ಭಂಡಾರ್ಕಾರ್ಸ್: 48ನೇ ರಾಜ್ಯೋತ್ಸವ ತಾಳಮದ್ದಳೆ ಹಾಗೂ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ ಪ್ರದಾನ

ಕುಂದಾಪುರ: ನವೆಂಬರ್ 1ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ 48ನೇ ರಾಜ್ಯೋತ್ಸವ ತಾಳಮದ್ದಳೆ ಹಾಗೂ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ ಪ್ರದಾನ ಸಮಾರಂಭ ನಡೆಯಿತು.
ಡಾ.ಪ್ರದೀಪ.ವಿ.ಸಾಮಗ ಇವರಿಗೆ 2023-24ನೇ ಸಾಲಿನ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಪುರಸ್ಕಾರವನ್ನು ಸ್ವೀಕರಿಸಿದ ಡಾ. ಪ್ರದೀಪ. ವಿ.ಸಾಮಗ ಮಾತನಾಡಿ ಭಂಡಾರ್ಕಾರ್ಸ್ ಕಾಲೇಜು ನನಗೆ ಜೀವನವನ್ನು ಕಲಿಸಿದೆ. ಭಂಡಾರ್ಕಾರ್ಸ್ ಕಾಲೇಜು ನನ್ನನ್ನು ಯಕ್ಷಗಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಹೆಚ್.ಶಾಂತಾರಾಮ್ ವಹಿಸಿದ್ದರು. ಸಾಲಿಗ್ರಾಮ ಮೇಳದ ಯಜಮಾನರಾದ ಕಿಶನ್ ಹೆಗ್ಡೆ ಪಳ್ಳಿ ಅವರು ಅಭಿನಂದನಾ ಭಾಷಣ ಮಾಡಿದರು.
ವೇದಿಕೆಯಲ್ಲಿ ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ.ಶಾಂತಾರಾಮ್ ಪ್ರಭು, ಕೆ.ದೇವದಾಸ್ ಕಾಮತ್ , ರಾಜೇಂದ್ರ ತೋಳಾರ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಉಪಸ್ಥಿತರಿದ್ದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ವಂದಿಸಿದರು. ಕಾಲೇಜಿನ ಲಲಿತಾ ಕಲಾ ಸಂಘದ ಸಂಯೋಜಕರಾದ ಶಶಾಂಕ್ ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.
ನಂತರ “ಕೃಷ್ಣಾರ್ಜುನ ಕಾಳಗ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಮದ್ದಲೆ ಯಲ್ಲಿ ರಾಘವೇಂದ್ರ ಹೆಗಡೆ, ಯಲ್ಲಾಪುರ, ಚೆಂಡೆ ಯಲ್ಲಿ ರಾಮಕೃಷ್ಣ ಮಂದಾರ್ತಿ, ಅರ್ಥಧಾರಿಗಳಾಗಿ ಜಬ್ಬಾರ್ ಸಮೋ ಸಂಪಾಜೆ, ರಾಧಾಕೃಷ್ಣ ಕಲ್ಚಾರ್, ಹೆಚ್. ಸುಧೀಂದ್ರ ಹಂದೆ, ಡಾ. ಪ್ರದೀಪ.ವಿ.ಸಾಮಗ, ಶಿವಕುಮಾರ್ ಅಳಗೋಡು, ಶಶಾಂಕ್ ಕೆಳಮನೆ ಸಹಕರಿಸಿದರು.