಪಕ್ಷಕ್ಕೆ ಕ್ರೈಸ್ತ ಸಮುದಾಯದ ಮತಗಳು ಬೇಕು. ಆದರೆ ಪಕ್ಷದ ಸಂಘಟನೆಯ ಪ್ರಮುಖ ಹಾಗೂ ನಿರ್ಣಾಯಕ ಹುದ್ದೆಗಳಲ್ಲಿ ಪ್ರಾತಿನಿಧ್ಯ ನೀಡಲು ಏಕೆ ಹಿಂಜರಿಕೆ?” ಎಂದು ಆಲ್ವಿನ್ ಡಿಸೋಜ ಪಾನೀರ್ ಪ್ರಶ್ನಿಸಿದ್ದಾರೆ. ?
ಅದೇ ರೀತಿ, 35 ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪೈಕಿ ಒಬ್ಬ ಮಹಿಳೆಯಿಗೂ ಅಧ್ಯಕ್ಷ ಸ್ಥಾನ ನೀಡದಿರುವುದು ಕೂಡ ಬೇಸರದ ಸಂಗತಿ ಎಂದು ಅವರು ಹೇಳಿದ್ದಾರೆ. ಮಹಿಳಾ ಸಬಲೀಕರಣ ಮತ್ತು ಸಮಾನ ಅವಕಾಶಗಳ ಬಗ್ಗೆ ಮಾತನಾಡುವ ಕಾಂಗ್ರೆಸ್, ತನ್ನದೇ ಸಂಘಟನಾ ನೇಮಕಾತಿಯಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡದಿರುವುದಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಕ್ರೈಸ್ತ ಸಮುದಾಯದ ಕೆಲವೇ ನಾಯಕರಿಗೆ ಹುದ್ದೆ ನೀಡಿ, ಉಳಿದ ಪ್ರಮುಖ ಸಂಘಟನಾ ಹುದ್ದೆಗಳಲ್ಲಿ ಇಡೀ ಸಮುದಾಯವನ್ನು ಕಡೆಗಣಿಸುವುದು ಯಾವ ರೀತಿಯ ಸಾಮಾಜಿಕ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ತನ್ನ ಜಾತ್ಯಾತೀತತೆ, ಸಾಮಾಜಿಕ ನ್ಯಾಯ ಮತ್ತು ಸಮಾನ ಪ್ರಾತಿನಿಧ್ಯದ ಸಿದ್ಧಾಂತಗಳನ್ನು ಪಕ್ಷದ ಆಂತರಿಕ ಸಂಘಟನೆಯಲ್ಲೂ ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇಂತಹ ನಿರ್ಧಾರಗಳು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ದುಷ್ಪರಿಣಾಮ ಬೀರಬಹುದು. ಅದರ ಪರಿಣಾಮಗಳಿಗೆ ಸಂಬಂಧಪಟ್ಟ ಪಕ್ಷದ ನಾಯಕರು ಹೊಣೆಗಾರರಾಗಬೇಕಾಗಬಹುದು ಎಂದು ಆಲ್ವಿನ್ ಡಿಸೋಜ ಪಾನೀರ್ ಎಚ್ಚರಿಕೆ ನೀಡಿದ್ದಾರೆ.


